Thursday 15 April 2021

satyavijaya dasaru 1983 vaishaka shukla ekadashi ಸತ್ಯವಿಜಯದಾಸರು



vaishaka shukla ekadashi 

27 apr 2020
ಈ ಬರುವ ಏಕಾದಶಿ (3 may 2020) ನಮ್ಮ ಮಾತಾಮಹರಾದ ಶ್ರೀ ಗುರುಜಗನ್ನಾಥವಿಠಲರ ಪ್ರಶಿಷ್ಯರಾದ ಶ್ರೀ ಸತ್ಯವಿಜಯದಾಸಾರ್ಯರ ಆರಾಧನಾ ಮಹೋತ್ಸವ ಗುಂಟೂರು, ನೆಲ್ಲೂರಿನಲಿ ನಡೆಯುವ ಸಂದರ್ಭದಲ್ಲಿ ಮತ್ತೊಮ್ಮೆ ಅವರ ಚರಿತ್ರೆ ಕುರಿತಾದ ಸಣ್ಣ ಸೇವಾಕುಸುಮ.. .. 🙏🏽

ಶ್ರೀ ಸತ್ಯವಿಜಯದಾಸರ ಸ್ಮರಣೆ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***



ಶ್ರೀ ಸತ್ಯವಿಜಯದಾಸರ ಪೂರ್ವನಾಮ : ನಾಗಣ್ಣಾಚಾರ್ಯ 

ತಂದೆ ತಾಯಿ : ಶ್ರೀ ಶ್ರೀನಿವಾಸವಿಠಲರು, ಶ್ರೀಮತಿ ಪದ್ಮಾವತಿ 

ಜನ್ಮಸ್ಥಳ: ಆರಣಿ ಸತ್ಯವಿಜಯಪುರದ ಹತ್ತರ..

ಕಾಲ - 1906-1983

ಆರಣಿಯ ದಾಸರಾದ ಹಾಗೂ ಶ್ರೀ ಗುರುಜಗನ್ನಾಥವಿಠಲರ ಶಿಷ್ಯರಾದ ಶ್ರೀ

ಶ್ರೀ ಶ್ರೀನಿವಾಸ ವಿಠಲರು ಪರಮ ವೈರಾಗ್ಯ ಸಂಪನ್ನರಾಗಿದ್ದವರು. ಆರಣಿಯಲ್ಲಿ ಇವರ ಮನೆತನದ ನೆನಪುಗಳು ಇಂದಿಗೂ ಇದ್ದವೆ. ಆದರೆ ಶ್ರೀ ಗುರುಜಗನ್ನಾಥವಿಠಲರು ಆರಣಿ ಬಂದಾಗ ಇವರಿಗೆ ಅನುಗ್ರಹ ಮಾಡಿರುತ್ತಾರೆ. ತಂಬೂರಿ, ರಾಮ,ಲಕ್ಷ್ಮಣ ಸೀತಾ, ವಿಠಲ, ಬೆಣ್ಣೆ ಕೃಷ್ಣ ವಿಗ್ರಹಗಳನ್ನು ನೀಡಿ.  ಅಂದಿನಿಂದ ಅವರ ಜೀವನ ಬದಲಾಗುತ್ತದೆ. ಒಮ್ಮೆ 
ತಂಜಾಊರಿನಲ್ಲಿ  ಶ್ರೀ ಶ್ರೀನಿವಾಸ ವಿಠಲರು ಹರಿಕಥೆ ಹೇಳಿದ ಪರಿ ನೋಡಿ
ಆ ಸಮಯದಲ್ಲಿ ದಾಸರ ಮಗನಾದ  ಶ್ರೀ ಸತ್ಯವಿಜಯದಾಸರಿಗೆ (ನಾಗಣ್ಣಾಚಾರ್ಯರಿಗೆ) ವಿಜಯವಾಡದ ಪ್ರಪಂಚಂ ಆನಂದತೀರ್ಥಾಚಾರ್ಯರ ( ಇವರ ಮೊಮ್ಮಗ ಪ್ರಖ್ಯಾತ flute artist ಪ್ರಪಂಚಂ ಸೀತಾರಾಮ್ ನವರು)  ಮಗಳಾದ 8 ವರ್ಷದ ಕೃಷ್ಣವೇಣಿ ಎನ್ನುವ ಕನ್ಯೆಯನ್ನು ಕೊಟ್ಟು ಲಗ್ನ ಮಾಡಲಾಗಿದೆ..... ಆದರೇ ಆಕೆ ಸಣ್ಣ ಹುಡುಗಿಯಾದ ಕಾರಣ 12 ವರ್ಷ ಬಂದಮೇಲೆ ಪತಿಯೊಂದಿಗೆ ಗುಂಟೂರು ಕಳೆಸಿದರು ಆಕೆಯ ತಂದೆತಾಯಿಯರು... ಆಗ ಕೃಷ್ಣವೇಣಿ ಅಮ್ಮನವರ ಅತ್ತೆಮನೆಯ ಹೆಸರು ಲಕ್ಷ್ಮೀಬಾಯಿ ಎಂದು ಬದಲಾಗಿದೆ...( ಇವರೇ ನಮ್ಮ ಅಜ್ಜಿಯವರು)


ಆಗ  ಮದುವೆ ಗುಂಟೂರು, ವಿಜಯವಾಡ, ಆಂಧ್ರಪ್ರದೇಶದ ಕಡೆ ನಡೆದ ಕಾರಣ ಶ್ರೀ ಶ್ರೀನಿವಾಸವಿಠಲರು ಆಂಧ್ರಕ್ಕೆ ಪಯಣ ಸಾಗಿಸಿರ್ತಾರೆ. ಶ್ರೀ ಗುರುಜಗನ್ನಾಥವಿಠಲರು ನೀಡಿದ  ವಿಗ್ರಹಗಳು ನಮ್ಮ ಕೊನೆಯ ಸೋದರಮಾವನವರಾದ ಶ್ರೀ ಕರುಣಾಸಿಂಧುವಿಠಲರ ಮನೆಯಲ್ಲಿ ಸ್ವಲ್ಪ,  ನಮ್ಮ ತಾಯಿಯವರ ಮನೆಯಲ್ಲಿ ಸ್ವಲ್ಪ ಇದ್ದವೆ..


ಹೀಗೆ ಶ್ರೀನಿವಾಸವಿಠ್ಠಲದಾಸರು  ಆರಣಿಯಲ್ಲಿ ಇದ್ದ ತಮ್ಮ ಯಾವದಾಸ್ತಿಯನ್ನೂ ಬಿಟ್ಟು ತಮ್ಮ ಶಿಷ್ಯರಾದ ವೆಂಕಟವಿಠಲರಿಗೋಸ್ಕರವೂ ,ಮಗನ ಮದುವೆಗಾಗಿಯೂ ಪರಿವಾರ ಸಮೇತವಾಗಿ ಆಂಧ್ರಪ್ರದೇಶದ ಗುಂಟೂರು ಜಿಲೆ ಗೆ ಬಂದು ನೆಲಸಿದರು... ಅಲ್ಲಿ ದಾಸರ ಕರ್ತವ್ಯವಾದ ಯಾಯಿವಾರ ವೃತ್ತಿಯನ್ನೇ ನಡೆಸುತ್ತಾ ಹರಿಕಥೆಗಳು ಹೇಳುತ್ತಾ, ಹರಿದಾಸರ ಆರಾಧನಾದಿಗಳನ್ನು ಮಾಡುತ್ತಾ ಭಜನಾದಿಗಳಲ್ಲಿ ನಿರತರಾಗುತ್ತಾ... ಜೀವನವನ್ನು ಕಳೆಯುತ್ತಿದ್ದರು. 


ಇವರಿಗೆ ಐದು ಜನ ಮಕ್ಕಳು ಮೂವರು ಹೆಣ್ಣು ಇಬ್ಬರು ಗಂಡು.. ಅವರಲ್ಲಿ ನಾಗಣ್ಣಾಚಾರ್ಯರು ಎರಡನೆಯವರು... ಇವರು ಶ್ರೀ ಸತ್ಯವಿಜಯತೀರ್ಥರ ಅನುಗ್ರಹದಿಂದ ಜನಿಸಿದವರು. ಇವರಿಗೆ ಸಣ್ಣ ವಯಸಿದ್ದಾಗಲೇ ಅಮ್ಮ ಆಗಿತ್ತು. ಆಗ ಸುತ್ತಮುತ್ತಲಿನ ಜನರು , ಬಳಗರು ಬಂದು ನಾಗಣ್ಣವರಿಗೆ ಹಣ್ಣು ಇತ್ಯಾದಿಗಳನ್ನು ಕೊಟ್ಟು ಮಗುವಿನ ಆರೋಗ್ಯದ ಕುರಿತು ವಿಚಾರ ಮಾಡಿ ಹೋಗ್ತಿದ್ದದ್ದು ನೋಡಿ ನಾಗಣ್ಣನವರ ಅಣ್ಣ ನನಗೆ ಯಾರೂ ಏನೂ ತಂದು ಕೊಡ್ತಿಲ್ಲ ಅಂದಾಗ ಹಿರಿಯರೊಬ್ಬರಂತಾರೆ ಅವನಿಗೆ ಅಮ್ಮ ಆಗಿದೆ ಅದಕ್ಕೆ ಕೊಡ್ತಾರೆ ಅಂದಾಗ ಅವರಣ್ಣ - ಹಾಗಾ ದರೇ ಇದು ನನಗೆ ಬರಲೀ ಅಂದ ಎರಡೇ ದಿನಕ್ಕೆ ನಾಗಣ್ಣನವರಿಗೆ ಬಂದ ಅಮ್ಮ ಕಮ್ಮಿ ಆಗಿ ಅವರಣ್ಣನವರಿಗೆ ಬಂದು ಸ್ವಲ್ಪ ದಿನಗಳಲ್ಲಿ ಅವರು ತೀರಿಕೊಂಡರು... 


ಹೀಗೆ ದೇವರ ದಯೆಯಿಂದ ಉಳಿದ ನಾಗಣ್ಣಾಚಾರ್ಯರು ಸಂಗೀತದಲ್ಲಿ ಪ್ರಾವೀಣ್ಯತೆ ಹೊಂದಿದರು.. ಸಂಸ್ಕೃತ ಪಂಡಿತರೂ ಆದರು.. ಪರಮಾತ್ಮನ ಧ್ಯಾನದಲ್ಲಿ ತಂದೆಯವರ ಹಾದಿಯಲ್ಲಿ ಹರಿಕಥೆಗಳನ್ನು ಕಲೆತಿದ್ದರು.. 10 ವರ್ಷಗಳ ವಯಸಿನಲ್ಲೇ ತಂದೆಯವರಿಂದ ಸತ್ಯವಿಜಯದಾಸ ಎನ್ನುವ ಅಂಕಿತೋಪದೇಶವನ್ನು ಪಡೆದು ಸಂಚಾರಕ್ಕೆ ಹೊರಟರು... ಹರಿಕಥಾಪ್ರಾವೀಣ್ಯರಾಗಿದ್ದರು.. ಆಸುಕವಿಗಳಾಗಿ ಕನ್ನಡ, ತಮಿಳು, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಪದಗಳನ್ನು  ಆಗಿಂದಾಗಲೇ ರಚನೆ ಮಾಡಿ ಹರಿಕಥಾ ಸಮಯದಲಿ ಮಧ್ಯ ಮಧ್ಯ ಹಾಡುತ್ತಿದ್ದರು.... ರಾಮಾಯಣ, ಮಹಾಭಾರತ, ಭಾಗವತ್ ಪುರಾಣಗಳನ್ನು ಹರಿಕಥೆಗಳಲ್ಲಿ ಹೇಳ್ತಿದ್ದರು.. ಜನರು ಮಂತ್ರಮುಗ್ಧರಾಗುತ್ತಿದ್ದರು.  ಆರಣಿಯಿಂದ ಮೈಸೂರು ವರೆಗೂ ಎಲ್ಲಾ ಊರುಗಳಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ಮೈಸೂರು ಸಂಸ್ಥಾನದಲ್ಲಿ 48 ದಿನ ಹರಿಕಥೆಯನ್ನು ಹೇಳಿದಕ್ಕಾಗಿ ಆಗಿನ ರಾಜರಿಂದ ಬಂಗಾರದ ಕಡಗೆಯನ್ನೂ ಬಹುಮತಿಯಾಗಿ ಹೊಂದಿದವರಾಗಿದ್ದರು... 


