Saturday 27 February 2021

narayana panditacharyaru bidi sanyasi kavumata near kasargod magha shukla pournima ನಾರಾಯಣ ಪಂಡಿತಾಚಾರ್ಯರು

 


by ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

" ಶ್ರೀ ನಾರಾಯಣ - 1 "

" ದಿನಾಂಕ : 27.02.2021 ಶನಿವಾರ - ಮಾಘ ಶುದ್ಧ ಪೌರ್ಣಿಮಾ " ಶ್ರೀಮದಾಚಾರ್ಯರ ಅಧೀಕೃತ ಇತಿಹಾಸವನ್ನು ಬರೆದ ಶ್ರೀ ನಾರಾಯಣ ಪಂಡಿತಾಚಾರ್ಯರ ಆರಾಧನಾ ಮಹೋತ್ಸವ., ಕಾಪು ಮಠ., "

ಶ್ರೀ ಸರ್ವಜ್ಞ ಮುನಿಗಳ ಅಧೀಕೃತ ಚರಿತ್ರೆಯನ್ನು ಮೊದಲು ನಾಡಿಗೆ ನೀಡಿದ ಮಹಾನುಭಾವರೆಂದರೆ ಶ್ರೀ ನಾರಾಯಣ ಪಂಡಿತಾಚಾರ್ಯರು. 

ಇವರು ಶ್ರೀ ಸರ್ವಜ್ಞಾಚಾರ್ಯರ ಪ್ರೀತಿಯ ಶಿಷ್ಯರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ನಿಜವಾದ ಪಂಡಿತ ಪುತ್ರರು. 

ಮೂಲತಃ ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡದ ಹತ್ತಿರದ " ಕಾಪು ಅಥವಾ ಕಾವುಗೋಳಿ " ಯೆಂಬ ಗ್ರಾಮದವರು. 

ಇದೆ ಈ ಮನೆತನದ ಮೂಲಸ್ಥಳ. 

ಯೆಂದಿನಿಂದಲೂ ಇದೊಂದು ಪಂಡಿತ ಕುಟುಂಬ. 

ಇವರ ಗೋತ್ರ ಆಂಗೀರಸ. 

ಇವರು ಹಸೀ ಸ್ಮಾರ್ತರು. 

ಅದ್ವೈತ ಮತದ ಅಭಿಮಾನ - ಮೋಹ - ಮೆಚ್ಚು - ಮಮತೆ - ಕೆಚ್ಚುಗಳ ಹುಚ್ಚು ಎನ್ನುವಷ್ಟರ ಮಟ್ಟಿಗೆ ಅವರ ಮುತ್ತಾತ - ಮೂರು ತಲೆಗಳಿಂದ ಮೈಗೂಡಿ ಬಂದಿದ್ದವು. 

ಶ್ರೀಸರ್ವಜ್ಞಾಚಾರ್ಯರ ಸಂಪರ್ಕದಲ್ಲಿ ಬಂದ ಬಳಿಕ ಎಷ್ಟೋದಿನ ಕಳೆದರ - ಶ್ರೀಮನ್ಮಧ್ವಾಚಾರ್ಯರ ಗ್ರಂಥಗಳನ್ನು ನೋಡಿ.....  

" ತಮ್ಮ ಅದ್ವೈತ ತತ್ತ್ವವು ಸರ್ವಾಪದ್ಧ - ವೇದ ವಿರುದ್ಧ - ಪ್ರಮಾಣ ವಿಸಂಗತ " ಯೆಂದು [ಪಂಡಿತ ಪ್ರಕಾಂಡರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರಿಗೆ ] ತಿಳಿದರೂ ತಮ್ಮ ಮತದ ಮೇಲಿನ ಮೋಹವು ಬಿಟ್ಟಿರಲಿಲ್ಲ. 

ಶ್ರೀ ತ್ರಿವಿಕ್ರಮರ ತಮ್ಮಂದಿರಾದ ಶ್ರೀ ಶಂಕರಾಚಾರ್ಯರು ಶ್ರೀಮನ್ಮಧ್ವಾಚಾರ್ಯರ ತಪಃಪೂತವಾದ ವಿದ್ವತ್ತನ್ನು ಕಂಡು ಅವರ ಶಿಷ್ಯತ್ವವನ್ನು ಅಂಗೀಕರಿಸಿದ್ದರೂ - ಶ್ರೀ ತ್ರಿವಿಕ್ರಮ ಪಂಡಿತರು ಮಾತ್ರ ತಮ್ಮ ಅದ್ವೈತ ಮತವನ್ನು ತ್ಯಜಿಸಲಿಲ್ಲ. 

ಕೊನೆಗೆ " ಪಾಡಿಕುಡೆಲ್ " ಯೆಂಬ  ಗ್ರಾಮದಲ್ಲಿ ಶ್ರೀ ಸರ್ವಜ್ಞಾಚಾರ್ಯರನ್ನು ಕಂಡಾಗ ಅವರೊಡನೆ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು 15 ದಿನಗಳು ವಾದಿಸಿದರು. 

ಅದ್ವೈತ ಮತವೇ ಸರ್ವ ಶ್ರೇಷ್ಠವೆಂದು ಸಾಧಿಸಿದರು. 

ಆದರೆ,

ಶ್ರೀ ಸರ್ವಜ್ಞಾಚಾರ್ಯರ ಅತಿ ಮಾನವ ಪ್ರಜ್ಞೆ - ಪಾಂಡಿತ್ಯ - ಪ್ರತಿಭೆ - ಪ್ರವಚನ ಪಟುತ್ವ ಮುಂತಾದ ದೈವಿಕ ಗುಣಗಳಿಂದ ಪ್ರಭಾವಿತರಾಗಿ ಪರಾಜಿತರಾಗಿ ಅವರ ಶಿಷ್ಯತ್ವವನ್ನೂ - ವೈಷ್ಣವ ಮತದ ದೀಕ್ಷೆಯನ್ನೂ ಪಡೆದು " ಜಗತ್ತಿನ ಅತಿ ಶ್ರೇಷ್ಠವೂ, ಮೋಕ್ಷಪ್ರದವೂ ದ್ವೈತ ಮತ " ವೆಂದು ಘಂಟಾ ಘೋಷವಾಗಿ ಒಪ್ಪಿಕೊಂಡರು. 

ಬಹು ವರ್ಷ ವಿಚಾರ ವಿಮರ್ಶೆ ಮಾಡಿ ಇದೆ ಅಂದರೆ.... 

" ದ್ವೈತ ಮತವೇ ಸರ್ವ ಶ್ರೇಷ್ಠವಾದ ಮತ " ಎಂಬ ವಿವೇಕವು ಉದಯವಾಗಿ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ವೈಷ್ಣವ ಮತವನ್ನು ಅಂಗೀಕರಿಸಿದ ಬಳಿಕ ಮಾತ್ರ ಅವರಲ್ಲಿ ಅದ್ವೈತ ಮತದ ವಾಸನೆಯು ಸ್ವಲ್ಪವೂ ಉಳಿಯಲಿಲ್ಲ. 

ಶ್ರೀ ತ್ರಿವಿಕ್ರಮರು ಅಪ್ಪಟ ಮಾಧ್ವರಾಗಿ ಅನೇಕ ಗ್ರಂಥಗಳನ್ನು ಬರೆದು ಅದ್ವೈತ ಮತವನ್ನು ಖಂಡಿಸಿದರು. 

ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರರೇ  ಶ್ರೀ ನಾರಾಯಣ ಪಂಡಿತಾಚಾರ್ಯರು. 

ಶ್ರೀ ನಾರಾಯಣ ಪಂಡಿತಾಚಾರ್ಯರು ತಂದೆಯಂತೆ ಸಾಹಿತ್ಯದಲ್ಲಿ ಸಿದ್ಧ ಹಸ್ತ - ವೇದಾಂತದಲ್ಲಿ ವಾಚಸ್ಪತಿ - ಪ್ರೌಢ ಗ್ರಂಥ ಲೇಖನದಲ್ಲಿಯೂ ಅವರಿಗೆ ಪ್ರಗಲ್ಭ ಪಾಂಡಿತ್ಯ. 

" ಪಂಡಿತಾಚಾರ್ಯ " ಯೆಂಬುವದು ಈ ಮನೆತನದ ಅನುವಂಶಿಕ ವಿದ್ವತ್ತಿಗೆ ಒಲಿದು ಬಂದ ಬಿರುದು ಆಗಿರಬಹುದು. 

ಆದರೆ ಶ್ರೀ ನಾರಾಯಣಾಚಾರ್ಯರು ತಮ್ಮ ಜನಮ ಜಾತ ಕವಿತ್ವ - ಪ್ರಯತ್ನ ಸಂಪಾದಿತ ಪಾಂಡಿತ್ಯಗಳಿಂದ ಅದನ್ನು ಸಾರ್ಥಕ ಮಾಡಿಕೊಂಡಿದ್ದರು. 

ಸಾಂಪ್ರದಾಯಿಕ ಐತಿಹ್ಯದಂತೆ ಶ್ರೀ ನಾರಾಯಣ ಪಂಡಿತಾಚಾರ್ಯರು ತಮ್ಮ ಬಾಲ್ಯದಲ್ಲಿ ತಮ್ಮ ಮನೆಯಲ್ಲಿಯೇ ಶ್ರೀ ಮಧ್ವ ಮುನಿಗಳನ್ನು ಕಂಡು ತಮ್ಮ ಗ್ರಂಥವನ್ನು ಅವರ ಪಾದಾರವಿಂದಗಳಿಗೆ ಒಪ್ಪಿಸಿದ್ದರಂತೆ. 

ಶ್ರೀ ಪೂರ್ಣಪ್ರಜ್ಞರು ಬದರಿಕಾಶ್ರಮಕ್ಕೆ ಹೋಗುವುದಕ್ಕೂ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಚಾರ ಕೈಕೊಂಡಾಗ ತಮ್ಮ ನೆಚ್ಚಿನ ಶಿಷ್ಯರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಮನೆಗೆ ದಯ ಮಾಡಿಸಿದರು. 

ತಮ್ಮ ಸ್ವರೂಪೋದ್ಧಾರಕರಾದ ಶ್ರೀ ಮಧ್ವ ಗುರುಗಳು ತಮ್ಮ ಮನೆಗೆ ಚಿತ್ತೈಸಿದಾಗ ಆ ಪಂಡಿತ ಕುಟುಂಬವು ಹರ್ಷೋದ್ರೇಕದಿಂದ ಹಿಗ್ಗಿ ಹಿಗ್ಗಿ ಕುಣಿಯಿತು. 

ಎಲ್ಲರೂ ಭಕ್ತಿ ಭರಿತರಾಗಿ ಶ್ರೀ ಸರ್ವಜ್ಞಾಚಾರ್ಯರ ಪಾದ ಪಯೋಜಗಳಿಗೆ ಮಣಿದರು - ಅವರ ಮುಖದಿಂದ ಹರಿದು ಬಂದ ಉಪದೇಶಾಮೃತದ ದಿವ್ಯ ಧಾರೆಯಲ್ಲಿ ಮಿಂದು ಧನ್ಯಂ ಮಾನ್ಯರಾದರು. 

ಆಗ ಶ್ರೀಮದಾಚಾರ್ಯರು ಪಂಡಿತರ ಮನೆಯವರಿಗೆಲ್ಲ ಆಶೀರ್ವಾದ ಮಾಡಿದ ಬಳಿಕ ಅವರ ಮಗನಾದ ಬಾಲಕ ನಾರಾಯಣ ಪಂಡಿತರು ಶ್ರೀ ಶ್ರೀಗಳವರ ಪಾದದಡಿಯಲ್ಲಿ ಒಂದು ಹೊತ್ತಿಗೆಯನ್ನು ತಂದಿಟ್ಟು ದೀರ್ಘ ದಂಡ ನಮಸ್ಕಾರ ಹಾಕಿದರು. 

ಶ್ರೀಮದಾಚಾರ್ಯರು - ಇದು ಏನು ಎಂದು ಕೇಳಿದರು?

ಆಗ ಆ ಪುಟ್ಟ ಬಾಲಕನು ದಿಟ್ಟತನದಿಂದ.... 

" ತಮ್ಮ ತಾತ್ಪರ್ಯ ನಿರ್ಣಯದಲ್ಲಿಯ ಶ್ರೀ ರಾಮ ಕಥೆಯನ್ನು ಕೇಳಿ ಏನೋ ಪ್ರೇರಣೆ, ಸ್ಫೂರ್ತಿ ಬಂದಂತಾಗಿ ಅದನ್ನೇ ಕಾವ್ಯ ಧರ್ಮಕ್ಕೆ ಒಗ್ಗುವಂತೆ ತುಸು ಹಿಗ್ಗಿಸಿ " ಸಂಗ್ರಹ ರಾಮಾಯಣ " ವೆಂಬ ಒಂದು " ಚಿಕ್ಕ ಪ್ರಬಂಧ " ವನ್ನು ಬರೆದಿದ್ದೇನೆ.

ಶ್ರೀ ಚರಣರು ಇದನ್ನು ಕರುಣೆಯಿಂದ ತುಸು ಅವಲೋಕಿಸಿದರೆ ನಾನು ಕೃತಾರ್ಥ " ಎಂದು ಕರ ಜೋಡಿಸಿ ಬಿನ್ನವಿಸಿದರು. 

ಶ್ರೀ ಆನಂದತೀರ್ಥ ಭಗವತ್ಪಾದರು ಅಭಿಮಾನದಿಂದಲೂ, ಅಂತಃಕರಣದಿಂದಲೂ ಆ ಬಾಲ ಕವಿಯ ಪ್ರೌಢ ಕೃತಿಯನ್ನು ಆಮೂಲಾಗ್ರ ಓದಿ ಆನಂದ ಪಟ್ಟರು. 

ಮೆಚ್ಚಿಕೆಯನ್ನು ವ್ಯಕ್ತ ಪಡಿಸಿದರು. 

ಆ ಪಂಡಿತ ಕುಮಾರನಲ್ಲಿ ಸುಪ್ತವಾದ ಕಾವ್ಯ ಕಲಾಂಕುರಕ್ಕೆ ಪ್ರೋತ್ಸಾಹನೆಯ ದುಗ್ಧ ಧಾರೆಯೆರೆದು, ಅದು ಮುಂದೆ ಕುಡಿಯೊಡೆದು ಪಲ್ಲವಿಸಿ, ಚಲ್ಲುವರೆಯುವಂತೆ ಅನುಗ್ರಹಿಸಿದರು. 

** ಶ್ರೀಮದಾಚಾರ್ಯರ ಪ್ರೋತ್ಸಾಹನೆಯೇ ಶ್ರೀ ಸುಮಧ್ವ ವಿಜಯವನ್ನು ಬರೆಯಲು ಪ್ರೋತ್ಸಾಹಕ ಪ್ರೇರಣಾ ಕಾರಣವಾಗಿದೆಯೆಂದು... 

" ಶ್ರೀ ಸು. ರಾ. ಯಕ್ಕುಂಡಿಯವರು ತಮ್ಮ " ಮಿಂಚಿನ ಬಳ್ಳಿಯ ಮಧ್ವ ಮುನಿ ವಿಜಯ " ದ 191 ನೇ ಪುಟದಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. 

ಆದರೆ ಈ ಘಟನೆಯು ತಿಳಿದು ಬಂದ ಮೂಲವನ್ನು ಮಾತ್ರ ಕಾಣಿಸಲಿಲ್ಲ. 

ಶ್ರೀಮದಾಚಾರ್ಯರ ಕಾಲ ಹಾಗೂ ಶ್ರೀ ನಾರಾಯಣ ಪಂಡಿತಾಚಾರ್ಯರ " ಸುಮಧ್ವ ವಿಜಯದ ಸ್ವಯಂಕೃತ ಟೀಕೆಯಾದ ಭಾವ ಪ್ರಕಾಶಿಕೆಯ ಕೆಲವು ಪದ್ಯಗಳನ್ನು ಪರಿಶೀಲಿಸಿದರೆ..... 

ಶ್ರೀ ನಾರಾಯಣಾಚಾರ್ಯರು " ಚರಿತ್ರ ನಾಯಕರನ್ನು ( ಶ್ರೀ ಸರ್ವಜ್ಞಾಚಾರ್ಯರನ್ನು ) ನೋಡಿರಲಿಲ್ಲವೇನೋ ಎಂದು ಅನಿಸುತ್ತದೆ. 

" ಭಾವ ಪ್ರಕಾಶಿಕೆ " ಯ  ಅನೇಕ ಪದ್ಯಗಳಲ್ಲಿ ಗ್ರಂಥಕಾರರು ಶ್ರೀಮದಾಚಾರ್ಯರ ಚರಿತ್ರವನ್ನು ಅನೇಕ ಜನರ ಮುಖದಿಂದ ಕೇಳಿ ಬರೆದದ್ದು ಎಂದು ಒಪ್ಪಿ ಕೊಂಡಿದ್ದಾರೆ. 

ಪ್ರಾಯೇಣ ನೈಕ ಮಾತ್ರೋಕ್ತಾ:

ಕಥಿತಾ ಇಹ ಸರ್ವಶಃ ।

ಮಯಾ ದೃಷ್ಟಾ ಧ್ರುವಮಿತಿ 

ಪ್ರೋಕ್ತಾ: ಪ್ರಾಯೇಣ ಪೂರುಶೈ ।।

ದ್ವಯೋ: ವಕ್ತ್ರೋ: ವಿರುಧೇ 

ತು ಸ್ವೀಕೃತಾ ಪ್ರಬಲಸ್ಯಗೀ: ।

ಕಾವ್ಯಾಶ್ರಯೇ ವಾ ಗುರು-

ಕೀರ್ತಯೇ ವಾ ಪ್ರೋಕ್ತ೦ 

ಸ್ವಯೈವಾಪಿ ಮನೀಷಯಾವಾ ।।

ತಸ್ಮಾನ್ನ ಶಂಕ್ಯೇತಿ ಮಹಾ 

ಜನೇನ ಪುಂಸಾ ಕುಶಾಗ್ರಿಯೇ 

ಧಿಯಾಪ್ಯವಶ್ಯಂ ।।

ಇಲ್ಲಿ ಶ್ರೀ ನಾರಾಯಣ ಪಂಡಿತಾಚಾರ್ಯರು " ಶ್ರೀ ಸುಮಧ್ವ ವಿಜಯ " ವನ್ನು ತಾವು ಬರೆಯುವಾಗ ಯಾವ ಕ್ರಮವನ್ನು ಅನುಸರಿಸಿದ್ದು ಮತ್ತು ಯಾವ ಮೂಲವನ್ನು ಆಧರಿಸಿದ್ದು ಎಂಬುವದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

****

" ಶ್ರೀ ನಾರಾಯಣ - 2 "

" ಶ್ರೀ ನಾರಾಯಣ ಪಂಡಿತಾಚಾರ್ಯರು "

ಆಚಾರ್ಯರ ಜೀವನದ ಬೇರೆ ಬೇರೆ ಘಟನೆ ಸಂದರ್ಭ ಸನ್ನಿವೇಶಗಳನ್ನು ಬಲ್ಲಂಥ - ನೋಡಿದಂಥ ಅಥವಾ ಅದರಲ್ಲಿ ಭಾಗವಹಿಸಿದಂತ ಅನೇಕ ಗುರು ಹಿರಿಯರ ಬಾಯಿಂದ ಕೇಳಿದ್ದೇನೆ ಮತ್ತು ಒಂದೊಂದು ಘಟನೆಯನ್ನು ಅನೇಕ ಜನರ ಬಾಯಿಂದ ಕೇಳಿ ಅದನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ ನೋಡಿ ಅದು ಅತ್ಯಂತ ಪ್ರಾಮಾಣಿಕ ಎಂದು ನನ್ನ ಬುದ್ಧಿಗೆ ಸ್ಪಷ್ಟವಾಗಿ ತಿಳಿದ ಬಳಿಕವೇ ಆ ವಿಷಯವನ್ನು ಈ ಗ್ರಂಥದಲ್ಲಿ ನಾನು ಕಾಣಿಸಿದ್ದೇನೆ. 

ಹೇಳುವವರಲ್ಲಿಯೇ ಭಿನಾಭ್ಪ್ರಾಯವಾದರೆ ಅವುಗಳಲ್ಲಿ ಪ್ರಬಲ - ದುರ್ಬಲ ವಿಚಾರಿಸಿ ಎರಡನ್ನೂ ತೂಗಿ ನೋಡಿ ಬಹು ಜನ ಸಂವಾದದಿಂದ " ಸತ್ಯಸ್ಯ ಸತ್ಯಂ " ಎಂದು ತೋರಿದ ವೃತ್ತಗಳನ್ನೇ ನಾನು ಇಲ್ಲಿ ಬಿತ್ತರಿಸಿದ್ದೇನೆ. 

ಇದು ಬರೀ ಕಾವ್ಯವೆಂದು ಅಥವಾ ಗುರುಗಳ ಕೀರ್ತಿಯನ್ನು ಸಾರುವ ಪ್ರಬಂಧವೆಂದು ಅಥವಾ ಕಲ್ಪನೆಯಿಂದ ಏನಾದರೂ ಸರಸ ಸುಂದರವಾಗಿ ಹೇಳ ಬಹುದಾದ ಕಥಾನಕವೆ ಎಂದುಯಾರೂ ಶಂಕಿಸಕೂಡದು. 

ಇದರಲ್ಲಿ ಹೇಳಿದ್ದು ಅಪ್ಪಟ ಸತ್ಯ. 

ವಸ್ತುತಸ್ತು ನಡೆದ " ಇತ್ಥ೦ಭೂತ " ಸಂಗತಿಯನ್ನೇ ನಾನು ಹತ್ತು ಮೂಲಗಳಿಂದ ಸಂಗ್ರಹಿಸಿ, ವಿಚಾರಿಸಿ, ಪ್ರಾಮಾಣಿಕತೆಯ ನಿಕಷದಲ್ಲಿ ಪರಿಕಿಸಿ ಹದಿನಾರಾಣೆ  ಸತ್ಯವೆಂದು ಖಾತರಿಯಾದ ಬಳಿಕವೇ ಅಂಥಾ ವಾಸ್ತವಿಕ ವಿಷಯಗಳನ್ನು ಮಾತ್ರ ಇಲ್ಲಿ ಬರೆದಿದ್ದೇನೆ ಎಂದು ಹೇಳಿದ್ದಾರೆ. 

ಶ್ರೀಮದಾನಂದತೀರ್ಥ ಭಾಗವತ್ಪಾದರಂಥ ವಿಶ್ವತೋಮುಖ ಜೀವನವುಳ್ಳ ಮಹಾ ವ್ಯಕ್ತಿಗಳ ಸಮಗ್ರ ಬಾಳಿನ ಚಾರು ಚರಿತ್ರೆಯನ್ನು ಇಡಿಯಾದ ಯಾವುದೇ ಒಬ್ಬ ಸಮಕಾಲೀನ ವ್ಯಕ್ತಿಗೆ ನೋಡಿ ತಿಳಿದುಕೊಳ್ಳುವುದು ಶಕ್ಯವಿಲ್ಲ. 

ಆದುದರಿಂದ ಆ ಆ ಘಟನೆಗಳು ನಡೆದ ಸ್ಥಳದಲ್ಲಿ - ಆ ಸಮಯದಲ್ಲಿ ಅಲ್ಲಿ ಇದ್ದ ಪ್ರತ್ಯಕ್ಷ ದರ್ಶಿಗಳ ಹೇಳಿಕೆ - ಕೇಳಿಕೆಗಳಿಂದಲೇ ಆ  ವಿಷಯಗಳನ್ನು ತಿಳಿದುಕೊಂಡು ಎಂಥಾ ಸಮಕಾಲೀನನಾದರೂ ಬರೆಯಬೇಕಾಗುತ್ತದೆ. 

ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀ ಸರ್ವಜ್ಞರ ಸಮಕಾಲೀನರಾದ ತಮಗೆ ದೂರ ದೂರ ದೇಶಗಳಲ್ಲಿ - ಬೇರೆ ಬೇರೆ ಕಾಲಗಳಲ್ಲಿ ನಡೆದ ಘಟನೆಗಳೆಲ್ಲವೂ ಸಾಮಾನ್ಯವಾಗಿ ಗೊತ್ತಿದ್ದರೂ ಅಷ್ಟರ ಮೆಲಿಯೇ ಅವಲಂಬಿಸದೆ ಆ ಸ್ಥಳಗಳಿಗೆ ಹೋಗಿ ಅಲ್ಲಿದ್ದ ಪ್ರತ್ಯಕ್ಷ ದರ್ಶಿಗಳನ್ನು ಕಂಡು ಅವರನ್ನು ವಿಚಾರಿಸಿ.... 

ಮಯಾ ದೃಷ್ಟಾ ಧ್ರುವಮಿತಿ 

ಪ್ರೋಕ್ತಾ: ಪ್ರಾಯೇಣ ಪುರುಶೈ: ।।

ಸುಮಧ್ವ ವಿಜಯ ಕಾವ್ಯವನ್ನು ಅವರು ತಾವು ನೋಡಿದ್ದಕ್ಕಿಂತ ಹೆಚ್ಚಾಗಿ ತಮ್ಮ ತಂದೆಯಿಂದಲೂ ಅಧೀಕೃತವಾದ ಸತ್ಯ ಸಂಗತಿಗಳನ್ನೆಲ್ಲ ತಿಳಿದುಕೊಂಡು " ಸುಮಧ್ವವಿಜಯ " ವನ್ನು ಬರೆದಿದ್ದಾರೆ. 

ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀ ಸುಮಧ್ವವಿಜಯವಲ್ಲದೆ ಅನೇಕ ಕಾವ್ಯ ಶಾಸ್ತ್ರ ಪ್ರಬಂಧಗಳನ್ನು ರಚಿಸಿದ್ದಾರೆ. ಅವುಗಳಲ್ಲಿ... 

" ಶ್ರೀ ನಾರಾಯಣ ಪಂಡಿತಾಚಾರ್ಯ ಕೃತ ಗ್ರಂಥ ರತ್ನಗಳು "

1. ಸುಮಧ್ವ ವಿಜಯ [ 16 ಸರ್ಗಗಳು ]

2. ಸುಮಧ್ವ ವಿಜಯ ಭಾವ ಪ್ರಕಾಶಿಕಾ 

3. ಅಣು ಮಧ್ವ ವಿಜಯ 

[ ಪ್ರಮೇಯ ನವ ಮಾಲಿಕಾ - 32 ಶ್ಲೋಕಗಳು ]

4. ಮಣಿಮಂಜರೀ 

5. ನಯಚಂದ್ರಿಕಾ [ ಅನುವ್ಯಾಖ್ಯಾನ ಟೀಕಾ ]

6. ತತ್ತ್ವಮಂಜರೀ [ ವಿಷ್ಣುತತ್ತ್ವ ನಿರ್ಣಯ ಟೀಕಾ ]

7. ಯಮಕಭಾರತ ಟೀಕಾ 

8. ಅಣುಭಾಷ್ಯ ಟೀಕಾ 

9. ಕೃಷ್ಣಾಮೃತ ಮಹಾರ್ಣವ ಟೀಕಾ 

10. ಮಿಥ್ಯಾತ್ವಾನುಮಾನ ಖಂಡನ ಟೀಕಾ 

11. ಸಂಗ್ರಹ ರಾಮಾಯಣ [ 3000 ಶ್ಲೋಕಗಳು ]

12. ಶುಭೋದಯ ಕಾವ್ಯ [ 503 ಶ್ಲೋಕಗಳು ]

13. ಪಾರಿಜಾತ ಹರಣಂ [ 3 ಸರ್ಗಗಳು ]

14. ಯೋಗದೀಪಿಕಾ [ ಸದಾಚಾರ ಗ್ರಂಥ - 10 ಪಟಲಗಳಲ್ಲಿ ]

15. ನರಸಿಂಹ ಸ್ತುತಿ [ 21 ಶ್ಲೋಕಗಳು ]

16. ರಾಮಗೀತಾಷ್ಟಕ 

17. ದಾಶರಥ್ಯಷ್ಟಕ 

18. ಕೃಷ್ಣಮಾಲಾ ಸ್ತೋತ್ರ 

19. ಮಧ್ವ ಕವಚ 

20. ಅಣು ವಾಯುಸ್ತುತಿ 

21. ಶಿವ ಸ್ತುತಿ [ 13 ಶ್ಲೋಕಗಳು ]

22. ತಾರತಮ್ಯ ಸ್ತೋತ್ರ [ ದೇವತಾ ತಾರತಮ್ಯ ]

23. ಮಧ್ವಾಮೃತ ಮಹಾರ್ಣವ 

24. ಅಂಶಾವತಾರ 

[ ದೇವತೆಗಳ ಮತ್ತು ದೈತ್ಯ / ಅಸುರರ ಅಂಶ - ಆವೇಶ - ಅವತಾರಗಳ ವಿವರ ]

25. ತಿಥಿತ್ರಯ ನಿರ್ಣಯ

ಮೊದಲಾದವುಗಳು ಪ್ರಮುಖವಾಗಿವೆ. 

ಅವರ " ಭಾವ ಪ್ರಕಾಶಿಕಾ ಟಿಪ್ಪಣಿ " ಯಿಂದ ಸುಮಧ್ವ ವಿಜಯದಲ್ಲಿ ನಿರ್ದೇಶಿಸಿದ ಶ್ರೀಮದಾಚಾರ್ಯರ ಜೀವನ ಚರಿತ್ರದಲ್ಲಿಯ ಅನೇಕ ಘಟನೆಗಳ ಸ್ಥಾನಗಳನ್ನು - ಭೌಗೋಲಿಕ ಸನ್ನಿವೇಶಗಳನ್ನೂ ಮತ್ತು ಸಂಸ್ಕೃತ ಶಬ್ದಗಳಿಗೆ ಸಮಾನಾರ್ಥಕ ತುಳು ಭಾಷೆಯ ಶಬ್ದಗಳನ್ನು ತಿಳಿಯಲಿಕ್ಕೂ - ಅವುಗಳ ಸಹಾಯದಿಂದ ಇಂದು ಅವುಗಳ ವಿಶಿಷ್ಟ ಸ್ಥಿತಿ ಗತಿಯನ್ನು ಗುರುತಿಸಲಿಕ್ಕೂ ಬಹಳ ಉಪಯೋಗವಾಗಿದೆ. 

ಶ್ರೀ ನಾರಾಯಣ ಪಂಡಿತಾಚಾರ್ಯರು ಜಗತ್ತಿಗೆಲ್ಲ ಶ್ರೀಮದಾಚಾರ್ಯರ ದಿವ್ಯ ಜೀವನದ ದಿಗ್ದರ್ಶನ ಮಾಡಿಸಿದ ಪುಣ್ಯಾತ್ಮರು. 

ಅವರು " ಸುಮಧ್ವ ವಿಜಯ " ಗ್ರಂಥವನ್ನು ಬರೆಯದೆ ಇದ್ದಿದ್ದರೆ ಗುರುಗಳ ಜೀವನದ ಪಾವನ ಚರಿತ್ರೆಯು ಯಾರಿಗೂ ಗೊತ್ತಾಗದೆ... 

ಇದಮಂಧ೦ ಜಗತ್ ಕೃತ್ಸ್ನ೦ 

ಜಾಯೇತ ಭುವನ ತ್ರಯಂ ।।

ಎಂಬ ವಚನದಂತೆ ಜಗತ್ತೆಲ್ಲವೂ ಕತ್ತಲೆಯಲ್ಲಿಯೇ ಕೊಳೆಯಬೇಕಾಗುತ್ತಿತ್ತು. 

ಶ್ರೀ ಸರ್ವಜ್ಞರ ವಿರಾಡ್ ಜೀವನದ ದಿವ್ಯ ದರ್ಶನವನ್ನು ಹದಿನಾರು ಸರ್ಗದ ಈ ಮಹಾ ಕಾವ್ಯದಲ್ಲಿ ಮೂಡಿಸಿದ - ಜನರಿಗೆಲ್ಲ ಮಾಡಿಸಿದ - ಶ್ರೀ ನಾರಾಯಣ ಪಂಡಿತಾಚಾರ್ಯರ ಉಪಕಾರವು ಮಾಧ್ವರಿಗೆಲ್ಲ ಚಿರ ಸ್ಮರಣೀಯವಾಗಿದೆ.  

