Friday 1 October 2021

janardhana vittala dasaru tirumala dasarya 1865 ಜನಾರ್ದನ ವಿಠಲ ದಾಸರು

     ..

Janardhana Vittala Dasaru

Poorvashrama Name: Tirumaladasarya

Period: 1780 - 1865

Ankita: Janardhana Vittala


ಶ್ರೀ ತಿರುಮಲದಾಸಾರ್ಯ ವಿರಚಿತ 

ಜನಾರ್ದನವಿಠಲಾಂಕಿತ

ಶ್ರೀ ಗೋಪಾಲದಾಸರ ತಮ್ಮಂದಿರೂ, ಅಪರೋಕ್ಷ ಜ್ಞಾನಿಗಳೂ ಆದ ಶ್ರೀ ಗುರುಗೋಪಾಲದಾಸರ ಶಿಷ್ಯ,  ಜನಾರ್ದನ ವಿಠಲ ದಾಸರು.

ಶ್ರೀ ಗುರುಗೋಪಾಲದಾಸರು ಶ್ರೀ ತಿರುಮಲದಾಸರಿಗೆ " ಶ್ರೀ ಜನಾರ್ದನ ವಿಠಲ " ಎಂದು ಯಾಕಿಂತದೊಂದಿಗೆ ದಾಸ ದೀಕ್ಷೆ ಕೊಟ್ಟಿದ್ದಾರೆ. ಆ ಅಂಕಿತ ಪದ ಹೀಗಿದೆ...