ಶ್ರೀ ಸತ್ಯವಿಜಯದಾಸರ  ಆರಾಧನೆ ಈ ಏಕಾದಶಿ ಬರುವುದಿದೆ. ಈ  ಶುಭಸಮಯದಲಿ ಇವತ್ತಿನವರೆಗೂ ತುಂಬಾ ಜನರಿಗೆ ತಿಳಿಯದ ನಮ್ಮ ತಾತನವರಂತಹಾ ಗುಪ್ತಸಾಧಕರ ಚರಿತ್ರೆಯನ್ನು ಸಂಶೋಧಿಸಲು ಪ್ರೇರಣೆ ಆಗಿದೆ.. ಶ್ರೀ ತಾತನವರಾದ ಸತ್ಯವಿಜಯದಾಸರು ಅವರ ಗುರುಗಳಾದ ಶ್ರೀನಿವಾಸವಿಠ್ಠಲರ , ಪರಮಗುರುಗಳಾದ ಶ್ರೀ ಗುರುಜಗನ್ನಾಥವಿಠಲರ ಅನುಗ್ರಹದಿಂದ ಅವರೆಲ್ಲರ  ಅಂತರ್ಗತ ಪರಮಾತ್ಮನು ಈ ಮಹತ್ಕಾರ್ಯಕ್ಕೆ ದನ್ನಾಗಿ ನಿಲ್ಲಬೇಕಷ್ಟೇ.. ಇವತ್ತಿನ ಈ ಸಣ್ಣ ಸೇವಾ ಕುಸುಮವನ್ನು ಅಸ್ಮದ್ ಪತ್ಯಂತರ್ಗತ,  ದಾಸಾರ್ಯರಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ವೆಂಕಟೇಶನ ಪದಪದ್ಮಗಳಲ್ಲಿ  ಸಮರ್ಪಣೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***


ಶ್ರೀ ಸತ್ಯವಿಜಯದಾಸರ ಸ್ಮರಣೆ 
ಭಾಗ - 2

ಶ್ರೀ ದಾಸಾರ್ಯರಿಗೆ ಮೂರು ಮಕ್ಕಳು ಆದ ನಂತರ ಅವರ ತಾಯಿಯವರಾದ ಪದ್ಮಾವತಿ ಅಮ್ಮನವರು ಪರಮಾತ್ಮನ ಸೇರುತ್ತಾರೆ ನಂತರದ ಸ್ವಲ್ಪ ಕಾಲಕ್ಕೆ   ತಂದೆಯವರಾದ ಶ್ರೀನಿವಾಸವಿಠಲರು ಪರಂಧಾಮಕ್ಕೆ ತೆರಳಿರುತ್ತಾರೆ..... ಆಗ ಶ್ರೀ ಸತ್ಯವಿಜಯದಾಸರು ವೈರಾಗ್ಯ ಚಿತ್ತರಾಗಿ ಮಡದಿ ಮಕ್ಕಳ ಜೊತೆ ದಕ್ಷಿಣ ಭಾರತಯಾತ್ರಕ್ಕೆ ಹೊರಡುತ್ತಾರೆ... ಎಲ್ಲಿ ಹೋದರೇ ಆ ಜಾಗದಲ್ಲಿ ಉದಯಕಾಲದ ಆಹ್ನಿಕಾದಿಗಳನ್ನು ಮುಗಿಸಿ ಮಡದಿ ಮಕ್ಕಳನ್ನು ಕರೆದುಕೊಂಡು ಯಾಯಿವಾರಕ್ಕೆ ಹೋಗಿ ಬಂದು ಆವತ್ತು ಬಂದ ಸಾಮಾಗ್ರಿಯನ್ನು ಉಪಯೋಗಿಸಿ ಅಡುಗೆ ,ಆವತ್ತಿನ ಅವಸರಗಳನ್ನು ಪೂರೈಸಿಕೊಂಡು ಮಿಕ್ಕ ಎಲ್ಲವನ್ನೂ ಅರ್ಥಾತ್ ಅಕ್ಕಿ, ಬೇಳೆ ಮೊದಲು ಹಣವನ್ನೂ ಸೇರಿಸಿ ದಾನಮಾಡುತ್ತಿದ್ದರು.. ಮಧ್ಯಾಹ್ನದ ಪೂಜಾದಿಗಳು ,ಭೋಜನಾದಿಗಳನ್ನ ಮುಗಿಸಿ ಪರಿವಾರದ ಸದಸ್ಯರು ಎಲ್ಲರೂ ಭಜನೆಯಲ್ಲಿ ಸಂಜೆವರೆಗೂ ತೊಡಗುತ್ತಿದ್ದರು.. ನಂತರ  ಆಯಾ ಗ್ರಾಮಗಳಲ್ಲಿ ಹರಿಕಥೆಗಳನ್ನು ಸಂಜೆಯ ಸಮಯದಲಿ ಹೇಳುತ್ತಾ... ಮಾಧ್ವಮತದ ಹಾಗೂ ದಾಸ ಸಾಹಿತ್ಯದ ಹಿರಿಮೆಯನ್ನು ಜನಮನಮಂದಿರಗಳಲ್ಲಿ ಸ್ಥಿರವಾಗಿರುವಂತೆ ಮಾಡುತ್ತಿದ್ದರು... ಹೀಗೆ ಸಾಗುತ್ತಿದ್ದ ಅವರ ಯಾತ್ರೆಯಲ್ಲಿನ ನದೀದೇವತೆಗಳ ಹೆಸರುಗಳನ್ನೇ ತಮ್ಮ ಹೆಣ್ಣು ಮಕ್ಕಳಿಗೆ ಇಡುತ್ತಿದ್ದರು.. ಅವರ 14 ಜನ ಮಕ್ಕಳಲ್ಲಿನ ಹೆಣ್ಣು ಮಕ್ಕಳ ಹೆಸರುಗಳು ಗಂಗಮಣಿ, ಗೋದಾವರಿ , ಸರಸ್ವತಿ , ತುಂಗಭದ್ರಾ ಹೀಗೇ ಇರ್ತಿತ್ತು.. ಮಂತ್ರಾಲಯದಲ್ಲಿ ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ದರ್ಶನ ಪಡೆದನಂತರವೇ ತುಂಗಭದ್ರಾ ಎನ್ನುವ ಮಗಳನ್ನ ಪಡೆದರು... ಹಾಗೇ ಕ್ಷೇತ್ರಸ್ಥ ಮೂರ್ತಿಗಳ ಹೆಸರುಗಳೇ ಗಂಡು ಮಕ್ಕಳ ಹೆಸರುಗಳಾಗಿತ್ತು... (ಕೃಷ್ಣ, ರಂಗ, ಕೇಶವ, ನಾರಾಯಣ (ಈ ನಾರಾಯಣ ಎನ್ನುವರೇ ಈಗ ಕರುಣಾಸಿಂಧುವಿಠಲರಾಗಿ ದಾಸ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ ) ...

ಹೀಗೆ ಯಾತ್ರೆಯನ್ನು ಮುಗಿಸಿ ಮತ್ತೆ ಹಿಂತಿರುಗಿ ಗುಂಟೂರಿಗೆ ಬಂದು ಸ್ಥಿರ ವಾಸವನ್ನು ಏರ್ಪಾಡು ಮಾಡಿಕೊಂಡರು... 

ಗುಂಟೂರು ಜನರಿಗೆ ದಾಸರೆಂದರೇ ಪರಮ ಗೌರವಾಭಿಮಾನಗಳಾಗಿದ್ದವು... ದಾಸರು ಯಾಯಿವಾರಕ್ಕೆ ಹೋಗುವಾಗ ಹಾಡುವ ದಾಸರ ಪದಗಳನ್ನು ಮನೆಮನೆಯ ಜನರು ಮಂತ್ರಮುಗ್ಧರಾಗಿ ಕೇಳುತ್ತಿದ್ದರು ....

ಶ್ರೀ ದಾಸರು ತಮ್ಮ ಬಳಿ ಸಹಾಯಕ್ಕಾಗಿ ಬಂದವರಿಗೆ ಎಲ್ಲರೀತಿಯ ಸಹಾಯ ಮಾಡುತ್ತಿದ್ದರು ....


ಅನಾರೋಗ್ಯದಿಂದ ಬಳಲುತ್ತಿರುವವರು ದಾಸಾರ್ಯರ ಬಳಿ ಬಂದು ಬೇಡಿಕೊಂಡಾಗ ಶ್ರೀ ದಾಸರು ಅವರಿಗೆ ಯಂತ್ರವನ್ನು ಮಂತ್ರಿಸಿ ಶ್ರೀ ರಾಯರ ಪ್ರಸಾದದಂತೆ ಆ ರೋಗಿಗಳಿಗೆ ನೀಡುತ್ತಿದ್ದರು... ಶ್ರೀ ರಾಯರ ಮಹಿಮೆಯಿಂದ ಜನರು ತಮ್ಮ ರೋಗಾದಿಗಳನ್ನು ದೂರಮಾಡಿಕೊಳ್ತಿದ್ದರು..... 

ಇವರ ಮನೆ ಹೆಸರು ಆರಣಿ ಆದರೂ ಸಹಾ ಇವರು ಸಹಾಯ ಕೇಳಿ ಬಂದವರಿಗೆ ಹಾಗೂ ಹಸಿದುಬಂದವರಿಗೆ ದೊಡ್ಡ ದೊಡ್ಡ ಹರಿವಾಣದಲ್ಲಿ ಅರ್ಥಾತ್ ಪರಾತದಲ್ಲಿ (ತಾಮಾಣ ಅಂತಿವಿ ತೆಲುಗುಲಿ) ಬಡಿಸುವುದರಿಂದ ಇವರನ್ನು  ಪರಾತ ಶ್ರೀನಿವಾಸವಿಠಲರೆಂದೇ  ಕರೆಯುತ್ತಿದ್ದರು.. ಅದೇ ಹೆಸರೇ ಇವರ ಮನೆ ಹೆಸರಾಗಿ ವಾಸಿಯಾಗಿದೇ... ಇವತ್ತಿಗೂ ಆರಣಿ, ಸತ್ಯವಿಜಯಪುರದಲ್ಲಿ ಶ್ರೀನಿವಾಸವಿಠ್ಠಲದಾಸರ ಸಂಸ್ಥಾನವಿದೆ.. ಆಸ್ತಿಯೂ ಇದೆ. ಆದರೇ ಆ ಆಸ್ತಿ ಬೇಡ ಎಂದು ವೈರಾಗ್ಯ ಪುರುಷರಾದ ಶ್ರೀ ಶ್ರೀನಿವಾಸವಿಠಲರೂ ಹಾಗೆ ಅವರ ಮಕ್ಕಳು ಆಂಧ್ರಪ್ರದೇಶದ ಗುಂಟೂರು ಬಂದು ಸ್ಥಿರವಾಸರಾಗಿಬಿಟ್ಟರು.. ಆಂಧ್ರದವರು ಇವರನ್ನ ಪರಾತ ವಂಶಸ್ಥರು  ಅಂತ ಕರೆಯಲು ಷುರೂ ಮಾಡಿದರು... ಕಾಲಕ್ರಮದದಲ್ಲಿ ಈ ಪರಾತ -ಪರಾಯತ ಆಗಿದೆ....