ಶ್ರೀ ನಾರಾಯಣ ಪಂಡಿತಾಚಾರ್ಯರ ಕಾವ್ಯ ಕೌಶಲವು ಅನ್ಯಾದೃಶವಾಗಿದೆ. 

ಚತುರನಾದ ಚಿತ್ರಕಾರನು ಚಿಕ್ಕ ಕಾಗದದ ತುಂಡಿನಲ್ಲಿ ಉನ್ನತೋನ್ನತವಾದ ಹೈಮಾಚಲದ ಶೈಲಾ ಶ್ರೇಣಿಗಳನ್ನೆಲ್ಲ ಚಿತ್ರಿಸಿ ತೋರಿಸುವಂತೆ ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀ ಸರ್ವಜ್ಞಾಚಾರ್ಯರ ಬಾನಗಲವಾದ ಬದುಕಿನ ವಿರಾಡ್ ದರ್ಶನವನ್ನು 16  ಸರ್ಗದ ಈ ಮಹಾಕಾವ್ಯದಲ್ಲಿ ವೈವಿಧ್ಯಮಯವಾಗಿ ಮೂಡಿಸಿದ್ದು ಅವರ ಕವಿತ್ವ ಸಿದ್ಧಿಯ ಕೌಶಲದ ಕಳಸವಾಗಿದೆ. 

ಶ್ರೀ ನಾರಾಯಣ ಪಂಡಿತಾಚಾರ್ಯರ ಈ " ಸುಮಧ್ವ ವಿಜಯ ಮಹಾಕಾವ್ಯ " ವು ಪ್ರಾಮಾಣಿಕತೆಯ ಒರೆಗಲ್ಲಿಗೂ ಇಳಿಯ ಬಹುದಾದ  ಚೊಕ್ಕ ಚಿನ್ನದಂಥ ಸತ್ಯ ಶುದ್ಧವಾದ - ಪ್ರಮಾಣ ಬದ್ಧವಾದ ರಸವತ್ ಕೃತಿಯಾಗಿದೆ. 

ಇಂಥಾ ಮಹಾ ವಿಭೂತಿಯ ಬೃಹಜ್ಜೀವನದ ದೇದೀಪ್ಯಮಾನವಾದ ದಿವ್ಯ ದರ್ಶನವನ್ನು ಮಧುರ ಕೋಮಲ ಕಾಂತ ಪದಾವಲಿಗಳಲ್ಲಿ ಪ್ರಸನ್ನ ವರ್ಣ ಪುಂಜಗಳಿಂದ ರಸ ರಂಜಿನಿಯಾಗಿ ಸುಂದರ ಶೈಲಿಯಲ್ಲಿ ಮೂಡಿಸಿದ್ದಕ್ಕಾಗಿ  ಶ್ರೀ ನಾರಾಯಣ ಪಂಡಿತಾಚಾರ್ಯರಿಗೆ ಸಹೃದಯ ಪ್ರಪಂಚವೆಲ್ಲವೂ ಋಣಿಯಾಗಿ ಇರಬೇಕಾಗಿದೆ. 

ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀಮದಾಚಾರ್ಯರ ಹಾಗೂ ತಮ್ಮ ತಂದೆಯವರ ಅನಂತರ ಮಂಗಳೂರಿನ ದಕ್ಷಿಣಕ್ಕೆ ಕುಂಬಳೆ ಗ್ರಾಮದ ಹತ್ತಿರ ಇರುವ ತಮ್ಮ ಕಾವು ಮಠದಲ್ಲಿಯೇ ಇದ್ದು ಶ್ರೀ ಸರ್ವಜ್ಞಾಚಾರ್ಯರ ಗ್ರಂಥಗಳ ಪಾಠ ಪ್ರವಚನ - ಟೀಕಾ ಲೇಖನ - ಗ್ರಂಥ ರಚನೆ - ಪೂಜೆ ಪುರಸ್ಕಾರಗಳನ್ನು ಮಾಡಿಕೊಂಡು ವಾಸವಾಗಿದ್ದರು. 

ತಮ್ಮ ತಂದೆ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರಿಗೆ ಶ್ರೀಮದಾಚಾರ್ಯರು ದಯಪಾಲಿಸಿದ ಶ್ರೀ ಶ್ರೀಕರ ವಿಗ್ರಹವನ್ನು ಅನುದಿನವೂ ಭಕ್ತಿಯಿಂದ ಪೂಜೆ ಮಾಡುತ್ತಿದ್ದರು. 

ಶ್ರೀ ಸರ್ವಜ್ಞರ ಸಾಕ್ಷಾದ್ದರ್ಶನದ ಸೌಭಾಗ್ಯವನ್ನು ಪಡೆದು ಅವರ ಸಾಕ್ಷಾತ್ ಶಿಷ್ಯರಾದ ತಮ್ಮ ತಂದೆಯವರಿಂದ ಶ್ರೀ ಮಧ್ವ ದರ್ಶನದ ದಿವ್ಯ ಜ್ಞಾನವನ್ನು ಪಡೆದು ಧನ್ಯರಾದ ಶ್ರೀ ನಾರಾಯಣ ಪಂಡಿತಾಚಾರ್ಯರಿಗೆ ವಯಸ್ಸು ಆದಂತೆ... 

ಮನವು ಮಾಗಿತು.     

ವೈರಾಗ್ಯದೆಡೆಗೆ ಬಾಗಿತು. 

ಸಂಸಾರದಲ್ಲಿ ಜಿಗುಪ್ಸೆ ಮೂಡಿತು. 

ಅವರ ತಂದೆಯವರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರೂ ವಾರ್ಧಕ್ಯದಲ್ಲಿ ವಿರಕ್ತರಾಗಿ ಯತ್ಯಾಶ್ರಮವನ್ನು ಸ್ವೀಕರಿಸಿದ್ದರು. 

ಅದರಂತೆ - ಶ್ರೀ ನಾರಾಯಣ ಪಂಡಿತಾಚಾರ್ಯರೂ ವಯಸ್ಸಾದಂತೆ.... 

ಭವ ಬಂಧನದ ಬೇಡಿಗಳನ್ನೆಲ್ಲ ಕಳಚಿದರು. 

ಸಾಂಸಾರಿಕ ಸ್ನೇಹ ಎಳೆ - ತೊಳೆಗಳನ್ನೆಲ್ಲ ಹರಿದು ಹಾಕಿದರು. 

ಧನ - ಕನಕಗಳನ್ನು ತೊರೆದರು. 

ಮಡದಿ ಮಕ್ಕಳನ್ನು ಮರೆತರು. 

ಸರ್ವಸಂಗವನ್ನು ಪರಿತ್ಯಾಗ ಮಾಡಿ ಸಂನ್ಯಾಸಿಗಳಾಗಿ ಶ್ರೀ ನಾರಾಯಣ ತೀರ್ಥರಾದರು.  

ಈ ಪರಮ ಹಂಸಾಶ್ರಮದಿಂದಲೇ ಪರಮಾತ್ಮನ ಸೇವೆ ಮಾಡಿ ಕೃತಾರ್ಥರಾದರು.

ಈ ಕಾವು ಮಠದಲ್ಲಿಯೇ ಯತ್ಯಾಶ್ರಮವನ್ನು ಸ್ವೀಕರಿಸಿ ಸ್ವಾಮಿಗಳಾದ ಈ ತಂದೆ [ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ] - ಮಕ್ಕಳ [ ಶ್ರೀ ನಾರಾಯಣ ಪಂಡಿತಾಚಾರ್ಯರು ] ಇಬ್ಬರ ವೃಂದಾವನಗಳು ಇವೆ.

by ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

****


ಶಿವಸ್ತುತಿ - ೧


ಕಾರ್ತಿಕ ಮಾಸದ ಸೋಮವಾರ ಪರ್ವಕಾಲ. ಶ್ರೀರುದ್ರದೇವರು ಪ್ರಸನ್ನರಾಗಿರುತ್ತಾರೆ. ಬೇಡಿದಿಷ್ಟಾರ್ಥಗಳನ್ನು ಕರುಣಿಸುತ್ತಾರೆ.

ಅವರನ್ನು ಸ್ತುತಿಸೋಣ. ಅವರ ಅನುಗ್ರಹವನ್ನು ಪಡೆಯೋಣ. 


ಹೆಚ್ಚಿನವರು, ವೈಷ್ಣವರು ಶಿವದ್ವೇಷಿಗಳೆಂದು ತಪ್ಪಾಗಿ ತಿಳಿದಿರುತ್ತಾರೆ. ಅಂತಹ ಭ್ರಾಂತಿಯನ್ನು ಹೋಗಲಾಡಿಸುವ ಅದ್ಭುತವಾದ ಒಂದು ಕೃತಿ ಶಿವಸ್ತುತಿ.


ವೈಷ್ಣವರು ಶಿವನಲ್ಲಿ ಮಾಡುವ ಭಕ್ತಿ, ವೈಷ್ಣವರಿಗೆ ಶಿವನು ಕೊಡುವ ಅನುಗ್ರಹ ಎಲ್ಲವೂ ತುಂಬಾ ಸೊಗಸಾಗಿ ವರ್ಣಿತವಾಗಿದೆ. 


ಮಣಿಮಂಜರೀ ಮೊದಲಾದ ಗ್ರಂಥಗಳನ್ನು ರಚಿಸಿದ ಶ್ರೀನಾರಾಯಣ ಪಂಡಿತಾಚಾರ್ಯರೇ ಈ ಶಿವಸ್ತುತಿಯನ್ನು ಬರೆದದ್ದು.


ಈ ಸ್ತೋತ್ರದ ರಚನೆ ಯ ಹಿಂದೆ ಒಂದು ಕಥೆ ಇದೆ. 


ನಾರಾಯಣ ಪಂಡಿತಾಚಾರ್ಯರು ವೈಷ್ಣವರು. ವೇದಾದಿಶಾಸ್ತ್ರವನ್ನು ಕಲಿತ ವೈದಿಕ ಪಂಡಿತರು. ಸದಾಚಾರಸಂಪನ್ನರಾಗಿ ಅನೇಕ ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ವಿಷ್ಣೂಪಾಸಕರು. ಶಿವನನ್ನೂ ಭಕ್ತಿಯಿಂದ ಪೂಜಿಸುತ್ತಿದ್ದರು. ಸ್ತುತಿಸುತ್ತಿದ್ದರು. ಪಂಡಿತರಾದ್ದರಿಂದ ತಾವು ಶಿಷ್ಯರ ಜೊತೆಗೆ ಬೇರೆ ಬೇರೆ ತೀರ್ಥ ಕ್ಷೇತ್ರಗಳಿಗೆ ಪ್ರಯಾಣ ಮಾಡುತ್ತಿದ್ದರು.


ಒಂದು ಬಾರಿ ಒಂದು ಶಿವನ ಪವಿತ್ರ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದರು. ಜೊತೆಗೆ ಶಿಷ್ಯರೂ ಇದ್ದರು. ಪವಿತ್ರವಾದ ಆ ಕ್ಷೇತ್ರದಲ್ಲಿ ಭವ್ಯವಾದ ಶಿವನ ಬೃಹತ್ತಾದ ದೇವಾಲಯವಿತ್ತು. ಆ ದೇವಾಲಯದಲ್ಲಿರುವ ಶಿವನನ್ನು ಶೈವರು ಪೂಜೆ ಮಾಡುತ್ತಿದ್ದರು. ಸಹಜವಾಗಿ ಶಿವನ ಭಕ್ತರಾದ  ಪಂಡಿತಾಚಾರ್ಯರು, ಆ ಶಿವನ ದೇವಾಲಯವನ್ನು ಪ್ರವೇಶ ಮಾಡಲು ಹೊರಟರು. ಆಗ ಆ ಶೈವರು ತಡೆದರು.


ನೀವು ವೈಷ್ಣವರು. ನಿಮ್ಮಲ್ಲಿ ಸ್ಪಷ್ಟವಾಗಿ ವಿಷ್ಣುಲಾಂಛನವು ಕಾಣುತ್ತಿದೆ. ನೀವು ಪಾಶುಪತಮತವನ್ನು ಒಪ್ಪುವುದಿಲ್ಲ. ಹಾಗಾಗಿ ನೀವು ಶಿವನ ಮಂದಿರದೊಳಗೆ ಪ್ರವೇಶ ಮಾಡುವಂತಿಲ್ಲ. ಎಂದು ತಡೆದರು. ದೇವಾಲಯದ ಬಾಗಿಲನ್ನೂ ಮುಚ್ಚಿದರು. ಬೀಗವನ್ನು ಹಾಕಿದರು.


ಜೊತೆಗೆ ವೈಷ್ಣವಮತವನ್ನೂ ನಿಂದಿಸಿ, ಪಾಶುಪತ ಮತದ ಆಧಾರದಲ್ಲಿ ಶಿವನನ್ನು ಸರ್ವೋತ್ತಮ ಎಂದು ವಾದ ಮಾಡಲು ಆರಂಭಿಸಿದರು. ಪಂಡಿತಾಚಾರ್ಯರು ಅವರ ಜೊತೆ ವಾದ ಮಾಡಿದರು. ಶೈವ ವೈಷ್ಣವ ವಾದ ನಡೆಯಿತು. ಕೊನೆಯಲ್ಲಿ ಪಂಡಿತಾಚಾರ್ಯರು ಪ್ರಮಾಣ ಸಹಿತವಾಗಿ ಶೈವರನ್ನು ಗೆದ್ದರು. 


ಶೈವರನ್ನು ಕುರಿತು ಹೇಳಿದರು. ನಾನೊಬ್ಬ ವೈಷ್ಣವ. ಶಿವನ ಭಕ್ತ. ನಾನು ಯಾವತ್ತೂ ಶಿವನನ್ನು ನಿಂದಿಸುವುದಿಲ್ಲ. ಶಿವನಿಗೆ ಯಾವುದೇ ಅಪಚಾರವಾಗದಂತೆ, ಶಿವನಿಗೆ ಪ್ರಿಯವಾಗುವಂತೆಯೇ ನಾನು ವಾದ ಮಾಡಿದ್ದೇನೆ. 


ನನ್ನ ವಾದವು ಶಿವನಿಗೂ ಸಮ್ಮತವಾಗಿದ್ದಲ್ಲಿ, ಒಳಗಿರುವ ಶಿವನು ನನ್ನ ದೃಷ್ಟಿಗೆ ಗೋಚರನಾಗುತ್ತಾನೆ. ಎಂದು ಹೇಳಿದರು.


ಎಲ್ಲರಿಗೂ ಆಶ್ಚರ್ಯ. ಬಾಗಿಲು ಮುಚ್ಚಿದೆ. ಬೀಗವನ್ನೂ ಹಾಕಿದ್ದಾರೆ. ಪಂಡಿತರು ಬಾಗಿಲಿನ ಮುಂದೆ ಬಂದರು. ಎರಡೂ ಕೈಗಳನ್ನು ಮೇಲೆತ್ತಿದರು. ಗಟ್ಟಿಯಾಗಿ ಶಿವನನ್ನು ಸ್ತೋತ್ರ ಮಾಡಲು ಆರಂಭ ಮಾಡಿದರು. 


೧೩ ಶ್ಲೋಕಗಳಲ್ಲಿ ಸ್ತೋತ್ರವನ್ನು ಮಾಡುತ್ತಾರೆ.


ಸ್ತೋತ್ರ ಮುಗಿಯುವಾಗ ಶಿವನ ದೇವಾಲಯದ ಬಾಗಿಲಿನ ಬೀಗವು ಕಳಚುತ್ತದೆ, ಬಾಗಿಲು ತೆರದು, ಶಿವನ ದರ್ಶನವಾಗುತ್ತದೆ. ಪಂಡಿತರು ಶಿವನನ್ನು ನಮಸ್ಕರಿಸಿದರು. ಅರ್ಚಿಸಿದರು. ಸ್ತುತಿಸಿದರು. 


ಇದಿಷ್ಟು ಕತೆ. 


ಆಗ ಅವರು ಮಾಡಿದ ಸ್ತುತಿಯೇ ಶಿವಸ್ತುತಿ. ಮಾಧ್ವರು ಪ್ರತಿನಿತ್ಯ ಪಠಿಸುವ ಅಪೂರ್ವ ಕೃತಿ. 


ಇದರಲ್ಲಿ ಬರುವ ರುದ್ರ ದೇವರ ಮಹಿಮೆಯನ್ನು ತಿಳಿಯೋಣ.


ರುದ್ರದೇವರು ವಿಷವನ್ನು ಪಾನ ಮಾಡಿದಾಗ ಕಂಠದಲ್ಲಿ ನೀಲವರ್ಣವು ಉಂಟಾಯಿತು. ಅಂದಿನಿಂದ ಅವರು ನೀಲಕಂಠ ಎಂದು ಪ್ರಸಿದ್ಧರಾಗಿದ್ದಾರೆ. ಅವರ ಶರೀರವು ಸ್ಫಟಿಕ ದಂತೆ ಅತ್ಯಂತ ಸ್ವಚ್ಛ ವಾಗಿದೆ.


ಅವರ ತಲೆಯಲ್ಲಿ ಫಳಫಳ ಹೊಳೆಯುವ ಬಂಗಾರದಂತಹ ಜಟೆಯನ್ನು ಹೊಂದಿದ್ದಾರೆ. ಅದರ ಜೊತೆಗೆ ಚಂದ್ರನ ಕಲೆಯನ್ನು ಧಾರಣೆ ಮಾಡಿದ್ದಾರೆ. ಅರಳಿದ ಸುಂದರವಾದ ಕಪಿಲವರ್ಣದ ಮೂರು ಕಣ್ಣುಗಳನ್ನು ಹೊಂದಿದ್ದಾರೆ. 


ಶರೀರದಲ್ಲಿ ವ್ಯಾಘ್ರದ ಚರ್ಮವನ್ನು ಧಾರಣೆ ಮಾಡಿದ್ದಾರೆ. ನಾಗಗಳನ್ನು ಆಭರಣವನ್ನಾಗಿ ಮಾಡಿಕೊಂಡಿದ್ದಾರೆ. ಅಣಿಮಾದಿ ಅಷ್ಟೈಶ್ವರ್ಯಗಳನ್ನು ಹೊಂದಿದ್ದಾರೆ. 


ಹೀಗೆ ಪಾರ್ವತಿ ದೇವಿಯ ಪತಿಯಾದ ಶ್ರೀಮಹಾರುದ್ರದೇವರು ಅತ್ಯಂತ ಸುಂದರವಾದ ರೂಪವನ್ನು ಹೊಂದಿದ್ದಾರೆ. 


ಇಂತಹ ರುದ್ರದೇವರ ರೂಪವನ್ನು ನೋಡಬೇಕು. ಹಾಗಾಗಿ ಪಂಡಿತಾಚಾರ್ಯರು ಪ್ರಾರ್ಥನೆಯನ್ನು ಮಾಡುತ್ತಾರೆ.


ಹೇ ನೀಲಕಂಠನಾದ ಶಿವನೇ! ಯಾವಾಗ ನಿನ್ನನ್ನು ನೋಡುತ್ತೇನೆ? ನನ್ನ ಕಣ್ಣುಗಳು ನಿನ್ನ ರೂಪವನ್ನು ನೋಡಿ ಪಾವನವಾಗುವುದು ಯಾವಾಗ? ಎಂದು. 


ನಾವೂ ರುದ್ರ ದೇವರನ್ನು ಪ್ರಾರ್ಥನೆ ಮಾಡಬೇಕು. ಅವರ ದರ್ಶನ ಪಡೆಯಬೇಕು.


ಶಾಸ್ತ್ರಗಳು ತಿಳಿಸುವಂತೆ "ಜ್ಞಾನಂ ಸದಾಶಿವಾದಿಚ್ಛೇತ್" ಎಂಬಂತೆ, ನಮಗೆ ಉತ್ತಮ ಜ್ಞಾನ ಬೇಕಾದರೆ ರುದ್ರ ದೇವರನ್ನು ಪ್ರಾರ್ಥನೆ ಮಾಡಬೇಕು. ಅವರು ಅನುಗ್ರಹ ಮಾಡಿದರೆ ಉತ್ತಮ ವಾದ ಶುದ್ಧ ವಾದ ಜ್ಞಾನ ಬರಲು ಸಾಧ್ಯ. 


ಜ್ಞಾನದಿಂದ ಮುಂದೆ ಮೋಕ್ಷವನ್ನು ಹೊಂದಲು ಸಾಧ್ಯ. ಹಾಗಾಗಿ ನಮಗೆ ಜ್ಞಾನ ಅತ್ಯಂತ ಆವಶ್ಯಕ. ಅದನ್ನು ಕೊಡುವಲ್ಲಿ ರುದ್ರದೇವರು ಪ್ರಧಾನ. ಆದ್ದರಿಂದ ನಮಗೆ ರುದ್ರದೇವರು ಜ್ಞಾನ ಕೊಡುವ ದೊಡ್ಡ ಗುರುಗಳು. 


ಹಾಗಾಗಿಯೇ ಮಾಧ್ವ ಪರಂಪರೆಯ ಮಹಾಜ್ಞಾನಿಗಳಾದ ಶ್ರೀ ವಾದಿರಾಜ ಗುರುಸಾರ್ವಭೌಮರು ರುದ್ರ ದೇವರನ್ನು ಸ್ತುತಿ ಮಾಡುವಾಗ "ಗುರುವೆಂಬೆ ನಿನ್ನ" ಎಂದು ಹಾಡಿ ಹೊಗಳಿದ್ದಾರೆ.


ಇಂತಹ ಜ್ಞಾನಪ್ರದರಾದ ಮಹಾ ರುದ್ರದೇವರನ್ನು ಸ್ತುತಿಸೋಣ. ಅವರ ಅನುಗ್ರಹಕ್ಕೆ ಪಾತ್ರರಾಗೋಣ. 

ಹೃಷೀಕೇಶ ಮಠದ

॥ श्रीश्रीशभक्तो जयति मध्वो विध्वस्तसाध्वसः ॥

****



Sunday 21 February 2021

madhwacharyaru 06 harusha muni madhwa muni ಮಧ್ವಾಚಾರ್ಯರು 06

*

ಭಾವ ಚಿತ್ರ ಕೃಪೆ  : ಶ್ರೀಯುತ ವೈದ್ಯ ಶ್ರೀನಿವಾಸ


by ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ


" ಶ್ರೀ ಹರುಷ ಮುನಿ - 1 "

ಪ್ರಾಣಗತಿ ಬಂದರು 

ಮಧ್ವ ಮತ ಬಿಡದಿರಿ ।

ಪ್ರಾಣಧೃತ ನಾಮ ನಮ್ಮ 

ವಿಜಯ ವಿಠ್ಠಲಗರ್ಪಿಸು ।।

" ದಿನಾಂಕ : 21.02..2021 - ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು -  ಮಾಘ ಶುಕ್ಲ ನವಮೀ - ಭಾನುವಾರ - ಶ್ರೀ ಮನ್ಮಧ್ವಾಚಾರ್ಯರು ಬದರಿಕಾಶ್ರಮ ಪ್ರವೇಶ ಮಾಡಿದ ಶುಭದಿನ - ಶ್ರೀ ಮಧ್ಯ ನವಮೀ "

" ಶ್ರೀ ಮಧ್ವ ಮಾರ್ಗವೇ - ಮೋಕ್ಷ ಮಾರ್ಗ = ಬಿಟ್ಟವ ಕೆಟ್ಟ "

ಮಧ್ವ ಮತದ ಸಿದ್ಧಾಂತದ ಪದ್ಧತಿ 

ಬಿಡಬ್ಯಾಡಿ ಬಿಡಬ್ಯಾಡಿ - 

ಬಿಟ್ಟು ಕೆಡಬ್ಯಾಡಿ ಕೆಡಬ್ಯಾಡಿ ।। ಪಲ್ಲವಿ ।।

ಹರಿ ಸರ್ವೋತ್ತಮ-

ನಹುದೆಂಬೋ ಜ್ಞಾನದ ।

ತಾರತಮ್ಯವನೆ ತಿಳಿವ 

ಮಾರ್ಗವಿದು ।। ಚರಣ ।।

ಘೋರ ಯಮನ ಭಯ 

ದೂರಕೆ ಮಾಡಿ । ಮು ।

ರಾರಿಯ ಚರಣವ ಸೇರುವ 

ಮಾರ್ಗವು ।। ಚರಣ ।।

ಭಾರತೀಶ ಮುಖ್ಯ-

ಪ್ರಾಣಾಂತರ್ಗತ ।

ನೀರಜಾಕ್ಷ ನಮ್ಮ 

ಪುರಂದರವಿಠ್ಠಲನ ।। ಚರಣ ।।

" ಮಧ್ವ ಮತದ ಸಿದ್ಧಾಂತದ ಪದ್ಧತಿ [ ಪದ್ಧತಿ = ಮಾರ್ಗ ] "

ಶ್ರೀಮದಾಚಾರ್ಯರಿಂದ ಸ್ಥಾಪಿತವಾದ - ಪಂಚಭೇದ ತಾರತಮ್ಯ ಸಹಿತವಾದ ಶ್ರೀ ಹರಿ ಸರ್ವೋತ್ತಮತ್ವ - ಶ್ರೀ ವಾಯು ಜೀವೋತ್ತಮತ್ವಗಳನ್ನು ನಿರ್ಣಯಿಸುವ ಸಿದ್ಧಾಂತದ ಮಾರ್ಗವನ್ನು

" ಬಿಡಬ್ಯಾಡಿ ಬಿಡಬ್ಯಾಡಿ "

ನಿತ್ಯ ಸುಖ ಸಾಧನ ಚ್ಯುತರಾಗಬೇಡಿರಿ. 

ಅಂದರೆ... 

ನಷ್ಟ ಮಾಡಿ ಕೊಳ್ಳಬೇಡಿ - ದುರ್ಲಭ ಮನುಷ್ಯ ದೇಹವನ್ನು ವ್ಯರ್ಥಗೊಳಿಸಬೇಡಿರಿ. 

" ತಾರತಮ್ಯವನೆ ತಿಳಿವ "

ತರತಮಗಳ ಜ್ಞಾನದಿಂದಲೇ ಶ್ರೀ ಮಹಾವಿಷ್ಣುವು - ರಮಾ  - ಬ್ರಹ್ಮಾದಿಗಳಿಗಿಂತ ಅನಂತ ಮಾಡಿ ಅಧಿಕನು [ ಕಲ್ಯಾಣ ಗುಣಪೂರ್ಣನು ] ಎಂಬ ಉತ್ಕೃಷ್ಟತೆಯ ಜ್ಞಾನವೂ - ಅದರೊಡನೆಯೇ ಅಭಿವೃದ್ಧಿಗೊಳ್ಳುವ ಭಕ್ತಿಯೂ ದೊರೆಯುವ ದಾರಿಯಿದು = ಈ ಮಧ್ವಮತ!

ಭಕ್ತಿಯೇ ಮುಕ್ತಿಗೆ ಪ್ರಧಾನ ಸಾಧನವು - ಅದರಿಂದಲೇ ಶ್ರೀ ಮಹಾವಿಷ್ಣು ಪ್ರಸಾದವು ಲಭ್ಯ. 

ಶ್ರೀ ಹರಿ ಪರಮಾತ್ಮನು ಪ್ರಸನ್ನ ಚಿತ್ತನಾಗಿ.... 

" ಏನಂ ಮೋಚಯಾಮಿ "

ಈ ಜೀವನನ್ನು ಸಂಸಾರದಿಂದ ಮೋಚನೆ ಮಾಡುತ್ತಾನೆ ಎಂದು ಇಚ್ಛಿಸಿದರೆ ಮಾತ್ರ " ಮೋಕ್ಷ " ವಾಗಬಲ್ಲದೆಂಬ ವೇದಗಳ ನಿರ್ಣಯವನ್ನು ಈ ಮಾತ್ರ - ಸ್ಥಾಪಿಸಿ ಉಪದೇಶಿಸುತ್ತದೆ. 

" ಮುರಾರಿಯಾ ಚರಣವ ಸೇರೋ [ ತೋರೋ ] ಮಾರ್ಗವ "

ಶ್ರೀ ಹರಿ ಪರಮಾತ್ಮನ ಪಾದ ದರ್ಶನ ಮಾಡಿಸುವ ಮಾರ್ಗವನ್ನು......

ಅಂದರೆ... 

ಅಪರೋಕ್ಷ ಜ್ಞಾನವನ್ನು ದೊರಕಿಸುವ - ಶ್ರೀ ವಿಷ್ಣುವಿನ ಪ್ರತ್ಯಕ್ಷ ದರ್ಶನವನ್ನು - ಅದರಿಂದ ಮೋಕ್ಷವನ್ನು ದೊರಕಿಸುವ ದಾರಿಯನ್ನು 

" ಭಾರತೀಶ ಮುಖ್ಯಪ್ರಾಣಾಂತರ್ಗತ ನೀರಜಾಕ್ಪ "

ಶ್ರೀ ಭಾರತೀದೇವಿಯರ ಪತಿ ಶ್ರೀ ವಾಯುದೇವರಲ್ಲಿ ನಿತ್ಯ ಪ್ರಕಟನಾಗಿ ವಿರಾಜಮಾನನಾದ ಕಮಲ ನೇತ್ರ ಶ್ರೀ ಹರಿ ಪರಮಾತ್ಮನನ್ನು..... 

ಶ್ರೀ ಹರಿಯು ಸರ್ವಾಂತರ್ಗತನಾದರೂ - ಪವನಾಂತರ್ಗತನಂತೆ ಎಲ್ಲ ವಸ್ತುಗಳಲ್ಲಿ ಮೋಕ್ಷ ಪ್ರದನಾಗಿ ಸ್ಥಿತನಲ್ಲ - ಸರ್ವತ್ರ ಅವ್ಯಕ್ತನಾಗಿಯೇ ಇದ್ದರೂ - ಶ್ರೀ ವಾಯುದೇವರಲ್ಲಿ ತನ್ನ ಮೋಕ್ಷರಪ್ರದ ಮಹಿಮೆಯನ್ನು ಸದಾ ಪ್ರಕಟಿಸಿರುತ್ತಾನೆ. 

ಆದ್ದರಿಂದ ಹಾಗೆ ಸೌಕರ್ಯ ಮಾಡಿಕೊಟ್ಟು - ಉದ್ಧರಿಸುವ ಶ್ರೀ ಮಧ್ವರ ಈ ಮತವನ್ನು ಬೇಡಬೇಡಿರಿ - ಬಿಟ್ಟು ಕೆಡಬೇಡಿರಿ !!

****

" ಶ್ರೀ ಹರುಷ ಮುನಿ - 2 "

ದುರ್ಮತವನು ನೆಚ್ಚಿ ಕರ್ಮಕೆ ಬೀಳದಿರು । ನಿರ್ಮಾಣವನು ವೇದವ್ಯಾಸದೇವನು । ದುಷ್ಕರ್ಮಿಗಳಿಗೆ ನಿತ್ಯ ತಮವಾಗಲಿಬೇಕೆಂದು । ಪೆರ್ಮೆಯಿಂದಲಿ ರಚಿಸಿ ತಾಮಸ ಪುರಾಣ । ದುರ್ಮತಿಗಳಿಗೆ ರುಚಿಕರವೆನಿಸಿದರು । ಧರ್ಮ ಸಾಧನವೆಂದು ಮಾಯಿಮತವ ಭಜಿಸೆ । ಧರ್ಮರಾಯ ಅವರ ಚರ್ಮವ ಸುಲಿವನು । ದುರ್ಮರ್ಷ ನಾಮ ವಿಜಯ ವಿಠ್ಠಲಗೆ ಈ । ಕರ್ಮ ಒಪ್ಪಿಸ ಸಲ್ಲಾ ವಿಭುದರ ಮತವಂತಾ ।।

" ವ್ಯಾಸ -ದಾಸ ಸಾಹಿತ್ಯದಲ್ಲಿ - ವಿಶ್ವಗುರು ಶ್ರೀಮದಾನಂದತೀರ್ಥರು "

ಶ್ರೀಮದಾನಂದತೀರ್ಥರ ಅವತಾರ : ಕ್ರಿ ಶ 1238

ಶ್ರೀಮದಾಚಾರ್ಯರು ಬದರಿಕಾಶ್ರಮ ಪ್ರವೇಶ : ಕ್ರಿ ಶ 1317

ಶ್ರೀಮಧ್ವವಿಜಯ...