ರಾಗ : ಕಾಂಬೋಧಿ      ತಾಳ : ಝ೦ಪೆ

ಶ್ರೀ ಜನಾರ್ದನವಿಠಲ ಶೃಂಗಾರ ಪರಿಪೂರ್ಣ ।

ಅಜಭವಾಮರೇಂದ್ರ ಸೇವ್ಯಾ ।

ನೈಜ ಭಾವದಿ ನಮಿಸಿ ಬೇಡಿದವನಿಗೆ ವರವ ।

ನಿಜವಾಗಿ ಪಾಲಿಸುವೆನೆಂದು ದಯದಲಿ ಬಂದ್ಯಾ ।। ಪಲ್ಲವಿ ।।

ವೇಣುಗೋಪಾಲದಾಸರು ಕರುಣಾವನೆ ಮಾಡಿ ।

ಪಾಣಿ ಪಿಡಿದದ್ದು ನೋಡಿ ।

ಕ್ಷೋಣಿಯೊಳುಳ್ಳಂಥ ತೀರ್ಥ ಯಾತ್ರಾದಿಗಳ ।

ಸ್ನಾನಾದಿ ಫಲವ ನೀಡಿ ।

ವಾಣಿ ಅರಸಾನಿಂದ ತೃಣ ಜೀವ ಪರಿಯಂತ ।

ಮೇಣು ತಾರತಮ್ಯ ನೋಡಿ ।

ಅನಾಜ್ಞದವನೆಂದು ಅತಿ ಮಮತೆಯಿಂದಲಿ ।

ನೀನೆ ವ್ಯಕ್ತವಾಗಿ ನಿಂತು ಉದ್ಧರಿಪುದಕೆ ।। ಚರಣ ।।

ಮಾನ ಮಮತೆಯೆಂಬ ಹೀನ ಅಹಂಕಾರವನು ।

ಹಾನಿ ಮಾಡುವೆ ನೆನುತಲಿ ।

ಜ್ಞಾನ ಭಕುತಿಯ ಕೊಟ್ಟು ಧ್ಯಾನ ಮಾರ್ಗವ ತೋರಿ ।

ಪ್ರಾಣನಾ ಪಾದದಲಿ ।

ಆನಂದ ಉಂಬದಕೆ ಅತಿ ವೇಗ ಪೊಂದಿಸಿ ।

ಶೀಲ ಸ್ವಭಾವದಲಿ ।

ಭಾನು ಕೋಟಿ ತೇಜ ಭಕುತ ಜನರಾಧಾರಿ ।

ಧೇನುವತ್ಸಲನ ಪೊರೆವ ಪರಿಯಂತೆ ದಯದಲಿ ।। ಚರಣ ।।

ಮನ್ಮಥ ನಾಮ ಸಂವತ್ಸರಾ ಮಾಘ ಶುದ್ಧ ಬಿದಿಗಿ ।

ಮಂಗಳವಾರದಲ್ಲಿ ।

ಮನ್ಮನೋಭೀಷ್ಟೆಯನು ಕೊಡಲು ಗುರುಗೋಪಾಲ ।

ದಾಸರ ಮುಖದಲಿ ।

ಸನ್ಮಾನದಲ್ಲಿ ಸಂಗೀತ ನಾಮ ಸ್ಮರಣೆ ।

ಎನ್ನು ಪೇಳುಪೇ ನೆನುತಲಿ ।

ಚಿನ್ಮಯನೇ ಪುನ್ನಾಡಿಯೊಳಗೆ ಪೊಳವೇನೆಂದು ।

ಘನ್ನ ಕರುಣಾದಿ ಬಂದ್ಯಾ ಶ್ರೀ ಜನಾರ್ದನವಿಠಲ ।। ಚರಣ ।।

ಎಂದು ಅಂಕಿಂತದೊಂದಿಗೆ ಶ್ರೀ ಗುರುಗೋಪಾಲದಾಸರು ಶ್ರೀ ತಿರುಮಲದಾಸರಿಗೆ ದಾಸ ದೀಕ್ಷೆ  ನೀಡಿದರು. ಇವರ ಪ್ರೀತಿಯ ಶಿಷ್ಯರೇ ಶ್ರೀ ಅಭಿನವ ಜನಾರ್ದನ ವಿಠಲರು.

ಶ್ರೀ ಗುರುಗೋಪಾಲದಾಸರ ಶಿಷ್ಯರಾದ ಶ್ರೀ ಜನಾರ್ದನವಿಠಲರು ಶ್ರೀ ಪ್ರೇಮದಾಸರಿಗೆ " ಹೇವಳ೦ಬಿ ನಾಮ ಸಂವತ್ಸರ ವೈಶಾಖ ಶುದ್ಧ ದ್ವಿತೀಯ ಶುಕ್ರವಾರದಂದು " ಅಭಿನವ ಜನಾರ್ದನ ವಿಠಲ " ಎಂಬ ಅಂಕಿತದೊಂದಿಗೆ ದಾಸ ದೀಕ್ಷೆ ಕೊಟ್ಟರು. ಆ ಅಂಕಿತ ಪದ ಹೀಗಿದೆ...

ರಾಗ : ಕಾಂಬೋಧಿ     ತಾಳ : ಝ೦ಪೆ

ಅಭಿನವ ಜನಾರ್ದನ ವಿಠಲ ಯೆನ್ನ ।

ಗಭೀರ ವಚನವ ಲಾಲಿಸೈಯ್ಯಾ ಗಮನಕದಿ ವೇಗ ।। ಪಲ್ಲವಿ ।।

ಒಡಿಯ ನೀನಹುದೆಂದು ಅಡಿಗಡಿಗೆ ಚರಣಗಳ ।

ಬಿಡದೆ ನಂಬಿಕೊಂಡು ಪೊಡವಿಯೊಳಗೆ ।

ನಡತಿವಂತರ ಕೂಡ ಬಿಡದೆ ಆಡುವ ನರಗ ।

ಪಡಿನಾಮ ಅಮೃತವನೇ ಪಾಲಿಸಿ ರಕ್ಷಿಪುದು ।। ಚರಣ ।।

ಅಪರಾಧವೆಣಿಸದಲೇ ಅಪವರ್ಗದಾ ಜನರ ।

ನಿಪುಣರನ ಮಾಡುವಾ ನೀತಿವಂತಾ ।

ಕಪಟ ಕುಚೇಷ್ಟಗಳ ಪ್ರಕಟ ಬಾಹ್ಯಾಂತರದಿ ।

ವಪುವಿಲಿದ್ದದು ಕಳೆದು ಉಪಜೀವ್ಯ ನೀನಾಗಿ ।। ಚರಣ ।।

ಶ್ರೀ ಗುರು ಗೋಪಾಲ ದಾಸರಾಯರ ಪಾದ ।

ಜಾಗುರೂಕದಿ೦ದ ಭಜಿಸಿ ಜಗದಿ ।

ಯೋಗನೆಸಗಲಿ ಮನಕೆ ಯೋಗೀಶ ಭಕ್ತಿಯಲಿ ।

ಭಾಗೀರಥಿ ಪಿತ ಜನಾರ್ದನವಿಠಲೈಯ್ಯಾ ।। ಚರಣ ।।

ಶ್ರೀ ಜನಾರ್ದನ ವಿಠಲರು ಅನೇಕ ಪದ - ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ!

by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

****

No comments:

Post a Comment