ಹಾಗೇ ಜೀವನ ಭೃತಿಗಾಗಿ ಏನು ಮಾಡಬೇಕು ಎಂದು ಕೇಳಲು ಬಂದವರಿಗೆ ಶ್ರೀ ಸತ್ಯವಿಜಯದಾಸರು   ವ್ಯಾಪಾರ ರಹಸ್ಯಗಳನ್ನು ಹೇಳಿಸಿಕೊಟ್ಟು ಅವರಿಗೆ ಜೀವನೋಪಾಧಿಯನ್ನು ತೋರುಸ್ತಿದ್ದರು... ಈಗಿನ ಪ್ರಖ್ಯಾತ ಅಡಕೆ ಪೊಡಿ (crane) ಕಂಪೆನಿಯ owner  ಗುಂಟೂರಿಗೆ ಹೆಂಡತಿ ಮಕ್ಕಳ ಜೊತೆ ಖಾಲಿ ಕೈಗಳಿಂದ ಬಂದವರಾಗಿದ್ದರು... ಆಗ ದಾಸಾರ್ಯರ ಮಹಿಮೆ ತಿಳಿದು ಅವರಿಗೆ ಶರಣುಹೋದಾಗ ಶ್ರೀ ಸತ್ಯವಿಜಯದಾಸರು ಅವರಿಗೆ ಅಡಿಕೆ ಪುಡಿ ಮಾಡುವುದರಲ್ಲಿನ ಮೆಲಕುವಗಳನ್ನ ತೋರಿಸಿಕೊಟ್ಟರು... ಅದನ್ನು ಕಲೆತು ಅವರು , ಸೈಕಲ್ ನಲ್ಲಿ ವ್ಯಾಪಾರ ಷುರೂ ಮಾಡಿದವರು ಅತ್ಯುನ್ನತ ಸ್ಥಾನಕ್ಕೆ ಬಂದವರಾಗಿದ್ದಾರೆ.  ಇವತ್ತು crane ಅಡಿಕೆ ಪುಡಿ ಯವರ ಪ್ರಾಮುಖ್ಯತೆ ಎಷ್ಟು ಇದೆ ಅಂತ ಎಲ್ಲರಿಗೂ ಗೊತ್ತಿದ್ದ ವಿಷಯವೇ.....

ಇಪ್ಪತ್ತು  ವರ್ಷಗಳ ಹಿಂದೆ crane ಅಡಿಕೆ ಪುಡಿ ವತಿಯವರು ಶ್ರೀ ಸತ್ಯವಿಜಯದಾಸರ ಸ್ಮರಣಾರ್ಥ ದಾಸಾರ್ಯರ ಹೆಸರಿಂದ ಮೆಮೆಂಟೋಗಳನ್ನು  ದಾಸಾರ್ಯರ ಮಕ್ಕಳಿಗೆ ಹಾಗೂ ಗುಂಟೂರುನಲ್ಲಿನ ಸತ್ಯವಿಜಯದಾಸ ಭಜನೆಮಂಡಲಿಯ ಸದಸ್ಯರಿಗೂ ನೀಡಿದರು... ಇದು ಒಂದು ಉದಾಹರಣೆ ಅಷ್ಟೆ.. ಈ ತರಹದ ಜೀವನದಲ್ಲಿ ಅವರವರ ಬದುಕಿಗೆ ದಾಸಾರ್ಯರು ಮಾಡಿದ ಸಹಾಯವನ್ನು ಮರೆತ ಜನರಿಲ್ಲ ಅಂದರೇ ಅತಿಶಯೋಕ್ತಿಯಲ್ಲ...

ಆದರೇ ಶ್ರೀ ದಾಸಾರ್ಯರು  ಮಾತ್ರ ಇದರಲ್ಲಿ ನನ್ನದೇನೂ ಇಲ್ಲ ಶ್ರೀ ರಾಯರ ಪರಮಕಾರುಣ್ಯ ಇದಕ್ಕೆ ಕಾರಣ ಅಂತ ಹೇಳುತ್ತಿದ್ದರು... ಅಷ್ಟು ಉದಾರ ಸ್ವಭಾವಿಗಳಾದ ಶ್ರೀ ದಾಸಾರ್ಯರ ಜೀವನ ಚರಿತ್ರೆಯ ಮತ್ತಷ್ಟು ವಿಷಯಗಳನ್ನು ಮುಂದಿನ ಭಾಗದಲ್ಲಿ ನೋಡೋಣ ಎಂದು ತಿಳಿಸುತ್ತಾ... ಅಸ್ಮದ್ ಪತ್ಯಂತರ್ಗತ, ಶ್ರೀ ಸತ್ಯವಿಜಯದಾಸರಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನ ಪದ ಪದ್ಮಗಳಲ್ಲಿ ಈ ಪುಟ್ಟ ಸೇವಾ ಸುಮಮಾಲೆಯ ಸಮರ್ಪಣೆ ಮಾಡುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***

ಶ್ರೀ ಸತ್ಯವಿಜಯದಾಸರ ಸ್ಮರಣೆ

ಭಾಗ - 3

ಶ್ರೀ ಸತ್ಯವಿಜಯದಾಸರು ದಕ್ಷಿಣ ಭಾರತಯಾತ್ರೆಯನ್ನು ಮುಗಿಸಿ ಗುಂಟೂರು ಬಂದು ನೆಲಸಿರ್ತಾರೆ. ತುಂಬಿದ ಸಂಸಾರ. ಬಡತನ, ಇವೆಲ್ಲವನ್ನೂ ದಾಟೋಕೆ ಹಣ ಸಂಪಾದನೆ ಮಾಡಲೇಬೇಕು ಅಂತ ದಾಸಾರ್ಯರು ಎಷ್ಟು ಬೇಡ ಅಂದರೂ ಸಹ ಅವರ ಸಂಬಂಧೀಕರು ಬಹಳ ಒತ್ತಾಯ ಮಾಡಿ ಅವರಜೊತೆ ಇವರನ್ನು ಸೇರಿಸಿಕೊಂಡು ಬ್ರಾಹ್ಮಣರ ಹೋಟೆಲ್ ಪ್ರಾರಂಭ ಮಾಡಿದರು. ಅಲ್ಲಿ ವಿಶೇಷತೆ ಅಂದರೆ ಬಂದವರು ಪ್ರವರ ಹೇಳಿದರೆ ತಿಂಡಿ ಮಾಡಲು ಅರ್ಹರು.. ರುಚಿಕರವಾದ ಟಿಫಿನ್ ಪದಾರ್ಥಗಳು ಮಾಡುವುದರಿಂದ ಅದೂ ಶುದ್ಧ ಬ್ರಾಹ್ಮಣರ ನಿರ್ವಹಣ ಆದ್ದರಿಂದ ಜನರಿಗೆ ತುಂಬಾ ಇಷ್ಟವಾಯಿತು.  ವ್ಯಾಪಾರ ಬಹಳ ಚೆನ್ನಾಗಿ ನಡೆತಿತ್ತು. ಆದರೆ ದಾಸಾರ್ಯರ ಮನಸಿನಲ್ಲಿ ಏನೋ ಕಸಿವಿಸಿ. ಯಾಯಿವಾರ ಮಾಡಂತ ತಂದೆಯ ಆಜ್ಞೆಯನ್ನು ಮೀರಿ ಈ ರೀತಿಯ ಲೌಕಿಕ ವೃತ್ತಿ ಅವರಿಗೆ ಸಮಾಧಾನ ನೀಡಲಿಲ್ಲ. ಒಂದು ದಿನ ದಾಸಾರ್ಯರಿಗೆ ಸ್ವಪ್ನದಲ್ಲಿ ಅವರ ತಂದೆಯವರಾದ ಶ್ರೀ ಶ್ರೀನಿವಾಸವಿಠಲರು ಬಂದು ನಿನಗೆ ನಾನು ದಾಸತ್ವ ನೀಡಿ ಯಾಯಿವಾರ ಮಾಡಿಯೇ ಬದುಕಲು ಹೇಳಿದರೆ , ನೀ ಮಾಡ್ತಿರುವ ಕಾರ್ಯವೇನು ಎಂದು ಎಚ್ಚರಿಕೆ ನೀಡಿದಂತಾಯ್ತು. ಸರಿ ಇದು ನನ್ನ ಮನಸಿನ ಭಾವನೆ, ಅದಕ್ಕೆ ಕನಸಿನಲ್ಲಿ ಬಂದಿದೆ ಅಂತ ದಾಸಾರ್ಯರು ಯೋಚನೆ ಮಾಡಿ ಸುಮ್ಮನಾದರು. ಆದರೆ ಇದೆ ವಿಷಯ ಪದೇ ಪದೇ ತಂದೆಯವರು ಸ್ವಪ್ನದಲ್ಲಿ  ಬಂದು ಹೇಳಿದರು, ಹಾಗೊಂದು ದಿನ ಸ್ವಪ್ನದಲ್ಲಿಯೇ ಗಟ್ಯಾಗಿ ಹೊಡೆದರಂತೆ. ಅಷ್ಟೇ ಮರುದಿನ ದಾಸಾರ್ಯರ ಎರಡೂ ಕೈಗಳಲ್ಲಿ ದೊಡ್ಡ ದೊಡ್ಡ  ಗಡ್ಡೆಯಾಗಿ ತುಂಬಾ ಅವಸ್ಥೆಗೆ ಗುರಿಯಾದರು. ಆಗ ನಿರ್ಧಾರ ಗಟ್ಟಿ ಆಯಿತು.  ಇನ್ಮೇಲೆ ನನ್ನ ಜೀವನದಲ್ಲಿ ಈ ರೀತಿಯ ಲೌಕಿಕ ವೃತ್ತಿಗೆ ಠಾವಿಲ್ಲವೆಂದು , ತಂದೆಯವರಿಗೆ ಕ್ಷಮೆ ಬೇಡಿ, ಆ ಹೋಟೆಲ್ ಪೂರ್ತಿ ಅವರ ಸಂಬಂಧೀಕರಿಗೆ ನೀಡಿ ತಾವು ಮುಂದಿನ ದಿನಗಳಲ್ಲಿ ಬದುಕಿರುವವರೆಗೂ, ಕೊನೆಯ ಉಸಿರು ಬಿಡುವವರೆಗೂ ಯಾಯಿವಾರದಿಂದ ಬಂದ ಪದಾರ್ಥಗಳನ್ನು ಮಾತ್ರ ಸ್ವೀಕಾರ ಮಾಡ್ತಿದ್ದರು. ಅದೂ ಆಯಾ ದಿನಗಳಿಗೆ ಪರಿಮಿತವಾಗಿ.. ಇದೆ ನಿಜದಾಸರ ಲಕ್ಷಣವಲ್ಲವೆ... ಹೀಗೆ ದಿನಗಳು ಸಾಗುತ್ತಿದ್ದವು. ದಿನಾ ಯಾಯಿವಾರ, ಪೂಜೆ, ಭಜನಾದಿಗಳಿಂದ ಸಂಭ್ರಮದ ಜೀವನ ಅವರದಾಗಿತ್ತು... 

ಶ್ರೀ ದಾಸಾರ್ಯರಿಗೆ ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ಅನುಗ್ರಹ ತುಂಬಾ ಇದ್ದಿತು.. ಪ್ರತೀಕ್ಷಣ ರಾಯರ ಸ್ಮರಣೆ ಬಿಡದೇ ಮಾಡ್ತಿದ್ದರು ದಾಸಾರ್ಯರು.. ಹೀಗೊಂದು ನನ್ನ ತಾಯಿಯವರು ನೋಡಿದ  ಪ್ರತ್ಯಕ್ಷ ಘಟನೆ...