ಮುಕುಂದಭಕ್ತೈ ಗುರುಭಕ್ತಿಜಾಯೈಸತಾಂ 

ಪ್ರಸತ್ತೈ ಚ ನಿರಂತರಾಯೈ ।

ಗರೀಯಸೀ೦ ವಿಶ್ವಗುರೋರ್ವಿಶುದ್ಧಾ೦

ವಕ್ಷ್ಯಾಮಿ ವಾಯೋರವತಾರಲೀಲಾಮ್ ।।

ಶ್ರೀ ವಾಯುದೇವರು ಮೋಕ್ಷ ಯೋಗ ಜೀವರಿಗೆ ಗುರುವಾಗಿರುವುದರಿಂದ " ವಿಶ್ವಗುರು " ಯೆಂದೆನಿಸಿರುವರು. 

ಶ್ರೀ ವಾಯುದೇವರು ಶ್ರೀ ಹನುಮದವತಾರ, ಶ್ರೀ ಭೀಮಸೇನಾವತಾರ, ಶ್ರೀ ಮಧ್ವಾವತಾರಗಳೆಂಬ ಮೂರು ಅವತಾರಗಳನ್ನು ಸ್ವೀಕರಿಸಿರುವರು.

ಆ ಮೂರು ಅವತಾರಗಳಲ್ಲಿಯೂ ನಾನಾ ವಿಧಗಳಾದ ಲೀಲೆಗಳನ್ನು ಮಾಡಿರುವರು. 

ಆ ಲೀಲೆಗಳೆಲ್ಲವೂ ಪರಿಶುದ್ಧವಾದವುಗಳೂ; ಅತಿ ಶ್ರೇಷ್ಠವಾದವುಗಳೂ ಮತ್ತು ಮೋಕ್ಷಕ್ಕೆ ಸಾಧನವಾದವುಗಳು.

ಮೋಕ್ಷದಾಯಕವಾದದ್ದು ಮುಕುಂದನ ಭಕ್ತಿ. 

ಆ ಮುಕುಂದನ ಭಕ್ತಿ ಗುರುಗಳ ಭಕ್ತಿಯಿಂದ ಹುಟ್ಟುತ್ತದೆ. 

ಅದು ಮಾತ್ರವಲ್ಲ. ಸಜ್ಜನರ ಅನುಗ್ರಹವೂ ಮುಕುಂದನ ಭಕ್ತಿಗೆ ಸಾಧನವಾಗುತ್ತದೆ. 

ಆ ಸಜ್ಜನರ ಅನುಗ್ರಹವನ್ನು ಎಡೆಬಿಡದಂತೆ ಸಾಧಿಸಬೇಕು. 

ಅದಕ್ಕಾಗಿ ಶ್ರೀ ವಾಯುದೇವರ ಅವತಾರ ಲೀಲೆಗಳನ್ನು ಹೇಳುವೆನು!!

" ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ಗುರುಮಧ್ವಪತಿವಿಠ್ಠಲರ ಮಾತಲ್ಲಿ.... "

ಶ್ರೀಪತಿ ನಾಭಿಯಿಂದ ಅಜನು ಜನಿಸಿದನು । ಅಜನ ಮಾನಸ ಪುತ್ರರೇ ಸನಕಾದ್ಯರು । ಸನಕಾದಿಗಳ ಪುತ್ರರೇ ದುರ್ವಾಸರು । ದುರ್ವಾಸರ ಶಿಷ್ಯರೇ ಸತ್ಯಪ್ರಜ್ಞರು । ಸತ್ಯಪ್ರಜ್ಞರ ಶಿಷ್ಯರೇ ಪರತೀರ್ಥರು । ಪರತೀರ್ಥರ ಶಿಷ್ಯರೇ ಪ್ರಾಜ್ಞತೀರ್ಥರು । ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತಪ್ರೇಕ್ಷರು । ಅಚ್ಯುತಪ್ರೇಕ್ಷರ ಕರ ಸಂಜಾತರೇ ಪೂರ್ಣಪ್ರಜ್ಞರು । ಪೂರ್ಣಪ್ರಜ್ಞರೇ ನಮ್ಮ ಭಾಷ್ಯಕಾರರು । ನಮ್ಮ ಭಾಷ್ಯಕಾರರೇ ಶ್ರೀಮದಾನಂದತೀರ್ಥರು । ಗುರು ಮಧ್ವಪತಿವಿಠ್ಠಲನ್ನ ನಿಜ ದಾಸರು ।।

***

" ಶ್ರೀ ಹರುಷ ಮುನಿ - 3 "

" ಪ್ರಸ್ತಾವನೆ "

" ಶ್ರೀ ವೆಂಕಟವಿಠ್ಠಲರ ಮಾತಲ್ಲಿ... 

ಹನುಮ ಭೀಮ ಮಧ್ವಮುನಿರಾಯ ಪೈಸರಿಲಿಂ । ಮಣಿ ಭೂರುಹ ಧೇನು ಯೆನಿಸಿ ಕೊಳುವಾ । ಘನತರದ ವೇದದಿಂದಲಿ ವಿರಾಜಿಸುತಿಪ್ಪ । ಪ್ರಣತ ಜನರಿಗೆ ಅಭೀಷ್ಟಗಳ ಕೊಡುವ ।। 

ಮನೋವಾಚಕಯದಲಿ ಅನುದಿನದಲಿ । ನೈನೆವರಿಗೆ ಜನನ ಯವ್ವನ ಜರಾ ಮೃತ್ಯು ಕಡಿವಾ । ಅನಿಲದೇವನೆ ಯೆನ್ನ ಜನುಮ ಜನುಮಗಳಲಿ । ವನಜನಾಭನ ಚರಣ ವನಜ ಸೇವಿಯೊಳಿಟ್ಟು ।।

700 ವರ್ಷಗಳ ಹಿಂದಿನ ಮಾತು. 

ಪಶ್ಚಿಮ ಕರಾವಳಿಯ ಶಿವಳ್ಳಿ ಗ್ರಾಮದ ಶ್ರೀ ಅನಂತೇಶ್ವರ ದೇವಸ್ಥಾನದೆದುರು ಅಂದು ಭಾರೀ ಗಲಾಟೆ. 

ಉಡುಪಿಯ ಕ್ಷೇತ್ರ ಸ್ವಾಮಿಯಾದ ಶ್ರೀ ಅನಂತೇಶ್ವರ ಶ್ರೀ ಪರಶುರಾಮ ಕ್ಷೇತ್ರದ ಆದಿದೈವ. 

ಸಂಕ್ರಮಣ ದಿನದಂದು ಅಲ್ಲಿ ನೆರೆಯುವ ದೊಡ್ಡ ಜಾತ್ರೆಗೆ ಅಸಂಖ್ಯ ಭಕ್ತರು ಕಿಕ್ಕಿರಿದು ನೆರೆದಿದ್ದರು.

ಮಂಗಲ ವಾದ್ಯಗಳು ಭೋರ್ಗೋರೆಯುತ್ತಿದ್ದವು. ವಿದ್ವಾಂಸರು ವೇದ ಘೋಷ ಮಾಡುತ್ತಿದ್ದರು. 

ಉತ್ಸಾಹದ ಕಾರ್ಯ ಕಲಾಪಗಳನ್ನು ನಿರೀಕ್ಷಿಸುವ ಕುತೂಹಲದಿಂದ ದೇವಸ್ಥಾನದೆದುರು ಜನ ಜಾತ್ರೆಯು ಕೋಲಾಹಲವನ್ನು ಮಾಡುತ್ತಲಿತ್ತು.

ದೇವಾಲಯದ ಎದುರು ಗಗನ ಚುಂಬಿತವಾದ ಗರುಡಗಂಬವೊಂದು ತಲೆ ಎತ್ತಿ ನಿಂತಿದೆ. 

ಜನರ ಗುಂಪಿನೊಳಗಿಂದ ಹುಚ್ಚನಂತೆ ಕಾಣುವ ಒಬ್ಬ ಮನುಷ್ಯನು ಆ ಗರುಡಗಂಬವನ್ನು ಸರಸರ ಏರ ತೊಡಗಿದನು. 

ಜನರೆಲ್ಲರೂ ಕುತೂಹಲದಿಂದ ಉಸಿರು ಬಿಗಿ ಹಿಡಿದು ಅವನೆಡೆಗೆ ನೋಡ ಹತ್ತಿದರು. 

ಆ ಕಂಬವನ್ನು ಏರುವವನ ಮೈಯಲ್ಲಿ ದೇವರ ಆವೇಶವು ಬಂದಂತೆ ಇತ್ತು.

ತಲೆ ಎತ್ತಿ ನೋಡಿದರೆ ಕಣ್ಣು ತಿರುವಂತಿದ್ದ ಆ ಎತ್ತರ ಕಂಬವನ್ನು ಚಪಲತೆಯಿಂದ ಅರೆಚಣದಲ್ಲಿ ಏರಿದ ಆ ಅರೆ ಹುಚ್ಚ. 

ಅಂಗೈ ಅಗಲದ ಕಂಬದ ತುದಿಯಲ್ಲಿ ಅವನು ಕುಣಿಯ ತೊಡಗಿದ. 

ರಂಗಭೂಮಿಯ ಮೇಲೆ ನಟ ಸಾರ್ವಭೌಮನ ನೃತ್ಯದಂತೆ ಇತ್ತು ಅವನ ಆ ಸ್ವಚ್ಛಂಧ ನಾಟ್ಯ. 

ಜನರ ಸದ್ದು ಗದ್ದಲಗಳೆಲ್ಲ ಒಮ್ಮೆಲೆ ಶಾಂತವಾದವು. 

ಎವೆ ಪಿಳಕಿಸದ ಸಾವಿರಾರು ಕಣ್ಣುಗಳು ಅವನಲ್ಲಿ ಕೇಂದ್ರೀಕೃತವಾದವು.

ಸ್ತಂಭದ ತುದಿಯಲ್ಲಿ ಸ್ವಚ್ಛಂಧವಾಗಿ ತಾಂಡವಗೈವ ಆ ನೃತ್ಯ ಧೀರನು ಎರಡೂ ಕೈಗಳನ್ನು ಮೇಲೆತ್ತಿ ಘೋಷಣೆ ಗೈದ. 

" ಸ್ವಲ್ಪ ದಿನಗಳಲ್ಲಿ ಸರ್ವಜ್ಞರ ಅವತಾರ. 

ಸಜ್ಜನರಿಗೆಲ್ಲ ಕಲ್ಯಾಣ. 

ಅದು ಕೂಡಾ ಈ " ಶ್ರೀ ಪರಶುರಾಮ ಕ್ಷೇತ್ರ " ದಲ್ಲಿ ಬೇಗನೆ ಆಗಲಿರುವದು "

ಅವನು ಈ ಮಾತನ್ನು ಮೂಲ ಸಲ ಜನರಿಗೆಲ್ಲಾ " ಕೇಳಿರಿ " " ಕೇಳಿರಿ " ಯೆಂದು ಕೈ ಎತ್ತಿ ಮತ್ತೆ ಮತ್ತೆ ಹೇಳಿದ. 

ಆಣೆಯಿಟ್ಟು ಹೇಳಿದಂತೆ ಯಿತ್ತು ಅವನ ಆ ನಿರ್ಧಾರದ ಕಣಿ.

ಹುಸಿ ಹೋಗಲಿಲ್ಲ ಆ ಹುಚ್ಚನ ಮಾತು. 

ಮುಂದೆ ಕೆಲವೇ ದಿನಗಳಲ್ಲಿ ಉಡುಪಿಯ ಸಮೀಪದ " ಪಾಜಕಾ ಕ್ಷೇತ್ರ " ದಲ್ಲಿ " ಜೀವೋತ್ತಮರಾದ ಶ್ರೀ ವಾಯುದೇವರು " ಅವತಾರ ಮಾಡಿದರು.

ಶ್ರೀ ಬೃಹಸ್ಪತ್ಯಾಂಶ ಸಂಭೂತರಾದ ಶ್ರೀ ಜಗನ್ನಾಥದಾಸರು " ತತ್ತ್ವಸುವ್ವಾಲಿ " ಯಲ್ಲಿ.... 

ಮಧ್ವಾಖ್ಯವೆಂಬ ಪ್ರಸಿದ್ಧ ಶ್ರುತಿ ಪ್ರತಿಪಾದ್ಯ ।

ಮಧ್ವ ಮುನಿರಾಯ ತವ ಕೀರ್ತಿ ।

ತವ ಕೀರ್ತಿ ವಾಣಿ ರುದ್ರಾದಿಗಳಿಗರಿದು ತುತಿಸಲ್ಕೆ ।।

ಈ ಮೇಲ್ಕಂಡ ಪದ್ಯದಲ್ಲಿ ಅಡಕವಾದ ವಿಶೇಷ ವಿಚಾರ.... 

" ಬಳಿತ್ಥಾ ಸೂಕ್ತ " ದಲ್ಲಿ ಹೀಗೆ ಹೇಳಿದೆ.... 

ಯದೀಮನುಪ್ರದಿವೋ ಮಧ್ವ ಅಧವೇ 

ಗುಹಾಸಂತಂ ಮಾತರಿಶ್ವಾ ಮಥಾಯತಿ ।

ಯತ್ ಈ೦ = ಯಾವ 

ಈ ಪ್ರದಿವಃ = ಪ್ರಕಾಶಾದಿ ರೂಪದಿಂದ 

ಮಧ್ವ: = ಮಧ್ವ ನಾಮಕನಾದ 

ಮಾತರಿಶ್ವಾ = ವಾಯುದೇವನೇ 

" ಮಾತರಿಶ್ವಾ "

ಮಾತರಿ = ಋಗಾದಿ ಪ್ರಮಾಣಗಳಲ್ಲಿ 

ಶ್ವಯತಿ = ಸದಾ ಗಮನವುಳ್ಳವನು 

" ಗುಹಾಸಂತಂ "

ಕಲಿಯುಗದಲ್ಲಿ ದುರ್ವಾದಿಗಳಿಂದ - ಗೂಹನ - ಮಾಡಲ್ಪಟ್ಟ ಶ್ರೀ ಹರಿಯನ್ನು 

ಅನು  = ಶಾಸ್ತ್ರಗಳನ್ನು ಅನುಸರಿಸಿಯೇ 

ಅಧವೇ = [ ಅಸಮಂತಾತ್, ಧಾವೆ ಪತೀತ್ವೇ ] ಸರ್ವಾಧಿಪತಿಯೆಂದು 

ಮಥಾಯತಿ = ಶಾಸ್ತ್ರ ಮಥನದಿಂದ ನಿಶ್ಚಯಿಸುತ್ತಾನೆ.

***

" ಶ್ರೀ ಹರುಷ ಮುನಿ - 4 "

" ಪವಿತ್ರಂ ಪಾಜಕ ಕ್ಷೇತ್ರಂ "

ಪಾಜಕ ಕ್ಷೇತ್ರವು ಶ್ರೀ ಪರಶುರಾಮದೇವರ ಕಾಲದಿಂದಲೂ ಪ್ರಸಿದ್ಧ ಕ್ಷೇತ್ರವೆನಿಸಿದೆ. 

ಈ ಗ್ರಾಮದ ಬದಿಯ ಬೆಟ್ಟದಲ್ಲಿ ಆ ರಾಮ ಕೃಷ್ನನ ತಂಗಿಯನ್ನು ಪ್ರತಿಷ್ಠೆ ಮಾಡಿದ. 

ಶ್ರೀ ಪರಶುರಾಮರ ಈ ದುರ್ಗಾ ಪ್ರತಿಷ್ಠಾ ಮಹೋತ್ಸವವನ್ನು ನೋಡಲು ಅಂದು ವಿಮಾನದಲ್ಲಿ ಬಂದಿದ್ದರಂತೆ. 

ಅದಕ್ಕಾಗಿಯೇ " ವಿಮಾನಗಿರಿ " ಯೆಂದು ಈಗಲೂ ಅದಕ್ಕೆ ಹೆಸರು.

ಈ ಪಾಜಕದ ಸುತ್ತಲೂ ಶ್ರೀ ಪರಶುರಾಮದೇವರ ಬಿಲ್ಲು - ಬಾಣ - ಕೊಡಲಿ - ಗದೆಗಳಿಂದ ರೂಪುಗೊಂಡಿವೆ ನಾಲ್ಕು ತೀರ್ಥಗಳು. 

ನಿಸರ್ಗ ಸೌಂದರ್ಯದ ನೆಲೆವೀಡಾದ ಈ ಪಾವನ ಕ್ಷೇತ್ರವೆಲ್ಲವೂ ಮಧ್ಯಗೇಹ ಮನೆತನದ ಸಾಗರಿ ನಾರಾಯಣಾಚಾರ್ಯರ ಮನಸ್ಸನ್ನು ಸೆಳೆಯಿತು. 

ಅವರನ್ನು ಶ್ರೀ ಮಧ್ಯಗೇಹಭಟ್ಟರೆಂದೂ ಕರೆಯುತ್ತಿದ್ದರು.

ಶ್ರೀ ಭಟ್ಟರು ತಮ್ಮ ಗ್ರಾಮವನ್ನು ಬಿಟ್ಟು ಪಾಜಕ ಕ್ಷೇತ್ರ " ದಲ್ಲಿ ನೆಲೆಸಿದರು.

ಶ್ರೀ ಮಧ್ಯಗೇಹಭಟ್ಟರು ಉಡುಪಿಯ ಶ್ರೀ ಅನಂತೇಶ್ವರ ಸ್ವಾಮಿಯ ಏಕನಿಷ್ಠ ಭಕ್ತರು. 

ಇತಿಹಾಸ - ಪುರಾಣಗಳೆಲ್ಲಾ ಅವರ ಕರತಲದಲ್ಲಿ ಆ ಮಲಕ. 

ಮಧುರ ಕಂಠದಿಂದ ಅವರು ಪುರಾಣ ಹೇಳಹತ್ತಿದರೆ ಜನರ ಸರ್ವೇ೦ದ್ರಿಯಗಳಿಗೂ ಆಪ್ಯಾಯಮಾನವಾಗುತ್ತಿತ್ತು.

ಶ್ರೀ ಮಧ್ಯಗೇಹಭಟ್ಟರು ಸತ್ ಸಂತಾನಕ್ಕಾಗಿ 12 ವರ್ಷ ಶ್ರೀ ಅನಂತೇಶ್ವರನನ್ನು ಸೇವಿಸಿದರು. 

ಅವರ ಮಡದಿ ಸಾಧ್ವೀ ವೇದವತಿಯೂ ಆ ಸ್ವಾಮಿಯ ಸೇವೆಯಲ್ಲಿ ಮೈ ಸವೆಯಿಸಿದಳು.

ಶ್ರೀ ಭಟ್ಟರಿಗೆ ಬೇಕಾದದ್ದು ಬರೀ ತಮ್ಮ ವಂಶ ಉದ್ಧಾರ ಮಾಡುವ ಮಗನಲ್ಲ. 

ವಿಶ್ವೋದ್ಧಾರ ಮಾಡುವ ಮಗ. 

ಇಂಥಹಾ ಮಗನಿಗಾಗಿ ಆ ದಂಪತಿಗಳು ತಮ್ಮ ಕುಲಸ್ವಾಮಿಗೆ ಹರಕೆ ಹೊತ್ತರು. 

ಪಯೋವ್ರತ ಮೊದಲಾದ ವ್ರತಗಳನ್ನು ಮಾಡಿದರು. 

ದೇವ ದೇವೋತ್ತಮನಾದ ಜಗನ್ನಾಥನು ಕಣ್ತೆರೆದ!

ಶ್ರೀ ಬೃಹಸ್ಪತ್ಯಾಂಶ ಸಂಭೂತರಾದ ಶ್ರೀ ಜಗನ್ನಾಥದಾಸರು " ತತ್ತ್ವಸುವ್ವಾಲಿ " ಯಲ್ಲಿ.... 

ನಾಮತ್ರಯಾಂಕಿತ 

ಸುಧೀಮಂತ ಕುಲ ಗುರುವೇ ।

ಶ್ರೀಮದಾಚಾರ್ಯ ಗುರುವರ್ಯ ।

ಗುರುವರ್ಯ ಧರ್ಮಾರ್ಥ 

ಕಾಮ ಮೋಕ್ಷದನೆ ದಯವಾಗೋ ।।

ಈ ಮೇಲ್ಕಂಡ ಪದ್ಯದಲ್ಲಿ ಅಡಕವಾದ ವಿಶೇಷ ವಿಚಾರ.... 

" ಧರ್ಮ " ವೆಂದರೆ... 

ಪುಣ್ಯ - ಸತ್ಕರ್ಮಗಳನ್ನು ಆಚರಿಸುವುದರಿಂದ ಉದಯಿಸುವ - ಕಾಲಾಂತರದಲ್ಲಿ ಅಥವಾ ಜನ್ಮಾಂತರದಲ್ಲಿ ಸುಖ ಪ್ರಾಪಕವಾದ ಅದೃಷ್ಟ ವಿಶೇಷ. 

ಅರ್ಥ = ದ್ರವ್ಯ ಅಥವಾ ತಲ್ಲಭ್ಯ ಭೋಗ್ಯ ವಸ್ತುಗಳು 

ಕಾಮ = ಭೋಗ್ಯ ವಸ್ತುಗಳ ಭೋಗ ಮತ್ತು ಭೋಗೇಚ್ಛೆ 

" ಮೋಕ್ಷ "

ಪ್ರಕೃತಿ ಬಂಧದಿಂದ [ ಸಂಸಾರದಿಂದ ] ಬಿಡುಗಡೆಯನ್ನು ಹೊಂದಿ - ಸ್ವಸ್ವರೂಪದಿಂದ ಇರುವ " ನಿತ್ಯ ಸ್ಥಿತಿ "

ಅನ್ಯ ದೇವತೆಗಳ ಉಪಾಸನೆಯಿಂದಲೂ - ಧರ್ಮಾರ್ಥ ಕಾಮ ಮೋಕ್ಷಗಳು ಲಭಿಸುತ್ತವೆ. 

ಅವುಗಳನ್ನು ಸಹ ಅವರ ಅಂತರ್ಯಾಮಿಯಾದ ಶ್ರೀ ಹರಿಯೇ ಅವರ ದ್ವಾರ ಕೊಡುವನು. 

" ಫಲ ದಾನ " ದಲ್ಲಿ ಯಾರೂ ಸ್ವತಂತ್ರರಲ್ಲ. 

ಆದರೆ ಉತ್ತಮ ಪುರುಷಾರ್ಥವಾದ " ಮೋಕ್ಷ " ವನ್ನು ಅವರಲ್ಲಿ ನಿಂತು ಶ್ರೀ ಹರಿಯು ಕೊಡುವುದಿಲ್ಲ. 

" ವಾಸುದೇವನೊಬ್ಬನೇ ಮೋಕ್ಷದಾತನು - ಅನ್ಯರಾರೂ ಅಲ್ಲ "

ಹೀಗಿದ್ದರೂ " ಮೋಕ್ಷ " ಕ್ಕೆ ಸಾಕ್ಷಾತ್ಸಾಧಕವಾದ " ವಿಷ್ಣು " ಪ್ರಸಾದಕ್ಕೆ ಇತರ ದೇವತೆಗಳು [ ತತ್ತ್ವಾಭಿಮಾನಿಗಳ ಹಾಗೂ ಸ್ವೋತ್ತಮರ ] ಅನುಗ್ರಹವೂ ಅವಶ್ಯಕವೇ !

" ವಿಷ್ಣುರ್ಹಿದಾತಾ ಮೋಕ್ಷಸ್ಯ 

ವಾಯುಶ್ಚ ತದನುಜ್ಞಯಾ "

ವಿಷ್ಣುವಿನ ಅನುಜ್ಞೆಯಿಂದ ವಾಯುದೇವರು " ಮೋಕ್ಷದಾತರು " ಆಗಿರುವರು. 

ಶ್ರೀ ಹರಿಯು ತನ್ನ ಅವಿಚ್ಛಿನ್ನ ಭಕ್ತರಾದ ವಾಯುದೇವರಿಗೆ ಕೊಟ್ಟಿರುವ ವಿಶೇಷಾಧಿಕಾರವಿದು.

***

" ಶ್ರೀ ಹರುಷ ಮುನಿ - 5 "

" ಶ್ರೀಮದಾಚಾರ್ಯರ ಅವತಾರ "

ಶ್ರೀ ಮಧ್ವ ವಿಜಯ...

ಸಂತುಷ್ಯತಾಂ ಸಕಲಸನ್ನಿಕರೈರಸಾದ್ಭಿ:

ಖಿದ್ಯೇತ ವಾಯುರಯಮಾ-

ವಿರಭೂತ್ ಪೃಥುವ್ಯಾ೦ ।

ಆಖ್ಯಾನಿತೀವ ಸುರದುಂದುಭಿ-

ಮಂದ್ರನಾದಃಪ್ರಾಶ್ರಾವಿ 

ಕೌತುಕವಶೈರಿಹ ಮಾನವೈಶ್ಚ ।।

ವಿಜಯದಶಮೀ ಮಹಾ ಶುಭ ದಿನದಂದು " ಶ್ರೀ ಮಧ್ಯಗೇಹಭಟ್ಟರು " ಶ್ರೀ ಅನಂತೇಶ್ವರನ ದರ್ಶನಕ್ಕೆ ಉಡುಪಿಗೆ ಹೋಗಿದ್ದರು. 

ಸ್ವಾಮಿಯ ಸೇವೆ ಮಾಡಿ ಶ್ರೀಭಟ್ಟರು ಮನೆಗೆ ಮರಳಿದಾಗ ಹೊತ್ತು ನೆತ್ತಿಗೇರಿತ್ತು. 

ಶ್ರೀ ಭಟ್ಟರು ಮನೆಯ ಹತ್ತಿರಕ್ಕೆ ಬಂದಾಗ ಮಂಗಳ ವಾದ್ಯಗಳು ಮೊಳಗುತ್ತಿರುವುದು ಕೇಳಿಸಿತು. 

ಅವು ಮಾನವರು ಬಾರಿಸುವ ವಾದ್ಯಗಳಲ್ಲ. 

ಆಗಸದ ಓಲಗದವರು ಬಾರಿಸಿದ ದೇವದುಂದುಭಿಗಳೇ ಆಗಿದ್ದವು.

ಅಂಥಹಾ ಮಧುರವಾದ ಮಂಗಳ ವಾದ್ಯಗಳ ಮಂಜುಲ ಘೋಷವನ್ನು ನೆಲದ ಜನರು ಎಂದೂ ಕೇಳಿರಲಿಲ್ಲ. 

ಅದನ್ನು ಕೇಳಿದ ಜನರೆಲ್ಲರೂ ಕೌತುಕದ ಕೊನೆ ಏರಿ ನಿಂತರು. 

ಶ್ರೀಮದಾಚಾರ್ಯರು ಅವತರಿಸಿದರು. 

ಸಜ್ಜನರು ಸಂತೋಷಗೊಂಡರು. 

ದೇವತೆಗಳು ನಲಿದಾಡಿದರು.

ಶ್ರೀ ಮಧ್ಯಗೇಹಭಟ್ಟರು ಮನೆಗೆ ಬಂದು ತಮ್ಮ ಸುಂದರ ಮಗುವನ್ನು ಕಣ್ಣು ತುಂಬಾ ನೋಡಿ ತಣಿದರು. 

12 ವರ್ಷ ತಾವು ಸೇವಿಸಿದ ಶ್ರೀ ಮುಕುಂದನ ದಯೆಯೇ ಈ ಕಂದನ ರೂಪದಿಂದ ಬಂದಿದೆ ಎಂದು ತೋರಿತು ಅವರ ಮನಸ್ಸಿಗೆ. 

ಅವರು ನಿಂತಲ್ಲಿಂದಲೇ ಶ್ರೀ ಅನಂತೇಶ್ವರನನ್ನು ವಂದಿಸಿದರು.

ಶ್ರೀ ವಾಯುದೇವರ ಅವತಾರ ಭೂತರಾದ ಆ ಮಗುವಿಗೆ ತಂದೆಯಿಟ್ಟ ಹೆಸರು " ಶ್ರೀ ವಾಸುದೇವ ".

" ಶ್ರೀ ವೆಂಕಟವಿಠ್ಠಲರ ಕಣ್ಣಲ್ಲಿ..."

ಶುದ್ಧ ಸತ್ತ್ವಾತ್ಮಕ ಶರೀರ ಶ್ರೀ ಗುರುವರ । ಮಧ್ವರಾಯರೇ ಕರುಣದಿ । ಮಧ್ಯಗೇಹ್ಯಾರೆಂಬ ಸುರರ ಸತಿ ಉದರದಲಿ । ಉದ್ಭವಿಸಿಮ್ಯರದೆ ಜಗದಿ ।। ಸದ್ವೈಷ್ಣವರ ಪೊರೆದು ಅದ್ವೈತರ ಸದದು । ಮಧ್ವಮತ ಸಿದ್ಧಾಂತವನು ಮಾಡಿದೆ । ಮಣಿಮಂತ ಮೊದಲಾದ ದೈತ್ಯರನೆಲ್ಲ । ವೊದ್ದೊದ್ದು ಅವರ ಅಂಧಂತಮಕೆ ಗುರಿಮಾಡ್ದೆ ।।

***

" ಶ್ರೀ ಹರುಷ ಮುನಿ - 6 "

" ಕೂಸಿನ ಕಂಡೀರಾ ಗುರು ಮುಖ್ಯಪ್ರಾಣನ ಕಂಡೀರಾ "

ಆ ಶುಶುವಿಗೆ ಹಾಲು ಉಣಿಸಲಿಕ್ಕಾಗಿ ಒಂದು ಹಸುವನ್ನು ಕೊಟ್ಟ ಮೂಡಿಲ್ಲಾಯರಿಗೆ ಮೋಕ್ಷ ವಿದ್ಯೆಯು ಕರತಲಾಮಲಕವಾಯಿತು. 

ಶ್ರೀ ಭಟ್ಟರು ಒಂದುದಿನ ಆ ಮಗುವನ್ನು ಉಡುಪಿಗೆ ಕರೆದುಕೊಂಡು ಹೋಗಿ ಶ್ರೀ ಅನಂತೇಶ್ವರನ ಪಾದದ ಮೇಲೆ ಹಾಕಿದರು. 

ಆ ಭಗವಂತನ ಆಶೀರ್ವಾದ ಪಡೆದು ಮಗುವಿನೊಂದಿಗೆ ಮರಳಿ ಹೊರಟರು. 

ರಾತ್ರಿ ಕಾಡಿನಲ್ಲಿ ನಡೆದು ಬರುವಾಗ ಇವರನ್ನು ಕಬಳಿಸ ಬಂದ ಒಂದು ಭೂತವು ಆ ಮಗುವಿಗೆ ಹೆದರಿ ಅವರನ್ನು ಬಿಟ್ಟು ದೂರಹೋಯಿತು.

" ಖಂಡಗ ಹುರಳಿ ತಿಂದಿತು ಕೂಸು "

ಒಮ್ಮೆ ತಾಯಿ ಮನೆಯಲ್ಲಿ ಇಲ್ಲದಾಗ ಮಗುವು ಅಳತೊಡಗಿತು. 

ರೋದನವು ಜೋರಾದಾಗ ಅವನ ಅಕ್ಕ ಏನು ಮಾಡುವದು ತಿಳಿಯದೆ ದನಕ್ಕೆ ತಿನ್ನಿಸಲಿಕ್ಕೆ ನೆನೆಸಿಯಿಟ್ಟ ಹುರಳಿಯನ್ನು ತಿನ್ನಲು ಕೊಟ್ಟಳು. 

ಅವೆಲ್ಲವನ್ನೂ ತಿಂದು ತೇಗಿತು ಆ ಪುಟ್ಟ ಕೂಸು. 

ತಾಯಿ ಬಂದು ಅದನ್ನು ಕೇಳಿ ಗಾಬರಿಯಾದಳು. 