ಶ್ರೀ ಸತ್ಯವಿಜಯದಾಸರು ಭೋಜನವನ್ನು ಮುಗಿಸಿ ಮಲಗಿದ್ದರು.. ನನ್ನ ತಾಯಿ ರಾಧಾಬಾಯಿಯವರು ಮತ್ತೆ ಅವರ ಅಕ್ಕಂದಿರು ಊಟಕ್ಕೆ ಕುಳಿತರು. ಆಗ ಇದ್ದಕ್ಕಿದ್ದಹಾಗೇ ದಾಸಾರ್ಯರು ಗಟ್ಯಾಗಿ ಒದರಲು ಆರಂಭಿಸಿದರು.. ಅವರ ಕುತ್ತಿಗೆ ಮೇಲೆ ಯಾರೋ ಕೂತು ಭಾರವಾಗಿ ಕೈ ಹಾಕಿ ಅವರ ಕತ್ತನ್ನು ಹಿಡಿದು ಕೊಲ್ಲಲು ಬಂದಹಾಗೇ... ಅದು ದೆವ್ವ ಅನ್ನುವುದು ಅರ್ಥ ಆಗ್ತಿದೆ ಎಲ್ಲರಿಗೂ.. ದಾಸಾರ್ಯರು ಒದುರ್ತಲೇ... ರಾಘವೇಂದ್ರಾ ರಾಘವೇಂದ್ರಾ  ಅಂತ ರಾಯರನ್ನು ಕೂಗಲಾರಂಭಿಸಿದರು.. ಆಗ ಅವರ ಮನೆಯಲ್ಲಿ ಒಂದು ಹಳೆಯ ರಾಯರ ಪಟವಿದ್ದಿತು ಆ ಪಟದಲ್ಲಿ ರಾಯರ ಪಕ್ಕದಲ್ಲಿ ಒಂದು ಕಟ್ಟಿಗೆ ಇದೆ... (ಈಗಲೂ ಹಳೆಯ ರಾಯರ ಚಿತ್ರಪಟಗಳಲ್ಲಿ ನಾವು ನೋಡಬಹುದು) ಆಗ  ಪಟದಲ್ಲಿಂದ ಆ ಕಟ್ಟಿಗೆ ಬಂದು ನಮ್ಮ ತಾತನವರಾದ ಶ್ರೀ ಸತ್ಯವಿಜಯದಾಸರಾರ್ಯರ ಮೇಲೆ ಕುಳಿತ ದೆವ್ವವನ್ನು ಓಡಿಸುತ್ತಾ... ಹೊರಗಡೆ ಇದ್ದ ಬೇವಿನ ಮರದಮೇಲೆ ಹೋಗಿ ಅಲ್ಲಿ ಕುಟ್ಟಿ ಕುಟ್ಟಿ ಬಂದೀತು... ಈ ಸಂಘಟನೆಯನ್ನು ಊಟ ಮಾಡ್ತಿದ್ದ ನನ್ನ ತಾಯಿಯೇ ಮೊದಲು ಎಲ್ಲರೂ ಎಂಜಲುಕೈಯಿಂದಲೇ ಆ ಕಟ್ಟಿಗೆ ಹಿಂದೆ ಓಡಿದರು . ಆ ಕಟ್ಟಿಗೆ ಊಟ ಮಾಡ್ತಿದ್ದವರ ಮಧ್ಯದಿಂದಲೇ ಹೋಗಿದೆಯಂತಲೂ ಅಮ್ಮ ಇವತ್ತಿಗೂ ನೆನಸಿಕೋತಾರೆ... ಆ ಕಟ್ಟಿಗೆ  ದೆವ್ವವನ್ನು ಹಿಂಬಾಲಿಸುತ್ತಾ ಹೋಗಿ ಮರದಮೇಲೆ ಕುಟ್ಟಿ ಮತ್ತೆ ಆ ಕಟ್ಟಿಗೆ ಯಥಾಸ್ಥಾನಕ್ಕೆ ಅರ್ಥಾತ್ ಪಟದೊಳಗಡೇನೇ ಬಂದು ಸೇರಿತು..... 

ದಾಸಾರ್ಯರು ತಮ್ಮ ಮೇಲೆ ಶ್ರೀ ರಾಯರ ಕರುಣೆಯನ್ನು ಕಂಡು ಪುಲಕಿತರಾಗಿ ಎರಡು ಪದಗಳಿಂದ ರಾಯರ ಸ್ತೋತ್ರ ಮಾಡಿದರು .. ನನ್ನ ಈ ಜೀವನ ರಾಯರ ಭಿಕ್ಷೆ.. ಅವರ ಧ್ಯಾನ ಹಾಗೂ ನನ್ನ ಪರಮಾತ್ಮನ ಧ್ಯಾನ ಇಷ್ಟು ಸಾಕು ಈ ಜೀವನವನ್ನು ಕಳೆಯಲು ಎಂದು ರಾಯರ ಮಾಹತ್ಮ್ಯವನ್ನು ನೆನೆಸಿಕೊಂಡು - ನೆನೆಸಿಕೊಂಡು ಭಕ್ತಿಪರವಶರಾದರು... 

    ಹಾಗೆ ಪ್ರತೀದಿವಸ ದಾಸಾರ್ಯರ ಮನೆಯಲ್ಲಿ ಆಯಾ ದಿನಗಳಲ್ಲಿ ಬರುವ ದಾಸಾರ್ಯರ, ಯತಿಗಳ ಆರಾಧನೆಗಳು ಬಹಳ ಅದ್ಭುತವಾಗಿ ಮಾಡುತ್ತಿದ್ದರು... ಆರಾಧನೆಯಿರುವ ದಾಸರ ,ಯತಿಗಳ ಚಿತ್ರಪಟಗಳನ್ನು ಮಣೆಯ ಮೇಲೆ ಇಟ್ಟು ಪೂಜಾದಿಗಳು ಮಾಡಿ ಬ್ರಾಹ್ಮಣರಿಗೆ ಭೋಜನ, ದಕ್ಷಿಣ ತಾಂಬೂಲಾದಿಗಳನ್ನು  ನೀಡಿ ತೃಪ್ತಿಪಡಿಸುತ್ತಿದ್ದರು .. ಇವೆಲ್ಲವೂ ಸಹಾ ಯಾಯಿವಾರ ವೃತ್ತಿಯಿಂದ ಸಂಗ್ರಹವಾದ  ಧಾನ್ಯ/ ಹಣದಿಂದ ಮಾತ್ರ ಆಗ್ತಿತ್ತು.. ಯಾಯಿವಾರ ಹೊರತು ಅವರು ಬೇರೇ ಯಾವ ವೃತ್ತಿಯನ್ನು  ಜೀವನದಲ್ಲಿ ಮಾಡೇ ಇಲ್ಲ.... ನಂತರ ಸಂಜೆಯ ಭಜನಾದಿಗಳು ಮುಗಿದನಂತರ ಆರಾಧನೆಯಿರುವ ದಾಸಾರ್ಯರ, ಯತಿಗಳ ಚರಿತ್ರೆಯನ್ನು ತಿಳಿಸುತ್ತಿದ್ದರು... 

ಆಗಾಗ ದಾಸರ ಮನೆಗೆ ವಿವಿಧ ಪ್ರದೇಶಗಳಿಂದ ಹರಿದಾಸರು ಬಂದು ಸೇರುತ್ತಿದ್ದರು... ಎಲ್ಲರೂ ಕೂತು ಹಾಡುಗಳು ಹಾಡುತ್ತಿದ್ದಾಗ ಆ ದೃಶ್ಯವನ್ನು ನೋಡಲು ಪರಮಾನಂದವಾಗ್ತಿತ್ತು ಅಂತ ನನ್ನ ತಾಯಿಯವರು ಹೇಳ್ತಾರೆ...

ದಾಸಾರ್ಯರು ಪದಗಳು ಹಾಡುವಾಗ ಆ ಪದದಲ್ಲಿನ ಭಾವವನ್ನು ಅದೆಷ್ಟು ಮನಮುಟ್ಟುವಂತೆ ಹಾಡ್ತಿದ್ದರಂದರೇ ಸಾಮಾನ್ಯರಿಗೂ ಆ ಪದದ ಭಾವ ಅರಿವಾಗ್ತಿತ್ತು...ಹಾಗೆ ಹಾಡುವಾಗ ದಾಸಾರ್ಯರ  ಕಣ್ಣಲ್ಲಿ ಧಾರಾಪಾತವಾಗಿ ನೀರು ಸುರಿತಿರ್ತಂತೆ.... ಅಷ್ಟೇ ಮಂತ್ರಮುಗ್ಧರಾಗಿ ಪದಗಳು ಹಾಡುತ್ತಿದ್ದರು... 

ಸತ್ಯವಿಜಯದಾಸರ ಸಂಗ್ರಹವೂ ಅಷ್ಟೇ ಅದ್ಭುತ... ಅವರು ನಮಗೆ ಉಳಿಸಿಹೋದ ಶ್ರೀ  ಪುರಂದರದಾಸಾರ್ಯರೇ ಮೊದಲು  ಮಾಡಿ ವೆಂಕಟವಿಠಲರ ವರೆಗೂ ತಂದೆವೆಂಕಟೇಶವಿಠಲರ ವರೆಗೂ ಅಪ್ರಕಟಿತ ಕೃತಿಗಳು ಬಹಳಷ್ಟು ಇವೆ... 

ಶ್ರೀ ದಾಸಾರ್ಯರು ಭಾಗ್ಯಾದಲಕ್ಷ್ಮೀ ಬಾರಮ್ಮಾ ಈ ಹಾಡಿಗೆ ಅನುಪಲ್ಲವಿ ಸಹಾ ಹಾಡ್ತಿದ್ದರು... ಅದು ಅವರ ಹಿರಿಯರ ಸಂಗ್ರಹವಾಗಿತ್ತಂತೆ.. ನಾವು ಈಗಲೂ ಅನುಪಲ್ಲವಿ ಹಾಡುತ್ತೇವೆ... ಅವರು ತಮ್ಮ ಹಸ್ತಪ್ರತಿಯನ್ನು ಸಂಸ್ಕೃತ ಭಾಷೆಯಲ್ಲೇ ಬರೆದಿಡ್ತಿದ್ದರು... 

ಹೀಗೆ ಪರಮಾತ್ಮನ ಪರಮಭಕ್ತರಾದ ಶ್ರೀ ಸತ್ಯವಿಜಯದಾಸರ ಚರಿತ್ರೆಯ ಕುರಿತು ಮತ್ತಷ್ಟು ವಿಷಯಗಳನ್ನು ಮುಂದಿನ ಭಾಗದಲ್ಲಿ ಹಂಚಿಕೊಳ್ಳುತ್ತೇನೆ ಎಂದು ತಿಳಿಸುತ್ತಾ.. 

ಈ ಪುಟ್ಟ ಲೇಖನಾ ಸುಮಮಾಲೆಯನ್ನು ಅಸ್ಮದ್ ಪತ್ಯಂತರ್ಗತ 
ಶ್ರೀಸತ್ಯವಿಜಯದಾಸಾರ್ಯರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನ ಅಡಿದಾವರಗಳಲ್ಲಿ ವಿನಮ್ರಚಿತ್ತದಿಂದ ಸಮರ್ಪಣೆ ಮಾಡುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

*******

ಶ್ರೀ ಸತ್ಯವಿಜಯದಾಸರ ಸ್ಮರಣೆ
ಭಾಗ - 4

ಶ್ರೀ ದಾಸಾರ್ಯರ ಮೇಲೆ ನಮ್ಮ ಕಲ್ಪವೃಕ್ಷ, ಕಾಮಧೇನುಗಳಾದ ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ಅನುಗ್ರಹ ಹೇಗೆ ಆಯಿತು ಎನ್ನುವುದು ಹಿಂದಿನ ಭಾಗದಲ್ಲಿ ನೋಡಿದ್ದೇವೆ...  

ಹೀಗೆ ರಾಯರ ಭಕ್ತರಾದ ಶ್ರೀ ಸತ್ಯವಿಜಯದಾಸರು ಸದಾಕಾಲ  ಭಗವತ್ ಸ್ಮರಣಾಸಕ್ತರಾಗಿದ್ದರು.. ತಮ್ಮ ಬಳಿ ಬಂದ ಪ್ರತಿಯೊಬ್ಬರಿಗೂ ಅವರವರ ಕಷ್ಟಗಳಿಗೆ ಪರಿಹಾರ ತೋರಿಸುತ್ತಿದ್ದರು... ಸಮಸ್ಯೆ ಹೇಳಕೊಳ್ಳುಲು ಬಂದವರ ಸಮಸ್ಯೆ ತಿಳಿದುಕೊಂಡು ದೇವರ ಮುಂದೆ ಕುಳಿತು ತುಳಸೀಮಾಲೆಯನ್ನು ಹಿಡಿದು ಧ್ಯಾನದಲ್ಲಿ  ಮಗ್ನರಾಗ್ತಿದ್ದರು.. ಸ್ವಲ್ಪ ಸಮಯದ ನಂತರ ಧ್ಯಾನವನ್ನು ಮುಗಿಸಿ ಆ ಬಂದ ಶರಣಾರ್ಥಿಗೆ ತರುಣೋಪಾಯವನ್ನು ತಿಳಿಸಿ ರಾಯರ ಮಂತ್ರಾಕ್ಷತೆಯನ್ನು ನೀಡಿ ಕಳಿಸುತ್ತಿದ್ದರು.. ಆಗ ಆ ಬಂದ ಶರಣಾರ್ಥಿಗಳು ದಾಸರ ಹೇಳಿದ ರೀತಿಯಲ್ಲಿ ನಡೆದುಕೊಂಡು ತಮ್ಮ ಎಷ್ಟೇ ದೊಡ್ಡದಾದ ಸಮಸ್ಯೆಯನ್ನಾದರೂ ಪರಿಹಾರ ಮಾಡಿಕೊಳ್ತಿದ್ರು. ಪರಿಹಾರವಾದನಂತರ ದಾಸರನ್ನು ಅವರ ಪರಿವಾರದ  ಜೊತೆಗೆ ತಮ್ಮ ಮನೆಗೆ ಆಹ್ವಾನ ಮಾಡಿ ಆವತ್ತಿನ ದಿನ ಸಂಜೆ ಭಜನಾಕಾರ್ಯಕ್ರಮ ಏರ್ಪಾಡು ಮಾಡ್ತಿದ್ದರು.. ದಾಸರಿಗೆ ಧನ ಕನಕಾದಿಗಳು ನೀಡಿದಾಗ , ಇವ್ಯಾವದೂ ನಮಗೆ ಬೇಡ . ನಾವು ಏನೂ ಮಾಡಿಲ್ಲ. ಇದು ರಾಯರ ಅನುಗ್ರಹ, ರಾಯರೇ  ಎಲ್ಲವನ್ನೂ ಮಾಡಿರುವುದು ಎಂದು ಹೇಳಿ ಅಕ್ಕಿ ಬೇಳೆ ಅವತ್ತಿಗೆ ಮಾತ್ರ ಸ್ವೀಕಾರ ಮಾಡಿ ಭಜನೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು... ಇವತ್ತಿಗೂ ಗುಂಟೂರು ಜಿಲೆಯಲ್ಲಿನ ಹಿರಿಯರು ದಾಸಾರ್ಯರ ಮಹಿಮಾತಿಶಯಗಳನ್ನು ಮನನ ಮಾಡಿಕೊಳ್ಳುತ್ತಾರಂತೆ...

ಹೀಗೆ ಒಮ್ಮೆ ಒಬ್ಬ ಭಕ್ತನ ಮನೆಯಲ್ಲಿ  ಭಜನೆ ಮುಗಿಸಿ ಬರುವಾಗ ಮಾರ್ಗ ಮಧ್ಯದಲ್ಲಿ ಒಂದು ಕಳ್ಳರ ಗುಂಪು ದಾಸರ ಕುಟುಂಬವನ್ನು ಸುತ್ತಲೂ ನಿಂತು ಸಾಯಿಸಲು ಬಂದಿತು.. ಆಗ ದಾಸರು ತಮ್ಮ ಮಡದಿ ಮಕ್ಕಳಿಗೆ  ಏನೇನೂ ಮಾತಾಡಬೇಡಿ ರಾಯರ ಸ್ಮರಣೆ ಮಾತ್ರ ಮಾಡಿ ಅಂತ ಧ್ಯಾನಮಾಡುತ್ತಾ ಹಾಗೇ ರಸ್ತೆಯಲ್ಲಿ ನಿಂತುಬಿಟ್ಟರು... ನಿಜಕ್ಕೂ ಪರಮಾತ್ಮನ, ಗುರುಗಳ ನಂಬಿದವರನ್ನ ಅವರು ಕೈ ಬಿಡುವುದಿಲ್ಲ ಎನ್ನುವುದು ಮತ್ತೊಮ್ಮೆ ನಿರೂಪಣೆ ಮಾಡಲಂತೇ ... ಇದ್ದಕ್ಕಿದ್ದಹಾಗೆ ಆ ಬಂದ ಕಳ್ಳರ ಗುಂಪು ಯಾವುದೋ ಶಕ್ತಿ ಓಡಿಸಿದಹಾಗೇ ಇವರೆಲ್ಲರನ್ನು ಏನೇನೂ ಮಾಡದೇ ಓಡಿ ಹೋದರು.... ದಾಸಾರ್ಯರು ಪರಮಾತ್ಮನ, ರಾಯರ ಕಾರುಣ್ಯವನ್ನು ಮತ್ತೆ ಮತ್ತೆ ಕೊಂಡಾಡಿ ಮನೆಗೆ ಬಂದು ಸೇರಿದರು... ಹೀಗೆ ಮತ್ತೊಂದು ಸಲ ರಾಯರ ಕಾರುಣ್ಯ ದಾಸರಿಗೆ ಲಭಿಸಿತು.

ಮತ್ತೊಂದು ರಾಯರ ಮಾಹತ್ಮ್ಯ ನೋಡೋಣ.. 
 ಒಬ್ಬ ತಮಿಳುನಾಡಿನ ಮಾಧ್ವಭಕ್ತರೊಬ್ಬರು ಗುಂಟೂರಿಗೆ ಬಂದು ವಾಸಮಾಡಿಕೊಂಡಿದ್ದರು..ಆತನಿಗೆ  ಒಮ್ಮೆ ಹೃದಯದ ತೊಂದರೆ ಆಗಿ ಹಾಸ್ಪಿಟಲ್ ಗೆ  ಹೋದಾಗ ವೈದ್ಯರಂತಾರೆ  ಆಪರೇಷನ್ ಮಾಡಬೇಕಾಗಿದೆ. ಮುಂಬೈ ನಿಂದ ಡಾಕ್ಟರ್ ನ ಕರೆಸುವೆವು.. ನೀವು ಬನ್ನಿ ಅಂತ ಹೇಳಿ ತೇದಿ(ತಾರೀಕು), ಸಮಯ ಹೇಳಿ ಕಳಿಸಿದರು.. ನಂತರ ಆ ಬ್ರಾಹ್ಮಣ ಇಲ್ಲಿ ರಾಯರ ಭಕ್ತರಾದ ಶ್ರೀ ಸತ್ಯವಿಜಯದಾಸರು ಇದ್ದಾರೆ. ಅವರ ಬಳಿ ಹೋಗಿ. ನಿಮಗೆ ಹಾದಿ ಸಿಗುತ್ತದೆ. ಅವರನ್ನು ಮನೆಗೆ ಕರೆಸಿ ಭಜನೆಯನ್ನು ಮಾಡಿಸಿ  ಅಂತ ಯಾರೋ ಹೇಳಿದ ಮಾತು ಕೇಳಿ ಶ್ರೀ ದಾಸಾರ್ಯರ ಬಳಿ ಬಂದಿರ್ತಾರೆ.. ಆಗ ದಾಸರಂತಾರೆ ನಾವು ನಿಮ್ಮ ಮನೆಗೆ ಬಂದು ಭಜನೆ ಮಾಡ್ತಿವಿ ಅಂತ... ಆ ಬ್ರಾಹ್ಮಣ ಒಂದು ಒಳ್ಳೆಯ ದಿನದಲಿ ದಾಸಾರ್ಯರನ್ನ ಪರಿವಾರ  ಸಮೇತ ಕರೆದು ಭಜನೆ ಏರ್ಪಾಡು ಮಾಡ್ತಾನೆ.. ಆಗ ದಾಸಾರ್ಯರು ಭಕ್ತಿಪರವಶರಾಗಿ ತಾರತಮ್ಯವನ್ನು ಬಿಡದೆ ಹಾಡುತ್ತಲೇ ರಾಯರ, ಪರಮಾತ್ಮನ ಕೃತಿಗಳು... ಹೆಚ್ಚಿಗೆ ಹಾಡಿದರು.. ಧ್ಯಾನ ಮಾಡಿ.. ಆ ಬ್ರಾಹ್ಮಣನಿಗೆ ಹೇಳ್ತಾರೆ ತಾವು ಚಿಂತೆ ಮಾಡಬೇಡಿ.. ನೀವು ಆಪರೇಷನ್ ಗೆ ಹೋಗಿ.. ರಾಯರೇ ಎಲ್ಲಾ ನೋಡಿಕೋತಾರೆ  ಅಂತ ತಿಳಿಸಿ ಮಂತ್ರಾಕ್ಷತೆ ಕೊಟ್ಟು ಭಜನೆ ಮುಗಿಸಿ.. ಮನೆಗೆ ಬಂದುಬಿಡ್ತಾರೆ...

ಆಪರೇಷನ್ ದಿನ ಬಂದೇಬಂತು.. ಆಗ ಬ್ರಾಹ್ಮಣನನ್ನು operation theatre ಗೆ ಕರೆದುಕೊಂಡು ಹೋಗಿರ್ತಾರೆ.. doctor ಬಂದು operation ಮುಗಿಸಿ... ಎಲ್ಲಾ ಸರಿಹೋಯಿತು.. ಈತನಿಗೆ ಇನ್ನೇನು ಸಮಸ್ಯೆ ಬರುವುದಿಲ್ಲ ಅಂತ ಹೇಳಿ ಹೋಗಿಬಿಡ್ತಾರೆ.. ಸ್ವಲ್ಪ ಸಮಯದ ನಂತರ ಮುಂಬೈ ನಿಂತ doctor ಬಂದು operation ಗೆ ಸಿದ್ಧ ಮಾಡಿದ್ರಾ ಅಂತ ಕೇಳ್ತಾರೆ.. ಆಗ hospital staff ಅಂತಾರೆ.. ಅದೇನು doctor ನೀವೇ ಒಂದು ಗಂಟೆಯ ಹಿಂದೆ operation ಮುಗಿಸಿ ಹೋಗಿದ್ರಲ್ಲಾ ಅಂದಾಗ .. doctor ಜಗಳ ಮಾಡ್ತಾರೆ.. ನನ್ನನ್ನು ಅಷ್ಟು ದೂರದಿಂದ ಕರೆಸಿ ಬೇರೇಯವರ ಹತ್ರ operation ಮಾಡಿಸಿ ಈಗ ನಾಟಕ ಮಾಡ್ತಿದ್ದಿರಾ ಅಂತ.. ಆಗ operation ಮಾಡಿಸಿಕೊಂಡ ಆ ಬ್ರಾಹ್ಮಣನ  ಕಡೆಗೆ ಹೋಗಿ ಕೇಳಿದಾಗ ಆತನಂತಾನೆ ನಾನು ಶ್ರೀ ಸತ್ಯವಿಜಯದಾಸರು ಹೇಳಿದಂತೆ ರಾಯರ ಸ್ಮರಣೆ ಮಾಡಿದೇ.... ಇದೇ doctor ಬಂದು ನನ್ನ ಜೊತೆ ಪ್ರೀತಿಯಿಂದ ಮಾತನಾಡಿ operation ಮಾಡಿ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿ ಹೋಗಿದ್ದಾರೆ ಅಂತ.. ಆಗ ಎಲ್ಲರಿಗೂ ಅರ್ಥ ಆಯಿತು ಬಂದದ್ದು ಸಾಕ್ಷಾತ್ 
ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಅಂತ... 

ಅಂದಿನಿಂದ  ಆ ಬ್ರಾಹ್ಮಣ ರಾಯರ ಪರಮ ಪರಮ ಭಕ್ತನಾದ... ದಾಸಾರ್ಯರ ಬಳಿಗೆ ಬಂದು ಸ್ವಾಮೀ.. ನೀವು ನಮಗೆ ರಾಯರ ಸ್ಮರಣೆ ಮಾಡಂದಿರಿ.. ರಾಯರೇ ಬಂದು ಜೀವ ಉಳಿಸಿಹೋಗಿದ್ದಾರೆ.. ಅಂತ ದಾಸಾರ್ಯರಿಗೆ ಪದೇ ಪದೇ ನಮಸ್ಕಾರ ಮಾಡಿದನಂತೆ.. ಇದೂ ಸಹಾ ನನ್ನ ತಾಯಿಯವರು ಅವರ ಅಕ್ಕ ಅಣ್ಣಂದಿರೂ, ಗುಂಟೂರು ವಾಸಿಗಳೂ ಕಂಡ ಪ್ರತ್ಯಕ್ಷ ವಿಷಯ... ನಂತರದಲಿ ಆ ಭಕ್ತನು ರಾಯರ ಮೇಲೆ ಕೃತಿ ಸ್ತೋತ್ರಗಳನ್ನು ತುಂಬಾ ರಚನೆ ಮಾಡಿದರು..... ಜೀವ ಇರುವವರೆಗೂ ರಾಯರ ಪದ ಬಿಡದೇ ಬದುಕಿದನಂತೆ ಆ ಪುಣ್ಯಾತ್ಮ... 