ಅವಳಿಗೇನು ಗೊತ್ತು 

ಹಿಂದೆ ಎರಡು ಸಲ ವಿಷವುಂಡು ಪಚನ ಮಾಡಿಕೊಂಡ ಮಗು ಇದೆಂದು. 

ಭಂಡಿ ಅನ್ನ ಉಂಡ ಕೂಸು ಇದು!!

ಶ್ರೀ ವಾಸುದೇವನು ತುಸು ದೊಡ್ಡವನಾದಾಗ ಶ್ರೀ ಭಟ್ಟ ದಂಪತಿಗಳಿಗೆ ಅವನನ್ನು ಹಿಡಿಯುವುದೇ ಕಷ್ಟವಾಯಿತು. 

ಒಂದುದಿನ ಬೆಳಿಗ್ಗೆ ಎತ್ತಿನ ಬಾಲ ಹಿಡಿದು ಆ ಕೂಸು ಕಾಡಿಗೆ ಹೋಗಿಬಿಟ್ಟಿತು. 

ಮನೆಯ ಜನ ಊರೆಲ್ಲಾ ಹುಡುಕಾಡಿ ದಿಗ್ಭ್ರಾ೦ತರಾಗಿ ಕುಳಿತು ಕೊಂಡಿದ್ದರು. 

ಸಂಜೆಯ ವೇಳೆಗೆ ಬಸವನ ಹಿಂದೆ ಬಾಲವಾಗಿ ಲೀಲೆಯಿಂದ ಜೋಕಾಲಿ ಆಡುತ್ತಾ ಮಗು ಮನೆಗೆ ಬಂದ!!

ರಾಗ : ಕಾಂಬೋಧಿ ತಾಳ : ಝ೦ಪೆ 

ವಂದಿಸುವೆ ವರ ಬೇಡಿ ।

ವಂದೆ ಮನದಿ ।

ನಂದ ನಂದನ ನಂಘ್ರಿ -

ನರ್ಚಿಸುವ ಪಾತ್ರರಿಗೆ ।। ಪಲ್ಲವಿ ।।

ಮಂದ ಮತಿಗನಾಗಿ ।

ಮುಂದೆ ಗಾಣದಲೇ । ಪು ।

ರಂದರಾದ್ಯ ವ್ಯಾಸ 

ವಾದಿರಾಜ ।।

ವೃಂದಾಂಶಿ ಅಂಶದಲಿ ।

ಹೊಂದಿ ಬಾಳುವರೆನಗೆ ।

ನಂದದಲಿ ವೈಕುಂಠ -

ಮಹಿಮೆ ತಿಳಿಸು-

ವರೆಂದು ।। ಚರಣ ।।

ವಿಜಯ ಗೋಪಾಲ ಗುರು -

ವೇಣು ಜಗನ್ನಾಥ ।

ನಿಜದಾಸರಂತರ್ಯಾಮಿ ಸ್ವಾಮಿ ।

ಅಜನ ಮತದೊಳಗೆ ಆನಂದ -

ಬಡುವಾ ಲೋಕ ।

ವೃಜನ ತಿಳಿಸುವದೆಂದು -

ರಾಗದಿಂದಲಿ ಬಂದು ।। ಚರಣ ।।

ಬ್ರಹ್ಮ ವಾಯು ವಾಣಿ -

ಭಾರತಿ ಮೊದಲಾದ ।

ಸುಮ್ಮನಸರ ಪಾದ -

ಕಿಮ್ಮಹಿಯೊಳು ।।

ಘಮ್ಮನೆ ಯರಗಿ -

ಜನಾರ್ದನ ವಿಠ್ಠಲನ್ನ ।

ಅಮ್ಮಹಿಮೆ ನಿರ್ವಿಘ್ನದಿಂದ 

ತಿಳಿಸುವದೆಂದು ।। ಚರಣ ।।

***

" ಶ್ರೀ ಹರುಷ ಮುನಿ - 7 "

" ಉಪನಯನ - ಅಧ್ಯಯನ "

ಶ್ರೀ ಮಧ್ವ ವಿಜಯ...

ಸಮುಚಿತ ಗ್ರಹ ಯೋಗ 

ಗುಣಾನ್ವಿತಂಸಮವಧಾರ್ಯ 

ಮುಹೂರ್ತಮದೂಷಣಮ್ ।

ಪ್ರಣಯ ಬಂಧುರ 

ಬಾಂಧವವಾನಸೌ

ದ್ವಿಜಕುಲಾಕುಲ 

ಮುತ್ಸವಮಾತನೋತ್ ।।

ಶ್ರೀ ವಾಸುದೇವನು ಎಂಟನೇ ವಯಸ್ಸಿನಲ್ಲಿದ್ದಾಗ ಶ್ರೀ ಮಧ್ಯಗೇಹಭಟ್ಟರು ಎಲ್ಲ ಆಪ್ತೇಷ್ಟರಿಂದೊಡಗೂಡಿ ಅವನ ಉಪನಯನವನ್ನು ನೆರವೇರಿಸಿದರು. 

ಉಪನಯನವಾದ ಬಳಿಕ ಶ್ರೀ ಭಟ್ಟರು ವಾಸುದೇವನನ್ನು ವೇದ ಶಾಸ್ತ್ರಗಳ ಅಧ್ಯಯನಕ್ಕಾಗಿ ತೋಟಂತಿಲ್ಲಾಯ ಎಂಬ ವಿದ್ವಾಂಸರ ಬಳಿಗೆ ಕಳುಹಿಸಿದರು. 

ಗುರುಗಳು ವಾಸುದೇವನ ವಿಲಕ್ಷಣ ಪ್ರತಿಭೆಯನ್ನು ಕಂಡು ಬೆರಳು ಕಚ್ಚಿದರು. 

ಸರ್ವಜ್ಞರ ಸಂಕ್ಷಿಪ್ತ ಆವೃತ್ತಿಯಂತಿದ್ದ ವಾಸುದೇವನು ಕೆಲವು ದಿನಗಳಲ್ಲಿಯೇ ತೋಟಂತಿಲ್ಲಾಯರಲ್ಲಿ ಓದುವ ಶಾಸ್ತ್ರ ಮಾಡಿ ಮುಗಿಸಿದರು. 

ಕೊನೆಗೆ ಅವರಿಗೆ ಗುರುದಕ್ಷಿಣಾ ರೂಪವಾಗಿ " ಐತರೇಯೋಪತ್ತಿ " ನ ರಹಸ್ಯಾರ್ಥವನ್ನು ತಿಳಿಸಿದರು. ಅದರಿಂದ ಆ ಗುರುಗಳಿಗೆ ಗೋವಿಂದನಲ್ಲಿ ಭಕ್ತಿ ಹುಟ್ಟಿತು. 

ಮುಕ್ತಿ ಕರಗತವಾಯಿತು.

ಉಪನಯನವಾದ ಬಳಿಕ ಶ್ರೀ ವಾಸುದೇವನ ವೃತ್ತಿ ವಿಲಕ್ಷಣವಾಗಿದ್ದಿತು. 

ವೈಷ್ಣವ ಸಿದ್ಧಾಂತದ ಪ್ರಸಾರ ಮತ್ತು ವೇದ ಸಿದ್ಧಾಂತದ ಪುನರುದ್ಧಾರವನ್ನು ಮಾಡಬೇಕೆಂದು. 

ಶ್ರೀ ಹರಿಯು ಅಂದು ತಮಗೆ ಮಾಡಿದ ಆದೇಶದ ಅರಿವು ಅವರ ಹೃದಯದಲ್ಲಿ ನಿತ್ಯ ನಿಶ್ಚಳವಾಗಿದ್ದಿತು.

ರಾಗ : ಆನಂದಭೈರವಿ ತಾಳ : ರೂಪಕ 

ಕದರುಂಡಲಗಿ -

ಹನುಮಂತದೇವರು ।

ಇಂಥಾ ಕೀರ್ತಿಯ ಮೂರ್ತಿ-

ನ್ನಾರೇ ನೋಡಮ್ಮಯ್ಯ ।। ಪಲ್ಲವಿ ।।

ಸಂತತ ಸೀತಾಪತಿಯ ಧ್ಯಾನರೊಳು

ಕಂತುವಿನಸ್ತ್ರವ 

ಖಂಡಿಸಿದೊಡೆಯಾ ।। ಅ ಪ ।।

ಕಾಶಿ ರಾಮೇಶ್ವರ ಮಧ್ಯದ ದೇಶದಿ 

ಸೂರಿ ಸುಲಿಗೆ ನೋಡಮ್ಮಯ್ಯ ।

ಸಾಸಿರ ಶತ ತುರಗಾವಿ ಪಲ್ಲಕ್ಕಿ-

ಯ ಸರದಾರರ ನೋಡಮ್ಮಯ್ಯ ।

ಭೂಸುರರಾಯರು 

ಸೀಮೆಯ ಸುತ್ತಲು ।

ಗಾಸಿಯ ಮಾಡದೆ 

ಗ್ರಾಮವ ಕಾಯ್ದ ।। ಚರಣ ।।

ತಾರಣ ನಾಮ ಸಂವತ್ಸರ ಶುದ್ಧ -

ವೈಶಾಖದಿ ನೋಡಮ್ಮಯ್ಯ ।

ಧರೆಯೊಳು ಕಲಹ ವಿಪರೀತವ-

ದರೊಳು ರಣಮಂಡಲ 

ನೋಡಮ್ಮಯ್ಯ ।

ಊರೆಲ್ಲ ಮೊರೆಯಿಡೆ 

ಈಕ್ಷಿಸಿ ಮಹಿಮೆಯ ।

ತೋರುವ ಅಭಯ 

ಪ್ರಸಾದವ ಕೊಡುವಾ ।। ಚರಣ ।।

ಸಕಲ ಜನರು ಎಲ್ಲಾ -

ಸ್ವಾಮಿಯಿಂದುಳಿದೆವು 

ಜಯ ನಮೋ 

ಎನೆ ನೋಡಮ್ಮಯ್ಯ ।

ಅಕಲಂಕ ಶೇಷಾನೃಪ -

ಶ್ರೀ ರಾಮರ ಸೇವಕಮಣಿ 

ನೋಡಮ್ಮಯ್ಯ ।

ಲೋಕದಧಿಕ ಗುರು 

ಕದರುಂಡಲೀಶಾ ।

ಬೇಕೆಂದು ನಿಂತಾ 

ಶ್ರೀ ಹನುಮಂತ ।। ಚರಣ ।।

***

" ಶ್ರೀ ಹರುಷ ಮುನಿ - 8 "

" ಸಂನ್ಯಾಸ ಸ್ವೀಕಾರ "

ಶ್ರೀ ಮಧ್ವ ವಿಜಯ...

ಅಥೋಪಗಮೈಷ ಗುರು ಜಗದ್ಗುರು:

ಪ್ರಸಾದ್ಯ ತಂ ದೇವವರ ಪ್ರಸಾದಿತಃ ।

ಸದಾ ಸಮಸ್ತಾಶ್ರಮಭಾಕ್ 

ಸುರೇಶ್ವರೋವಿಶೇಷತಃ ಖಲ್ವ

ಭಜದ್ವರಾಶ್ರಮಮ್ ।।

ರುದ್ರಾದಿ ದೇವತೆಗಳು ಒಲಿಸಿದ ಶ್ರೀ ವಾಸುದೇವ ಗುರುವಾದ ಶ್ರೀ ಅಚ್ಯುತಪ್ರೇಕ್ಷಾಚಾರ್ಯರಲ್ಲಿಗೆ ತೆರಳಿ ಅವರನ್ನು ಸಂತೋಷ ಪಡಿಸಿದರು 

ಸದಾ ಎಲ್ಲ ರೀತಿಯ ಆಶ್ರಮ ಧರ್ಮಗಳನ್ನೂ ಪರಿಪಾಲಿಸುವ ದೇವ ಶ್ರೇಷ್ಠರಾದ ಅವರು ಆಗ ವಿಶೇಷವಾಗಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು.

" ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ "

ವೇದಾಂತವಿದ್ಯಾನಿಜರಾಜ್ಯಪಾಲನೇ

ಸಂಕಲ್ಪ್ಯಮಾನೋ ಗುರುಣಾಗರೀಯಸೀ ।

ಅದಭ್ರಚೇತಾ ಅಭಿಷಿಚ್ಯತೇ 

ಪುರಾ ಸವಾರಿಭಿರ್ವಾರಿಜ ಪೂರಿತೈರಥ ।।

" ವೇದಾಂತ ವಿದ್ಯೆ " 

ಎಂಬುವ ತಮ್ಮ ಸಾಮ್ರಾಜ್ಯದ ಪರಿಪಾಲನೆ ಎಂಬ ಹಿರಿದಾದ ಕಾರ್ಯದಲಿ ಸರ್ವಜ್ಞರಾದ ಶ್ರೀ ಪೂರ್ಣಪ್ರಜ್ಞರನ್ನು ನಿಯಮಿಸಬೇಕೆಂದು ನಿಶ್ಚಯಿಸಿ ಗುರುಗಳಾದ ಶ್ರೀ ಅಚ್ಯುತಪ್ರೇಕ್ಷರು ಅವರಿಗೆ ಶಂಕದಲ್ಲಿ ತುಂಬಿದ ಪುಣ್ಯ ಜಲಗಳಿಂದ ಅಭಿಷೇಕ ಮಾಡಿದರು. 

ಶ್ರೀ ವಾಸುದೇವನು " ಆನಂದತೀರ್ಥ " ರಾದರು.

ಆನಂದ ರೂಪಸ್ಯ ಪರಸ್ಯ 

ಪಾತ್ರದೀರಾನಂದ ಸಂದಾಯಿ-

ಸುಶಾಸ್ತ್ರಕೃತ್ ಸ ಯತ್ ।

ಆನಂದತೀರ್ಥೇತಿ ಪದಂ 

ಗುರೂದಿತಂ ಬಭೂವ  

ತಸ್ಯಾತ್ಯನುರೂಪರೂಪಕಮ್ ।।

ಆನಂದ ರೂಪನೂ; ಸರ್ವೋತ್ತಮನೂ ಆದ ಶ್ರೀ ಹರಿಯಲ್ಲಿಯೇ ನೆಲೆಸಿದ ಮನಸ್ಸಿನ ಸ್ವರೂಪಾನಂದಕ್ಕೆ ಸಾಧನವಾಗುವ ಶಾಸ್ತ್ರವನ್ನು ರಚಿಸಿರುವ ಶ್ರೀ ಪೂರ್ಣಪ್ರಜ್ಞರಿಗೆ ಗುರುಗಳಿರಿಸಿದ " ಆನಂದತೀರ್ಥ " ಯೆಂಬ ಹೆಸರು ಅತ್ಯಂತ ಅರ್ಥಪೂರ್ಣವೆನಿಸಿತು.

ಮಧ್ವರಾಯರ ಚರಿತೆ ಕೇಳಲು ।

ಶುದ್ಧವಾಯಿತು ಜನತೆ ।। ಪಲ್ಲವಿ ।।

ತಿದ್ದಿತೆಲ್ಲರ ನಡತೆ ಸುಲಭದಿ ।

ಲಬ್ಧವಾಯಿತು ಘನತೆ ।। ಅ ಪ ।।

ಉತ್ತಮ ದಿವಿಜರ 

ಸತ್ಸಭೆಗಳಲಿ ।

ನೃತ್ಯ ಗೀತೆಗಳಿಂದ । 

ನಿತ್ಯ ಪಾಡುವ ಕಥೆ ।

ಮರ್ತ್ಯಲೋಕದ ಮದ ।

ಮತ್ಸರ ರೋಗಕೆ ।

ಪಥ್ಯ ಮಾಡುವವರಿಗೆ ।

ಉತ್ತಮವೀ ಕಥೆ ।। ಚರಣ ।।

ಇಲ್ಲಿಯ ಜೀವನ ।

ಅಲ್ಲಿಗೆ ಸಾಧನ ।

ಎಲ್ಲಿಯು ಭೇದವ -

ತೋರಿದರು ।

ಕ್ಷುಲ್ಲಕ ಮತಗಳ ।

ಬೆಲ್ಲದ ವಚನವು

ಸಲ್ಲದಾಯಿತು ಬಲು 

ಬಲ್ಲ ಮಹಾತ್ಮ ಶ್ರೀ ।। ಚರಣ ।।

ಹರಿ ಗುರು ಕೃಪೆಯಿದು ।

ಮರುದಂಶರ ಮೈ ।

ಮರೆಸುವ ಚರಿತೆಯು ।

ಹರಿದುದು ಶ್ರವಣದೊಳ ।

ದುರಿತವು ತೊಲಗಿತು 

ಪರಮ ಪ್ರಸನ್ನನ ।

ಪರಮ ಪದದ ರುಚಿ

ಯರಿತರು ಸುಜನರು ।। ಚರಣ ।।

***

" ಶ್ರೀ ಹರುಷ ಮುನಿ - 9 "

ಕಕ್ಷೆ ; 3

ಅಂಶ : 

ಸಾಕ್ಷಾತ್ ಶ್ರೀ ವಾಯುದೇವರು ( ಭಾವಿ ಬ್ರಹ್ಮದೇವರು )

" ಶ್ರೀ ಜಗನ್ನಾಥದಾಸರ ಕಣ್ಣಲ್ಲಿ.... "

ಶ್ರೀ ಮರುತಾತ್ಮ ಸಂಭೂತ ಹನುಮ ।

ಭೀಮ ಮಧ್ವಾಖ್ಯ ಯತಿನಾಥ ಮೂಲ ।

ರಾಮ ಕೃಷ್ಣಾರ್ಪಿತ ಸುಚೇತಾ ।

ಮಾಮ ಸ್ವಾಮಿ ಚೈತ್ತೈಸೆನ್ನ ಮಾತಾ ।।

ಚತುರಶ್ಚತುರಾನನಃ ಸ್ವಯಂ 

ಪವನೋ ವಾ ವ್ರತಿರೂಪ ಆವ್ರಜನ್ ।

ಶ್ರುತಿನಾಥದಿಧೃಕ್ಷಯಾನ್ಯಥಾ ನ 

ಖಲು ಸ್ಯಾನ್ನಿಖಿಲಾಗ್ರ್ಯಲಕ್ಷ್ಮವಾನ್ ।।

ಶ್ರುತಿನಾಥರಾದ ಶ್ರೀ ವೇದವ್ಯಾಸದೇವರನ್ನು ಕಾಣುವ ಬಯಕೆಯಿಂದ ಸ್ವತಃ ಚತುರ್ಮುಖ ಬ್ರಹ್ಮದೇವರೋ ಅಥವಾ ವಾಯುದೇವರೋ ಯತಿ ರೂಪದಿಂದ ಬರುತ್ತಿರುವಂತಿದೆ. 

ಇಲ್ಲವಾದಲ್ಲಿ ಹೀಗೆ ಸಕಲ ಲಕ್ಷಣಗಳನ್ನು ಹೊಂದಿರಲು ಸಾಧ್ಯವಿಲ್ಲ.

ಆಶ್ರಮ ಗುರುಗಳು : ಶ್ರೀ ಅಚ್ಯುತಪ್ರೇಕ್ಷಾಚಾರ್ಯರು

ಆಶ್ರಮ ಶಿಷ್ಯರು :

ಶ್ರೀ ಮರುದಂಶ ಪ್ರಾಣೇಶದಾಸರ ನುಡಿಮುತ್ತುಗಳಲ್ಲಿ ಶ್ರೀಮದಾಚರ್ಯರಿಂದ ಸ್ಥಾಪನೆಗೊಂಡ ಮಠಗಳೂ ಹಾಗೂ ಯತಿಗಳು..

ಸುಖತೀರ್ಥರೆದುವರನ । ಸ್ಥಾಪಿ ।

ಸ್ಯೊಂಭತ್ತೆತಿಗಳನು 

ಮಾಡಿ ಅವರವರಿಗೆ ।

ಅಕಳಂಕ ನಾಮಗಳ 

ಮೂರ್ತಿಗಳ ಕೊಟ್ಟು ।

ವಿವರ ಬಣ್ಣಿಸುವೆ 

ಸುಜನರು ಕೇಳಿ ।।

ಶ್ರೀ ಪದ್ಮನಾಭ ಹೃಷಿಕೇಶ ।

ನರಹರಿ ಜನಾರ್ದನ ಯತಿ ।

ಉಪೇಂದ್ರತೀರ್ಥ ಪಾಪಘ್ನ 

ವಾಮನ ಮುನಿಪಾ ।

ವಿಷ್ಣು ಯತಿ ರಾಮ-

ತೀರ್ಥಧೋಕ್ಷಜತೀರ್ಥರು ।।

ಶ್ರೀ ಪದ್ಮನಾಭತೀರ್ಥರು 

( ಶ್ರೀ ರಾಯರಮಠ, ಶ್ರೀ ವ್ಯಾಸರಾಜಮಠ, ಶ್ರೀಶ್ರೀಪಾದರಾಜರ ಮಠಕ್ಕೆ ಸೇರಿದವರು)

ಶ್ರೀ ಹೃಷಿಕೇಶತೀರ್ಥರು - ಶ್ರೀ ಪಲಿಮಾರು ಮಠ

ಶ್ರೀ ನರಸಿಂಹತೀರ್ಥರು - ಶ್ರೀ ಅದಮಾರು ಮಠ

ಶ್ರೀ ಜನಾರ್ದನತೀರ್ಥರು - ಶ್ರೀ ಕೃಷ್ಣಾಪುರ ಮಠ

ಶ್ರೀ ಉಪೇಂದ್ರತೀರ್ಥರು - ಶ್ರೀ ಪುತ್ತಿಗೆ ಮಠ

ಶ್ರೀ ವಾಮನತೀರ್ಥರು - ಶ್ರೀ ಶಿರೂರು ಮಠ

ಶ್ರೀ ವಿಷ್ಣುತೀರ್ಥರು - ಶ್ರೀ ಸೋದೆ ಮಠ

ಶ್ರೀ ರಾಮತೀರ್ಥರು - ಶ್ರೀ ಕಾಣಿಯೂರು ಮಠ

ಶ್ರೀ ಅಧೋಕ್ಷಜತೀರ್ಥರು - ಶ್ರೀ ಪೇಜಾವರ ಮಠ

******

" ಶ್ರೀ ಹರುಷ ಮುನಿ - 10 "

" ಸಂಸ್ಥಾನಗಳಿಗೆ ಕೊಟ್ಟ ಪ್ರತಿಮೆಗಳು "

ಈ ಪೆಸರಿಲೊಂಭತ್ತು ಮಂದಿ ರಘುಪತಿ ।

ಕಾಳೀ ಮಥನ ವಿಠ್ಠಲನೆರಡೆರಡು ।

ಭೂಪತಿ ನರಸಿಂಹ ವಿಠಲ ಹೀಗೆ ।

ಒಂಭತ್ತು ಮೂರ್ತಿಗಳ ಕೊಟ್ಟು ।। 1 ।।

ಪದುಮನಾಭರಿಗೆ ರಾಮನ ಕೊಟ್ಟು ।

ಸಕಲ ದೇಶವ ನಾಳಿ ಧನವ ತಾ ಯೆನುತಲಿ ।

ಅದರ ತರುವಾಯ ಹೃಷಿಕೇಶ ತೀರ್ಥರಿ ।

ಗೊಂದು ರಾಮ ಮೂರ್ತಿಯನು ಕೊಟ್ಟು ।। 2 ।।

ಬುಧಜನಾರ್ಜಿಯ ನೃಸಿಂಹಾರ್ಯರಿಗೆ ।

ಕಾಳೀಯಮರ್ದನನಾದ ಶ್ರೀ ಕೃಷ್ಣಮೂರ್ತಿ ।

ಹೃದಯ ನಿರ್ಮಲ ಜನಾರ್ದನತೀರ್ಥರಿಗೆ ।

ಕಾಳೀ ಮಥನ ಶ್ರೀ ಕೃಷ್ಣಮೂರ್ತಿಯನು ಕೊಟ್ಟು ।। 3 ।।

ಯತಿವರ ಉಪೇಂದ್ರರಾಯರಿಗೆ ವಿಠಲನ ।

ವಾಮನ ತೀರ್ಥರಿಗೆ ವಿಠಲನಾ ।

ನಟ ಸುರದ್ರುಮ ವಿಷ್ಣುತೀರ್ಥರಿಗೆ ವರಾಹ ।

ಶ್ರೀ ರಾಮ ತೀರ್ಥರಿಗೆ ನರಸಿಂಹ ।। 4 ।।

ಅತಿ ಸುಗುಣ ಅಧೋಕ್ಷಜತೀರ್ಥರಿಗೆ ವಿಠಲ ।

ನಿಂತು ಒಂಭತ್ತು ಮೂರ್ತಿಗಳ ಕೊಟ್ಟು ।

ಕ್ಷಿತಿಯೊಳಗೆ ತ್ಯಾಪಪೇಹ ಪುರಸ್ಥ ।

ಪ್ರಾಣೇಶವಿಠ್ಠಲನ ಅರ್ಚನೆಗಿಟ್ಟರು ಕೇಳಿ ।। 5 ।।

" ಶ್ರೀಮದಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮೂಲ ಸಂಸ್ಥಾನಗಳಿಗೆ ನೀಡಿದ ಪ್ರತಿಮೆಗಳ ವಿವರ "

1. " ಶ್ರೀ ಪದ್ಮನಾಭತೀರ್ಥರು "

ಶ್ರೀಮದಾಚಾರ್ಯ ಕರಾರ್ಚಿತ ಶ್ರೀ ದಿಗ್ವಿಜಯರಾಮದೇವರು.

[ ಪ್ರಸ್ತುತ ಶ್ರೀ ದಿಗ್ವಿಜಯ ರಾಮದೇವರ ಪ್ರತಿಮೆ ಶ್ರೀ ರಾಯರ ಮಠದಲ್ಲಿ ವಿರಾಜಮಾನನಾಗಿದ್ದಾನೆ ]

2. ಶ್ರೀ ಹೃಷಿಕೇಶತೀರ್ಥರು - ಶ್ರೀ ರಾಮದೇವರು

3. ಶ್ರೀ ನರಸಿಂಹತೀರ್ಥರು - ಶ್ರೀ ಕಲೀಯಮರ್ದನ ಕೃಷ್ಣ ದೇವರು

4. ಶ್ರೀ ಜನಾರ್ದನತೀರ್ಥರು - ಶ್ರೀ ಕಲೀಯಮರ್ದನ ಕೃಷ್ಣ ದೇವರು

5. ಶ್ರೀ ಉಪೇಂದ್ರತೀರ್ಥರು - ಶ್ರೀ ವಿಠ್ಠಲದೇವರು

6. ಶ್ರೀ ವಾಮನತೀರ್ಥರು - ಶ್ರೀ ವಿಠ್ಠಲದೇವರು

7. ಶ್ರೀ ವಿಷ್ಣುತೀರ್ಥರು - ಶ್ರೀ ಭೂವರಾಹದೇವರು

8. ಶ್ರೀ ರಾಮತೀರ್ಥರು - ಶ್ರೀ ನರಸಿಂಹದೇವರು

8. ಶ್ರೀ ಅಧೋಕ್ಷಜತೀರ್ಥರು - ಶ್ರೀ ವಿಠ್ಠಲದೇವರು

" ವಿಶೇಷ ವಿಚಾರ "

1. ಶ್ರೀಮದಾಚಾರ್ಯ ಕರಾರ್ಚಿತ ಶ್ರೀ ದಿಗ್ವಿಜಯ ರಾಮದೇವರು - ಶ್ರೀ ರಾಯರ ಮಠ, ಮಂತ್ರಾಲಯ. 

2. ಶ್ರೀಮದಾಚಾರ್ಯರು ಉಡುಪಿಯ ಅಷ್ಟ ಮಠಗಳಿಗೆ ನೀಡಿದ ಸಂಸ್ಥಾನ ಪ್ರತಿಮೆಗಳು

******

" ಶ್ರೀ ಹರುಷ ಮುನಿ - 11 "

ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರಾದ ಶ್ರೀ ಜಗನ್ನಾಥದಾಸರು " ತತ್ತ್ವಸುವ್ವಾಲಿ " ಯಲ್ಲಿ... 

ಯತ್ಯಾಶ್ರಮ ವಹಿಸಿ ಶ್ರುತ್ಯರ್ಥ ಗ್ರಂಥ । ಮೂ ।

ವತ್ತೇಳು ರಚಿಸಿ ದಯದಿಂದ । ದಯದಿಂದ । 

ನಿನ್ನವರಿ । ಗಿತ್ತು ಪಾಲಿಸಿದಿ ಕರುಣಾಳು ।।

 " ಗ್ರಂಥಗಳು "

ಏಕಮೇವಾನ್ ದ್ವಿತಿಯೆಂಬ ಶ್ರುತ್ಯರ್ಥಗಳ ।

ನೇಕ ಭಾಷ್ಯ ಗ್ರಂಥಗಳ ಕಲ್ಪಿಸಿ ।

ಯೇಕವಿಂಶತಿ ಕುಮತ 

ಕಾಕುಮಾಯಿಗಳನ । ನಿ ।

ರಾಕರಿಸಿ ಹರಿಯೇ ಜಗಕೀಶನೆನಿಸಿ ।।

ಯೇಕಚಿತ್ತದಿ ತನ್ನ ನಂಬಿದ್ದ ಭಕ್ತರ್ಗೆ 

ಶೋಕಗಳ ನಾಶಗೈಸಿ ।

ಮಾಕಳತ್ರನ ಸದನ-

ನೋಕನಿಯ್ಯನ ತೋರು ।

ಆಖಣಾಶ್ಮ ಸಮ ಚರಣ 

ವ್ಯಾಕುಲವ ಪರಿಹರಿಸು ।।

" ಗೀತಾ ಪ್ರಸ್ಥಾನ ಗ್ರಂಥಗಳು ( 2 ) "

ಗೀತಾ ಪ್ರಸ್ಥಾನದ ಮೇಲೆ ಎರಡು ಗ್ರಂಥಗಳನ್ನು ರಚಿಸಿದ್ದಾರೆ.

1. ಗೀತಾಭಾಷ್ಯಮ್ 

2. ಗೀತಾತಾತ್ಪರ್ಯನಿರ್ಣಯಃ

" ಸೂತ್ರ ಪ್ರಸ್ಥಾನ ಗ್ರಂಥಗಳು ( 4 ) "

1. ಸೂತ್ರಭಾಷ್ಯಮ್

2. ಅಣುಭಾಷ್ಯಮ್ 

3. ಅನುವ್ಯಾಖ್ಯಾನಮ್

4. ನ್ಯಾಯವಿವರಣಮ್

ಶ್ರೀ ಶಂಕರಾಚಾರ್ಯರೇ ಆಗಲೀ - ಶ್ರೀ ರಾಮಾನುಜಾಚಾರ್ಯರೇ ಆಗಲೀ " ಅಣುಭಾಷ್ಯ " ದಂಥ " ಸಂಗ್ರಹ ಭಾಷ್ಯ " ಬರೆದಿಲ್ಲ.

ಅಣುಭಾಷ್ಯ ಮತ್ತು ಅನುವ್ಯಾಖ್ಯಾನ ಎರಡೂ ಕೃತಿಗಳೂ ಶ್ಲೋಕ ರೂಪದಲ್ಲಿವೆ. 

ಸೂತ್ರಗಳಿಗೆ ಅಲಂಕಾರ ಕೊಟ್ಟು ತತ್ತ್ವ ಸಾಹಿತ್ಯಕ್ಕೆ ಶ್ಲೋಕ ರೂಪವಾಗಿ ಒದಗಿಸಿದ ಅದ್ವಿತೀಯ ಪ್ರತಿಭೆ ಶ್ರೀಮದಾಚಾರ್ಯರದ್ದು.

ಶ್ರೀ ಶಂಕರಾಚಾರ್ಯರು ಸೂತ್ರಕ್ಕೆ ಒಂದೇ ಒಂದು ಭಾಷ್ಯ ರಚಿಸಿದ್ದಾರೆ.

ಶ್ರೀ ರಾಮನಾಜಾಚಾರ್ಯರು ಶ್ರೀಭಾಷ್ಯ - ವೇದಾಂತದೀಪ - ವೇದಾಂತಸಾರ ಎಂಬ ಮೂರು ಕೃತಿಗಳನ್ನು ರಚಸಿದ್ದಾರೆ.