ನಂಬಿದವರ ಕೈ ಬಿಡದೆ ಸಲಹುವ ನಮ್ಮ ಗುರುರಾಯನು.. ಈ ಮಾತು ಅದೆಷ್ಟು ಸತ್ಯ ನೋಡ್ರಿ...

ಹೀಗೆ ಶ್ರೀ ಸತ್ಯವಿಜಯದಾಸರಮೇಲೆ ರಾಯರ , ಪರಮಾತ್ಮನ ಕಾರುಣ್ಯ ಅವರ ಜೀವನ ಪರ್ಯಂತ ಕವಚವಾಗಿ ನಿಂತಿತು.. ದಾಸಾರ್ಯರು ಎಲ್ಲಾ ಯತಿಗಳ ದಾಸರ ಆರಾಧನೆಗಳು ಬಹಳ ಉತ್ತಮರೀತಿಯಲ್ಲಿ ಮಾಡ್ತಿದ್ದರು. ಪ್ರತ್ಯೇಕ ಶ್ರೀ ಪುರಂದರದಾಸಾರ್ಯರ ಆರಾಧನೆ ಸಪ್ತಾಹ ಮಾಡುತ್ತಿದ್ದರು... ಅವರು ಹಾಕಿಕೊಟ್ಟ ಈ ಸಂಪ್ರದಾಯ ಅವರ ಪುತ್ರರಾದ  ಕರುಣಾಸಿಂಧುವಿಠಲರು ಇವತ್ತಿಗೂ ನಡೆಸಿಕೊಂಡು ಬರ್ತಿದ್ದಾರೆ... 

ಈ ಪ್ರಸಂಗದಲ್ಲಿ  ಕರುಣಾಸಿಂಧುವಿಠಲರ ವಿಚಾರ ನೋಡೋಣ.. ಇವರ ಪೂರ್ವನಾಮ ನಾರಾಯಣ ಅಂತ.. ಇವರು telephone department ಲಿ ಉದ್ಯೋಗ ಬಂದವರಾಗಿ ಹೆಂಡತಿ ಮಕ್ಕಳ ಜೊತೆ ಆಂಧ್ರಪ್ರದೇಶದ ನೆಲ್ಲೂರು (ನನ್ನ ತವರೂರು) ಬಂದು ಸೇರಿದರು.. ಉದ್ಯೋಗ ಸರ್ಕಾರದೇ.. ಆದರೇ ಜೀವನದಲ್ಲಿ ಬೇಕಾದ ಲೌಕಿಕ ಧನ ಇತ್ಯಾದಿಗಳ ಕೊರತೆಯೇ ಆಗಿತ್ತು.. ಶ್ರೀ ಸತ್ಯವಿಜಯದಾಸರು ಮಗನನ್ನು ನೋಡಲು ನೆಲ್ಲೂರಿಗೆ ಬಂದಾಗ ನಾರಾಯಣಾಚಾರ್ಯರು ತಂದೆಯವರಿಗೆ ತಮ್ಮ ಸಮಸ್ಯೆ ಹೇಳಿಕೊಂಡರು... ಆಗ ಶ್ರೀ ದಾಸಾರ್ಯರು ಮಗನಿಗೆ ಉಪದೇಶ ಮಾಡಿದರು ಹೊರತು ಅಂಕಿತಪ್ರದಾನ ಮಾಡಲಿಲ್ಲ... ಅವರು ಮಗನೊಂದಿಗೆ ಅಂತಾರೆ ... ನೋಡು ನಮ್ಮ ವೃತ್ತಿ ಯಾಯಿವಾರ.  ಅದನ್ನು ನೀ ಮುಂದೆವರಿಸು ಹಾಗು ಹರಿಕಥೆಗಳನ್ನು ಜನರಿಗೆ ಮುಟ್ಟಿಸು, ನಿನ್ನ ಜೀವನ ಉದ್ಧಾರವಾಗುವುದು ಎಂದು ಹರಿಕಥೆಗಳನ್ನು ಹೇಳಿಕೊಟ್ಟು ಅವರಿಗೆ ಹಾದಿತೋರಿಸಿದರು... ಆಗ ಅವರು ದಾಸ ಸಾಹಿತ್ಯದ ಹಾದಿ ಹಿಡಿದು ಉದ್ಧಾರವಾದದ್ದು ಇವತ್ತಿಗೂ ಅದರಲ್ಲಿಯೇ ಸೇವೆ ಮಾಡಿಕೊಂಡಿದ್ದಾರೆ..

 ರೇಡಿಯೋ,ದೂರದರ್ಶನ ಇತ್ಯಾದಿಗಳಲ್ಲಿ ಹರಿಕಥೆಗಳು ಹೇಳುತ್ತಾ ದಾಸ ಸಾಹಿತ್ಯದ ಪದಪದ್ಯಗಳನ್ನು ಹಾಡುತ್ತಾ... ತಂದೆಯವರು ತೋರಿಸಿದಂತೆ ಆರಾಧನಾದಿಗಳ ಸಮಯದಲಿ ಇವತ್ತಿಗೂ ಗ್ರಾಮ ಪ್ರದಕ್ಷಿಣೆ,ಯಾಯಿವಾರ ಮಾಡುತ್ತಾ.... ಉತ್ತಮ ಸ್ಥಾನಕ್ಕೆ ಬಂದಿದ್ದಾರೆ.. ಇವರು ಆಂಧ್ರಪ್ರದೇಶದಲ್ಲಿ 500 ಭಜನಾ ಮಂಡಲಿಗಳ ಸ್ಥಾಪನೆ ಮಾಡಿ ಬ್ರಾಹ್ಮಣರೇ ಮೊದಲು ಎಲ್ಲಾ ಜಾತಿಯವರಿಗೂ ಮಾಧ್ವ ತತ್ವಗಳನ್ನು ತಿಳಿಸಿ ಹೇಳುವರಾಗಿದ್ದಾರೆ... ನಂತರದಲಿ ಶ್ರೀ ಶ್ರೀಪಾದರಾಜಮಠದ ಯತಿಗಳಾದ ಶ್ರೀ ವಿಜ್ಞಾನನಿಧಿತೀರ್ಥರಿಂದ ಕರುಣಾಸಿಂಧುವಿಠಲ ಎನ್ನುವ ಅಂಕಿತವನ್ನು ಪಡೆದಿದ್ದಾರೆ.. ಇವರ ದಾಸ ಸಾಹಿತ್ಯದ ಪ್ರಚಾರಕ್ಕೆ ಮೆಚ್ಚಿ ವಿವಿಧ ಸಂಸ್ಥೆಗಳು ಹರಿಕಥಾ ಪರಿಮಳ ಭಕ್ತಿ ಪ್ರಾಚಾರಕ, ಕೀರ್ತನಾ ಭಕ್ತಿ ಉದ್ಯಮ ಸ್ಪಂದನ ಸಾರಥಿ  ಎನ್ನುವ ಬಿಲ್ಲುಗಳನ್ನು(ಬಿರುದು) ನೀಡಿ ಸನ್ಮಾನ ಮಾಡಿವೆ.. ಇವರು ತಮ್ಮ ತಂದೆಯವರ ತಾತನವರ ಕೃತಿಗಳು ಜೊತೆಗೆ ಹಿರಿಯ ದಾಸಾರ್ಯರ ಕೃತಿಗಳು ಸೇರಿಸಿ ತೆಲುಗು ಭಾಷೆಯಲ್ಲಿ 3 ಪುಸ್ತಕಗಳನ್ನು ಪ್ರಕಟಮಾಡಿದ್ದಾರೆ... ಹೀಗೆ ತಂದೆಯವರ ಹಾದಿ ಹಿಡಿದ ಶ್ರೀ ಕರುಣಾಸಿಂಧುವಿಠಲರು ಇವತ್ತಿಗೂ ಉದ್ಯೋಗದಿಂದ retire ಆದರೂ ಸಹಾ ದಾಸ ಸಾಹಿತ್ಯದ ಸೇವೆಯನ್ನು ಬಿಡದೇ ಆರಾಧನಾದಿಗಳನ್ನು ಮಾಡುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ..... 

ಶ್ರೀ ಸತ್ಯವಿಜಯದಾಸರ ಹಾದಿಯಲ್ಲಿ ಇವರೊಬ್ಬರೇ ನಡೆದರೂ ಮಿಕ್ಕ ಮಕ್ಕಳು ಅಂಕಿತೋಪದೇಶವನ್ನು ತಂದೆಯಿಂದ ಪಡೆಯದಿದ್ದರೂ ಹರಿಕಥೆಗಳಲ್ಲಿ ಆಸಕ್ತರಾಗಿ ದಾಸ ಸಾಹಿತ್ಯದ ಸೇವೆಯಲ್ಲೇ ನಿರತರಾಗಿದ್ದಾರೆ.. ಶ್ರೀ ಸತ್ಯವಿಜಯದಾಸಾರ್ಯರು ಅಷ್ಟು ಜನ ಮಕ್ಕಳಲ್ಲಿ  ನನ್ನ ತಾಯಿಯವರಿಗೆ ಮಾತ್ರ  ಉಪದೇಶಮಾಡಿ ರಾಧಾಹೃದಯವಿಹಾರಿ ಎಂದು ಅಂಕಿತ ಪ್ರದಾನ ಮಾಡಿದ್ದಾರೆ.. ಹಾಗೂ ಉಸಿರು ಇರುವವರೆಗೂ ಕೃತಿಯ ಮರೆಯಬೇಡ ಪರಮಾತ್ಮನ ಸ್ತುತಿಯ ಮರೆಯಬೇಡ  ಅಂತಲೇ ಗಟ್ಯಾಗಿ ಹೇಳಿ ಆಶೀರ್ವಾದ ಮಾಡಿದ್ದಾರೆ.... ತಂದೆಯವರ ಆದೇಶದಂತೆ ಇವತ್ತಿಗೂ ನನ್ನ ತಾಯಿ ರಾಧಾಬಾಯಿಯವರು ಆರೋಗ್ಯ ಸರಿಯಾಗಿ ಇಲ್ಲದೇ ಇದ್ದರೂ ಸಹಾ ದಾಸಾರ್ಯರು ಹೇಳಿದಂತೆ ಹರಿದಾಸ ಪದಗಳು ಹಾಡುವುದು ಬಿಟ್ಟಿಲ್ಲ.

ಇದು ನಮ್ಮ ಎಲ್ಲರಿಗೂ ಸ್ಪೂರ್ತಿಯಾದ ವಿಷಯ.. ಎಲ್ಲರೂ ಸಂಗೀತ ಬಂದವರು, ಅವರಿಗಿಂತಾ ನಾವು ಸರಿಯಾಗಿ ಹಾಡೋಲ್ಲ, ನನ್ನ ಧ್ವನಿ ಸರಿಗಿಲ್ಲ, ನನಗೆ ಸಂಸಾರದಲಿ ತುಂಬಾ ನೋವುಗಳು ನಾನು ಇದನ್ನು ತಡಿಯೋದು ಕಷ್ಟ ಅಂದಮೇಲೆ ಕೀರ್ತನೆಗಳು ಎಲ್ಲಿಂದ ಹಾಡಲಿ. ಮನಸು ನೆಮ್ಮದಿ ಇರೋದಿಲ್ಲ.. ಇಷ್ಟು ಮಾತುಗಳು ಮಾತಾಡಿ ಪರಮಾತ್ಮ ಕೊಟ್ಟ ಇಷ್ಟು ಅದ್ಭುತ ಜೀವನವನ್ನು ವಿಚಿತ್ರವಾದ ವಿಷಯಾಸಕ್ತಿಗಳಲ್ಲಿ ತೊಡಗಿಸಿ ಹಾಳು ಮಾಡಿಕೋತಿದ್ದೇವೆ... 