" ಉಪನಿಷತ್ ಪ್ರಸ್ಥಾನ ಗ್ರಂಥಗಳು ( 10 ) "

ಉಪನಿಷತ್ ಪ್ರಸ್ಥಾನದಲ್ಲಿ ಪ್ರಧಾನವಾದ " ಹತ್ತು " ಉಪನಿಷತ್ತುಗಳಿಗೆ ಶ್ರೀಮದಾಚಾರ್ಯರು ಭಾಷ್ಯವನ್ನು ರಚಿಸಿದ್ದಾರೆ. 

ಅದರಲ್ಲೂ ಒಂದು ವಿಶೇಷವುಂಟು. 

ಬಹುಪಾಲು ವಿದ್ವಾಂಸರು ಐತರೇಯೋಪನಿಷತ್ತಿನ 3 ಅಧ್ಯಾಯಗಳಿಗೆ ಮಾತ್ರ ಟೀಕೆ ಬರೆದಿದ್ದರೇ.

ಶ್ರೀ ಮನ್ಮಧ್ವಾಚಾರ್ಯರು ಐತರೇಯ ಅರಣ್ಯಕದ ಇಡೀ ಉಪನಿಷತ್ಕಾಂಡಕ್ಕೆ ( 9 ಅಧ್ಯಾಯಗಳು ) ಭಾಷ್ಯ ರಚಿಸಿದ್ದಾರೆ.

1. ಐತರೇಯಭಾಷ್ಯಮ್ 

2. ತೈತ್ತಿರೀಯಭಾಷ್ಯಮ್ 

3. ಬೃಹದಾರಣ್ಯಕಭಾಷ್ಯಮ್ 

4. ಈಶಾವಾಸ್ಯಭಾಷ್ಯಮ್ 

5. ಕಾಠಕೋಪನಿಷದ್ಭಾಷ್ಯಮ್ 

6. ಛಾಂದೋಗ್ಯಭಾಷ್ಯಮ್ 

7. ಅಥರ್ವಣಭಾಷ್ಯಮ್ 

8. ಮಾಂಡೂಕ್ಯಭಾಷ್ಯಮ್ 

9. ಷಟ್ಪ್ರಶ್ನಭಾಷ್ಯಮ್ 

10. ತಲವಕಾರೋಪನಿಷದ್ಭಾಷ್ಯಮ್ 

ಮಾಂಡೂಕೋಪನಿಷತ್ತಿನ ಮಧ್ಯದಲ್ಲಿ ಬರುವ ಶ್ಲೋಕಗಳನ್ನು ಗೌಡಪಾದರ ಕಾರಿಕೆಗಳೆಂದು ತಪ್ಪಾಗಿ ಭ್ರಮಿಸಲಾಗುತ್ತಿದೆ.

ಶ್ರೀ ರಾಮಾನುಜಾಚಾರ್ಯರು  ಇವು ಉಪನಿಷತ್ತಿನ ಭಾಗವೇ ಎಂದು ಒಪ್ಪಿಕೊಂಡಿದ್ದಾರೆ.

ಶ್ರೀಮದಾನಂದತೀರ್ಥ ಭಾಗವದ್ಪಾದರಂತೂ ಈ ಮಂತ್ರಗಳಿಗೆ ಭಾಷ್ಯ ರಚಿಸಿ ಈ ತಪ್ಪು ಕಲ್ಪನೆಯನ್ನು ತಿರಸ್ಕರಿಸಿದ್ದಾರೆ.

ಶ್ರೀ ಬ್ರಹ್ಮಾನಂದ ಮುಂತಾದ ಹಿರಿಯ ಅದ್ವೈತ ವಿದ್ವಾಸಂರೂ ಸಹ ಇವು ಉಪನಿಷನ್ಮಂತ್ರಗಳೇ ಎಂದು ಒಪ್ಪಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು.

" ಶ್ರುತಿ ಪ್ರಸ್ಥಾನ ಗ್ರಂಥಗಳು ( 1 )"

ಶ್ರುತಿ ಪ್ರಸ್ಥಾನದಲ್ಲಿ ಋಗ್ವೇದದ 40 ಸೂಕ್ತಗಳಿಗೆ ಅಧ್ಯಾತ್ಮದ ಅರ್ಥ ಬರೆದು ಮಾರ್ಗದರ್ಶನ ಮಾಡಿದ್ದೂ ಅಲ್ಲದೇ - ಐತರೇಯ ಬ್ರಾಹ್ಮಣದ ಕೆಲವು ಖಂಡಗಳಿಗೂ - ಅರಣ್ಯಕದ ಮಹಾನ್ನಾಮ್ನೀಖಂಡಕ್ಕೂ ವ್ಯಾಖ್ಯಾನ ರಚಿಸಿ ಬ್ರಾಹ್ಮಣ - ಅರಣ್ಯಗಳ ಸಮನ್ವಯದ ದಾರಿ ತೋರಿದ್ದಾರೆ.

" ಋಗ್ಭಾಷ್ಯಮ್ "

" ಇತಿಹಾಸ ಗ್ರಂಥಗಳು ( 3 )"

ಇತಿಹಾಸ ಪುರಾಣಗಳ ಸಮನ್ವಯಕ್ಕಾಗಿ ಮಹಾಭಾರತ - ಭಾಗವತಗಳ ಹೃದಯವನ್ನು ತೆರೆದು ತೋರುವ ಮೂಲ ಕೃತಿಗಳು.

1. ಮಹಾಭಾರತ ತಾತ್ಪರ್ಯ ನಿರ್ಣಯಃ 

2. ಯಮಕ ಭಾರತಮ್ 

3. ಭಾಗವತತಾತ್ಪರ್ಯ ನಿರ್ಣಯಃ

" ಪ್ರಕರಣ ಗ್ರಂಥಗಳು ( 10 ) "

ಪ್ರಮಾಣ ಪ್ರಮೇಯಗಳ ನಿಷ್ಕರ್ಷೆಗಾಗಿ ಪ್ರಕರಣ ಗ್ರಂಥಗಳು.

1. ಪ್ರಮಾಣಲಕ್ಷಣಮ್ 

2. ಕಥಾಲಕ್ಷಣಮ್ 

3. ಮಾಯಾವಾದಖಂಡನಮ್ 

4. ಉಪಾಧಿಖಂಡನಮ್ 

5. ಪ್ರಪಂಚಮಿಥ್ಯಾತ್ವಾನುಮಾನಖಂಡನಮ್ 

6. ತತ್ತ್ವ ಸಂಖ್ಯಾನಮ್ 

7. ತತ್ತ್ವ ವಿವೇಕಃ 

8. ತತ್ತ್ವೋದ್ಯೋತಃ 

9. ಕರ್ಮನಿರ್ಣಯಃ 

10. ವಿಷ್ಣುತತ್ತ್ವನಿರ್ಣಯಃ

" ಆಚಾರ ಗ್ರಂಥಗಳು ( 5 ) "

ಧರ್ಮಶಾಸ್ತ್ರದ ವ್ರತ - ಅನುಷ್ಠಾನಗಳ - ವಾಸ್ತುಶಿಲ್ಪ -  ಮಂತ್ರ - ತಂತ್ರಗಳ - ಗೃಹಸ್ಥ ಮತ್ತು ಸಂನ್ಯಾಸಿಗಳ ಆಚಾರ - ಧರ್ಮಗಳ ಬಗ್ಗೆ ಮಾರ್ಗದರ್ಶನ ಮಾಡುವ ಗ್ರಂಥಗಳು.

1. ತಂತ್ರಸಾರಸಂಗ್ರಹಃ 

2. ಸದಾಚಾರಸ್ಮೃತಿಃ  

3. ಜಯಂತೀನಿರ್ಣಯಃ 

4.ಕೃಷ್ಣಾಮೃತಮಹಾರ್ಣವಃ 

5. ಯತಿಪ್ರಣವಕಲ್ಪಃ 

" ಸ್ತೋತ್ರ ಗ್ರಂಥಗಳು ( 2 ) "

1. ನಖಸ್ತುತಿಃ 

2.ದ್ವಾದಶಸ್ತೋತ್ರಮ್ 

ಶ್ರೀ ಶ್ರೀಪಾದರಾಜರ ನುಡಿ ಮುತ್ತುಗಳಲ್ಲಿ.... 

ಮರುದಂಶರ ಮತ ಪಿಡಿಯದೆ । ಇಹ । 

ಪರದಲ್ಲಿ ಸುಖವಿಲ್ಲವಂತೆ ।। ಪಲ್ಲವಿ ।।

ಅರಿತು ವಿವೇಕದಿ ಮರೆಯದೆ ನಮ್ಮ ।

ಗುರುರಾಯರ ನಂಬಿ ಬದುಕಿರೋ ।। ಅ ಪ ।।

ಕ್ಷೀರವ ಕರೆದಿಟ್ಟ ಮಾತ್ರದಿ । ಸಂ ।

ಸ್ಕಾರವಿಲ್ಲೆ ಘೃತವಾಗದಂತೆ ।

ಸೂರಿ ಜನರ ಸಂಗವಿಲ್ಲದೆ ಸಾರ ।

ವೈರಾಗ್ಯ ಭಾಗ್ಯ ಪುಟ್ಟದಂತೆ ।। ಚರಣ ।।

ಉಪದೇಶವಿಲ್ಲದೆ ಮಂತ್ರ ಏಸು । 

ಜಪಿಸಲು ಫಲಗಳ ಕೊಡದಂತೆ ।

ಉಪವಾಸ ವ್ರತಗಳಿಲ್ಲದೆ ಜೀವ ।

ತಪಸಿಯೆನಿಸಿ ಕೊಳ್ಳಲರಿಯನಂತೆ ।। ಚರಣ ।।

ಸಾರ ಮಧ್ವ ಶಾಸ್ತ್ರ ಓದದೇ ।

ತಾರತಮ್ಯ ಜ್ಞಾನ ಪುಟ್ಟದಂತೆ ।

ಶ್ರೀ ರಂಗ ವಿಠಲನ ಭಜಿಸದೆ ಮುಂದೆ ।

ಪರಮಗತಿ ದೊರಕೊಳ್ಳದಂತೆ ।। ಚರಣ ।।

******


" ಶ್ರೀ ಹರುಷ ಮುನಿ - 12 "

" ಶ್ರೀಮದಾಚಾರ್ಯರ ಭಾಷ್ಯವೇ ಪರಮ ಶ್ರೇಷ್ಠ ಭಾಷ್ಯ "

ಇಪ್ಪತ್ತೊಂದು ಕುಭಾಷ್ಯ ತಪ್ಪಾನೆ ಸೋಲಿಸಿದ ।

ಸರ್ಪಶಯನನ ವೊಲಿಸಿದಾ ಕೋಲೆ ।

ಸರ್ಪಶಯನನ ವೊಲಿಸಿದ ಗುರುಗಳ ।

ಟಪ್ಪನೆ ನೆನೆವೇನನುದಿನ ಕೋಲೆ ।।

21 ಕುಭಾಷ್ಯಗಳ ವಿವರ...

1. ಭಾರತೀವಿಜಯ 2. ಸಚ್ಚಿದಾನಂದ 3. ಬ್ರಹ್ಮಘೋಷ 4. ಶತಾನಂದ 5.  ಉಧ್ವರ್ತ 6. ವಿಜಯ 7. ರುದ್ರಭಟ್ಟ 8. ವಾಮನಿ 9. ಯಾದವಪ್ರಕಾಶ 10. ರಾಮಾನುಜ 11. ಭರ್ತೃ ಪ್ರಪಂಚ 12. ದ್ರಾವಿಡ 13. ಬ್ರಹ್ಮದತ್ತಿ 14.  ಭಾಸ್ಕರ 15. ಪಿಶಾಚ 16.  ವೃತ್ತಕಾರ 17. ವಿಜಯಭಟ್ಟ 18. ವಿಷ್ಣುಕ್ರಾಂತ 19.  ವಾದೀಂದ್ರ 20. ಮಾಧವದಾಸ 21. ಶಂಕರಭಾಷ್ಯ.

ನ್ಯಾಯ - ವೈಶೇಷಿಕ - ಸಾಂಖ್ಯ, ಯೋಗ - ಪೂರ್ವ ಮತ್ತು ಉತ್ತರ ಮೀಮಾಂಸಾ.

ಶ್ರೀಮದ್ವೇದವ್ಯಾಸದೇವರು ಉತ್ತರ ಮೀಮಾಂಸಾ ಪ್ರವರ್ತಕರು.

ಬ್ರಹ್ಮ ಸೂತ್ರಗಳಿಗೆ ಮೇಲೆ ತಿಳಿಸಿದಂತೆ 21 ಜನ ಆಚಾರ್ಯರುಗಳು ಭಾಷ್ಯವನ್ನು ಬರೆದರು. 

ಇವರೆಲ್ಲರ ಭಾಷ್ಯಗಳನ್ನೂ ಖಂಡಿಸಿ ಶ್ರೀಮದಾಚಾರ್ಯರು 22ನೇ ಭಾಷ್ಯವನ್ನು ರಚಿಸಿ...

" ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ "

ಎಂಬ ಮಾಯಾವಾದವನ್ನು ಶ್ರೀಮದಾನಂದತೀರ್ಥರು ಖಂಡಿಸಿದರು.

ಗುರುವಮಧ್ವರಾಯರೇ 

ಹರಿದಾಸ್ಯವಿತ್ತು ।

ದ್ಧರಿಸುವರು ಸರ್ವಜ್ನರೂ ।

ಹರಿಪುರವಕಾಂಬದಕೆ -

ಪ್ರಥಮಾಂಗರೆಂದೆಮ್ಮ ।

ಹಿರಿಯರೆಲ್ಲ ಪೇಳ್ವರೂ ।।

ಅರಿ ಶಂಖ ಗದ ಪದ್ಮಧರ -

ಶೇಷಶಾಯಿ । ಶ್ರೀ ।

ಸಿರಿಪತಿಯ ಚರಣ ತೋರೋ ।

ಪರಮ ಕರುಣಾನಿಧಿ 

ವರ ವೃಕೋದರ ಅಸ್ಮದ್ ।

ಗುರುಗಳಂತರ್ಯಾಮಿ 

ನರಹರಿ ಪೊಂಡಿಸು ।। 1 ।।

ಮೇದಿನಿಯ ಮ್ಯಾಲುಳ್ಳ -

ಪಾಜಕ ಕ್ಷೇತ್ರದಲಿ ।

ಮೋದತೀರ್ಥರಾಗಿ ಅವತರಿಸಿದೆ ।

ಬಾದರಾಯಣ -

ಪ್ರಸಾದದಿಂದಲಿ ಚತುರ ।

ವೇದಗಳ ವಡನುಡಿಸಿದೆ ।।

ಆದಿಕಾರಣ ಕರ್ತ 

ನಾರಾಯಣೆಂದರುಹಿ ।

ದ್ವಾದಶ ಸ್ತೋತ್ರ-

ದಿಂದಲಿ ಸ್ತುತಿಸಿದೆ ।

ವೇದಗರ್ಭನ ಜನಕ 

ವೆಂಕಟವಿಠ್ಠಲನ ।

ಪಾದ ಮೂಲದಲಿಪ್ಪ 

ಪವನರಾಯರೇ ದಯದಿ ।। 2 ।।

ಮಾಘ ಶುದ್ಧ ನವಮೀ ಅದೃಶ್ಯರಾಗಿ ದೊಡ್ಡ ಬದರಿಗೆ ತೆರಳಿದರು.

( ಶ್ರೀ ವೇದವಾಸ್ಯದೇವರ ವಾಸ ಸ್ಥಾನವಾದ ಬರದಿಕಾಶ್ರಮಕ್ಕೆ )

" ಅದೃಶ್ಯತೋ ರೌಪ್ಯ ಪೀಠೇಸ್ತಿ 

ದೃಶ್ಯೋಸ್ತಿ ಬದರೀ ತಟೇ "

ಬ್ರಹ್ಮಾಂತಾ ಗುರವಃ 

ಸಾಕ್ಷಾದಿಷ್ಟಂ ದೈವಂ ಶ್ರಿಯಃ ಪತಿಃ ।

ಆಚಾರ್ಯಃ ಶ್ರೀಮದಾಚಾರ್ಯಾ-

ಸ್ಸಂತು ಮೇ ಜನ್ಮಜನ್ಮನೀ ।।

ನಮಸ್ತೇ ಪ್ರಾಣೇಶ ಪ್ರಣತ 

ವಿಭವಾಯಾವನಿಮಗಾ ।

ನಮಸ್ವಾಮೀನ್ ರಾಮ ಪ್ರಿಯತಮ 

ಹನುಮಾನ್ ಗುರುಗುಣ ।।

ನಮಸ್ತುಭ್ಯ೦ ಭೀಮ ಪ್ರಬಲತಮ

ಕೃಷ್ಣೇಷ್ಟ ಭಗವನ್ ।

ನಮ ಶ್ರೀ ಮನ್ಮಧ್ವ ಪ್ರದಿಶ 

ಸದೃಶ೦ ಜಯ ಜಯ ।।

आचार्य नागराजु हावेरि

गुरु विजय प्रतिष्ठान

****


" ಶ್ರೀ ಹರುಷ ಮುನಿ - 13 "

ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು " ಪ್ರಮೇಯ ಸಂಗ್ರಹ " ದಲ್ಲಿ... 

ತತೋ ಮಹತ್ತತ್ತ್ವಾಭಿಮಾನೀ ಬ್ರಹ್ಮಾದ್ಯೈ ವಿಜ್ಞಾನ ತತ್ತ್ವಾಭಿಮಾನೀ ವಾಯುಶ್ಚ ಇಮೌ ದ್ವೌ ಪರಸ್ಪರಂ ಸಮಾನೌ ಸಂತೌ ಲಕ್ಷ್ಮ್ಯಾ: ಕೋಟಿ ಗುಣಾಧಮೌ । ಅತ್ರ ವಾಯುರ್ಬ್ರಹ್ಮಪದಂ ಪ್ರಾಪ್ಯೈವ ಮುಕ್ತೋ ಭವತಿ ।।

ಮೊದಲನೇ ಸ್ಥಾನದಲ್ಲಿ ಸರ್ವೋತ್ತಮನೂ - ಜಗನ್ನಾಥನೂ - ಅನಂತ ಕಲ್ಯಾಣ ಗುಣಪೂರ್ಣನೂ ಆದ ಶ್ರೀ ಹರಿಯು  - ಸರ್ವೋತ್ತಮ.

ಎರಡನೆಯ ಸ್ಥಾನದಲ್ಲಿ ಅವ್ಯಕ್ತ ತತ್ತ್ವಾಭಿಮಾನಿಯೂ - ಸರ್ವೋತ್ತಮಳೂ ಆದ ಶ್ರೀ ಮಹಾಲಕ್ಷ್ಮೀದೇವಿಯರು. 

ಬ್ರಹ್ಮಾದಿ ಸಕಲರಿಗೂ ಐಶ್ವರ್ಯಪ್ರದಳು. 

ಇಂಥಹಾ ಶ್ರೀದೇವಿಯು ಶ್ರೀಮನ್ನಾರಾಯಣನಿಗಿಂತ ಅನಂತಾನಂತ ಗುಣಗಳಿಂದ ಕಡಿಮೆಯಾಗಿದ್ದಾಳೆ. 

ನಂತರ ಮೂರನೆಯ ಸ್ಥಾನದಲ್ಲಿ... 

ಮಹತ್ತತ್ತ್ವಾಭಿಮಾನಿಯಾದ ಶ್ರೀ ಚತುರ್ಮುಖ ಬ್ರಹ್ಮದೇವರು - ವಿಜ್ಞಾ ತತ್ತ್ವಾಭಿಮಾನಿಯಾದ ಶ್ರೀ ವಾಯುದೇವರು ಮೂರನೇ ಸ್ಥಾನದಲ್ಲಿರುವರು. 

ಇವರಿಬ್ಬರೂ ಸಮಾನರು - ಶ್ರೀ ಮಹಾಲಕ್ಷ್ಮೀದೇವಿಯರಿಗಿಂತ ಕೋಟಿ ಗುಣಗಳಿಂದ ಕಡಿಮೆಯಾಗಿದ್ದರೆ - ಇವರಲ್ಲಿ ಶ್ರೀ ವಾಯುದೇವರು - ಶ್ರೀ ಬ್ರಹ್ಮ ಪದವಿಯನ್ನು ಹೊಂದಿಯೇ ಮುಕ್ತರಾಗುತ್ತಾರೆ. 

ಶ್ರೀ ಶಂಕರಾಚಾರ್ಯರು ತಮ್ಮ ಉಪನಿಷದ್ಭಾಶ್ಯಗಳಲ್ಲಿ ಹಾಗೂ ಬ್ರಹ್ಮಸೂತ್ರ ಭಾಷ್ಯದಲ್ಲಿ - ಸೂತ್ರ ವ್ಯಾಖ್ಯಾನ ಮಾಡುವಾಗ ಶ್ರೀ ಮೈಖ್ಯಪ್ರಾಣನು ಶ್ರೀಮನ್ನಾರಾಯಣನ ಅನಂತರದಲ್ಲಿ ಜ್ಯೇಷ್ಠನೂ - ಶ್ರೇಷ್ಠನೂ ಆದ ದೇವತೆಯು ಎಂದು ನಿರೂಪಿಸಿದ್ದಾರೆ. 

" ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು - ಪ್ರಾತಃ ಸಂಕಲ್ಪ ಗದ್ಯ " ದಲ್ಲಿ.... 

" ತಥಾವತೀರ್ಯ ಸಕಲ ಸಚ್ಛಾಸ್ತ್ರ ಕರ್ತ್ರೂಣಾಂ ಸಕಲ ದುರ್ಮತ ಭಂಜಕಾನಾಂ ಅನಾದಿತಃ ಸತ್ಸಂಪ್ರದಾಯ ಪರಮಪರಾಪ್ರಾಪ್ತ ಶ್ರೀಮದ್ವೈಷ್ಣವಸಿದ್ಧಾಂತ ಪ್ರತಿಷ್ಠಾಪಕಾನಾಂ "..... 

ಶ್ರೀ ವಾಯುದೇವರು ನಮ್ಮ ಈ ಭರತ ಖಂಡದಲ್ಲಿ ಅವತರಿಸಿ - ಎಲ್ಲಾ ದುರ್ಮತಗಳನ್ನು ಖಂಡಿಸಿ " ಸರ್ವಮೂಲ " ವೆಂದು ಪ್ರಸಿದ್ಧವಿರುವ 37 ಸಚ್ಛಾಸ್ತ್ರಗಳನ್ನು ರಚಿಸಿ - ಅನಾದಿ ಪರಂಪರೆಯಿಂದ ಪ್ರಾಪ್ತವಾದ - ಶ್ರೀಮದ್ವೈಷ್ಣವ ಸಿದ್ಧಾಂತ ಪರಮ ಪ್ರಮಾಣ ಭೂತಗಳಾದ.... 

" ಶ್ರೀ ವಿಷ್ಣು ಸರ್ವವೋತ್ತಮತ್ವಾದಿ ಸದ್ವೈಷ್ಣವ ಸಿದ್ಧಾಂತಗಳನ್ನೂ ಸ್ಥಾಪಿಸಿ " ಅನುಗ್ರಹಿಸಿದರು. 

ಶ್ರೀ ವಾಯುದೇವರ ಅವತಾರರಾದ ನಮ್ಮ - ನಿಮ್ಮೆಲ್ಲರ ಶ್ರೀಮದಾನಂದತೀರ್ಥ ಭಗವತ್ಪಾದರು. 

" ಶ್ರೀಮದ್ವೈಷ್ಣವ ಸಿದ್ಧಾಂತ "

ಶ್ರೀಮದ್ವೈಷ್ಣವ ಸಿದ್ಧಾಂತವು ಅನಾದಿಯಾದುದು. 

ಸಾಕ್ಷಾತ್ ಶ್ರೀ ಹರಿಯಿಂದ ತತ್ತ್ವೋಪದೇಶವನ್ನು ಆದಿಯಲ್ಲಿ ಪಡೆದವರು ಶ್ರೀ ಚತುರ್ಮುಖ ಬ್ರಹ್ಮದೇವರು. 

ಸಷ್ಟಿಕರ್ತರೂ - ಸಕಲ ಜಗತ್ತಿನ ಪಿತಾಮಹರೂ ಆದ ಶ್ರೀ ಚತುರ್ಮುಖ ಬ್ರಹ್ಮದೇವರಿಂದ ಪ್ರಾಪ್ತವಾದ ಪರಂಪರೆಯುಳ್ಳ ಸಿದ್ಧಾಂತವೇ ಅನಾದಿ ಮೂಲ ಉಳ್ಳದ್ದು - ಪ್ರಮಾಣತ್ವೇನ ಸರ್ವ ಗ್ರಾಹ್ಯವು. 

" ವಂಶಸ್ಯಾದೀನ್ ಸನಕಾದೀನ್ - ವಂದೇ "..... 

ಇತ್ಯಾದಿ ಪ್ರಮಾಣ ವಾಕ್ಯಗಳಲ್ಲಿ ಪರಂಪರೆಯಲ್ಲಿ ಬಂದ ಶ್ರೀ ಅಚ್ಯುತಪ್ರೇಕ್ಷರೆಂಬ ಯತಿಗಳಿಂದ ಶ್ರೀ ಮಧ್ವಾಚಾರ್ಯರು ಯತ್ಯಾಶ್ರಮವನ್ನು ಸ್ವೀಕರಿಸಿ - ಶ್ರೀ ಅಚ್ಯುತಪ್ರೇಕ್ಷರಿಗೆ  ಪರಂಪರೆಯಿಂದ ಉಪದಿಷ್ಟವಾಗಿದ್ದ ತತ್ತ್ವವನ್ನೇ ಸ್ಥಿರಪಡಿಸಿ - ತತ್ಸಂಬಂಧವಾದ ಅವರ ಸನಾಶಯಗಳನ್ನೆಲ್ಲ ಪರಿಹರಿಸಿ - ಆ ತತ್ತ್ವಗಳಿಗೆ ವಿರುದ್ಧವಾದ ವಾದಗಳನ್ನು ಖಂಡಿಸಿ ನಿರ್ಭಯರಾಗಿ ವೈಷ್ಣವ ಸಿದ್ಧಾಂತಗಳನ್ನು ಸ್ಥಾಪಿಸಿದರು. 

ಶ್ರೀ ಚತುರ್ಮುಖ ಬ್ರಹ್ಮದೇವರಿಂದ ಶ್ರೀಮದಾನಂದತೀರ್ಥರ ವರೆಗಿನ ಪರಂಪರೆಯ ವಿವರವನ್ನು ಶ್ರೀ ನಾರಾಯಣ ಪಂಡಿತಾಚಾರ್ಯ ವಿರಚಿತ " ಮಣಿಮಂಜರಿ " ಗ್ರಂಥದಿಂದ ತಿಳಿಯಬಹುದು. 

ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಉಪದೇಶ ಮಾಡಿರುವುದೂ ಈ ಸಿದ್ಧಾಂತವನ್ನೇ !

ಉಪದಿಷ್ಟ ತತ್ತ್ವಜ್ಞಾನದ ಪರಂಪರೆಯ ಮಹತ್ವವನ್ನು ನಿರೂಪಿಸುತ್ತಾ - ಸಿದ್ಧಾಂತದ ಪ್ರಾಮಾಣ್ಯಕ್ಕೆ ಪರಂಪರೆಯು ಮುಖ್ಯ ಹೇತುವೆಂಬುದನ್ನು ತಿಳಿಸಿ - ತನ್ನ ಉಪದೇಶಕ್ಕೆ ಭಿನ್ನ ಪ್ರಕಾರದ ಮತ್ತೊಂದು ಪರಂಪರೆಯನ್ನು ತೋರಿಸಿದ್ದಾನೆ. 

ಇಮಂ ವಿವಸ್ವತೇ ಯೋಗಂ 

ಪ್ರೋಕ್ತವಾನಹಮವ್ಯಯಂ ।

ವಿವಸ್ವಾನ್ಮನವೇ ಪ್ರಾಹ 

ಮನುರಿಕ್ಷ್ವಾಕವೇ ಬ್ರವೀತ್ ।।

ಏವಂ ಪರಂಪರಾಂ ಪ್ರಾಪ್ತಮಿಹಂ 

ರಾಜರ್ಷಿಯೋವಿದುಃ ।

ಸಕಾಲೇನೇಹ  ಮಹತಾಯೋಗೋ

ನಷ್ಟ: ಪರಂತಪಃ ।।   

ಸ ಏವಾಯಂ ಮಯಾ ತೇದ್ಯ 

ಯೋಗ: ಪ್ರೋಕ್ತ: ಪುರಾತನಃ ।

ಭಕ್ತೋಸಿ ಮೇ ಸುಖಾಚೇತಿ 

ರಹಸ್ಯ೦ ಹ್ಯೇತದುತ್ತಮಮ್ ।।

ಶ್ರೀ ಕೃಷ್ಣ ಪರಮಾತ್ಮನು ಹೇಳುತ್ತಾನೆ..... 

ಪರಮಾತ್ಮನ ಪ್ರಾಪ್ತಿಗೆ ಪ್ರಧಾನ ಸಾಧನವಾದ ನಿವೃತ್ತ ಕರ್ಮದ ಲಕ್ಷಣದ ಯೋಗವೆಂದು ಕರೆಯಲ್ಪಡುವ ಜ್ಞಾನೋಪಾಯವನ್ನು ನಾನು ಮೊದಲಿಗೆ ಸೂರ್ಯನಿಗೆ ಉಪದೇಶಿಸಿದೆನು. 

ಸೂರ್ಯನು ತನ್ನ ಮಗನಾದ [ ಶ್ರಾದ್ಧದೇವ ] ಮನುವಿಗೆ ಆ ಯೋಗವನ್ನು ಉಪದೇಶಿಸಿದನು. 

ಮನುವು ಇಕ್ಷ್ವಾಕು [ ತನ್ನ ಮಗ ] ವಿಗೆ ಉಪದೇಶಿಸಿದನು. 

ಇಕ್ಷ್ವಾಕುವಿನಿಂದ ಪರಂಪರೆಯಿಂದ ಈ ಜ್ಞಾನವು ರಾಜರ್ಷಿಗಳಿಗೆ ಪ್ರಾಪ್ತವಾಯಿತು. 

ಮಹತ್ತರವಾದ ಕಾಲವು ಗತಿಸಿ - ಈ ಯೋಗ ಜ್ಞಾನವು ನಷ್ಟವಾಯಿತು. 

ನೀನು ನನ್ನ ಭಕ್ತನೂ - ಸಖನೂ ಆಗಿರುವುದರಿಂದ ಅನಾದಿಯಿಂದ ಈ ರಹಸ್ಯವನ್ನೇ ಆದರದಿಂದ ಉಪದೇಶಿಸಿರುವೆನು. 

ಗೀತೋಪದೇಶವೇ ವೈಷ್ಣವ ಸಿದ್ಧಾಂತವೆಂಬುದನ್ನು ಶ್ರೀಮದಾಚಾರ್ಯರು ತಮ್ಮ " ಗೀತಾಭಾಷ್ಯ " ದಲ್ಲಿ ಪ್ರತಿಪಾದಿಸಿದ್ದಾರೆ. 

ಈ ವೈಷ್ಣವ ಸಿದ್ಧಾಂತ ತತ್ತ್ವಗಳನ್ನು ಸಂಗ್ರಹಿಸಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಪ್ರಸಿದ್ಧವಾದ ಈ ಮುಂದಿನ ಶ್ಲೋಕದಲ್ಲಿ ನಿರೂಪಿಸಿರುವರು. 

ಶ್ರೀಮನ್ಮಧ್ವಮತೇ ಹರಿಃ ಪರತರಃ । ಸತ್ಯಂ ಜಗತ್ತತ್ತ್ವತೋ ಭೇದೋ ಜೀವಗಣಾ: । ಹರೇರನುಚರಾ ನೀಚೋಚ್ಛ ಭಾವಂ ಗತಾಃ । ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ । ಹ್ಯಕ್ಷಾದಿ ತ್ರಿತಯಂ ಪ್ರಮಾಣಮಖಿಲಾಮ್ನಾಯೈಕ ವೇದ್ಯೋ ಹರಿಃ ।।

ಈ ಶ್ಲೋಕದ ಭಾವಾರ್ಥ : -

1. ಶ್ರೀ ಹರಿಯೇ ಸರ್ವೋತ್ತಮ 

2. ಜಗತ್ತು ಸತ್ಯ 

3. ಜೀವ ಗಣಗಳು ಶ್ರೀ ಹರಿಯಿಂದ ಪರಸ್ಪರ ಭಿನ್ನವಾದವುಗಳು 

4. ವಿಷ್ಣುವಿನ ಭೃತ್ಯರು [ ಅನುಚರರು ]

5. ಜೀವರಲ್ಲಿ ಪರಸ್ಪರ ತಾರತಮ್ಯವಿದೆ 

6. ಸ್ವಸ್ವರೂಪಾನಂದವಾದ ಅವೀರ್ಭಾವವೇ ಮುಕ್ತಿ 

7. ಶುದ್ಧವಾದ ಭಕ್ತಿಯೇ ಮುಕ್ತಿಗೆ ಕಾರಣವು 

8. ಪ್ರತ್ಯಕ್ಷ - ಅನುಮಾನ - ಆಗಮವೆಂಬ ಮೂರೇ ಪ್ರಮಾಣಗಳು 

9. ಶ್ರೀ ಹರಿಯೇ ಅನಂತ ವೇದ ಮುಖ್ಯ ಪ್ರತಿಪಾದ್ಯನೂ - ಸರ್ವೋತ್ತಮನೂ - ವೇದೈಕಗಮ್ಯನು - ವೇದಗಳಿಂದಲೇ ತಿಳಿಯಲ್ಪಡತಕ್ಕವನು. 

ಈ ನವ [ 9 ] ಪ್ರಮೇಯಗಳು ವೈಷ್ಣವ ಸಿದ್ಧಾಂತದ ನವರತ್ನಗಳಂತಿವೆ. 

" ಶ್ರೀ ಕನಕದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ " ಶ್ರೀ ಮಧ್ವಾಚಾರ್ಯರ " ಸ್ತೋತ್ರ ಪದ "

ರಾಗ : ಭೈರವಿ  ತಾಳ : ಛಾಪು 

ಅಂಧಂ ತಮಸ್ಸು ಇನ್ಯಾರಿಗೆ । ಗೋ ।

ವಿಂದನ ನಿಂದಿಸುವರಿಗೆ ।। ಪಲ್ಲವಿ ।।

ಸಂದೇಹವಿಲ್ಲಾ ಯೆಂದೆಂದಿಗೆ । ವಾಯು ।

ನಂದನನ ನಿಂದಿಸುವರಿಗೆ ।। ಅ ಪ ।।

ಮಾತು ಮಾತಿಗೆ ಹರಿಯ ನಿಂದಿಸಿ । ಸ ।

ರ್ವೋತ್ತಮ ಶಿವನೆಂದು ವಂದಿಸಿ ।

ಧಾತು ಗ್ರಂಥಗಳೆಲ್ಲ ವೋಡಿಸಿ । ವೇ ।

ದಾಂತ ಪ್ರಮಾಣಗಳ್ಹಾರಿಸಿ ।।

ಸೋತು ಸಂಕಟ ಪಟ್ಟು ।

ಘಾತ ಕೊರಳೋಳಿಟ್ಟು ।

ನೀತಿ ಹೇಳುವ ಕೆಟ್ಟ ।

ಜ್ಯಾತಿಗಳಿಗಲ್ಲದೆ ।। ಚರಣ ।।

ಮೂಲಾವತಾರಕ್ಕೆ ಭೇದವ -

ಮುಖ್ಯ ಪಂಡಿತ ।

ರೊಳಗೆ ವಿವಾದವ ।

ಲೀಲಾವದೃಶ್ಯವ -

ತೋರುವ ಮ್ಯಾಲೆ ।।

ಲೀಲ ಭಂಗರಿಗೆದೆ ಹಾರುವ ।

ಮೂಲ ಮೂರುತಿ । ಕುಂತಿ ।

ಬಾಲನ್ನ ನೆನೆಯಾದ ।

ಶೀಲಗೆಟ್ಟು । ದುಃ ।

ಶೀಲರಿಗಲ್ಲದೆ ।। ಚರಣ ।।

ವ್ಯಾಸರ ಮಾತುಗಳಾಡುತ್ತಾ । ವಿ ।

ಶ್ವಾಸ ಘಾತಕತನ ಮಾಡುತ್ತಾ ।

ದೋಷವೆಂದರೆ ನೋಡಿಕೊಳ್ಳದೆ । ಸಂ ।।

ತೋಷವೆಂದು ತಾ ಬಾಳದೆ ।

ಶೇಷಶಯನ ಆದಿಕೇಶವರಾಯನ ।

ದಾಸರಾಗದೆ 

ಮಧ್ವ ದ್ವೇಷಿಗಳಿಗಲ್ಲದೆ ।। ಚರಣ ।।

ಈ ಮೇಲ್ಕಂಡ ಪದದಲ್ಲಿ - " ಮಧ್ವ ದ್ವೇಷಿಗಳಿಗೆ ಅಂಧಂ ತಮಸ್ಸು ತಪ್ಪಿದ್ದಲ್ಲ ಎಂದು ಶ್ರೀ ಯಮಾಂಶ ಸಂಭೂತರಾದ ಶ್ರೀ ಕನಕದಾಸರು ಖಚಿತ ಪಡಿಸಿದ್ದಾರೆ.

******

" ಶ್ರೀ ಹರುಷ ಮುನಿ - 14 "

" ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ - ಶ್ರೀ ರಾಯರ ಮಠ -  ಮಂತ್ರಾಲಯ " 

" ಬೊಮ್ಮನ ಸಂತತಿಯಿದು ಪುಸಿಯಲ್ಲವೋ ಸತ್ಯಾ ಭಜಿಸಿರಿ ನಿತ್ಯಾ "

" ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಮೂಲ ಪೀಠದ ಪರಿಶುದ್ಧವಾದ ಶ್ರೀ ರಾಯರ ಮಠದ ಪೀಳಿಗೆ - ಒಂದು ಪಕ್ಷಿ ನೋಟ "

" ಶ್ರೀ ವಾದಿರಾಜ ಗುರುಸಾರ್ವಭೌಮರು " ಏಕಾದಶೀ ನಿರ್ಣಯದಲ್ಲಿ "...

ಲಕ್ಷ್ಮೀನಾರಾಯಣಮುನೇ 

ವ್ಯಾಸತೀರ್ಥಾರ್ಯಯೋಗಿನಃ ।

ವಿಬುಧೇಂದ್ರಮುನಿರ್ವಂಶೋ 

ಜಯತೀರ್ಥಾದಿರೇವ ಹಿ ।।

ಶ್ರೀ ಹಂಸನಾಮಕ ಪರಮಾತ್ಮ             

ಶ್ರೀ ಚತುರ್ಮುಖ ಬ್ರಹ್ಮದೇವರು             

। 

ಸನಕಾದಿಗಳು ( ಬ್ರಹ್ಮ ಮಾನಸ ಪುತ್ರರು )            

ದುರ್ವಾಸತೀರ್ಥರು             

ಜ್ಞಾನನಿಧಿತೀರ್ಥರು ( ಕ್ರಿ ಶ 838 - 888 )            

ಇಂದ್ರವಾಹನತೀರ್ಥರು ( ಕ್ರಿ ಶ 888 - 938 )            

ಕೈವಲ್ಯತೀರ್ಥರು ( ಕ್ರಿ ಶ 938 - 988 )            

ಜ್ಞಾನೇಶತೀರ್ಥರು ( ಕ್ರಿ ಶ 988 - 1038 )            

|

ಪರತೀರ್ಥರು ( ಕ್ರಿ ಶ 1038 - 1088 )            

ಸತ್ಯಪ್ರಜ್ಞತೀರ್ಥರು ( ಕ್ರಿ ಶ 1088 - 1138 )            

|

ಪ್ರಾಜ್ಞತೀರ್ಥರು ( ಕ್ರಿ ಶ 1138 - 1188 )            

|

ಶ್ರೀ ಅಚ್ಯುತಪ್ರೇಕ್ಷಾಚಾರ್ಯರು ( ಕ್ರಿ ಶ 1188 - 1238 ) 

( ಶ್ರೀ ಭೀಮನಕಟ್ಟೆ ಮಠ )

|

ಈ ವಿಷಯವನ್ನು ಮರುದಂಶ ಶ್ರೀ ಪ್ರಾಣೇಶದಾಸರು ಖಚಿತ ಪಡಿಸಿದ್ದಾರೆ.

( ಶ್ರೀ ಚತುರ್ಮುಖ ಬ್ರಹ್ಮದೆವರಿಂದ ಶ್ರೀಮದಾಚಾರ್ಯರ ವರೆಗೆ )

ನಾಭಿ ಸಂಭವ । ಸಂತ ।

ತೀ ಭಕ್ತಿಂದೊರ್ಣಿಸೂವೆ ।

ಈ ಭವ ಶರಧೀ ತ್ವರದಿಂದ ಕೋಲೆ ।

ಈ ಭವ ಶರಧೀ ತ್ವರದಿಂದ -

ಕೂಡಿಸಲು ಕೋಲೆ ।। ಪಲ್ಲವಿ ।।

ವಿಧಿಜಾತ ಸನಕಾದಿ 

ತದನಂತರಾ ದೂರ್ವಾಸ ।

ಅದರಹಿಂದೆ ಜ್ಞಾನ 

ನಿಧಿಗಳ ಕೋಲೆ ।   

ಅದರಹಿಂದೆ ಜ್ಞಾನ 

ನಿಧಿಯೂ ಗರುಡವಾಹನ ।

ಬುಧರೂ ಕೈವಲ್ಯ 

ತೀರ್ಥರೂ ಕೋಲೆ ।। ಚರಣ ।।

ಜ್ಞಾನೇಶ ಪರತೀರ್ಥ 

ಮೌನೀಶ ಸತ್ಯ ಪ್ರಜ್ಞಾ ।

ದೀನ ವತ್ಸಲರೂ 

ಪ್ರಾಜ್ಞತೀರ್ಥಾ ಕೋಲೆ ।

ದೀನ ವತ್ಸಲರೂ ಪ್ರಾಜ್ಞಾ 

ಸೂತಾ ಪೋರಾಜ ।

ಜ್ಞಾನಿ ಅಚ್ಯುತಪ್ರೇಕ್ಷರೂ 

ಕೋಲೆ  ।। ಚರಣ ।।

ಕ್ಷಿತಿಯೊಳಗೆ ದುರ್ಮತ 

ವತಿಶಯವಾದವೆಂದು ।

ಸ್ತುತಿಸಲು ಸುರರು 

ಮೊರೆ ಕೇಳಿ ಕೋಲೆ ।

ಸ್ತುತಿಸಲು ಸುರರು 

ಮೊರೆ ಕೇಳಿ ಪಾಲಿಸಿದಾ ।

ಯತಿ ಶಿರೋಮಣಿಯ 

ಬಳಗೊಂಬೆ ಕೋಲೆ  ।। ಚರಣ ।।

ಹರಿ ಸರ್ವೋತ್ತಮನಲ್ಲ 

ಬರಿದೆ ವಿಶ್ವವೆಲ್ಲ ।

ಎರಡಿಲ್ಲವೆಂದು 

ಪೇಳೋರು ಕೊಲೆ ।

ಎರಡಿಲ್ಲವೆಂದು ಪೇಳ್ವಾ 

ಮಾಯ್ಗಳ ಗೆದ್ದಾ ।

ಗುರು ಮಧ್ವ ಮುನಿಗೆ 

ನಾ ಶರಣೆಂಬೆ ಕೋಲೆ ।। ಚರಣ ।।

ಮೂರು ದೇವರು ಸಮ 

ಆರೂ ಮತಾಗಳೆಂಬ ।

ಪೋರಾ ವಾದಿಗಳಾ 

ನಯದಿಂದ ಸೋಲಿಸಿದ ।

ಪೋರಾ ವಾದಿಗಳಾ 

ನಯದಿಂದ ಸೋಲಿಸಿದ ।

ಭಾರತೀ ಪತಿಯ ಬಳಗೊಬೆ 

ಕೋಲೆ ।। ಚರಣ ।।

ಒಂದು ಇಲ್ಲಾವೋ ಎಂಬೋ 

ಮಂದಮತಿಯ ಮತ ।

ಒಂದೇ ಮಾತಿನಲ್ಲಿ 

ಗೆಲಿದಾರು ಕೋಲೆ ।

ಒಂದೇ ಮಾತಿನಲ್ಲಿ 

ಗೆಲಿದಂಥಾ । ಶ್ರೀಮದಾ ।

ನಂದ ತೀರ್ಥರನಾ 

ಬಳಗೊಂಬೆ ಕೋಲೆ ।। ಚರಣ ।।

ನಾನಾ ದೇವರು ಎಂಬಾ 

ಹೀನ ಮತಗಳೆಲ್ಲ ।

ಜಾಣೀಕೆಯಲ್ಲಿ 

ಗೆಲಿದಾರು ಕೋಲೆ ।

ಜಾಣೀಕೆಯಲ್ಲಿ 

ಗೆಲಿದಂಥಾ ಕುಲಗುರು ।

ಪ್ರಾಣದೇವರಿಗೆ 

ಶರಣೆಂಬೆ ಕೋಲೆ ।। ಚರಣ ।।

ಇಲ್ಲಿ ಮಾತ್ರ ಭೇದ 

ಅಲ್ಲಿ ಒಂದೆಂಬುವ ।

ಖುಲ್ಲಾರನೆಲ್ಲ 

ಮುರಿದಾರು ಕೋಲೆ । 

ಖುಲ್ಲಾರನೆಲ್ಲ 

ಮುರಿದ ಸದ್ಗುರು । ಪಾದ ।

ಪಲ್ಲವಗಳಿಗೆ ಶರಣೆಂಬೆ 

ಕೋಲೆ ।। ಚರಣ ।।

ತನುವೆ ನಾನೆಂಬುವ 

ಭಣಗು ಮತಗಳೆಲ್ಲ ।

ವಿನಯದಿಂದಲಿ 

ಗೆಲಿದರು ಕೋಲೆ ।

ವಿನಯದಿಂದಲಿ 

ಗೆಲಿದಂಥಾ । ಶ್ರೀಮಧ್ವ ।

ಮುನಿಯ ಪಾದಗಳ 

ಸ್ಮರಿಸೂವೆ ಕೋಲೆ          ।। ಚರಣ ।।

ಇಪ್ಪತ್ತೊಂದು ಕುಭಾಷ್ಯ 

ತಪ್ಪಾನೆ ಸೋಲಿಸಿದ ।

ಸರ್ಪಶಯನನ 

ಒಲಿಸೀದ ಕೋಲೆ । 

ಸರ್ಪಶಯನನ 

ಒಲಿಸೀದ ಗುರುಗಳ ।

ತಪ್ಪದೆ ನೆನೆವೇನನ-

ನುದಿನ ಕೋಲೆ ।। ಚರಣ ।।

ಈತನ ಮಹಿಮೀಯ 

ಭೂತನಾತನರಿಯ ।

ನಾ ತುತಿಸುವೆನೇ 

ಕಡೆ ಗಂಡು ಕೋಲೆ ।

ನಾ ತುತಿಸುವೆನೇ 

ಕಡೆ ಗಂಡು ಮರುತನ ।

ಮಾತು ಮಾತಿಗೆ 

ಸ್ಮರಿಸಿರೋ ಕೊಲೆ ।। ಚರಣ ।।

ಸಾರುವ ಕರ್ಮವ ಮಾಡೆ 

ಮರುತಾಂತರ್ಗತ ನೆಂದು ।

ಹರಿಗರ್ಪಿಸದಲೆ 

ಮುದದಿಂದ ಕೋಲೆ ।

ಹರಿಗರ್ಪಿಸದಲೆ 

ಮುದದಿಂದಲಿರುವಾರು ।

ನಿರಯ ಭಾಗಿಗಳು 

ತಿಳಿವುದು ಕೋಲೆ ।। ಚರಣ ।।

ಈ ನಮ್ಮ ಗುರು ಮೆಚ್ಚಾದೇನೂ 

ಸಾಧನ ಮಾಡಿ ।

ಪ್ರಾಣೇಶವಿಠ್ಠಲ-

ನೊಲಿಸೋರಾ ಕೋಲೆ ।

ಪ್ರಾಣೇಶವಿಠ್ಠಲ-

ನೊಲಿಸವಂಥ ಜಾಣರ ।

ನಾನೆಲ್ಲಿ ಕಾಣೆ ಜಗದೊಳು 

ಕೋಲೆ ।। ಚರಣ ।।

*******

" ಶ್ರೀ ಹರುಷ ಮುನಿ - 14/1 "

ಗುರುಗಳನುದಿನ ನೆನೆವೆ ನಾ ।

ದುರಿತ ದಟ್ಟಳಿ ಸಾರಿ 

ಬಂದೀತಿನ್ನೇನಾ ।। ಪಲ್ಲವಿ ।।

" ಶ್ರೀಮದಾನಂದತೀರ್ಥರು  ( ಕ್ರಿ ಶ 1238 - 1317 )  "

ಪಾರ್ಥ ಸೇವಾರ್ಥ 

ಖಳರ ಕೊಂದು ।

ಕೀರ್ತಿ ಪಡೆದ ಸುಖತೀರ್ಥ-

ರೆಂತೆಂಬ ।। ಚರಣ ।।            

" ಶ್ರೀ ಪದ್ಮನಾಭತೀರ್ಥರು ( ಕ್ರಿ. ಶ. 1317 - 1324 ) 

ನಾ ಪಾಲೀಸೆಂದೆ-

ನಲಾಪತ್ತು ಬಿಡಿಸುವ ।

ಮಾಪತಿ ನಿಜದೂತ ಶ್ರೀ -

ಪದ್ಮನಾಭತೀರ್ಥಾ ।। ಚರಣ ।।            

" ಶ್ರೀ ನರಹರಿತೀರ್ಥರು ( ಕ್ರಿ. ಶ. 1324 - 1333 ) "

ಕರಿಪತಿ ಬಳಿಬಂದ 

ಧರಿಜ ಪತಿಯ ತಂದು ।

ಗುರುಗಳಗಿತ್ತೀಹ 

ನರಹರಿತೀರ್ಥಾ ।। ಚರಣ ।।            

" ಶ್ರೀ ಮಾಧವತೀರ್ಥರು ( ಕ್ರಿ. ಶ. 1333 - 1350 ) "

ಬಾದರಾಯಣ ಪಾದ 

ಜಲಜ ಭೃಂಗ ।

ಭೂದೇವ ವಂದಿತ 

ಶ್ರೀ ಮಾಧವತೀರ್ಥಾ ।। ಚರಣ ।।            

" ಶ್ರೀ ಅಕ್ಷೋಭ್ಯತೀರ್ಥರು ( ಕ್ರಿ. ಶ. 1350 - 1365 ) 

ಇಕ್ಷುಚಾಪನ ಮಾಳ್ಪ 

ಲಕ್ಷ್ಮೀ ಇಲ್ಲದೆ ಬಲು ।

ಪೇಕ್ಷೆ ಮಾಡಿದ 

ಅಕ್ಷೋಭ್ಯ ಮುನಿಪಾ ।। ಚರಣ ।।            

" ಶ್ರೀ ಜಯತೀರ್ಥರು ( ಕ್ರಿ. ಶ. 1365 - 1388 ) "

ದಯ ಮಾಡಿದರೆಂದು 

ವಿನಯದಿಂದ ಭಜಿಪರ ।

ಬಯಕೀ ಪೂರೈಸುವ 

ಜಯತೀರ್ಥರೆಂಬ ।। ಚರಣ ।।            

" ಶ್ರೀ ವಿದ್ಯಾಧಿರಾಜ ತೀರ್ಥರು ( ಕ್ರಿ. ಶ. 1388 - 1392 ) "

ಅದ್ವೈತ ಗಜ ಸಿಂಹ 

ಮಧ್ವ ಮತೋದ್ಭವ ।

ಸದ್ವೈಷ್ಣವ ಪ್ರಿಯ 

ವಿದ್ಯಾಧಿರಾಜ ।। ಚರಣ ।।            

" ಶ್ರೀ ಕವೀಂದ್ರತೀರ್ಥರು ( ಕ್ರಿ. ಶ. 1392 - 1398 ) "

ಸಂದೇಹವಿಲ್ಲದೆ 

ವಂದಿಪ ಜನರಾಸೆ ।

ತಂದುಕೊಡುವ ದಯಾಸಿಂಧು 

ಕವೀಂದ್ರಾ ।। ಚರಣ ।।            

" ಶ್ರೀ ವಾಗೀಶತೀರ್ಥರು ( ಕ್ರಿ. ಶ. 1398 - 1406 ) "

ರಾಗ ವರ್ಜಿತ 

ಭಾಗವತರ ಪಾಲ ।

ಯೋಗಿ ಶಿರೋಮಣಿ 

ವಾಗೀಶ ಮುನಿಪಾ ।। ಚರಣ ।।            

" ಶ್ರೀ ರಾಮಚಂದ್ರತೀರ್ಥರು ( ಕ್ರಿ. ಶ. 1406 - 1435 ) "

ಸಾರಿದ ಭಕುತರ 

ಘೋರಿಪ ಅಘಗಳ ।

ದೂರ ಓಡಿಸುತಿಪ್ಪ 

ಶ್ರೀ ರಾಮಚಂದ್ರ ।। ಚರಣ ।।            

" ಶ್ರೀ ವಿಬುಧೇಂದ್ರತೀರ್ಥರು ( ಕ್ರಿ. ಶ. 1435 - 1490 ) "

ಕು ಭವದೊಳಿರುವಾರ 

ಸೊಬಗಿನಿಂದಲಿ ನೋಡಿ ।

ಅಭಯ ಕೊಡುತಿಪ್ಪ 

ವಿಬುಧೇಂದ್ರತೀರ್ಥಾ ।। ಚರಣ ।।            

" ಶ್ರೀ ಜಿತಾಮಿತ್ರತೀರ್ಥರು ( ಕ್ರಿ. ಶ. 1490 - 1492 ) "

ಭ್ರಾಮಕ ಜನ ಶಿಕ್ಷ 

ಧೀಮಂತ ಜನ ಪಕ್ಷ ।

ಹೇಮ ವರಣಾಂಗ 

ಜಿತಾಮಿತ್ರ ಮುನಿಪಾ ।। ಚರಣ ।।            

" ಶ್ರೀ ರಘುನಂದನತೀರ್ಥರು ( ಕ್ರಿ. ಶ. 1492 - 1504 ) "

ಬಗೆ ಬಗೆಯ ಭಜಿಸಲು 

ಇಗಡ ಜನರೊಲ್ಲ ।

ಬಗಿವಾನು ಸುಜನಾರ 

ರಘುನಂದನಾರ್ಯ ।। ಚರಣ ।।            

" ಶ್ರೀ ಸುರೇಂದ್ರತೀರ್ಥರು ( ಕ್ರಿ. ಶ. 1504 - 1575 ) "

ಪೊಂದಿದವರ ನೋಯ-

ದಂದದಿ ಸಲಹುವ ।

ಎಂದೆಂದು ಬಿಡದ ಸು-

ರೇಂದ್ರಾಖ್ಯ ಮುನಿಪಾ ।। ಚರಣ ।।           

 ।

" ಶ್ರೀ ವಿಜಯೀಂದ್ರತೀರ್ಥರು ( ಕ್ರಿ. ಶ. 1575 - 1614 ) "

ನಿಜ ಭಕ್ತಿಯಲಿ ಪಾದ 

ಭಜಿಸೂವ ಅಗಣಿತ ।

ಸುಜನರ ಸಲಹುವ 

ವಿಜಯೀಂದ್ರ ಮುನಿಪಾ ।। ಚರಣ ।।            

" ಶ್ರೀ ಸುಧೀಂದ್ರತೀರ್ಥರು ( ಕ್ರಿ. ಶ. 1614 - 1623 ) "

ವೀಂದ್ರ ವಾಹನ ಯಾದ-

ವೇಂದ್ರಾ೦ಘ್ರಿ ಭಜಿಸೂವ ।

ಸಾಂದ್ರ ಭಕ್ತಿಯಲಿ 

ಸುಧೀಂದ್ರಾಖ್ಯ ಮುನಿಪಾ ।। ಚರಣ ।।            

" ಶ್ರೀ ರಾಘವೇಂದ್ರತೀರ್ಥರು ( ಕ್ರಿ. ಶ. 1623 - 1671 ) "

ಧಾರುಣಿಯೊಳಗತಿ 

ಚಾರು ವೃಂದಾವನ ।

ದೀ ರಾಜಿಸುತಿಪ್ಪ 

ರಾಘವೇಂದ್ರಾ ।। ಚರಣ ।।

*****

" ಶ್ರೀ ಹರುಷ ಮುನಿ - 14/2 "

" ಶ್ರೀ ಯೋಗೀಂದ್ರತೀರ್ಥರು ( ಕ್ರಿ. ಶ. 1671 - 1688 ) "

ಶ್ಲಾಘೀನ ಗುಣನಿಧಿ 

ಮಾಗಧ ರಿಪು ದಾಸ ।

ರಾಘವೇಂದ್ರ ಪುತ್ರ 

ಯೋಗೀಂದ್ರತೀರ್ಥಾ ।। ಚರಣ ।।            

" ಶ್ರೀ ಸೂರೀಂದ್ರತೀರ್ಥರು ( ಕ್ರಿ. ಶ. 1688 - 1692 ) "

ವೈರಾಗ್ಯ ಗುಣದಿಂದ 

ಮಾರಾರಿಯಂದದಿ ।

ತೀರುವರನುದಿನ 

ಸೂರೀಂದ್ರತೀರ್ಥಾ ।। ಚರಣ ।।            

" ಶ್ರೀ ಸುಮತೀಂದ್ರತೀರ್ಥರು ( ಕ್ರಿ. ಶ. 1692 - 1725 ) "

ಕುಮತವೆಂಬಗಣೀತ 

ತಿಮಿರ ಓಡಿಸುವಲ್ಲಿ ।

ಕಮಲಾಪ್ತನಂತೀಹ 

ಸುಮತೀಂದ್ರತೀರ್ಥಾ ।। ಚರಣ ।।            

" ಶ್ರೀ ಉಪೇಂದ್ರತೀರ್ಥರು ( ಕ್ರಿ. ಶ. 1725 - 1728 ) "

ಸಲ್ಲಾದ ಸುಖಗಳ 

ನೆಲ್ಲಾವು ಜರಿದು । ಶ್ರೀ ।

ನಲ್ಲಾನ ಭಜಿಸಲು 

ಬಲ್ಲ ಉಪೇಂದ್ರತೀರ್ಥಾ ।। ಚರಣ ।।            

" ಶ್ರೀ ವಾದೀಂದ್ರತೀರ್ಥರು ( ಕ್ರಿ. ಶ. 1728 - 1750 ) "

ಮೋದಮುನಿ ಮತ 

ಮಹೋದಧಿ ಚಂದ್ರ । ವಿ ।

ದ್ಯಾದಿ ದಾನಾಸಕ್ತ 

ವಾದೀಂದ್ರತೀರ್ಥಾ ।। ಚರಣ ।।            

" ಶ್ರೀ ವಸುಧೇಂದ್ರತೀರ್ಥರು ( ಕ್ರಿ. ಶ. 1750 - 1761 ) "

ಬಿಸಜನಾಭನ ದೂತ 

ವಸುಧಿಯೊಳಗೆ ಖ್ಯಾತ ।

ಕಿಸಲಯೋಪಮ ಪಾದ 

ವಸುಧೇಂದ್ರತೀರ್ಥಾ ।। ಚರಣ ।।           

 ।

" ಶ್ರೀ ವರದೇಂದ್ರತೀರ್ಥರು ( ಕ್ರಿ. ಶ. 1761 - 1785 ) "

ಪರ ಮತೋರಗ ವೀಪ 

ಕರುಣಿ ವಿಗತ ಕೋಪ ।

ವರ ವೇದ ಸುಕಲಾಪ 

ವರದೇಂದ್ರ ಭೂಪ ।। ಚರಣ ।।

" ಶ್ರೀ ಧೀರೇಂದ್ರತೀರ್ಥರು ( ಕ್ರಿ. ಶ. 1775 - 1785 ) "

ತ್ವರದಿ ಭಕುತರ 

ದುರಿತವ ತರಿದತಿ ।

ತ್ವರದಿ ಪಾಲಿಪಾ 

ಧೀರೇಂದ್ರತೀರ್ಥಾ ।। ಚರಣ ।।

" ಶ್ರೀ ಭುವನೇಂದ್ರತೀರ್ಥರು ( ಕ್ರಿ. ಶ. 1785 - 1799 )

ಸುವಿವೇಕಿಗಳಿಗಿಷ್ಟ ತವಕದಿಂದಲಿ ಈವ ।

ಕವಿಭಿರೀಡಿತ ಪಾದ ಭುವನೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಬೋಧೇಂದ್ರತೀರ್ಥರು ( ಕ್ರಿ. ಶ. 1799 - 1835 ) "

ಶಬರಿ ವಲ್ಲಭನಂಘ್ರಿ 

ಅಬುಜಾಳಿ ಸೂರ್ಯ । ಸ ।

ನ್ನಿಭ ವಾದಿ ಗಜ ಸಿಂಹ 

ಸುಬೋಧೇಂದ್ರತೀರ್ಥಾ ।। ಚರಣ ।।            

ಪ್ರಾಣೇಶವಿಠ್ಠಲನ 

ಕಾಣಬೇಕಾದರೆ ।

ನಮ್ಮ ಗುರುಗಳ 

ಧ್ಯಾನದೊಳಿಹದೂ ।। ಚರಣ ।।            

ಶ್ರೀ ಪ್ರಾಣೇಶದಾಸರು ಶ್ರೀ ರಾಯರ ಮಠದ ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪರಂಪರಾ ಸ್ತೋತ್ರವನ್ನು ಶ್ರೀ ಪರಮಾತ್ಮನಿಂದ ಪ್ರಾರಂಭ ಮಾಡಿ ಶ್ರೀ ಸುಬೋಧೇಂದ್ರತೀರ್ಥರ ವರಗೆ ಸ್ತೋತ್ರ ಮಾಡಿದ್ದರು.

ಶ್ರೀ ಪ್ರಾಣೇಶದಾಸರ ದೌಹಿತ್ರ ಮೊಮ್ಮಕ್ಕಳಾದ ಶ್ರೀ ವರದೇಶವಿಠ್ಠಲರು - ಶ್ರೀ ಸುಬೋಧೇಂದ್ರತೀರ್ಥರಿಂದ ಶ್ರೀ ಸುಶೀಲೇಂದ್ರತೀರ್ಥರ ವರೆಗೆ ಶ್ರೀ ರಾಯರ ಮುಂದುವರೆದ ಪರಂಪರಾ ಯತಿಗಳ ಸ್ತೋತ್ರ ಮಾಡಿದ್ದಾರೆ!!