ಮಾನವ ಜನ್ಮ ದೊಡ್ಡದು ಇದನ್ನು ಹಾಳುಮಾಡಿಕೊಳಬೇಡಿ ಹುಚ್ಚಪ್ಪಗಳಿರಾ ಎನ್ನುವ
ದಾಸಾರ್ಯರ ಮಾತಿನಂತೆ... ಇಂದಿನಿಂದಾದರೂ, ನಮ್ಮ ಸಮೂಹದಿಂದಾರೂ ಹಾಡುಗಳು ಬಿಡದೇ ಹಾಡುವ ಮಹಾಯಜ್ಞಕ್ಕೆ ನಾಂದಿಯಾಗೋಣ ಎಂದು ನಿಮ್ಮೆಲ್ಲರಲ್ಲಿ ಪ್ರಾರ್ಥನೆ ಮಾಡುತ್ತಾ.... ಶ್ರೀ ಸತ್ಯವಿಜಯದಾಸರ ಚರಿತ್ರೆಯ ಮತ್ತೊಂದು ಭಾಗದ ಕುಸುಮವನ್ನು ಅಸ್ಮತ್ ಪತ್ಯಂತರ್ಗತ ದಾಸಾರ್ಯರಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನ ಮುಕ್ತಿ ಪದಗಳಲ್ಲಿ ಸಮರ್ಪಣೆ ಮಾಡುತ್ತಾ...

ಹಾಡಿದರೇ ದಾಸರಪದ ಹಾಡಿ ಇಲ್ಲವಾದರೇ ಉಸಿರು ಬಿಡಿ ಎನ್ನುವುದನ್ನು ಮತ್ತೇ ಮತ್ತೇ ನೆನಪುಮಾಡುತ್ತಾ... 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***

ಶ್ರೀ  ಸತ್ಯವಿಜಯದಾಸರ ಸ್ಮರಣೆ ಭಾಗ -5

ಕೊನೆಯ ಭಾಗ - ಆರಾಧನಾ ಕುಸುಮ

ಶ್ರೀ ದಾಸಾರ್ಯರ ಜೀವನದಲ್ಲಿ ಅವರ ಶಿಷ್ಯರಲ್ಲಿ ರಾಯರು ತೋರಿದ ಮಾಹತ್ಮ್ಯವನ್ನು ಹಿಂದೆ ನೋಡಿದ್ದೇವೆ. ಹೀಗೆ ತಮ್ಮ ಇಡೀ ಜೀವನವನ್ನು ಕಳೆಯುತ್ತಿದ್ದ ಶ್ರೀ ಸತ್ಯವಿಜಯದಾಸಾರ್ಯರು ಅವರನ್ನು ಆಶ್ರಯಿಸಿ ಬಂದವರನ್ನು ಹಂತಹಂತದಲ್ಲಿ ಕಾಪಾಡುತ್ತಾ ಎಲ್ಲರಿಗೂ ಉಪದೇಶ ಮಾಡುತ್ತಾ ಇದ್ದರು.. ಅವರ ಮಗನಾದ ಕರುಣಾಸಿಂಧುವಿಠಲರಿಗೆ ತಮ್ಮ ಪರಂಪರಾ ತಂಬೂರಿ ಕೊಟ್ಟು ಆಶೀರ್ವಾದ ಮಾಡಿ ಕಳಿಸಿಬಿಟ್ಟರು. ಅವರ ರಚನೆಗಳನ್ನು ಮನೆಯ ಮುಂದಿನ ಗಿಡದ ಕೆಳಗೆ ಹಾಕಿ ಪರಮಾತ್ಮನಿಗೆ ಸಮರ್ಪಣೆ ಮಾಡಿಬಿಟ್ಟರು , (ನನ್ನ ತಾಯಿಯವರು ಬರೆದಿಟ್ಟ 13 ಕೃತಿಗಳು ಉಳಿದವಷ್ಟೇ)... ಪೂರ್ತಿ ಬಂಧನಗಳಿಂದ ಬಿಡುಗಡೆಯಾದವರಾದರು... ಆಗ ನಮ್ಮ ತಾಯೀ, ನಾವು ನಾಲ್ಕೂ ಜನ ಅಕ್ಕ,ತಂಗಿಯರು ಮಾತ್ರ ಬೇಸಿಗೆ ರಜಕ್ಕೆ ನೆಲ್ಲೂರಿನಿಂದ ಗುಂಟೂರಿನ ತಾತನವರ ಮನೆಗೆ ಬಂದೆವು. (ತಾತಂದಿರು ಬಾ ಎಂದು ಅರ್ಜೆಂಟ್ ಟೆಲಿಗ್ರಾಂ ಹಾಕಿದ್ದಕ್ಕಾಗಿ ). ಆಗ ನನ್ನ ತಾಯಿಯನ್ನ ಕರೆದು ಗಿರಿಜಾ ನಿನ್ನ ಹೊಟ್ಟೆಯಲ್ಲಿ ಹುಟ್ಟಬೇಕಂತ ಆಸೆ ಆಗಿದೆ ತಾಯೀ ಅಂತ ದಾಸಾರ್ಯರು ಕೇಳಿದರು.. ಆದರೇ ಅದಕ್ಕೆ ಅವಕಾಶವಿಲ್ಲವೆಂದು ತಿಳಿದು ಕಣ್ಣು ಮುಚ್ಚಿ ಸರಿ ಅಂದು ಸುಮ್ಮನಾದರು... 

ಹೀಗೆ 1983 ಶುಕ್ಲಪಕ್ಷ ಏಕಾದಶಿ ಗೆ ಹದಿನೈದು ದಿನದ ಹಿಂದೆ, ಅವರ ಜನ್ಮಸ್ಥಳವಾದ ಶ್ರೀ ಸತ್ಯವಿಜಯನಗರದಲ್ಲಿ ವೃಂದಾವನದಲಿ ವಿರಾಜಮಾನರಾದ ಶ್ರೀ  ಸತ್ಯವಿಜಯತೀರ್ಥರ ಆರಾಧನೆಯ ಆ ದಿನ  ದಾಸಾರ್ಯರು ತಮ್ಮ ಪತ್ನಿಯಾದ ಲಕ್ಷ್ಮೀಬಾಯಿಯವರನ್ನು (ನಮ್ಮ ಆಜಿ) ಕರೆದು ನಾನು ಯಾಯಿವಾರಕ್ಕೆ ಇವತ್ತಿನಿಂದ ಹೋಗಲು ಆಗದು.. ನನ್ನ ಒಂದಂಶ ನಿನ್ನಲ್ಲಿ ಸೇರಿದೆ ನೀನು ಮಾತ್ರ ಹೋಗಿ ಬರಬೇಕು ಅಂತ ಹೇಳಿದರು.. ಯಾಕೆ, ಏನು ಅಂತ ಕೇಳದ ಮಹಾಸಾಧ್ವೀ ಶಿರೋಮಣಿಯಾದ ಆ ತಾಯಿ ಆವತ್ತಿನಿಂದ ಯಾಯಿವಾರಕ್ಕೆ ಹೋಗಿ ಬಂದು ಮನೆಗೆ ಬೇಕಾದದ್ದು ಒದಗಿಸುತ್ತಿದ್ದರು.. ದಾಸಾರ್ಯರು ತಮ್ಮ ಇಡೀ ದಿನದ ಸಮಯ ದೇವರ ಧ್ಯಾನದಲ್ಲಿ ಕಳೆಯುತ್ತಾ ನಿನ್ನ ಹೊರತು ಯಾರಿಲ್ಲ ದೇವರೇ ಎಂದು ದಾಸರ ಪದಗಳನ್ನು  ಹಾಡುತ್ತಾ, ಅದರಲ್ಲೇ ತಲ್ಲೀನರಾಗಿದ್ದರು... ಹೀಗೆ ಏಕಾದಶಿ ಬಂದಿತು.. ಹಿಂದಿನ  ನವಮಿಯ ದಿನ ಮತ್ತೊಮ್ಮೆ ಲಕ್ಷ್ಮೀಬಾಯಿಯವರನ್ನ ಕರೆದು ಇವತ್ತಿಗೆ ಮಾತ್ರ ನನಗೆ ಅಕ್ಕಿ ಇದ್ದದ ಇನ್ಮೇಲೆ ನನಗೆ ಅಕ್ಕಿ ಇಲ್ಲ ಅಂತ ಹೇಳಿದರು.. ಆಗ ನಮ್ಮ ಅಮ್ಮ ಕೇಳಿದರು ಅಕ್ಕಿ ಆಗೋದೇನು ಅಮ್ಮಾ? ಯಾಕೆ ಅಪ್ಪ ಹೀಗಂತಿದ್ದಾರೆ ಅಂತ.... ಅಜ್ಜಿಯವರು ಅದಕ್ಕೆ ನಕ್ಕು ಸುಮ್ಮನಾದರು.  ಆದರೇ ಮರುದಿನ ದಶಮಿ ಗೆ ಯಾರೋ ಒಬ್ಬ ವ್ಯಕ್ತಿ ಎಲ್ಲಿಂದಲೋ ಬಂದು ದಾಸರೇ ಇವತ್ತು ರಾಯರು ನಿಮಗೆ ಅಕ್ಕಿ ಕೊಟ್ಟು ಬಾ ಅಂದರು. ನಾವು ಯಾತ್ರೆ ಗೆ ಹೊರಟೀವಿ. ಈ ಚೂರು ಅಕ್ಕಿ ತಗೊಂಡು ಹೋಗಲು ಆಗೋಲ್ಲ. ಸ್ವೀಕಾರ ಮಾಡಿ ಅಂತ ಒಂದು ಅರ್ಧ ಸೇರು ಮಾತ್ರ ಅಕ್ಕಿ ಕೊಟ್ಟು ಹೊರಟೇಹೋದನು... ಆಗ ದಾಸಾರ್ಯರಂದರು ಇವತ್ತಿಗೂ ಅಕ್ಕಿ ಕೊಟ್ಟ ಪರಮಾತ್ಮ ಅಂತ... ಆವತ್ತಿಗೆ ಭೋಜನಾದಿಗಳು ಮುಗಿದವು...

ಆವತ್ತು ರಾತ್ರಿ ನಮ್ಮ ಅಜ್ಜಿಯವರನ್ನ, ನನ್ನ ತಾಯಿಯವರನ್ನ ಕರೆದು ನಾನು ಹೊರಡುವ ಸಮಯವಾಯಿತು. ಗಿರಿಜಾ, ಮಕ್ಕಳು ನೀನು ಜಾಗ್ರತ್ತೆ ಅಂತ ಹೇಳಿ ಭಜನೆ ಎಲ್ಲಾ ಮುಗಿಸಿ ಮಲಗಿದರು.. ಹಾಗೆ ಹೇಳುವ ಸಮಯ ನಾನೂ ಪಕ್ಕದಲ್ಲೇ ಇದ್ದಿನಿ... ಬೆಳಗಿನ ಝಾವ ಸುಮಾರು 2. 30 ಗಂಟೆ ಸಮಯ ದಾಸಾರ್ಯರು ನಮ್ಮ ಆಜಿಯವರನ್ನ ಕರೆದಾಗ ನಮ್ಮ ಅಮ್ಮ ನಾನೂ ಸಹಾ ಓಡಿ ಹೋದೇವು.. ಆಗ ದಾಸಾರ್ಯರು ಏನೋ ಸ್ಮರಣೆ ಮಾಡುತ್ತಾ ಹಾಗೇ ಹಿಂದಕ್ಕೆ ಒರಗಿ ಕೂತಿಬಿಟ್ಟರು..ಎಬ್ಬಿಸಲು ಪ್ರಯತ್ನ ಮಾಡ್ತಿದ್ದರೂ ಕೈಗಳು ತೆಗೆದು ಹಾಕಿ ಬೇಡವೆಂದು ಏನೋ ಸಂಜ್ಞೆ ಮಾಡಿದರು. ಆಗ ನಮ್ಮ ಆಜಿಯವರು ಅಳಬೇಡಿ ಚೂರಾದರೂ ಕಣ್ಣೀರು ಬರಬಾರದು ಅಂತ ನಮಗೆ ಹೇಳಿ, ನನ್ನ ತಾಯಿಯವರ ಕೈಯಿಂದ ತುಳಸೀತೀರ್ಥ ದಾಸಾರ್ಯರಿಗೆ ಕುಡಿಸಿದರು.. ಅಷ್ಟೇ ಆ ಒಂದು ಮಹಾನ್ ತೇಜಸ್ಷು ಪರಮಾತ್ಮನಲ್ಲಿ ಸೇರಿಹೋಗಿದೆ..