ರಾಗ : ಪೂರ್ವೀ ತಾಳ : ಅಟ್ಟ

ಯತಿಗಳ ಸಂತತ 

ಸಂಸ್ತುತಿಸುವೆ ।

ಅತಿ ತ್ವರದಲಿ ದು-

ರಿತಗಳ ತರಿವೆ ।। ಪಲ್ಲವಿ ।।

ಮೋದ ತೀರ್ಥಾದಿ ಸು-

ಬೋಧೇಂದ್ರ ಪರಿಯಂತ ।

ಮೋದದಿನ್ದಿವರ 

ಪಾದಕೆ ನಮಿಪೆ ।। ಚರಣ ।।

" ಶ್ರೀ ಸುಜನೇಂದ್ರತೀರ್ಥರು ( ಕ್ರಿ. ಶ. 1807 - 1836 ) "

ಅಜನ ಪಿತನ ಪಾದ 

ಭಜಿಸುವ ಭಕುತರ ।

ನಿಜವಾಗಿ ಪಾಲಿಪ 

ಸುಜನೇಂದ್ರತೀರ್ಥಾ ।। ಚರಣ ।।

" ಶ್ರೀ ಸುಜ್ಞಾನೇಂದ್ರತೀರ್ಥರು ( ಕ್ರಿ. ಶ. 1836 - 1861 ) "

ಆನತು ಜನ ಪಾಪ 

ಕಾನನ ದಹಿಪ । ಕೃ ।

ಶಾಂತನಂತಿಪ್ಪ ಸು-

ಜ್ಞಾನೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಧರ್ಮೇಂದ್ರ ತೀರ್ಥರು ( ಕ್ರಿ. ಶ. 1861 - 1872 ) "

ದುರ್ಮತ ಧ್ವಂಸ 

ಸದ್ಧರ್ಮ ಸಂಸ್ಥಾಪಕ ।

ಕರ್ಮಂದಿವರ 

ಸುಧರ್ಮೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಗುಣೇಂದ್ರತೀರ್ಥರು ( ಕ್ರಿ. ಶ. 1872 - 1884 ) "

ಅಗಣಿತ ಮಹಿಮ ಮೂ-

ಜಗದೊಳು ಪ್ರಖ್ಯಾತ ।

ನಿಗಮಾಗಮಜ್ಞ 

ಸುಗುಣೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಪ್ರಜ್ಞೇಂದ್ರ ತೀರ್ಥರು ( ಕ್ರಿ. ಶ. 1884 - 1903 ) "

ಸುಪ್ರಸಿದ್ಧ ಮುನಿ 

ವಿಪ್ರ ಸಮೂಹವ ।

ಕ್ಷಿಪ್ರದಿ ಪಾಲಿಪ 

ಸುಪ್ರಜ್ಞೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಕೃತೀಂದ್ರ ತೀರ್ಥರು ( ಕ್ರಿ. ಶ. 1903 - 1912 ) "

ದೋಷ ವರ್ಜಿತ ಹರಿ-

ದಾಸ ಜನರ ಪ್ರಿಯ ।

ಶ್ರೀಶ ಪದಾರ್ಚಕ 

ಸುಕೃತೀಂದ್ರತೀರ್ಥಾ ।। ಚರಣ ।।            

" ಶ್ರೀ ಸುಶೀಲೇಂದ್ರತೀರ್ಥರು ( ಕ್ರಿ. ಶ. 1912 - 1926 ) "

ಮೂಲೋಕ ವಿಖ್ಯಾತ 

ಶ್ರೀಲೋಲನಂಘ್ರಿ । ರೇ ।

ಲಾಲಜ ಮಧುಪಾ ಸು-

ಶೀಲೇಂದ್ರ ಮುನಿಪಾ ।। ಚರಣ ।।            

ವರದೇಶವಿಠ್ಠಲನ 

ಪರಿ ಪರಿ ಪೂಜಿಪ ।

ಪರಮಹಂಸ ಪಾದ-

ಕೆರಗಿ ಬಿನ್ನೈಪೆ ।। ಚರಣ ।।

" ಶ್ರೀ ಸುಶೀಲೇಂದ್ರತೀರ್ಥರು ( ಕ್ರಿ ಶ 1912 - 1926 ) "

ನಮೋ ನಮೋ ಗುರು 

ಸುಶೀಲೇಂದ್ರ । ಶ್ರೀ ಸಂ ।

ಯಮಿ ಕುಲೋತ್ತಮ 

ಮಧ್ವ ಸುಮತಾಬ್ಧಿ ಚಂದ್ರಾ ।।            

" ಶ್ರೀ ಸುವ್ರತೀಂದ್ರತೀರ್ಥರು ( ಕ್ರಿ ಶ 1926 - 1933 ) "

ಸಲೆ ಭಕ್ತಿ ವಿರುಕುತಿ ಸುಶಾಂತ್ಯಾದಿ ।

ಹಲವು ಸದ್ಗುಣ ಪ್ರತತಿ ।

ಕಲಿಯೊಳಿಳೆಯೊಳು ಸ್ಥಳವ ಕಾಣದೆ ವಿಧಿ। 

ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ ।।

ಇಳೆಯೊಳಗೆ ಸುವ್ರತೀಂದ್ರತೀರ್ಥರ ।

ಚಲುವ ಹೃದಯ ಸ್ಥಾನ ತೋರಲು ।

ಬಳಿಕ ಸುಗುಣಾವಳಿಗಳಿವರೊಳು ।

ನೆಲಸಿದವು ಇಂಥಾ ಅಲಘು ಮಹಿಮರ ।।  

" ಶ್ರೀ ಸುಯಮೀಂದ್ರತೀರ್ಥರು ( ಕ್ರಿ ಶ 1933 - 1967 ) "

ಗುರು ಸುವ್ರತೀಂದ್ರ ಕರ ।ಸರಿಸಿಜ ಜಾತಾ ಜಗದೊಳಗೆ ಪ್ರಖ್ಯಾತಾ ।ಪರಮೋದಾರ್ಯದಿ ರವಿ ಜನ ।ಮೆರೆಸಿದನ ಧರೆಸುರ ಪಾಲಕನಾ ।।ಕರಜಾನನ ಮಣಿ ತುಳಸಿ । ಸು ।ಸರ ಭೂಷಾ ಕಾಷಾಯವಾಸಾ ।ಹರಿ ಮತ ಸಿಂಧವ ।ಮೆರೆಸುತ ಸಂಚರಿಪ ಜನರುದ್ಧರಿಪಾ ।।            

" ಶ್ರೀ ಸುಜಯೀಂದ್ರತೀರ್ಥರು ( ಕ್ರಿ ಶ 1963 - 1986 ) "

ಶ್ರೀ ಸುಯಮೀಂದ್ರರು ಶೋಭನಕೃತು ಅಬ್ಧದಿ । ಶ್ರೀ ಶುಭ ಶೋಭನ ಜನಕಾಗಲು ಆಶ್ವೀಜ ನಂದಜ । ಭೇದ ತಿಥಿ । ಶ್ರೀ ಶಾಂತಿವಾಸರ ದಿವ್ಯ ತಾರೆಯೊಳು । ತೋಷದಲಿ ಶ್ರೀ ಮುಖದಿಂದ ವಿದ್ವಜ್ಜನರ । ಕ । ರೆಸುತ ಅವರ ಇದಿರಿನೊಳ್ ಭಾಸುರ ಸುಜ್ಞಾನೇಂದ್ರ । ಯತಿಗ ।। ಳ ಸ್ವಪ್ನ ಲಬ್ಧ ಶ್ರೀ ರಾಘವೇಂದ್ರರೊಳು ಭೂಸುರ ತತಿವೇದ । ಘೋಷದ ವಾದ್ಯ ದಿವ್ಯ । ನಾದದೊ । ಳು ಶ್ರೀ ಗರಳಪುರಿಯೊಳು ಲೇಸು ತನದಿ ವೇದಾಂತ ರಾಜ್ಯವ । ಸೋಶಿಲಿಂದ ಪಟ್ಟಾಭಿಷೇಕವ ।ದೋಷ ರಹಿತ ಮುಹೂರ್ತದೊಳುಗೈಯೆ । ದಾಶರಥಿ ಪದ ಪೂಜೆಗೈದರು ।।                 

" ಶ್ರೀ ಸುಶಮೀಂದ್ರತೀರ್ಥರು ( ಕ್ರಿ ಶ 1985 - 2009 ) "

ರಕ್ತಾಕ್ಷಿ ಪಾಲ್ಗುಣದ ಯುಕ್ತ ಬಹುಳ ತ್ರಯೋದಶೀ । ಭಕ್ತಿಲಿ ಗುರು ಹರಿಯ ಪದವ ಭಜಿಸಿ ।ಯುಕ್ತಿಲಿ ಸುಪ್ರಜ್ಞೇಂದ್ರ ಉತ್ತಮಾರ್ಯರ ಕರೆದು ।ಉಕ್ತ ವಿಧಿಯಲಿ ಭವ್ಯ ಯತ್ಯಾಶ್ರಮಿತ್ತವರು ।। ಬಿಚ್ಚಾಲಿ ಅಪ್ಪಣ್ಣಾರ್ಯ ಹೆಚ್ಚಾಗಿ ಸೇವಿಸಿದೆ ।ಸ್ವಚ್ಛ ವರಹಜ ತಟದ ಅಚ್ಛರಾಯರ ಸನ್ನಿಧಿ । ಮೆಚ್ಚಿ ಶ್ರೀ ಸುಶಮೀಂದ್ರರೆಂದುಚ್ಛರಿಸಿ ಜಿತ ಸಖರ । ತಚ್ಛವಿಯೊಳ್ ಬಾಳೆಂದುತ್ಸಹದಿ ಪೇಳ್ದವರು ।।            

" ಶ್ರೀ ಸುಯತೀಂದ್ರತೀರ್ಥರು ( ಕ್ರಿ ಶ 2009 - 2014 ) "

ದೇಶ ದೇಶದಿ ಚರಿಸಿ ಪರಿಮಾಳಾರ್ಯರ ಸ್ತುತಿಸಿ । ವೃಂದಾವನ ಸ್ಥಾಪಿಸಿ ಭಕುತರಿಗೆ ಕರುಣಿಸಿ । ಸುತ ಸುಯತೀಂದ್ರರನು ಕರದಲ್ಲಿ ಸ್ವೀಕರಿಸಿ । ಗುರು ಭೀಮೇಶ ವಿಠ್ಠಲನ ಅನುದಿನಾ ಭಜಿಸಿ ।।            

" ಹಂಸನಾಮಕ ಮೂಲ ಪೀಠದ ಪ್ರಸ್ತುತ ಪೀಠಾಧಿಪತಿಗಳು 

ಶ್ರೀ ಸುಬುಧೇಂದ್ರತೀರ್ಥರು "

" ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 

ಮೇದಿನಿಯೋಳು ಗುರು ಸುಯತೀಂದ್ರರ ಕರದಿ ಉದ್ಭವಿಸಿ । ಮೇದಿನಿ ಜನರಿಗೆ ಮೋದವನೀಯುತ । ಮೋದತೀರ್ಥ ಶಾಸ್ತ್ರದ ಸುಧೆಯ ಪಾನ ಮಾಡಿಸುತ ।। ಮೋದದಿಂದಲಿ ಗುರು ರಾಘವೇಂದ್ರರನು ಪೂಜಿಸುತಾ । ಸು । ಬುಧೇಂದ್ರ ಗುರುವರ್ಯರೇ ಮೂಲರಾಮೋsಭಿನ್ನ ವೇಂಕಟನಾಥನರ್ಚಕರು  ।

*****

" ಶ್ರೀ ಹರುಷ ಮುನಿ  - 15 "

" ಶ್ರೀಮದಾನಂದತೀರ್ಥರ ಸಂದೇಶ "

" ಶ್ರೀ ರಾಘವೇಂದ್ರ ವಿಜಯ ಮಹಾಕಾವ್ಯಮ್ ".....

" ಶ್ರೀಮದಾನಂದತೀರ್ಥರ ಅವತಾರ ತ್ರಯ "

ರಾಮಾವತಾರಸ್ಯ ಹರೆರಾಧತ್ತ

ಸೇವಾಂ ಹನೂಮದ್ವಪುಷಾ ಸಮೀರ: ।

ಭೀಮಾತ್ಮನಾ ಯಾದವಭೂಷಣಸ್ಯ

ಮಧ್ವಾತ್ಮನಾ ವ್ಯಾಸಮುನಿತ್ವಭಾಜ: ।।

ಸರ್ವ ಜೀವೋತ್ತಮರಾದ ಶ್ರೀ ಮುಖ್ಯಪ್ರಾಣದೇವರು ಶ್ರೀ ಹನುಮಂತರಾಗಿ ಅವತರಿಸಿ ತ್ರೇತೆಯಲ್ಲಿ ಶ್ರೀರಾಮಚಂದ್ರ ರೂಪಿಯಾದ ಶ್ರೀ ಹರಿಯ ಸೇವೆಯನ್ನು ಮಾಡಿದರು.

ಅನಂತರ ದ್ವಾಪರದಲ್ಲಿ ಶ್ರೀ ಹರಿಯು ಶ್ರೀ ಕೃಷ್ಣ ಪರಮಾತ್ಮನಾಗಿ ಅವತರಿಸಿದಾಗ ಶ್ರೀ ಭೀಮಸೇನರಾಗಿ ಅವತರಿಸಿ ಶ್ರೀ ಕೃಷ್ಣ ಪರಮಾತ್ಮನನ್ನು ಸೇವಿಸಿದರು.

ಶ್ರೀ ಹರಿಯು ಶ್ರೀ ವೇದವ್ಯಾಸ ಮುನಿಯ ರೂಪದಿಂದ ಅವತರಿಸಿದಾಗ ಈ ಕಲಿಯುಗದಲ್ಲಿ ಶ್ರೀ ಮಧ್ವ ರೂಪದಿಂದ ಶ್ರೀ ವೇದವ್ಯಾಸರ ಶಿಷ್ಯತ್ವವನ್ನು ವಹಿಸಿ ಸಜ್ಜನರಿಗೆ ತತ್ತ್ವಜ್ಞಾನೋಪದೇಶವನ್ನು ಮಾಡಿ ಶ್ರೀ ಹರಿಯ ಸೇವೆಯನ್ನು ಮಾಡಿದರು.

ಹೀಗೆ ಮೂರು ಅವತಾರಗಳಲ್ಲಿಯೂ ಅವಿಚ್ಛಿನ್ನವಾಗಿ ಶ್ರೀ ಹರಿ ಸೇವೆ ಮಾಡಿ ವಿಶ್ವ ಗುರುಗಳಾದ ಶ್ರೀ ಪವಮಾನರು ವಿರಾಜಿಸಿದರು.

" ಶ್ರೀಮದಾನಂದತೀರ್ಥರ ಸಂದೇಶ "

ಶ್ರೀಮದಾಚಾರ್ಯರಿಂದ ಆರಂಭಿಸಿ ಬಂದಿರುವ ಸಂಪ್ರದಾಯ ಕ್ರಮವನ್ನು ಹೇಳುತ್ತಾ ಶ್ರೀ ಮಧ್ವರ ಸಂದೇಶವನ್ನು.....

ಆಭಾಷ್ಯ ಭಾಷ್ಯ೦ ನಿಗಮಾಂತ ಸೂತ್ರ 

ವ್ಯಾಖ್ಯಾತ್ಮಕಂ ಪೂರ್ಣಮತಿರ್ಗುರುರ್ನ: ।

ಸಂಪಾದಯಧ್ವಂ ಮತ ಸಂಪ್ರದಾಯ 

ಸಮೃದ್ಧಿಮಿತ್ಯಾದಿ ದಿಶೇ ಯಾಮೀಶಾನ್ ।।

ವಿಶ್ವ ಗುರುಗಳಾದ ಶ್ರೀ ಪೂರ್ಣಪ್ರಜ್ಞಾಚಾರ್ಯರು ವೇದಾರ್ಥ ನಿರ್ಣಾಯಕವಾದ ಬ್ರಹ್ಮಸೂತ್ರಗಳ ವ್ಯಾಖ್ಯಾನ ರೂಪವಾದ ಬ್ರಹ್ಮಸೂತ್ರಭಾಷ್ಯವನ್ನು ಇನ್ನಿತರ ಗ್ರಂಥಗಳನ್ನು ರಚಿಸಿದರು.

ತಮ್ಮ ಅವತಾರ ಕಾರ್ಯವನ್ನು ಚೆನ್ನಾಗಿ ನಿರ್ವಹಸಿ, ತಾವು ಅಂತರ್ಧಾನ ಹೊಂದುವುದಕ್ಕೆ ಮೊದಲು ತಮ್ಮ ಶಿಷ್ಯರಾದ ಶ್ರೀ ಪದ್ಮನಾಭತೀರ್ಥರೇ ಮೊದಲಾದ ಸಂನ್ಯಾಸಿ ಶ್ರೇಷ್ಠರನ್ನು ಕರೆದು.....

" ಎಲೈ ಶಿಷ್ಯರಾದ ಯತಿಶ್ರೇಷ್ಠರೇ! ನಾವು ಉಪದೇಶಿಸಿದ ಸಿದ್ಧಾಂತವನ್ನು ಶಿಷ್ಯ - ಪ್ರಶಿಷ್ಯೋಪದೇಶ ಪರಂಪರೆಯಿಂದ ಮುಂದುವರೆಸಿ ನಮ್ಮ ಮತ ಸಮೃದ್ಧಿಯನ್ನು ಮುಂದುವರೆಸುತ್ತಾ ಬರಬೇಕು " 

ಯೆಂದು ಅವರಿಗೆ ಆಜ್ಞಾಪಿಸಿದರು.

" ಶ್ರೀಮದಾನಂದತೀರ್ಥರನ್ನು ಕ್ಷೀರ ಸಮುದ್ರ ರೂಪರೆಂದು ವರ್ಣಿಸುತ್ತಾ ಕ್ಷೀರ ಸಮುದ್ರದ ಸಾಮ್ಯವನ್ನು ಹೇಳುತ್ತಾರೆ ".....

ಭಾಷ್ಯಾಮೃತೋತ್ಪಾದಕರೋsನುಭಾಷ್ಯ

ಶ್ರೀಮಾನ್ ಸ ಭಾಷ್ಯಾ೦ತರ ಕಲ್ಪಶಾಖೀ ।

ವ್ಯಾಸಂ ಗುರು೦ ಸಂಶ್ರಯತೇ ಬದರ್ಯಾ೦

ಆನಂದತೀರ್ಥಾಭಿಧದುಗ್ಧಸಿಂಧು: ।।

ಕ್ಷೀರ ಸಮುದ್ರವನ್ನು ದೇವಾಸುರರು ಕಡೆದಾಗ ಅಮೃತವು ಹುಟ್ಟಿತು.

ಶ್ರೀ ಮಹಾಲಕ್ಷ್ಮೀದೇವಿಯರು ಪ್ರಾದುರ್ಭಾವ ಹೊಂದಿದರು.ಕಲ್ಪವೃಕ್ಷ ಕಾಮಧೇನು ಮುಂತಾದವುಗಳು ಹುಟ್ಟಿದವು.

ಅದರಂತೆಯೇ ಶ್ರೀಮದಾಚಾರ್ಯರು...

" ಸೂತ್ರಭಾಷ್ಯ " ವೆಂಬ ಅಮೃತವನ್ನು ಉತ್ಪಾದಿಸಿ - " ಅನುವ್ಯಾಖ್ಯಾನ " ಎಂಬ ಶ್ರೀ ಮಹಾಲಕ್ಷ್ಮೀದೇವಿಯರ ಪ್ರಾದುರ್ಭಾವಗಳಿಗೆ ಸಮಾನವಾದ ಗ್ರಂಥ ರತ್ನಗಳನ್ನು ರಚಿಸಿ " ಕ್ಷೀರ ಸಮುದ್ರದ ಸಾಮ್ಯ " ವನ್ನು ಹೊಂದಿದ್ದಾರೆ.

ಇಂಥಹಾ ಶ್ರೀ ಸರ್ವಜ್ಞಾಚಾಯರು ತಮ್ಮ ಅವತಾರ ಕಾರ್ಯವನ್ನೆಲ್ಲಾ ಮುಗಿಸಿದ ಮೇಲೆ ಮಹಾ ( ಉತ್ತರ ) ಬದರೀ ವಾಸಿಗಳೂ, ತಮ್ಮ ಗುರುಗಳಾದ ಶ್ರೀ ಭಗವನ್ ವೇದವ್ಯಾಸದೇವರನ್ನು ಸೇವಿಸುತ್ತಾ ಬದರಿಯಲ್ಲಿಯೇ ಇದ್ದಾರೆ!!

" ಆದ್ಯ ಹರಿದಾಸರಾದ ಶ್ರೀ ಸೊಬಗುವಿಠ್ಠಲರ ಕಣ್ಣಲ್ಲಿ ಶ್ರೀಮದಾಚಾರ್ಯರು "

ಶ್ರೀಮದಾಚಾರ್ಯರಿಂದ ಪ್ರಾರಂಭವಾದ ಹರಿದಾಸ ಸಾಹಿತ್ಯ ಮತ್ತು ಪ್ರಥಮ ಘಟ್ಟದ ( ಶ್ರೀ ಶ್ರೀಪಾದರಾಜ ಯುಗ ) ಹರಿದಾಸ ಸಾಹಿತ್ಯಕ್ಕೆ ಮಧ್ಯ ಕಾಲದಲ್ಲಿ 60 ಜನ ಹರಿದಾಸರು ಬಂದಿದ್ದಾರೆ. 

ಅವರಲ್ಲಿ ಶ್ರೀ ಸೊಬಗುವಿಠ್ಠಲರು ಒಬ್ಬರು. 

ಅವರು ಶ್ರೀ ವಾಯುದೇವರ ಅವತಾರ ತ್ರಯ ಸ್ತೋತ್ರವನ್ನು ಮಾಡಿದ್ದಾರೆ. 

ಸದಾ ಕಾಲದಲ್ಲಿ ಭಾರತೀರಮಣರಾದ ಅವರು ನಮಗೆ ಜ್ಞಾನೋಪದೇಶಕರೆಂಬ ಸ್ತುತಿಯೊಂದಿಗೆ ಮೊದಲೆರಡು ಅವತಾರಗಳಲ್ಲಿ ಅವರು ಮಾಡಿದ ದುಷ್ಟ ಶಿಕ್ಷಣ ಮತ್ತು ಶಿಷ್ಟ ಪರಿಪಾಲನೆ, ಶ್ರೀ ಹರಿಗೆ ಪ್ರಥಮಾಂಗರಾಗಿ ಭೂಭಾರವಿಳುಹಿದ ಭಗವತ್ಕಾರ್ಯ ಸಾಧಕತ್ವ ವಿವರಣೆ ಈ ಪದದಲ್ಲಿದೆ. 

ಈ ಶ್ರೀ ಮಧ್ವನವಮೀ ಶುಭ ಸಂದರ್ಭದಲ್ಲಿ ಸಜ್ಜನರ ಮಾಹಿತಿಗಾಗಿ..

ರಾಗ :  ಶಂಕರಾಭರಣ  ತಾಳ : ತ್ರಿವಿಡಿ

ಮಾರುತಾವತಾರ ಗುರುವು ।

ಭಾರತಿಯ ರಮಣನೇ ನಮ್ಮ 

ಗುರುವು ಕಾಣಿರೋ   ।। ಪಲ್ಲವಿ ।।

ಸಂತತಿ ಸಹಿತವಾಗಿ 

ರಾವಣನ  ಮುರಿದ ।

ಹೊತಕಾರಿ ಹನುಮಂತ 

ನಮ್ಮ ಗುರುವು ।

ಅಂತಕಾನ ಪುರಕೆ 

ಕೌರವನ ಕಳೂಹೀದ ।

ಪಂಥದೊಳು ಭೀಮಸೇನ 

ನಮ್ಮ ಗುರು ಕಾಣಿರೋ ।। ಚರಣ ।।

ಯತಿ ರೂಪದಲ್ಲಿ ಬಂದು

ಕ್ಷಿತಿಯಲ್ಲಿ ನಿಂದು । ದು ।

ರ್ಮತವ ಖಂಡ್ರಿಸಿ ದಾಟ 

ನಮ್ಮ ಗುರುವು ।

ಶ್ರುತಿಗೆ ಸಂಮತವಾದ 

ಮತವ ಸ್ಥಾಪಿಸಿ ಮುಕ್ತಿ ।

ಪಥವ ತೋರಿದಾತ 

ನಮ್ಮ ಗುರುವು ಕಾಣಿರೋ ।। ಚರಣ ।।

ಹೇಮ ಭೂಮಿ ಕಾಮಿನಿಯ-

ರಾಕಾಂಕ್ಷಿಯನಳಿದು । ನಿ ।

ಷ್ಕಾಮಿಯಾಗಿದ್ದಾತಾ 

ನಮ್ಮ ಗುರುವು ।

ರಾಮಚಂದ್ರ ಸೊಬಗು-

ವಿಠ್ಠಲನ ಸೇವಕರಾದ ।

ಶ್ರೀಮದಾಚಾರ್ಯರೆ ನಮ್ಮ

ಗುರುಗಳು ಕಾಣಿರೋ  ।। ಚರಣ ।।

ನಾಡಿನ ಸಮಸ್ತ ಮಾಧ್ವ ಬಂಧುಗಳಿಗೆ " ಮಧ್ವನವಮೀ ಶುಭಾಶಯ " ಗಳು !!  

by ಆಚಾರ್ಯ ನಾಗರಾಜು ಹಾವೇರಿ 

     ಗುರು ವಿಜಯ ಪ್ರತಿಷ್ಠಾನ

*****

" ಶ್ರೀ ಹರುಷ ಮುನಿ  - 16  "

" ಸೂತ್ರ ಪ್ರಸ್ಥಾನ "

" ಬ್ರಹ್ಮಸೂತ್ರ ಭಾಷ್ಯ "

ಭಗವಾನ್ ಶ್ರೀ ವೇದವ್ಯಾಸದೇವರು ರಚಿಸಿದ ಬ್ರಹ್ಮಸೂತ್ರಗಳಿಗೆ ಶ್ರೀ ಮಧ್ವಾಚಾರ್ಯರಗಿಂತ ಮೊದಲು 21 ಭಾಷ್ಯಗಳು ಇದ್ದವಂತೆ. 

ಎಲ್ಲಾ ಭಾಷ್ಯಗಳನ್ನೂ ಖಂಡಿಸಿ ಶ್ರೀ ಬಾದರಾಯಣರ ಅಭಿಪ್ರಾಯಾನುಗುಣವಾಗಿ ಭಾಷ್ಯವನ್ನು ನಿರ್ಮಿಸಿದವರೆಂದರೆ ಶ್ರೀಮದಾಚಾರ್ಯರೇ ಸರಿ!

ಆ 21 ಭಾಷ್ಯಕಾರರೆಂದರೆ.....

1 ಭಾರತೀ ವಿಜಯ 2. ಸಚ್ಚಿದಾನಂದ 3. ಬ್ರಹ್ಮಘೋಷ 4. ಶತಾನಂದ 5. ಉದ್ವರ್ತ 6. ವಿಜಯ 7. ರುದ್ರಭಟ್ಟ 8. ವಾಮನ 9. ಯಾದವ ಪ್ರಕಾಶ 10. ರಾಮಾನುಜ 11. ಭರ್ತೃ ಪ್ರಪಂಚ 12.ದ್ರವಿಡ 13. ಬ್ರಹ್ಮದತ್ತ 14. ಭಾಸ್ಕರ 15. ಪಿಶಾಚ 16. ವೃತ್ತಿಕಾರ 17. ವಿಜಯಭಟ್ಟ 18. ವಿಷ್ಣುಕಾಂತ 19. ವಾದೀಂದ್ರ 20. ಮಾಧವದಾಸ 21. 

ಶ್ರೀ ಶಂಕರಾಚಾರ್ಯರು.ಈ 21 ಭಾಷ್ಯಗಳಲ್ಲಿಯ ಖಂಡನೀಯ ಅಂಶಗಳನ್ನೆಲ್ಲಾ ಸಕಾರಣ - ಪ್ರಮಾಣೊದಾಹರಣ ಪುರಸ್ಸರವಾಗಿ ನಿರಾಕರಣ ಮಾಡಿ - ಶ್ರೀ ಬಾದರಾಯಣರ ಮನಸ್ಸಿನಲ್ಲಿದ್ದ ಅರ್ಥವನ್ನೇ ಅಭಿವ್ಯಕ್ತಗೊಳಿಸುತ್ತ " ಮಹಾಭಾಷ್ಯ " ವನ್ನು ಬರೆದಿದ್ದಾರೆ ಶ್ರೀ ಮಧ್ವರು.

ಸೂತ್ರಪ್ರಸ್ಥಾನದ ಮೇಲೆ ಶ್ರೀಮದಾಚಾರ್ಯರು ಉಳಿದ ಆಚಾರ್ಯರಂತೆ ಬರೀ ಭಾಷ್ಯವೊಂದನ್ನೇ ಬರಿಯದೇ : 

ಭಾಷ್ಯ - ಅನುವ್ಯಾಖ್ಯಾನ - ನ್ಯಾಯ ವಿವರಣಾ - ಅಣುಭಾಷ್ಯ ಎಂದು 4 ಗ್ರಂಥಗಳನ್ನು ಬರೆದಿದ್ದಾರೆ.

ಸೂತ್ರದ ಮೇಲಿನ ಈ 4 ಗ್ರಂಥಗಳ ರೀತಿಯೂ ಒಂದೇ ತರಹ ಆದರೂ ರಚನೆಯಲ್ಲಿ ವೈಚಿತ್ರ್ಯವಿದೆ. 

ವಿಷಯ ಒಂದೇ ಆದರೂ ವಿನ್ಯಾಸದಲ್ಲಿ ವೈಲಕ್ಷಣ್ಯವಿದೆ.

ಒಂದರಲ್ಲಿ ಖಂಡನಕ್ಕೆ ಪ್ರಾಶಸ್ಯವಿದ್ದರೆ,

ಮತ್ತೊಂದರಲ್ಲಿ ಮಂಡನಕ್ಕೆ ಪ್ರಾಧಾನ್ಯ.

ಒಂದು ಸೂತ್ರ ನಿಷ್ಠವಾದರೆ,

ಮತ್ತೊಂದು ನ್ಯಾಯನಿಷ್ಠೆವಾಗಿರುತ್ತದೆ.

ಶ್ರೀ ಭಗವಾನ್ ವೇದವ್ಯಾಸರ ಅಭಿಪ್ರೇತಾರ್ಥವನ್ನು ಸಂರಕ್ಷಿಸುವ ಚತುರ್ಭಿತ್ತಿಗಳಂತೆ, ಅಂಗರಕ್ಷಕರಂತೆ ವಿದ್ವಜ್ಜನ ಮನೋಹರವಾಗಿ ಕಣ್ಗೆಸೆಯುವ ಈ ಚತುರ್ಗ್ರಂಥಗಳು ಶ್ರೀ ಬಾದರಾಯಣರ ಹೃದಯಕ್ಕೆ ಹಿಡಿದ ರನ್ನಗನ್ನಡಿಗಳಂತೆ 

ಶೋಭಿಸುತ್ತಿವೆ.ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯವು ಚತುರಾಧ್ಯಾಯಾತ್ಮಕವಾಗಿದ್ದು, ಪ್ರತಿ ಅಧ್ಯಾಯದಲ್ಲೂ 4 ಪಾದಗಳಿರುತ್ತವೆ. 

ಪ್ರತಿ ಪಾದಗಳಲ್ಲೂ ಕೆಲವು ಅಧಿಕರಣಗಳಿರುತ್ತವೆ.

ಶ್ರೀಮದಾಚಾರ್ಯರು ಟೀಕಿಸಿದ ಒಟ್ಟು ಸೂತ್ರಗಳ ಸಂಖ್ಯೆ = 564

ಶ್ರೀ ಶಂಕರಾಚಾರ್ಯರು ಬ್ರಹ್ಮ ಸೂತ್ರಗಳ ಸಂಖ್ಯೆ = 555

ಶ್ರೀ ರಾಮಾನುಜರ ದೃಷ್ಟಿಯಲ್ಲಿ ಈ ಶ್ರೀ ವ್ಯಾಸ ಸೂತ್ರಗಳ ಸಂಖ್ಯೆ ಇನ್ನೂ ಕಡಿಮೆಯಾಗಿ 545 ಕ್ಕೆ ಇಳಿದಿದೆ.

ಇದಕ್ಕೆ ಕಾರಣ ಶ್ರೀ ಶಂಕರಾಚಾರ್ಯರು - ಶ್ರೀ ರಾಮಾನುಜಾಚಾರ್ಯರು ಸೂತ್ರ ಪರಿಗಣನೆಯಲ್ಲೆ ಗೊಂದಲ ಮಾಡಿಕೊಂಡಿದ್ದಾರೆ. 

ಹಲವು ಕಡೆ ಎರಡೆರಡು ಸೂತ್ರಗಳನ್ನು ಕೂಡಿಸಿ ಒಂದೇ ಸೂತ್ರವೆಂದು ಗಣಿಸಿ ಬಿಡುತ್ತಾರೆ. 

ಸರಿಯಾಗಿ ಪರಾಮರ್ಶೆ ಮಾಡಿದರೆ ಅವರ ಸೂತ್ರದ ಗಣಿಕೆ ಅರ್ಧದ ಎಣಿಕೆ. 

ಎರಡೂ ತಪ್ಪಾಗಿದೆ ಎಂದು ಯಾರಿಗಾದರೂ ತಿಳಿದು ಬರಲು ಸಾಕು.ಶ್ರೀ ಮಧ್ವರು ನಿರ್ದೇಶಿಸಿದ 564 ಬ್ರಹ್ಮ ಸೂತ್ರಗಳ ಸಂಖ್ಯೆಗೆ ಒಂದು ವಿಶಿಷ್ಟವಾದ ಸಾಂಕೇತಿಕ ಅರ್ಥವೂ ಉಂಟು. 

ಈ ಬ್ರಹ್ಮ ಸೂತ್ರಗಳ ಮುಖ್ಯಾರ್ಥನಾದ " ವಿಷ್ಣು " ಎಂಬ ಅರ್ಥವು 

564 ರ ಸಂಖ್ಯೆಯಿಂದಲೇ ಲಬ್ಧವಾಗುತ್ತದೆ.

" ಅಂಕಾನಾ೦ ವಾಮತೋ ಗತಿ: " 

ಎಂಬ ಸಂಖ್ಯಾ ಶಾಸ್ತ್ರದ ಪ್ರಕಾರ " ವಿಷ್ಣು " ಎಂಬ ಭಗವನ್ನಾಮದ ಅಕ್ಷರವನ್ನು ತಿರುವು - ಮುರುವಾಗಿ ಎಣಿಸಿದರೆ 564 ಎಂಬ ಸಂಖ್ಯೆಯು ಹೊರಡುತ್ತದೆ.

" ಣ " ಕಾರವು " ಟ " ವರ್ಗದ 5ನೆಯ ಅಕ್ಷರವಾದ್ದರಿಂದ " 5 " ಸಂಖ್ಯೆಯ ಪ್ರತಿನಿಧಿ ಎಂದು ಹಿಡಿಯಬಹುದು.

" ಷ " ಅಕ್ಷರವು ಅವರ್ಗೀಯ ವ್ಯಂಜನದ " 6 " ನೇಯದಾಗಿರುತ್ತದೆ.

" ವಿ " ಎಂಬುದು " 4 " ನೇಯ ಅಕ್ಷರವಾಗಿರುತ್ತದೆ.

ಹೀಗೆ " ವಿಷ್ಣು " ಶಬ್ದ ಲಬ್ಧವಾದ " 564 " ಸಂಖ್ಯೆಯು ಮುಖ್ಯವಾಗಿ ಆ ವಿಷ್ಣುವನ್ನೇ ಪ್ರತಿಪಾದಿಸುವ ಬ್ರಹ್ಮ ಸೂತ್ರಗಳ ಸಂಖ್ಯೆಯು ಶ್ರೀ ಮಧ್ವರು ಹೇಳಿದಂತೆ ಇರಲೇಬೇಕೆಂದು ವಿಮರ್ಶಕರಿಗೆ ದೃಢನಿಶ್ಚಯವಾಗಲಿಕ್ಕೆ ಸಾಕು.

ನಾಲ್ಕು ನಾಲ್ಕು ಪಾದಗಳುಳ್ಳ, ನಾಲ್ಕು ಅಧ್ಯಾಯಗಳ ಈ ಬ್ರಹ್ಮ ಸೂತ್ರ ಭಾಷ್ಯ ಗ್ರಂಥದಲ್ಲಿ ಶ್ರೀ ಮಹಾವಿಷ್ಣುವೇ ಸಮಸ್ತ ವೇದ ರಾಶಿಗಳ ತಾತ್ಪರ್ಯ ವಿಷಯೀಭೂತನಾದ ಪರಮ ಮುಖ್ಯಾರ್ಥನಾಗಿದ್ದಾನೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಲಾಗಿದೆ.ಸರ್ವ ಶಾಸ್ತ್ರಗಳ ನಿರ್ಣಯವೂ ಇದರಿಂದಲೇ ಆಗುವುದರಿಂದ ಈ ನಿರ್ಣಾಯಕ ಗ್ರಂಥವು ಸರ್ವ ಶಾಸ್ತ್ರಗಳ ಮೂರ್ಧನ್ಯಸ್ಥಾನಾಪನ್ನವಾಗಿದೆ ಎಂದು ಶ್ರೀ ಮಧ್ವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಬ್ರಹ್ಮ ಸೂತ್ರಗಳ 4 ಅಧ್ಯಾಯಗಳಿಗೆ....

ಸಮನ್ವಯಾಧ್ಯಾಯ

ಅವಿರೋಧಾಧ್ಯಾಯ

ಸಾಧನಾಧ್ಯಾಯ

ಫಲಾಧ್ಯಾಯ

ಎಂದು ಕರೆದಿದ್ದು ಔಚಿತ್ಯಪೂರ್ಣವೂ. ಯಥಾರ್ಥವೂ ಆಗಿರುತ್ತದೆ. 

ಪ್ರಥಮಾಧ್ಯಾಯದ ಪ್ರಾರಂಭದ ಪಂಚ ಪ್ರಕರಣಗಳು ಪೀಠಿಕಾ ರೂಪವಾಗಿದ್ದು ಆನಂದಮಯಾಧಿಕರಣದಿಂದ ನಿಜವಾದ ಉದ್ಧಿಷ್ಟವಾದ ಸಮನ್ವಯವು ಪ್ರಾರಂಭವಾಗುತ್ತದೆ.

ಜಿಜ್ಞಾಸಾಧಿಕರಣ

ಜನ್ಮಾಧಿಕರಣ

ಶಾಸ್ತ್ರ ಯೋನಿತ್ವಾಧಿಕರಣ

ಸಮನ್ವಯಾಧಿಕರಣ

ಈಕ್ಷತ್ಯಧಿಕರಣ

ಎಂಬ ಅಧ್ಯಾಯ ಪಾದ ಪೀಠಿಕಾ ರೂಪವಾದ ಈ ಪಂಚಾಧಿಕರಣೀ ಭಾಷ್ಯ, ಅನುವ್ಯಾಖ್ಯಾನಗಳಲ್ಲಿ ಶ್ರೀ ಮಧ್ವರು  ಬಹು ವಿಷಯಗಳನ್ನು ಶಾಸ್ತ್ರಾನುಗುಣವಾಗಿ ವಿಮರ್ಶಿಸಿದ್ದಾರೆ.

ಈ ಪೀಠಿಕಾ ಭಾಗದಲ್ಲಿ....

ಮೊದಲನೇ ಸೂತ್ರದಿಂದ ಗುಣಪರಿಪೂರ್ಣನಾದ ಪರಬ್ರಹ್ಮನ ಜಿಜ್ಞಾಸೆಯು ಅವಶ್ಯ ಕರ್ತವ್ಯವೆಂದು ಹೇಳಿ ಜಿಜ್ಞಾಸ್ಯ ಬ್ರಹ್ಮನು ನಿರ್ಗುಣ ಎಂದು ಹೇಳುವ ಪರವಾದಿಗಳ ಮತವನ್ನು ಖಂಡಿಸಿದ್ದಾರೆ.

ಎರಡನೇ ಸೂತ್ರದಿಂದ ಸ್ವಯಂ ಶ್ರೀ ಬಾದರಾಯಣರೇ ಗುಣಪರಿಪೂರ್ಣತ್ವದ ಉಪಪಾದಕವಾದ ಜಗಜ್ಜನ್ಮಾದಿಕಾರಣತ್ವ ರೂಪವಾದ ಲಕ್ಷಣವನ್ನು ಹೇಳಿದ್ದಾರೆ.

ಬ್ರಹ್ಮನು ನಿರ್ಗುಣ ಎಂದು ಹೇಳಿದ ಅದ್ವೈತ ವಾದಿಗಳಿಗೆ " ಶ್ರೀ ಬಾದರಾಯಣ " ರ " ಜನ್ಮಾದ್ಯಸ್ಯಯತಃ " ಎಂಬ ಎರಡನೆಯ ಸೂತ್ರವು ದೊಡ್ಡ ತಲೆ ಬೇನೆಯಾಗಿ ಪರಿಣಮಿಸುತ್ತದೆ.

ಗುಣ - ಪರಿಪೂರ್ಣ ವಸ್ತುವೇ ಬ್ರಹ್ಮ ಎಂದು ಹೇಳಿದ ವೈಷ್ಣವರಿಗೆ " ಜಗಜ್ಜನ್ಮಾದಿ ಕರ್ತೃತ್ವ ರೂಪವಾದ ಲಕ್ಷಣ ವಿಧಾಯಕವಾದ ದ್ವಿತೀಯ ಸೂತ್ರವು ಸಾಧಕವಾದರೂ ನಿರ್ಗುಣ ವಾದಿಗಳಿಗೆ ಅದು ನುಂಗಲಾರದ ತುತ್ತಾಗಿ " ಅದು ಸ್ವರೂಪ ಲಕ್ಷಣವಲ್ಲ " ತಟಸ್ಥ ಲಕ್ಷಣ " ಎಂದು ಏನೇನೋ ಹೇಳಿ ಪಾರಾಗುವ ಹಾದಿಯನ್ನು ಹುಡುಕಾಡುತ್ತಾರೆ. 

ಒಂದು ತಪ್ಪನ್ನು ಮುಚ್ಚಿಕೊಳ್ಳಲು ಹೋಗಿ ನೂರು ಸುಳ್ಳು ತಪ್ಪುಗಳನ್ನು ಅಪ್ಪಿಕೊಳ್ಳುವ ಎಒಡನಂತೆ ಆಗುತ್ತದೆ 

ಅವರ ಪರಿಸ್ಥಿತಿ.ಶ್ರೀಮದಾಚಾರ್ಯರು ಹೆಜ್ಜೆ ಹೆಜ್ಜೆಗೂ ಅವರನ್ನು ಹಿಡಿದು ತಡೆದು ಎತ್ತ ಹೋದರೂ ನಿರ್ಗುಣಕ್ಕೆ ಪ್ರಸಕ್ತಿಯೇ ಇಲ್ಲವೆಂದು ಹೊಡೆದು ಹಾಕುತ್ತಾರೆ.

ಹೀಗೆ ಶ್ರೀ ಮಧ್ವರು ಪೀಠಿಕಾ ಪ್ರಕರಣದಲ್ಲಿಯೇ ಪ್ರಧಾನಮಲ್ಲ ನಿಬರ್ಹಣ ನ್ಯಾಯದಿಂದ ಶ್ರೀ ಶಂಕರ, ಶ್ರೀ ರಾಮಾನುಜ, ಬೌದ್ಧ, ಭಾಸ್ಕರ, ಪ್ರಭಾಕರ, ವೈಶೇಷಿಕ ಮುಂತಾದ ವಿದ್ವದ್ವೇದಾಂತ ವಾದಿಗಳನ್ನೆಲ್ಲ ಖಂಡಿಸಿ ಅವರ ತಪ್ಪುಗಳನ್ನೂ ಅವರಿಂದಲೇ ಒಪ್ಪಿಸಿ ತೆಪ್ಪನೆ ಕೂಡಿಸಿ ಬಿಡುತ್ತಾರೆ.

ಈ ರೀತಿಯಾಗಿ ಪ್ರಸ್ತಾವನಾ ರೂಪವಾದ ಪಂಚಾಧಿಕರಣ ಪ್ರಕರಣಗಳಲ್ಲಿ ಬ್ರಹ್ಮ ವಿಚಾರದ ಅವಶ್ಯಕತೆ, ಆ ಪರಬ್ರಹ್ಮನ ಲಕ್ಷಣ ಹಾಗೂ ಅವನಿಗೆ ಶಾಸ್ತ್ರೈಕ್ಯಗಮತ್ವ, ಸರ್ವ ಶಬ್ದ ವಾಚ್ಯತ್ವ ಮುಂತಾದ ವಿಷಯಗಳನ್ನು ಸಾಂಗೋಪಾಂಗವಾಗಿ ವಿಚಾರಿಸಿ, ಕೂಲಂಕುಷವಾಗಿ ವಿಮರ್ಶಿಸಿ ಸಾಧಿಸಿ " ಗುಣಪೂರ್ಣ " ವೆಂಬ ಆನಂದಮಯ ಅಧಿಕರಣದಿಂದ ಆ ಬ್ರಹ್ಮನು ಜಗಜ್ಜನ್ಮಾದಿಕಾರಣ ವಿಷಯದಲ್ಲಿ ಶ್ರುತಿ ಮನ್ವಯವನ್ನು ಮಾಡಿ ತೋರಿಸುತ್ತಾರೆ. 

ಇದೇ ಈ ಭಾಷ್ಯಕಾರರ ನಿಜವಾದ ವ್ಯಾಖ್ಯಾನದ ಮರ್ಮವಾಗಿದೆ.ಅಪರಂಪರವಾದ ವೇದ ರಾಶಿಯಲ್ಲಿಯ ಎಲ್ಲ ಶ್ರುತಿ ವಾಕ್ಯಗಳ ಸಮನ್ವಯವನ್ನು ಪ್ರತ್ಯೇಕವಾಗಿ ಮಾಡಿ ತೋರಿಸುವುದು 

ಅವಶ್ಯ ಕೋಟಿಯ ಮಾತು ಮತ್ತು ಅನವಶ್ಯಕವಾದ ಕಾರ್ಯ.ಒಂದು ವಿಶಿಷ್ಟ ನ್ಯಾಯ ಕ್ರಮದಿಂದ ಒಂದೊಂದು ಜಾತೀಯವಾದ ಶ್ರುತಿ ವಾಕ್ಯ ಸಮನ್ವಯವನ್ನು ಮಾಡಿಬಿಟ್ಟರೆ ತತ್ಸಮ ಕಕ್ಷಾಪನ್ನವಾದ ಸಕಲ ಶ್ರುತಿಗಳ ಸಮನ್ವಯ ಕ್ರಮವು ತಾನಾಗಿಯೇ ತಿಳಿದು ಹೋಗುವುದು.

ಅದಕ್ಕಾಗಿ ಶ್ರೀ ವೇದವ್ಯಾಸದೇವರು ಶೃಂಗಿಗ್ರಾಹಕತಯಾ ಪ್ರಾತಿನಿಧಿಕವಾಗಿ ಕೆಲವು ಶ್ರುತಿ ವಾಕ್ಯಗಳ ಸಮನ್ವಯವನ್ನು ತೋರಿಸಿದ್ದಾರೆ. 

ಅತ್ಯಂತ ಸಂಕ್ಷಿಪ್ತವಾದ ಸೂತ್ರಾವಯವದಲ್ಲಿ ಬ್ರಹ್ಮಾಂಡ ಅರ್ಥವನ್ನು ಹುದುಗಿಸಿ ಹೇಳುವ ಅನನ್ಯ ಸಾಮಾನ್ಯ ಜಾಣ್ಮೆಯುಳ್ಳ ಶ್ರೀ ಬಾದರಾಯಣರ ವಿಶಿಷ್ಟ ಶ್ರುತಿ ವಾಕ್ಯ ಉದ್ಧರಣದ ಉದ್ಧೇಶ ಹಾಗೂ ಆಕೂತಗಳನ್ನು ಅರಿಯಲಾರದೇ ಉಳಿದೆಲ್ಲ ಭಾಷ್ಯಕಾರರು ತಡವರಿಸಿ ತಬ್ಬಿಬ್ಬಾಗಿ ಎಡವಿ ಬಿದ್ದಿದ್ದಾರೆ. 

ಅವರು ಮಾಡಿಕೊಂಡ ವ್ಯವಸ್ಥೆಯೆಲ್ಲವೂ ಕೊನೆಗೆ ಅವರನ್ನೇ ಗೊಂದಗೆಡಿಸಿ ಸಂದೇಹ ಸಾಮ್ರಾಜ್ಯವನ್ನು ನಿರ್ಮಿಸುತ್ತದೆ.

ಅದಕ್ಕಾಗಿ ಶ್ರೀ ಸರ್ವಜ್ಞಾಚಾರ್ಯರು ಅನುಸರಿಸಿದ್ದ ಪದ್ಧತಿಯೇ ಬೇರೆ. 

ಇದು ಅವರ ಶಾಸ್ತ್ರ ಪ್ರಜ್ಞೆಯ ಸೂಕ್ಷ್ಮತಮತಿಗೆ ನಿದರ್ಶನವಾಗಿದೆ.

ಶಬ್ದಗಳನ್ನು ಅತ್ರ ಪ್ರಸಿದ್ಧ, ಅನ್ಯತ್ರ ಪ್ರಸಿದ್ಧ, ಉಭಯತ್ರ ಪ್ರಸಿದ್ಧ, ಅನ್ಯತ್ರೈವ ಪ್ರಸಿದ್ಧ, ಅರ್ಥಾತ್ ಬ್ರಹ್ಮನಲ್ಲಿ ಪ್ರಸಿದ್ಧ,  ಬ್ರಹ್ಮನನ್ನು ಬಿಟ್ಟು ಬೇರೆ ಕಡೆಗೆ ಪ್ರಸಿದ್ಧ,  ಬ್ರಹ್ಮನಲ್ಲಿಯೂ ಬೇರೆ ಕಡೆಯೂ ಪ್ರಸಿದ್ಧ ಮತ್ತು ಬ್ರಹ್ಮನನ್ನು ಬಿಟ್ಟು ಬೇರೆ ಕಡೆಯಲ್ಲಿಯೇ ಪ್ರಸಿದ್ಧ  - ಹೀಗೆ ನಾಲ್ಕು ರೀತಿಯಿಂದ ವಿಂಗಡಿಸಿದ್ದಾರೆ. 

ಈ ನಾಲ್ಕುರಲ್ಲಿಯೂ ಮತ್ತೆ ನಾಮಾತ್ಮಕ ಮತ್ತು ಲಿಂಗಾತ್ಮಕ ಎಂದು ಎರಡು ವಿಭಾಗ ಮಾಡಿಕೊಂಡು ಇತರತ್ರ ಪ್ರಸಿದ್ಧವಾದ - ನಾಮಾತ್ಮಕ ಶಬ್ದಗಳ ಸಮನ್ವಯವನ್ನು ಪ್ರಥಮ ಪಾದದಲ್ಲಿಯೂ, ಲಿಂಗಾತ್ಮಕ ಶಬ್ದಗಳ ಸಮನ್ವಯವನ್ನು ದ್ವಿತೀಯ ಪಾದದಲ್ಲಿಯೂ, ಉಭಯತ್ರ ಪ್ರಸಿದ್ಧವಾದ ಶಬ್ದಗಳ ಸಮನ್ವಯವನ್ನು ತೃತೀಯ ಪಾದದಲ್ಲಿಯೂ, ಅನ್ಯತ್ರೈವ ಪ್ರಸಿದ್ಧವಾದ ಶಬ್ದಗಳ ಸಮನ್ವಯವನ್ನು ಚತುರ್ಥ ಪಾದದಲ್ಲಿಯೂ ಮಾಡಿ ತೋರಿಸಿದ್ದಾರೆ.

ಬ್ರಹ್ಮನಲ್ಲಿ ಪ್ರಸಿದ್ಧವಾದ ಶಬ್ದಗಳಿಗಂತೂ ಪ್ರತ್ಯೇಕವಾಗಿ ಮಾಡಿ ತೋರಿಸುವ ಅವಶ್ಯಕತೆಯೇ ಇಲ್ಲ!

" ಸಮನ್ವಯಾಧ್ಯಾಯ " 

ಎಂದು ಹೆಸರಾದ ಈ ಪ್ರಥಮಾಧ್ಯಾಯದಲ್ಲಿ ಮುಖ್ಯವಾಗಿ ಶ್ರೀಮದಾಚಾರ್ಯರು ಹೇಳಿದ್ದು ಸರ್ವ ಶಬ್ದಗಳೂ, ಯಾವ ಅಪವಾದವೂ ಇಲ್ಲದೇ ಪರಮ ಮುಖ್ಯ ವೃತ್ತಿಯಿಂದ ಪರಬ್ರಹ್ಮನನ್ನೇ ಬೋಧಿಸುತ್ತವೆ ಎಂಬುದು.

1ನೇ ನಾಮ ಪಾದದಲ್ಲಿ ವಿಷ್ಣುವನ್ನು ಬಿಟ್ಟು ಬೇರೆ ಕಡೆ ಪ್ರಸಿದ್ಧವಾದ ಆನಂದಮಯ ಆಕಾಶ, ಪ್ರಾಣ, ಜ್ಯೋತಿ, ಗಾಯತ್ರೀ ಮುಂತಾದ ನಾಮಾತ್ಮಕ ಶಬ್ದಗಳಿಗೆ ಪರಬ್ರಹ್ಮನಲ್ಲಿಯೇ ಸುಂದರವಾದ ಸಮನ್ವಯವನ್ನು ಸಮರ್ಥಿಸಿ ತೋರಿಸಲಾಗಿದೆ. 

ಅಂತಃಸ್ಥತ್ವ ಲಿಂಗದ ಸಮನ್ವಯವನ್ನೂ ಹೃದಯಗ್ರಾಹಿಯಾಗುವಂತೆ ಮಾಡಿ ತೋರಿಸಿದ್ದಾರೆ 

ಈ ಇದೆ ಅಧ್ಯಾಯದಲ್ಲಿ ಶ್ರೀ ಮಧ್ವರು.ಎರಡನೆಯ ಲಿಂಗ ಪಾದದಲ್ಲಿ ಬ್ರಹ್ಮನಲ್ಲಿ ಅನ್ಯತ್ರ ಪ್ರಸಿದ್ಧವಾದ ಸರ್ವಗತತ್ವ, ಅತ್ತೃತ್ವ, ಗುಹಾಪ್ರವಿಷ್ಟತ್ವ, ಅಂತರ್ಯಾಮಿತ್ವ, ಅದೃಶ್ಯತ್ವ ಮುಂತಾದ ಲಿಂಗಾತ್ಮಕ ಶಬ್ದಗಳ ಸಮನ್ವಯವನ್ನೂ, ವೈಶ್ವಾನರ ನಾಮ ಸಮನ್ವಯವನ್ನೂ ಮನಂಬುಗುವ ರೀತಿಯಲ್ಲಿ ಶ್ರೀಮದಾಚಾರ್ಯರು ಮಾಡಿ ತೋರಿಸಿದ್ದಾರೆ.

ಮೂರನೆಯ ನಾಮ ಲಿಂಗ ಪಾದದಲ್ಲಿ ದ್ಯುಭ್ವಾದ್ಯಾಯತನತ್ವ ಮುಂತಾದ ಲಿಂಗಾತ್ಮಕ ಶಬ್ದಗಳಿಗೂ, ನಾಮಾತ್ಮಕಗಳಾದ ಭೂಮಾದಿ ಶಬ್ದಗಳಿಗೂ ಶ್ರೀ ಹರಿಯಲ್ಲಿ ಸಮನ್ವಯವನ್ನು ತೋರಿಸಿ ದೇವತೆಗಳ ಪ್ರವಾಹನಿತ್ಯ ಸ್ವರೂಪ, ಬ್ರಹ್ಮ ಜ್ಞಾನಾಧಿಕಾರ, ಶೂದ್ರರಿಗೆ ವೇದದಲ್ಲಿ ಅನಧಿಕಾರ ಮುಂತಾದ ವಿಷಯಗಳನ್ನು ಪ್ರತಿಪಾದಿಸಲಾಗಿದೆ.

ನಾಲ್ಕನೆಯ ನಾಮ ಲಿಂಗ ಪಾದದಲ್ಲಿ ಬ್ರಹ್ಮೇತರದಲ್ಲಿ ಮಾತ್ರವೇ ಪ್ರಸಿದ್ಧವಾದ ದುಃಖ, ಬದ್ಧ, ಅಭಾವ, ಅಸತ್, ಶೂನ್ಯ ಮೊದಲಾದ ಶಬ್ದಗಳಿಗೂ ಕೇವಲ ಕರ್ಮವಾಚಕವೆಂದು ಪ್ರಸಿದ್ಧವಾದ ಜ್ಯೋತಿರಾದಿ ಶಬ್ದಗಳಿಗೂ ಭಗವಂತನಲ್ಲಿಯೇ ಸಾಧು ಸಮನ್ವಯವನ್ನು ತೋರಿಸಿದ್ದಾರೆ.

" ಬ್ರಹ್ಮ ಸೂತ್ರ ಭಾಷ್ಯ " ದ ಮೇಲೆ ಹೊರಟ ಟೀಕಾ ಟಿಪ್ಪಣಿಗಳು "

1. ಶ್ರೀ ನರಹರಿತೀರ್ಥರು ಸೂತ್ರಭಾಷ್ಯ ಟೀಕಾ

2. ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ತತ್ತ್ವ ಪ್ರದೀಪಿಕಾ

3. ಶ್ರೀ ಜಯತೀರ್ಥರು - ತತ್ತ್ವ ಪ್ರಕಾಶಿಕಾ

4. ಶ್ರೀ ಬಲದೇವ ವಿದ್ಯಾಭೂಷಣ - 

1. ಗೋವಿಂದ ಭಾಷ್ಯ 2. ಸಿದ್ಧಾಂತ ರತ್ನ 

5 ಶ್ರೀ ಶಂಕರಾಚಾರ್ಯರು ( ಶ್ರೀ ತ್ರಿವಿಕ್ರಮ ಪಂಡಿತರ ಸಹೋದರ ) - ಸಂಬಂಧ ದೀಪಿಕಾ

6. ಶ್ರೀ ವಿಜಯೀ೦ದ್ರತೀರ್ಥರು - 

1. ತತ್ತ್ವ ಮಾಣಿಕ್ಯ ಪೇಟಿಕಾ 2.  ನ್ಯಾಯ ಮಾಲಾ ಸಂಗ್ರಹಃ 3.  ಮಧ್ವ ತಂತ್ರ ನಯ ಮಂಜರೀ 4. ಬ್ರಹ್ಮ ಸೂತ್ರಾರ್ಥ ಸಂಗ್ರಹಃ 

7. ಶ್ರೀ ಭಾವಿಸಮೀರ ವಾದಿರಾಜರು - ಬ್ರಹ್ಮಸೂತ್ರಾರ್ಥ ನಿಬಧ್ಧ ನಾಮಾವಳಿ

8. ಶ್ರೀ ರಾಘವೇಂದ್ರತೀರ್ಥರು -

1. ತಂತ್ರ ದೀಪಿಕಾ 2. ನ್ಯಾಯ ಮುಕ್ತಾವಲೀ 

9. ಶ್ರೀ ಸುಮತೀಂದ್ರತೀರ್ಥರು - 

1. ಸೂತ್ರಭಾಷ್ಯ ಭಾವ ರತ್ನಕೋಶ 2 ಅಧಿಕರಣ ರತ್ನಮಾಲಾ 

9. ಶ್ರೀ ಜಗನ್ನಾಥ ಯತಿಗಳು - ಭಾಷ್ಯದೀಪಿಕಾ, ಸೂತ್ರದೀಪಿಕಾ

11. ಶ್ರೀ ವಸುಧೇಂದ್ರತೀರ್ಥರು - ವಿಷಯ ವಾಕ್ಯ ಸಂಗ್ರಹಃ ( ಸೂತ್ರಭಾಷ್ಯಗತ )

12. ಶ್ರೀ ಧೀರೇಂದ್ರತೀರ್ಥರು - ವಿಷಯ ವಾಕ್ಯ ಸಂಗ್ರಹಃ

13. ಶ್ರೀ ಆಯೀ ನರಸಿಂಹಾಚಾರ್ಯ - ಸೂತ್ರಾರ್ಥ:

14. ಶ್ರೀ ಚಿಕ್ಕೋಡಿ ಭಗವಂತರಾಯರು - 

1. ಬ್ರಹ್ಮ ಸೂತ್ರ ಯುಕ್ತಿ ಸಂಗ್ರಹಃ 2.  ಬ್ರಹ್ಮಸೂತ್ರ ಪೂರ್ವಪಕ್ಷ ಸಿದ್ಧಾಂತ ಯುಕ್ತಿ ಸಂಗ್ರಹ ವ್ಯಾಖ್ಯಾ: 3 ಬ್ರಹ್ಮಸೂತ್ರ ಪಂಚಿಕಾ, 

15. ಶ್ರೀ ಕಲ್ಲಾಪುರ ಅಣ್ಣಯ್ಯಾಚಾರ್ಯ - ಅಧಿಕರಣಾರ್ಥ ಸಂಗ್ರಹಃ

16. ಶ್ರೀ ರಾಮಕೃಷ್ಣ ( ಶ್ರೀ ಕೇಶವಾಚಾರ್ಯ ಪಾಂಡುರಂಗಿ ಶಿಷ್ಯರು ) - 

ಬ್ರಹ್ಮಸೂತ್ರ ಭಾಷ್ಯೋಕ್ತ ಶ್ರುತ್ಯರ್ಥ ಪ್ರಕಾಶಃ

17. ಶ್ರೀ ತೊನಸಿ ಶ್ರೀನಿವಾಸಾಚಾರ್ಯ - ಶ್ರುತ್ಯರ್ಥ ರತ್ನಮಾಲಾ

18. ಶ್ರೀ ಪಾಂಡುರಂಗೀ ಹುಚ್ಚಾಚಾರ್ಯ - ಸೂತ್ರ ಪ್ರಮೇಯಾವಳೀ

19. ಶ್ರೀ ಕೊಚ್ಚಿ ರಂಗಪ್ಪಾಚಾರ್ಯ - ನ್ಯಾಯ ಮಾಲಿಕಾ

20. ಶ್ರೀ ಕೊಚ್ಚಿ ಮಧ್ವರಾಯಾಚಾರ್ಯ - ನ್ಯಾಯ ಮಾಲಿಕಾ ಟಿಪ್ಪಣಿ

21. ಶ್ರೀ ಪಾಂಗ್ರಿ ಶ್ರೀನಿವಾಸಾಚಾರ್ಯ - 

1. ಬ್ರಹ್ಮ ಸೂತ್ರ ನಾಮಾವಳೀ 2. ಬ್ರಹ್ಮಸೂತ್ರ ಭಾಷ್ಯಾರ್ಥ

22. ಶ್ರೀ ವೇದಗರ್ಭ ನಾರಾಯಣಾಚಾರ್ಯ - ಬ್ರಹ್ಮ ಸೂತ್ರ ಭಾಷ್ಯಾರ್ಥ ಮಂಜರೀ

23. ಶ್ರೀ ಸತ್ಯಧ್ಯಾನತೀರ್ಥರು - ಭೇದ ಪರಾಣ್ಯೇವ ಖಲು ಬ್ರಹ್ಮ ಸೂತ್ರಾಣೀ

24. ಶ್ರೀಮುಷ್ಣ ಸುಬ್ಬರಾಯಾಚಾರ್ಯ - 

1. ಬ್ರಹ್ಮ ಸೂತ್ರ ಭಾಷ್ಯ ವ್ಯಾಖ್ಯಾ:  2.  ಸೂತ್ರಾರ್ಥ ಮಣಿಮಂಜರೀ

25. ಶ್ರೀ ಕಾಳೂರು ಮಹೀದಾಸಾಚಾರ್ಯ, ಕೋಲಾರ - ಬ್ರಹ್ಮ ಸೂತ್ರಾರ್ಥ ಕೌಮುದೀ

26. ಶ್ರೀ ಶರ್ಕರಾ ಶ್ರೀನಿವಾಸಾಚಾರ್ಯ - ಸೂತ್ರಾರ್ಥ ಮಂಜರೀ

26. ಗೂಢಕರ್ತೃಕ - 

1. ಸೂತ್ರಾರ್ಥಸಾರ 2.  ಸೂತ್ರ ಭಾಷ್ಯಾರ್ಥ ಸಂಗ್ರಹಃ - 3. ಸೂತ್ರಾರ್ಥ ಸಂಗ್ರಹಃ 4. ಸೂತ್ರಾರ್ಥ ಪ್ರಬಂಧಃ 5.  ಸೂತ್ರಾರ್ಥ ಮಂಜರೀ

by ಆಚಾರ್ಯ ನಾಗರಾಜು ಹಾವೇರಿ 

     ಗುರು ವಿಜಯ ಪ್ರತಿಷ್ಠಾನ

******