ಮಲಗಿದ್ದ ಅವರ ದೇಹದಿಂದ ಹೊಸ ಬಿಳಿಯ ಪಂಚೆಯನ್ನು ಉಟ್ಟುಕೊಂಡು ನಮ್ಮ ತಾತನವರಾದ ಶ್ರೀ ಸತ್ಯವಿಜಯದಾಸರು ಒಂದು ತೇಜೋಮಯರೂಪದಿಂದ ಆಕಾಶದಲ್ಲಿ ಆಶೀರ್ವಾದ ಮಾಡುತ್ತಿರುವುದು ನಂತರ ನಮಸ್ಕಾರ ಮಾಡ್ತಾ ಹೊರಟುಹೋಗ್ತಿರುವುದು ನನ್ನ ತಾಯಿಯವರು ನೋಡಿ ನಮ್ಮ ಆಜಿಯವರಿಗೂ ತೋರಿಸಿದಾಗ ಇಬ್ಬರೂ ನಮಸ್ಕಾರ ಮಾಡಿಕೊಂಡರು.. ಆದರೇ ಪಕ್ಕದಲ್ಲೇ ಇದ್ದ ನನಗೆ ತಾತನವರ ಆಕಾರ ನಮ್ಮ ಅಮ್ಮ,  ಅಜ್ಜಿಯವರಿಗೆ ಕಾಣಿಸಿದಂತೆ ಕಾಣಿಸಲಿಲ್ಲ.. ನನಗೆ ಬೆಳಗುತ್ತಿರುವ ಒಂದು ದೀಪ ಆಕಾಶ ಮಾರ್ಗದಲಿ ಹೋಗುತ್ತಿರುವುದು ಮಾತ್ರ ಕಂಡೀತು.. ನಾನು ಸಣ್ಣವಳು...  ಆಗ ಯಾಕೆ ಅವರು ಹಾಗೆ ಕಾಣಿಸಿದರು ಎಂದು ತಿಳಿಯಲಿಲ್ಲ... ನನ್ನ ಮೇಲೆ ಅನುಗ್ರಹ ಮಾಡಲು ಅಂತ ನನ್ನ ತಾಯಿಯವರು ಹೇಳಿದನಂತರ ಗೊತ್ತಾಗಿದೆ .. ನಂತರದಲಿ ದಾಸಾರ್ಯರ ಎಲ್ಲಾ ಮಕ್ಕಳು ಬಂದು ಮುಂದಿನ ಕಾರ್ಯ ನಡೆಸಿದರು..  ಅವರನ್ನು ನೆನೆಯುವ ಜನರು ಇವತ್ತಿಗೂ ಗುಂಟೂರು ಜಿಲ್ಲೆಯಲಿ ಇದ್ದಾರೆ. ಅವರ ಹೆಸರಿನಲ್ಲಿ ಆರಾಧನೆ ಮಾಡುತ್ತಾರೆ, ಅವರ ಹೆಸರಿನ ಭಜನಾಮಂಡಲಿಗಳೂ ಇವೆ.. ದಾಸಾರ್ಯರು ತೋರಿದ ಹಾದಿಯಲ್ಲಿ ದಾಸ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ... ಹಾಗೇ ಅವರಿಂದ ಅಂಕಿತ ಸ್ವೀಕಾರ ಮಾಡಿದ ನನ್ನ ತಾಯಿಯವರೂ, ಮತ್ತೆ ಅವರ ಮಿಕ್ಕ ಮಕ್ಕಳು ಸಹಾ ಎಲ್ಲ ಕಡೆ ದಾಸ ಸಾಹಿತ್ಯದ ಪ್ರಚಾರಾದಿಗಳು ಮಾಡುವುದರಲ್ಲಿ ನಿರತರಾಗಿದ್ದಾರೆ... ಅವರಲ್ಲಿ ನಾಲ್ಕು ಜನ ಮಕ್ಕಳು ಕೃತಿ ರಚನೆ ಕನ್ನಡ, ತೆಲುಗು ಭಾಷೆಯಲ್ಲಿ ಮಾಡಿದ್ದಾರೆ.. ಗಿಡದ ಕೆಳಗೆ ಪುಸ್ತಕಗಳನ್ನು ಹಾಕಿದರೂ ಅವರು ಹಾಡುವಾಗ ಹೇಳಿಸಿಕೊಂಡ ಕೃತಿಗಳು ಈಗ 13 ಅಷ್ಟೇ ನಮಗೆ ಸಿಕ್ಕ ಆಸ್ತಿ... ಇಂಥವರ ನೆರಳಿನಲ್ಲಿ ಬಂದ ನಮ್ಮಂತವರಿಗೆ ಶ್ರೀ ಸತ್ಯವಿಜಯದಾಸಾರ್ಯರ ಅನುಗ್ರಹ ಅವರಂತರ್ಗತ ರಾಯರ ಅನುಗ್ರಹ  ಸದಾ ಇದ್ದು ಜೀವವಿರುವವರೆಗೂ ದಾಸ ಸಾಹಿತ್ಯದ ಸೇವೆಯೇ ಉಸಿರಾಗಿ ನಿಲ್ಲಲು ಶಕ್ತಿ, ಆರೋಗ್ಯ ಭಾಗ್ಯ ನೀಡಲೆಂದು ತಾತನವರಲ್ಲಿಯೇ ಬೇಡಿಕೊಳ್ಳುತ್ತಾ.... ಶ್ರೀ ಸತ್ಯವಿಜಯದಾಸಾರ್ಯರ ಜೀವನದ ಚೂರು ಮಾತ್ರ ಸಂಘಟನೆಗಳು ವಿವರಿಸಲು ನನ್ನನ್ನು ಆಯ್ಕೆ ಮಾಡಿಕೊಂಡ ನಮ್ಮ ತಾತನವರಾದ ಶ್ರೀ ದಾಸಾರ್ಯರ ಕಾರುಣ್ಯಕ್ಕೆ ಜೀವದ ಭಕ್ತಿಯಿಂದ ನಮಸ್ಕಾರ ಮಾಡಿ,, ಅವರ  ಚರಣಾರವಿಂದಗಳಿಗೆ ಶಿರಬಾಗಿ ಅನಂತಕೋಟಿ ನಮಸ್ಕಾರಗಳು ಸಲ್ಲಿಸುತ್ತಾ.... ಮತ್ತೆ ಮತ್ತೆ ಅವರು ತೋರಿದ ಹಾದಿಯಲ್ಲಿ, ಶ್ರೀಮದಾಚಾರ್ಯರ ಮತದಲ್ಲೇ   ಮತ್ತೆ ಮತ್ತೆ ಹುಟ್ಟಿಬಂದು ದಾಸದಾಸರೆಲ್ಲರ ಸೇವೆ ಮಾಡುವವಳಾಗಿ, ಈಗಿನಂತೇ ಹರಿದಾಸಿಯಾಗುವ ಬದುಕನ್ನು ನೀಡಿಯೆಂದು ಅಸ್ಮದ್ ಪತ್ಯಂತರ್ಗತ ದಾಸಾರ್ಯರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀ ವೇಂಕಟೇಶನ ಲ್ಲಿ ಶಿರಬಾಗಿ  ಪ್ರಾರ್ಥನೆ ಮಾಡುತ್ತಾ .... 

ಶ್ರೀ ಸತ್ಯವಿಜಯದಾಸಾರ್ಯರ ಪಾದರಜ ...
 ಪದ್ಮ ಶಿರೀಷ 🙏🏽

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

****

year 2021

ಹರಿ ಭಜನಾಜಲಧಿ ವಿಹಾರಂ ದೀನ ಜನೋಧ್ಧಾರಿಣಮ್/

ಸದಾ ಪ್ರಸನ್ನ ವದನಮ್ ಸತ್ಯವಿಜಯದಾಸಾಖ್ಯಮ್ ಗುರುಂ ನಮಾಮ್ಯಹಮ್//

ರಾಯರ ಪರಮ ಭಕ್ತರು, ಯಾಯಿವಾರವನ್ನು ಬಿಟ್ಟು ಮತ್ತಿತರ ಯಾವುದೇ   ವೃತ್ತಿ ಮಾಡದೇ ಜೀವನವನ್ನು ಕಳೆದ ಶ್ರೇಷ್ಠ ದಾಸವರೇಣ್ಯರು,  ಶ್ರೀ ಗುರುಜಗನ್ನಾಥವಿಠಲರ ಶಿಷ್ಯರಾದ,  ಶ್ರೀ ಶ್ರೀನಿವಾಸವಿಠಲರ ಪುತ್ರರು, ಹಾಗೆ ಶಿಷ್ಯರೂ ಆದ ಶ್ರೀ ಆರಣಿಯ ದಾಸಾರ್ಯರು ನನ್ನ ಮಾತಾಮಹರಾದ ಶ್ರೀ ಸತ್ಯವಿಜಯದಾಸರ ಆರಾಧನೆಯ ಶುಭಸ್ಮರಣೆಗಳು (ವೈಶಾಖ ಶುದ್ಧ ಏಕಾದಶಿ)..

 ಶ್ರೀ ಮಹಾನ್ ಯತಿಗಳ, ಶ್ರೀ ರಾಮಾಚಾರ್ಯರ ಶ್ರೀ ಸತ್ಯವಿಜಯ ದಾಸಾರ್ಯರ ಅಂತರ್ಗತ ಶ್ರೀ ಮಧ್ವಾಂತರ್ಗತ ವೇದವ್ಯಾಸ ದೇವರ ಪರಮಾನುಗ್ರಹ ನಮ್ಮ ಎಲ್ಲರಿಗೆ ಸದಾಕಾಲವಾಗಲೆಂದು ಪ್ರಾರ್ಥನೆ ಮಾಡುತ್ತಾ...

ಶ್ರೀ ಗುರುಜಗನ್ನಾಥವಿಠಲರು ನಮ್ಮ ಮುತ್ತಾತನವರಾದ ಶ್ರೀ ಶ್ರೀನಿವಾಸವಿಠಲರಿಗೆ ಅಂಕಿತೋಪದೇಶರದ ಸಮಯದಲ್ಲಿ ಪಂಢರಾಪುರದಲ್ಲಿ ನೀಡಿದ 12 ವಿಗ್ರಹಗಳಲ್ಲಿ ನಾಲ್ಕು ವಿಗ್ರಹ ನನ್ನ ಮಾತಾಮಹರಾದ ಶ್ರೀ ಸತ್ಯವಿಜಯದಾಸರು ಅರ್ಥಾತ್ ಶ್ರೀ ಶ್ರೀನಿವಾಸವಿಠಲರ ಪುತ್ರರು ನನ್ನ ತಾಯಿಯವರಿಗೆ ಮದುವೆಯ ಸಂದರ್ಭದಲ್ಲಿ ನೀಡಿದ್ದು. ಮೂರು ವಿಗ್ರಹ ನನ್ನ ತಾಯಿಯವರಾದ ಹರಿದಾಸಿ ರಾಧಾಬಾಯಿ ಅವರ ಮನೆಯಲ್ಲಿವೆ


ಕೃಷ್ಣದೇವರ ವಿಗ್ರಹ ನನ್ನ ಮನೆಯಲ್ಲಿದೆ

-Smt. Padma Sirish

ನಾದನೀರಾಜನದಿಂ ದಾಸಸುರಭಿ  

***








2 comments: