Wednesday 2 January 2019

vidyashreesha teertharu 2 ವಿದ್ಯಾಶ್ರೀಶ ತೀರ್ಥರು 2


info from ---> kannada.oneindia.com
july 3, 2017
ಮೈಸೂರು, ಜುಲೈ 2: ಪ್ರಮುಖ ಬೆಳೆವಣಿಗೆಯೊಂದರಲ್ಲಿ ವ್ಯಾಸರಾಜ ಮಠದ ತಾನು ನೇಮಿಸಿದ್ದ ಆಡಳಿತಧಿಕಾರಿಯನ್ನು ಸರಕಾರ ಹಿಂಪಡೆದಿದೆ. ಆಡಳಿತಾಧಿಕಾರಿ ಜೆ. ಜಯರಾಜ್ ರನ್ನು ಸರಕಾರ ಹಿಂದಕ್ಕೆ ಕರೆಸಿಕೊಂಡಿದೆ.
ವ್ಯಾಸರಾಜ ಮಠದ ನೂತನ ಪೀಠಧ್ಯಾಕ್ಷರಾಗಿ ಪ್ರಹ್ಲಾದಾಚಾರ್ಯ ನೇಮಕಗೊಂಡ ಹಿನ್ನಲೆಯಲ್ಲಿ ಸರಕಾರ ಆಡಳಿತಾಧಿಕಾರಿಯನ್ನು ವಾಪಸ್ಸು ಕರೆಸಿಕೊಂಡಿದೆ. ಅಂತೂ ವ್ಯಾಸರಾಜ ಮಠದ ಪೀಠತ್ಯಾಗ ಮಾಡಿದ ವಿದ್ಯಾಮನೋಹರ ತೀರ್ಥ ಶುಕ್ರವಾರವಷ್ಟೇ ವ್ಯಾಸರಾಜ ಮಠದಲ್ಲಿ ಪೀಠಾಧಿಪತಿ ಆಗಿದ್ದ ವಿದ್ಯಾ ಮನೋಹರ ತೀರ್ಥರು ಪೀಠ ತ್ಯಾಗ ಮಾಡಿದ್ದರು. ಮತ್ತು ಅವರ ಸ್ಥಾನಕ್ಕೆ ನೂತನ ಪೀಠಾಧ್ಯಕರ ನೇಮಕವಾಗಿತ್ತು. ನೂತನ ಪೀಠಾಧ್ಯಕ್ಷರ ಪೀಠಾರೋಹಣ ಇಂದು ನಡೆದಿದ್ದು ಸರಕಾರ ಮತ್ತೆ ಮಠದ ಆಡಳಿತವನ್ನು ಸ್ವಾಮೀಜಿ ಕೈಗಿತ್ತಿದೆ.
ವಿವಾದದ ಗೂಡಾಗಿದ್ದ ಮಠ ಆಡಳಿತಾಧಿಕಾರಿ ನೇಮಕಕ್ಕೂ ಮುಂಚೆ ವ್ಯಾಸರಾಜ ಮಠ ವಿವಾದದ ಗೂಡಾಗಿತ್ತು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವ್ಯಾಸರಾಜ ಮಠದಲ್ಲಿ ಪೀಠಾಧಿಪತಿ ಆಗಿದ್ದ ವಿದ್ಯಾ ಮನೋಹರ ತೀರ್ಥ ಮತ್ತು ಮಠದ ಪಂಡಿತರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
2012ರಲ್ಲಿ ಆಡಳಿತಾಧಿಕಾರಿ ನೇಮಕ 
ಭಿನ್ನಾಭಿಪ್ರಾಯದ ಬೆನ್ನಿಗೆ ಮನೋಹರ ತೀರ್ಥರವರು ಮಠದ ಆಸ್ತಿಯನ್ನ ಕಬಳಿಕೆ ಮಾಡಿದ್ದಾರೆ ಎಂದು ಹೇಳಿ ಮಠದ ಪಂಡಿತರು ತೀರ್ಥರ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಮಠದಲ್ಲೇ ಗಲಾಟೆ ಕೂಡ ನಡೆದಿತ್ತುಈ ವಿವಾದ ತಾತ್ಕಾಲಿಕ ಪರಿಹಾರಕ್ಕೆ ಸರಕಾರ 2012ರಲ್ಲಿ ವ್ಯಾಸರಾಜ ಮಠಕ್ಕೆ ನಿವೃತ್ತ ಐ.ಎ.ಎಸ್ ಅಧಿಕಾರಿ ಜಯರಾಜ್ ರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು.
ಪೀಠ ತ್ಯಾಗ 
ಅಕ್ರಮವಾಗಿ ಮಠದ ಆಸ್ತಿಯನ್ನು ಪರಭಾರೆ ಮಾಡಿಕೊಂಡ ಆರೋಪದಡಿ ಸೋಸಲೆ ವ್ಯಾಸರಾಜ ಮಠದ ವಿದ್ಯಾ ಮನೋಹರರವರು ಪೀಠತ್ಯಾಗ ಮಾಡಿದ್ದಾರೆ. ಅವರು ಪೀಠ ತ್ಯಾಗ ಮಾಡಿ ಮೈಸೂರಿನ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಆಸ್ಥಾನಕ್ಕೆ ಇದೀಗ ವಿದ್ವಾಂಸ ಡಿ. ಪ್ರಹ್ಲಾದಾಚಾರ್ಯರು ನೇಮಕವಾಗಿದ್ದಾರೆ. ಇದರಿಂದ ಮಠದಲ್ಲೀಗ ಗೊಂದಲಗಳು ನಿವಾರಣೆಯಾಗಿದ್ದು ಸಂತಸದ ವಾತಾವರಣ ನಿರ್ಮಾಣವಾಗಿದೆ.
ಇದರಿಂದ ಮಠದಲ್ಲೀಗ ಗೊಂದಲಗಳು ನಿವಾರಣೆಯಾಗಿದ್ದು ಸಂತಸದ ವಾತಾವರಣ ನಿರ್ಮಾಣವಾಗಿದೆ. 
ಮುಜುರಾಯಿ ಸಚಿವರ ಭೇಟಿ ಮಠಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ವೆಂಕಟಾಚಲಪತಿ ಮತ್ತು ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಭೇಟಿ ನೀಡಿದ್ದಾರೆ.
ಸಂಸ್ಕ್ರತ ವಿವಿಯ ವಿಶ್ರಾಂತ ಕುಲಪತಿ ತಿ ನರಸೀಪುರದ ತಿರಮಕೂಡಲಿನಲ್ಲಿ ವಾಸವಿರುವ ಪ್ರಹ್ಲಾದಾಚಾರ್ಯರು ತಿರುಮಲ ಸಂಸ್ಕ್ರತ ವಿವಿಯ ವಿಶ್ರಾಂತ ಕುಲಪತಿಗಳಾಗಿದ್ದಾರೆ.
ಪೀಠಾರೋಹಣ ಪ್ರಹ್ಲಾದಾಚಾರ್ಯರು ಸನ್ಯಾಸ ದೀಕ್ಷೆ ಪಡೆದು ಬಳಿಕ ಪೀಠಾರೋಹಣರಾದರು. ಇದಕ್ಕಾಗಿ ನಿನ್ನೆಯಿಂದಲೇ ಮಠದ ಆವರಣದಲ್ಲಿ ಧಾರ್ಮಿಕ ಕಾರ್ಯಗಳು ಆರಂಭಗೊಂಡಿದ್ದು ಇಂದು ಪೀಠಾರೋಹಣ ಕಾರ್ಯಕ್ರಮ ನಡೆಯಿತು.
ಪೀಠ ಸ್ವೀಕರಿಸಿದ ಪ್ರಹ್ಲಾದಾಚಾರ್ಯರು 
ಸನ್ಯಾಸ ಆಶ್ರಮ ಅಂದರೆ ಅವರಲ್ಲಿದ್ದಂತಹ ಬಟ್ಟೆ ಮತ್ತು ಜನಿವಾರವನ್ನು ತೆಗೆದು ಹೊಸ ಬಟ್ಟೆಯನ್ನು ತೊಡುವುದು. ಅದರಂತೆ ಬಟ್ಟೆ ಜನಿವಾರ ತೆಗೆದು, ಬಳಿಕ ಪೀಠ ಸ್ವೀಕಾರ ನಡೆಯಿತು. ಕಪಿಲ, ಕಾವೇರಿ, ಸ್ಪಟಿಕ ಹೀಗೆ ಮೂರು ನದಿಗಳ ನೀರಿನಲ್ಲಿ ಸನ್ಯಾಸ ಆಶ್ರಮವನ್ನು ಪ್ರಹ್ಲಾದಾಚಾರ್ಯರು ಸ್ವೀಕರಿಸಿದರು.
ರಾಘವೇಂದ್ರ ಸ್ವಾಮಿಗಳು ಉಪಸ್ಥಿತಿ 
ಇಂದು ನಡೆದ ಪೀಠಾರೋಹಣ ಶೇಷಚಂದ್ರಿಕಾಚಾರ್ಯರ ಸನ್ನಿಧಾನದಲ್ಲಿ ನಡೆಯಿತು. ಪೂಜೆ ಕೈಂಕರ್ಯ ನಡೆಸಿದ ಪ್ರಹ್ಲಾದಚಾರ್ಯರು ರಾಘವೇಂದ್ರ ಮಠದ ಸುಭುದೇಂದ್ರ ತೀರ್ಥರು, ಮಾಧವ ತೀರ್ಥರು ಉಪಸ್ಥತಿಯಲ್ಲಿ ಪೀಠವೇರಿದರು. ನಂತರ ರಾಘವೇಂದ್ರ ಮಠ, ತಂಬಿಹಳ್ಳಿ ಮಠ ಮತ್ತು ವ್ಯಾಸರಾಜ ಮಠದ ಮೂರು ಪೀಠಾಧಿಪತಿಗಳಿಂದ ಆಯಾ ಮಠದ ಪಟ್ಟದ ದೇವರುಗಳಿಗೆ ಪೂಜಾ ಕೈಂಕರ್ಯ ನಡೆಯಿತು. ವಿದ್ಯಾ ಮನೋಹರ ತೀರ್ಥರು ಪಟ್ಟಾಭಿಷೇಕವನ್ನು ನಡೆಸಿಕೊಟ್ಟರು.
41 ನೇ ಪೀಠಾಧಿಪತಿ ಪ್ರಹ್ಲಾದಾಚಾರ್ಯರು ಪೀಠವೇರಿದ ನಂತರ ವಿದ್ಯಾ ಶ್ರೀಷ ತೀರ್ಥರಾಗಿ ಹೆಸರು ಬದಲಾಯಿಸಿಕೊಂಡರು. ಅವರು ವ್ಯಾಸರಾಯ ಮಠದ 41ನೇ ಪೀಠಾಧಿಪತಿಗಳಾಗಿದ್ದಾರೆ. ಪೀಠಾರೋಹಣದ ನಂತರ ನೂತನ ಮಠಾಧೀಶರ ಆಶಿರ್ವಾದವನ್ನು ಮಠದ ಭಕ್ತರು ಮತ್ತು ಪಂಡಿತರು ಪಡೆದುಕೊಂಡರು.
*******

recd in WhatsApp---> 25 july 2019
ಶ್ರೀ ವ್ಯಾಸರಾಜರ ಬೃಂದಾವನವನ್ನು ಮತ್ತೊಮ್ಮೆ  ಧ್ವಂಸಮಾಡುವ ಸಂಕಲ್ಪ ಮಾಡಿದ, ಶ್ರೀಶತೀರ್ಥ!  

ಶ್ರೀ ವ್ಯಾಸರಾಜ ಮಠಕ್ಕೆ, ಮಾಧ್ವ ಸಮಾಜಕ್ಕೆ,  ಕಪ್ಪು ಚುಕ್ಕೆ


ಕಳೆದ ಹದಿನಾಲ್ಕು ವರ್ಷದಿಂದ ಶ್ರೀ ವ್ಯಾಸರಾಜ ಮಠ  ಬೀದಿಗೆ ಬರುವ ವರೆಗೆ, ದಿನ ನಿತ್ಯ ತಮ್ಮ ಆಶ್ರಮ ಗುರು ಶ್ರೀ ಮನೋಹರತೀರ್ಥರಿಗೆ ನಕ್ಷತ್ರಕನಂತೆ  ಕಾಡಿದ ಡಿ  ಪ್ರಲ್ಹಾದಾಚಾರ್ಯ  ಉರುಫ್ ಶ್ರೀಶತೀರ್ಥ,  ತಾನು ಸ್ವಾಮಿ ಆಗಲೇಬೇಕು ಎಂಬ ಒಂದೇ ಒಂದು ಸ್ವಾರ್ಥದಿಂದ, ವಾಮ ಮಾರ್ಗ ಹಿಡಿದು,  ತಾನೇ ಹೀನಾಮಾನವಾಗಿ ಬೈದ, ಅವನು ಸನ್ಯಾಸಿಯೇ ಅಲ್ಲ ಜೈಲಿಗೆ ಹೋಗಿ ಬಂದ ಸ್ವಾಮಿ ಎಂದು ಜರಿದ ಮನೋಹರ ತೀರ್ಥರ  ಪಾದ ಪೂಜೆ ಮಾಡಿ ಸನ್ಯಾಸ ತೆಗೆದುಕೊಂಡಿದ್ದು ನಂತರ ಕೊಟ್ಟ ವಚನ ಮುರಿದು ವಚನ ಭ್ರಷ್ಟನಾಗಿ,  ಶ್ರೀ ವ್ಯಾಸರಾಜ ಮಠದ ಸಂಪ್ರದಾಯ ಮುರಿದು ಸಂಪ್ರದಾಯಭ್ರಷ್ಟನಾಗಿ, ಹಳೇ  ಚಪ್ಪಲಿ ಧರಿಸಿ ಸನ್ಯಾಸ ಭ್ರಷ್ಟನಾಗಿ, ತನ್ನ ಸ್ವಾರ್ಥ ಸಾಧನೆಗೆ  ನಿಷ್ಠಾವಂತರಾದ ಎಂ ಏನ್ ವೆಂಕಟಾಚಲಯ್ಯ ನಿವೃತ್ತ ಸುಪ್ರೀಂ ಕೋರ್ಟ್ ಜಡ್ಜ್, ಕೆ ಜೈರಾಜ್ ನಿವೃತ್ತ ಐಪಿಎಸ್ , ಹೆಚ್ ಎಸ್ ವೆಂಕಟೇಶಮೂರ್ತಿ ನಿವೃತ್ತ ಹೈಕೋರ್ಟ್ ಜಡ್ಜ್,  ಹೇಗೆ  ಹಲವಾರು ಸಮಾಜದ  ಜನರನ್ನ ಉಪಯೋಗಿಸಿಕೊಂಡು, ಸ್ವಾರ್ಥದಿಂದ ಪೀಠಾಧಿಪತಿಯಾಗಿದ್ದು ಪ್ರಪಂಚಕ್ಕೆ ತಿಳಿಯದ ವಿಷಯ.  



ಇಷ್ಟೆಲ್ಲಾ ಸಂಪ್ರದಾಯ ಮುರಿದು ಮಠವನ್ನು ಹಣ ಕೊಟ್ಟು ಕೊಂಡು ಕೊಂಡಿರುವುದು, ಕೋರ್ಟ್ಗೆ ಸುಳ್ಳು ಮಾಹಿತಿ ನೀಡಿರಿವುದು, ಸಾಬೀತಾಗಿ ಮೈಸೂರಿನ ಜೂನಿಯರ್ and district ಕೋರ್ಟ್, ನೀನು ಸ್ವಾಮಿಯಾಗಿರೋದಕ್ಕೆ ಯೋಗ್ಯರಲ್ಲಾ ಎಂಬ ತೀರ್ಪು ಬಂದಮೇಲೂ, ಶ್ರೀ ಮಠದ  ಪರಂಪರೆಯ ಯಾವುದೇ ಯತಿಗಳ ಹೆಸರು ಹೇಳುವುದಾಗಲಿ, ಅವರ ಚರ್ಮಸ್ಲೋಕ ಪಠಿಸುವುದಾಗಲಿ ಮಾಡದೆ, ಅಭಿನವ ವ್ಯಾಸರಾಜ ಎಂದು ತಮ್ಮನ್ನು ತಾವೇ, ಚೇಲಾಗಳಿಂದ ದಿನನಿತ್ಯ ಕರೆಸಿಕೊಳ್ಳುತ್ತಾ ಶ್ರೀ ವ್ಯಾಸರಾಜರಿಗೆ ಹಾಗು ಮಠಕ್ಕೆ ದ್ರೋಹ ಮಾಡುತ್ತಿದ್ದು, ಇದೆಲ್ಲಾ ಕಾರಣಗಳಿಂದಲೇ,  ಈ  ಮಹಾ ವಿದ್ವಾನ್ ಶ್ರೀಶತೀರ್ಥರ  ಕಾಲದಲ್ಲೇ ಶ್ರೀ ವ್ಯಾಸರಾಜರ ಮೂಲ ಬೃಂದಾವನ ಧ್ವಂಸ ನೆಡೆದಿದ್ದು ಎಂದು ತೋರುತ್ತದೆ.  ಈ ವ್ಯಕ್ತಿ ಪ್ರಸ್ತುತ ಪೀಠಾಧಿಪತಿಯಾಗಿರುವುದೇ ಶ್ರೀ ವ್ಯಾಸರಾಜ ಮಠಕ್ಕೆ, ಮಾಧ್ವ ಪರಂಪರೆಗೆ ಒಂದು  ಕಪ್ಪು ಚುಕ್ಕೆ.   



ಇಷ್ಟಕ್ಕೆ ಶ್ರೀಶತೀರ್ಥ ಸುಮ್ಮನಾಗಿದ್ದಾರೆ ಚನ್ನಾಗಿ ಇರುತಿತ್ತು,  ಆದರೆ  ನಿನ್ನೆ ವ್ಯಾಸರಾಜ ಮಠ ಗಾಂಧಿಬಜಾರ್ ನಲ್ಲಿ  ಸಂವಾದ ಮಾಡಿ,  ಈಗಿರುವ ವ್ಯಾಸರಾಜರ ಬೃಂದಾವನವನ್ನು ಮತ್ತೆ ಒಡೆದು,  ಅದಕ್ಕಿಂತಾ ಚನ್ನಾಗಿ ಇನ್ನೊಂದು ಬೃಂದಾವನ ಮಾಡಿ  ಮತ್ತೆ ಪ್ರತಿಷ್ಠಾಪನೆ ಮಾಡುತ್ತೇನೆ ಎಂದು ಘೋಷಣೆ ಮಾಡಿ ತನ್ನ ಚೇಲಾಗಳಿಂದ ಚಪ್ಪಾಳೆ ತಟ್ಟಿಸಿಕೊಂಡಿರುವುದು  ಇಡೀ ಮಧ್ವ ಸಮಾಜಕ್ಕೆ, ವ್ಯಾಸರಾಜ ಮಠಕ್ಕೆ ಇಡೀ ಪರಂಪರೆಗೆ ಮಾಡಿದ ಘೋರ ಅವಮಾನ.  



ಶ್ರೀಶತೀರ್ಥರೇ ನಿಮಗೆ ಬೃಂದಾವನ ಏನು? ಅದರ ಸಾನಿಧ್ಯ ಏನು?, ಆ ಬೃಂದಾವನಕ್ಕೆ ಜೋಡಿಸಲಾದ ಕಲ್ಲಿನ ಮಹತ್ವವೇನು? ಏನಾದರು ಅರಿವಿದೆಯೇ?  ಬರಿ ಗ್ರಂಥಗಳ ಹಿಡಿದು ಓದಿದರೆ ಸಾಲದು, ಅದಕ್ಕೆ ತಕ್ಕನಾದ ಜ್ಞಾನ ಅಧಿಷ್ಠಾನ ಇರಬೇಕು.  ಶ್ರೀರಾಮದೇವರು ಒಂದು ಕ್ಷಣಕಾಲ ಕುಳಿತ ಕಲ್ಲಿನಲ್ಲಿ ನಮ್ಮ ಬೃಂದಾವನವಾಗಬೇಕು ಎಂದು ಶ್ರೀ ಮಂತ್ರಾಲಯ ಪ್ರಭುಗಳು ಹಠ ಹಿಡಿದು ಅದೇ ಕಲ್ಲಿನಲ್ಲಿ ಬೃಂದಾವನ ಮಾಡಿಸಿಕೊಂಡಿದ್ದು ನಿಮಗೆ ತಿಳಿದಿಲ್ಲವೇ?  ಶ್ರೀ ರಾಯರಿಗೆ ಅಂತ ಮಾಡಿಸಿದ ಬೃಂದಾವನ  ಶ್ರೀ ವಾದಿಂದ್ರ ತೀರ್ಥರಿಗೆ ಸ್ವತಃ  ರಾಯರೇ ಕಾಯಿದಿರಿದುದ್ದು ಯಾಕೆ ಎಂದು ನಿಮಗೆ ತಿಳಿದಿದೆಯೇ?  ಚಿಕ್ಕ ಚಿಕ್ಕ ಕಲ್ಲುಗಳಿಂದ ಮಾಡಿದ ರಾಯರ ಬೃಂದಾವನಕ್ಕೆ ಪ್ರತಿವರ್ಷ ಅಷ್ಟಬಂದ ಮಾಡಿ  ಅದರ ಒಂದೇ ಒಂದು ಚಿಕ್ಕ ಚೂರು ಕೆಳಗೆ ಬೀಳದಂತೆ ನೋಡಿಕೊಳ್ಳುತ್ತಾರೆ ಅದರ ಮಹತ್ವ ನಿಮ್ಮ ಜಡ್ಡು ಹಿಡಿದ ಬುದ್ದಿಗೆ ಹೋಗಲಿಲ್ಲವೇ?   ಪಂಚ ಬೃಂದಾವನ ನಿರ್ಮಿಸಿ ಪೂಜಿಸಿ ತಮ್ಮ ಸಾನಿಧ್ಯ ತುಂಬಿ ದೇವಲೋಕ ಪ್ರಯಾಣ ಮಾಡಿದ ಶ್ರೀ ವಾದಿರಾಜರ ಬೃಂದಾವನದ ಶಿಲೆಯ ಮಹತ್ವ ನಿಮಗೆ ತಿಳಿದಿದೆಯಾ?  ಕಂಬಾಲೂರು ರಾಮಚಂದ್ರ ತೀರ್ಥರು ತಮ್ಮ ದೃಷ್ಟಿ ಇಂದ ತಲೆಮೇಲೆ ಹಾಕಲು ತಂದ  ಕಲ್ಲನ್ನು ಅಂತರದಲ್ಲೇ ನಿಲ್ಲಿಸಿ, ನಂತರ ತಮ್ಮ ಬೃಂದಾವನದ ಮೇಲೆ ಆ ಕಲ್ಲನ್ನು ಇರಿಸಿಕೊಂಡಿದ್ದಾರೆ ಅದರ ಮಹತ್ವ ನಿಮಗೆ ಗೊತ್ತಾ?  



ಶ್ರೀ ವ್ಯಾಸರಾಜರ ಬಂದಾವನವನ್ನು  ಶ್ರೀ ಸುಧೀಂದ್ರರು, ಶ್ರೀ ವಿಜಯೇಂದ್ರರು, ಶ್ರೀ ವಾದಿರಾಜರು, ಶ್ರೀ ಶ್ರೀನಿವಾಸ ತೀರ್ಥರು, ಶ್ರೀ ರಾಮತೀರ್ಥರು, ಮುಂದಿನ ಅವತಾರದಲ್ಲಿ ಶ್ರೀ ರಾಘವೇಂದ್ರರು, ಶ್ರೀ ರಘುನಾಥ ತೀರ್ಥರು, ಶ್ರೀ ಜಗನ್ನಾಥತೀರ್ಥರು ಮುಂತಾದ ಪರಂಪರೆಯ ಹಲವು ಯತಿಗಳು ಸ್ಪರ್ಶಿಸಿ ತಮ್ಮ ಸ್ವರೊಪದಲ್ಲಿ ಇರುವ ದೇವರನ್ನು ಬೃಂದಾವನದಲ್ಲಿ ಸ್ಥಾಪಿಸಿ ಪೂಜಿಸಿ ಆ ಕಲ್ಲುಗಳಿಗೂ ದೇವ ಸಾನಿಧ್ಯ ತುಂಬಿರುವುದಿಲ್ಲವೇ?  ಇದು ನಿಮ್ಮ ಬುದ್ದಿಗೆ ಹೋಗುವುದಿಲ್ಲವೆ ?



ಬೃಂದಾವನ ಬದಲಿಸಲು ನೀವು ಕೊಟ್ಟ ಕಾರಣವೇನು? ಶಿಥಿಲ, ಸಂಸರ್ಗ ದೋಷ!  ಒಂದು ವಾರಕಾಲ  ನೀವು ಶುದ್ಧಿ ಮಾಡಿ ಪುನಃ ಪ್ರತಿಷ್ಠಾಪನೆ! ವಾರೆವಾ! ನಿಮ್ಮ ವಿದ್ವತ್ ಗೆ, ಬಡ್ಕೋಬೇಕು!. ನಿತ್ಯ ವಾಯುದೇವರ ಸನ್ನಿಧಾನಯುಕ್ತರಾದ, ಶೇಷಾಂಶರಾದ ಶ್ರೀ ವ್ಯಾಸರಾಜರಿಗೆ ಅಥವಾ ಅವರ ಬೃಂದಾವನಕ್ಕೆ ಸಂಸರ್ಗ ದೋಷ ಬರುತ್ತದೆಯಾ? ಮೊನ್ನೆ ನೀವು  ಅಪರಾತ್ರಿ ಮಾಡಿದ ಪುಣ್ಯಾಹ ಯಾವ ಶಾಸ್ತ್ರದಲ್ಲಿ ಹೇಳಿದೆ? ಮರುದಿನ ಉಡುಪಿ ಪುರೋಹಿತರು ಮಡಿ ಮಡಿ ಇಂದ ಮಾಡಿದ ಕಲಶಗಳ ಅಭಿಷೇಕದಿಂದ  ಬೃಂದಾವನದಲ್ಲಿ ಶ್ರೀ ವ್ಯಾಸರಾಜ ಸಾನಿಧ್ಯ ಬಂದಿತಾ?   ಶ್ರೀ ವ್ಯಾಸರಾಜರ ಬೃಂದಾವನ ಒಂದು ಪಕ್ಷ ದುಷ್ಟರು ಮುಟ್ಟಿದರೂ ಬೃಂದಾವನ ಸದಾ ಶುದ್ಧಿಯಾಗೆ ಇರುತ್ತದೆ ಎಂಬ ಪರಿಜ್ಞಾನ ಇಲ್ಲದ ಮೇಲೆ ಈ ಮಠದ ಪೀಠಾಧಿಪತಿಯಾಗಿರಲು ನೀವು ಯಾವತರಹದಲ್ಲಿ  ಲಾಯಕ್ಕು?



ಕಿಡಿಗೇಡಿಗಳು ಬೃಂದಾವನ ಧ್ವಂಸ ಮಾಡಿರಬಹುದು, ಕೆಲವೊಂದು ಭಾಗ ಶೀಥಿಲವಾಗಿರಬಹುದು ಆದರೆ ಆ ಬೃಂದಾವನದ ಕಲ್ಲುಗಳಲ್ಲಿ ಇರುವ ಸಾನಿಧ್ಯ ಹೋಗಲು ಸಾಧ್ಯವೇ?  ಮುಂದೆ ನೀವು ಬೇರೆ ಇದೇ ರಿತಿ ಬೃಂದಾವನ ಮಾಡಿ ಈಗಿರುವ ಬೃಂದಾವನದ ಶಿಲೆಯನ್ನು ತೆಗೆದು ಎಲ್ಲಿ ಹಾಕುತ್ತಿರಿ?  ಅದರ ಪಾವಿತ್ರ್ಯದ ಬಗ್ಗೆ ಸ್ವಲ್ಪವಾದರೂ ಜ್ಞಾನ ಇದೆಯಾ? ಬೃಂದಾವನದ ಶಿಲೆಯ ಪವಿತ್ರೆತೆಯ  ಚಿಕ್ಕಜ್ಞಾನ ನಿಮಗೆ ಬರದೇ ಹೋದ  ಮಹಾ ಪಂಡಿತರು,  ಮಹಾ ಮಹೋಪಾಧ್ಯಾಯ ಎಂದು  ಬಿರಿದು ತೆಗೆದುಕೊಂಡು, ವ್ಯಾಸತ್ರಯ ಪಾಠ ಪ್ರವಚನ ಮಾಡಿದ್ದು ಅಕ್ಷರಸಹ  ವರ್ಥ್ಯವಲ್ಲವೇ?.  ಯಾವಾಗ ನೀವು ಆಶ್ರಮ ಗುರುಗಳಿಗೆ, ಆಶ್ರಮ ಜೇಷ್ಟರಿಗೆ ಅವಮಾನ ಮಾಡಿದಿರೋ ಅಂದೇ ನಿಮ್ಮ ಜ್ಞಾನಕ್ಕೆ ಗ್ರಹಣ ಹಿಡಿದಿದೆ!. 



ಶ್ರೀಶತೀರ್ಥರೇ  ಹುಷಾರ್! ಈಗಿರುವ ಬೃಂದಾವನದ ಒಂದೇ  ಒಂದು ಚಿಕ್ಕ ಕಲ್ಲನ್ನು ಕೆಳಗೆ ಇಳಿಸಿದರೆ, ಇಡೀ ಮಾಧ್ವ ಸಮಾಜ, ಶ್ರೀ ವ್ಯಾಸರಾಜ ಮಠದ ಶಿಷ್ಯರೆಲ್ಲ ಸೇರಿ ನಿಮ್ಮ ಬೃಂದಾವನ ಮಾಡುತ್ತಾರೆ. ಒಂದಂತೂ ಸ್ಪಷ್ಟವಾಗಿ ತಿಳಿದುಕೊಳ್ಳಿ ಶ್ರೀಶತೀರ್ಥರೇ,    ಶ್ರೀ ವ್ಯಾಸರಾಜ ಮಠದ ಶಿಷ್ಯರ ಧಾರ್ಮಿಕ ಭಾವನೆಗಳ ಜೊತೆ ಆಟ ಆಡಲು ಪ್ರಯತ್ನ ಮಾಡಿದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ.  ಈ ಕ್ಷಣಕ್ಕೆ ಹೊಸಾ ಬೃಂದಾವನ ಮಾಡುವ ಕೆಲಸ ಬಿಟ್ಟು, ನವಬೃಂದಾವನಕ್ಕೆ ಹೋಗಿ  ನಿಮ್ಮ ತಲೆಯನ್ನು ಬೃಂದಾವನಕ್ಕೆ ನೂರೊಂದು ಬಾರಿ ಜಜ್ಜಿ ಪ್ರಾಯಶ್ಚಿತ್ತ ಮಾಡಿಕೊಳ್ಳಿ.    



ಶ್ರೀ ವ್ಯಾಸರಾಜರ ಮಠದ ಷಂಡ ಶಿಷ್ಯರೇ, ನಿಮಗೆ ಸ್ವಾಭಿಮಾನವೇ ಇಲ್ಲವಾ?  ಶ್ರೀ ಮನೋಹರತೀರ್ಥ ರಿಂದ ಸನ್ಯಾಸ ಕಿತ್ತುಕೊಂಡಾಗಲೂ ಸುಮ್ಮನಿದ್ದಿರಿ ಅದಕ್ಕೆ ಕಾರಣ ಹಣದ ಅವ್ಯವಹಾರ  ಒಪ್ಪಿಕೊಳ್ಳೋಣ. ನೀವು  ಶ್ರೀ ವಿದ್ಯಾವಿಜಯತೀರ್ಥರಿಗೆ ಕೊಟ್ಟ ಮಾತನ್ನು ಮುರಿದು ವಚನ ಭ್ರಷ್ಟರಾದಾಗಲೂ, ಮಠದಿಂದ ಹೊರಹಾಕಿದರೂ ಸುಮ್ಮನಿದ್ದೀರಿ,  ವ್ಯಾಸತ್ರಯ ಪಂಡಿತರು ಮುಂದೆ ಕೊಡಬಹುದು ಎಂಬ ಕಾರಣಕ್ಕೆ ಒಪ್ಪಿಕೊಳ್ಳೋಣ, ನೀವು  ಶ್ರೀ ವ್ಯಾಸರಾಜ ಮಠದ ಸಂಪ್ರದಾಯ ಮುರಿದಾಗಲೂ ಸುಮ್ಮನಿದ್ದಿರಿ ಮುಂದೆ ಸರಿಹೋಗಬಹುದು ಎಂಬ ಕಾರಣಕ್ಕೆ ಒಪ್ಪಿಕೊಳ್ಳೋಣ.  ಶ್ರೀ ವ್ಯಾಸರಾಜ ಮಠ, ಶ್ರೀ ವ್ಯಾಸರಾಜರ ಬೃಂದಾವನವನ್ನು ಬದಲಾವಣೆ ಮಾಡುತ್ತೇನೆ ಎಂದು ಹೇಳಿ,  ಶ್ರೀ ಮಠವನ್ನು ಇಷ್ಟು ಹೀನಾಯ ಸ್ಥಿತಿತಲುಪಿಸಿದರೂ, ಇನ್ನೆಷ್ಟು ದಿನ ಮೌನವಾಗಿ ಇದನ್ನೆಲ್ಲಾ ಸಹಿಸಿಕೊಳ್ಳುತ್ತೀರಿ? ನಿಮ್ಮ ತಲೆಯಲ್ಲಿ ಏನು ತುಂಬಿದೆ? ನೀವು ನಿಜವಾಗಲೂ  ಶ್ರೀ ವ್ಯಾಸರಾಜ ಮಠದ ಶಿಷ್ಯರೇ ಆಗಿದ್ದರೆ, ಶ್ರೀ ವ್ಯಾಸರಾಜರ ಮೇಲೆ ಭಕ್ತಿ ಇದ್ದರೆ,  ನಿಮ್ಮಲ್ಲಿ ಸ್ವಾಭಿಮಾನ ಇದ್ದರೆ, ಈ ಶ್ರೀಶತೀರ್ಥ ಸ್ವಾರ್ಥ ಸ್ವಾಮಿಯ ನಿಲುವನ್ನು ಖಂಡಿಸಿ, ಪ್ರತಿಭಟಿಸಿ  ಈ ದೂರ್ತ ಸ್ವಾಮಿ ಹೊಸಾ ಬೃಂದಾವನ ನಿರ್ಮಿಸುವುದನ್ನು ಈ ಕ್ಷಣ ನಿಲ್ಲಿಸಿ.  



ವಿಶೇಷ ಸೂಚನೆ : ಈ ವಿಡಿಯೋ ವಿಷಯ ಇಡೀ ಮಾಧ್ವಸಮಾಜಕ್ಕೆ ಶ್ರೀ ವ್ಯಾಸರಾಜಮಠದ ಪ್ರತಿಯೊಬ್ಬ ಶಿಷ್ಯನಿಗೂ ಮುಟ್ಟುವವರೆಗೆ ಹಂಚಿಕೊಳ್ಳಿ. ಶೇರ್ ಮಾಡಿ.



*******



ಇತ್ತೀಚೆಗೆ ಕೆಲವು ಸಾಮರಸ್ಯವನ್ನು ಕದಡುವ ಕುಹಕಿಗಳು ಶ್ರೀವ್ಯಾಸರಾಜಮಠದ ಶ್ರೀಪಾದರ ಮೇಲೆ ವೃಥಾ ಆರೋಪಗಳನ್ನು ಮಾಡಿದ್ದರು. ಅವೆಲ್ಲದಕ್ಕೂ ಶ್ರೀಮಠದಿಂದ ತಕ್ಕ ಸ್ಪಷ್ಟನೆ ಬಂದಿದ್ದು ಆ ಸ್ಪಷ್ಟನೆ ಮತ್ತು  ಅದರ ಪ್ರತಿ.

..
ನವಬೃಂದಾವನ ಘಟನೆಯ ನಂತರ ಜಾಲತಾಣಗಳಲ್ಲಿ ಮಾಡಲಾದ  ಅರ್ಥಹೀನ ಆರೋಪಗಳಿಗೆ ಸ್ಪಷ್ಟನೆ.
ವಾಸ್ತವದ ನೆಲೆಯಲ್ಲಿ ಸಜ್ಜನಸಮುದಾಯಕ್ಕೆ ಕೆಲವು ವಿಷಯಗಳನ್ನು ತಿಳಿಸುವುದು ಈ ಸ್ಪಷ್ಟೀಕರಣದ ಉದ್ದೇಶವಾಗಿದೆ. 

ಪೂಜ್ಯ ವ್ಯಾಸರಾಜ ಮಠಾಧೀಶರು ವಿಷಯ ತಿಳಿದ ಮರುಗಳಿಗೆಯಲ್ಲಿ ಮೈಸೂರಿನಿಂದ ಹೊಸಪೇಟೆಗೆ ತೆರಳುವಾಗ ದಾರಿಯುದ್ದಕ್ಕೂ ಶ್ರೀಮಠದ ಗಣ್ಯಾತಿಗಣ್ಯವ್ಯಕ್ತಿಗಳ ಜೊತೆಗೆ ಸಂಪರ್ಕದಲ್ಲಿದ್ದು ಪೋಲೀಸ್ ಅಧಿಕಾರಿಗಳಿಗೆ, ಮಂತ್ರಿಮಹೋದಯರಿಗೆ ಆದ ಅನರ್ಥದ ತೀವ್ರತೆಯ ಸ್ಪಷ್ಟನೆಯನ್ನು ಕೊಟ್ಟು ಸಮುಚಿತವಾದ ಪರಿಹಾರಕ್ಕೋಸ್ಕರ  ಪ್ರಯತ್ನವನ್ನು ಮಾಡುತ್ತ ಶಿಲ್ಪಿಗಳು,ಕಲಾವಿದರು, ಅಭಿಯಂತರರು  ವಾಸ್ತುತಜ್ಞರಿಗೆ ನವಬೃಂದಾವನಕ್ಕೆ ಬರುವಂತೆ ಸೂಚನೆ ಕೊಡುತ್ತಲೇ ಹಂಪಿಯ ನವಬೃಂದಾವನ ಕ್ಷೇತ್ರಕ್ಕೆ  ಆಗಮಿಸಿದರು. 


ಈ ಸಂದರ್ಭದಲ್ಲಿ ಶ್ರೀರಾಘವೇಂದ್ರಮಠದ ಪೂಜ್ಯ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರೂ ಕೂಡ ಮಂತ್ರಾಲಯಕ್ಷೇತ್ರದಿಂದ ಮೊದಲೇ ಆಗಮಿಸಿ ತಮ್ಮಿಂದ ಸಾಧ್ಯವಿದ್ದಷ್ಟು ನಿರಂತರ ನೆರವನ್ನು ನೀಡಿರುವಂಥದ್ದು ಅವಿಸ್ಮರಣೀಯವಾಗಿದೆ. ಇದಲ್ಲದೇ ಶ್ರೀಮದುತ್ತರಾದಿಮಠದ ಪೂಜ್ಯ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರೂ ಕೂಡ ಗುಲ್ಬರ್ಗಾದಿಂದ ಆಗಮಿಸಿ  ತಮ್ಮ ಶಿಷ್ಯರೊಂದಿಗೆ ಎಲ್ಲ ವಿಧದ ಸಹಕಾರವನ್ನು ನೀಡಿದ್ದೂ ಕೂಡ ಅವಿಸ್ಮರಣೀಯವಾಗಿದೆ. ವಿಶೇಷವಾಗಿ ಶ್ರೀರಾಘವೇಂದ್ರಮಠದ ಮತ್ತು ಶ್ರೀಉತ್ತರಾದಿಮಠದ ಇಬ್ಬರೂ  ಶ್ರೀಪಾದಂಗಳವರ ಸೇವೆ ಮತ್ತು ಸಹಕಾರವು ನಿಸ್ಪೃಹತೆಯಿಂದ ಕೂಡಿದ್ದು ಎಂಬುದನ್ನು ನಾವು ಆದರದಿಂದ ಉಲ್ಲೇಖಿಸುತ್ತೇವೆ. ಅದರಂತೆ ಇಳಿವಯಸ್ಸಿನಲ್ಲಿಯೂ ಬಹಳ ದೂರದಿಂದ  ಪೂಜ್ಯ ಪೇಜಾವರಶ್ರೀಪಾದರಾದ ಶ್ರೀವಿಶ್ವೇಶತೀರ್ಥರು ಆಗಮಿಸಿದ್ದರು ಹಾಗೂ ಶ್ರೀಶ್ರೀಪಾದರಾಜಮಠದ ಪೂಜ್ಯ ಶ್ರೀಕೇಶವನಿಧಿತೀರ್ಥ ಶ್ರೀಪಾದಂಗಳವರು ಅನಾರೋಗ್ಯದಲ್ಲಿಯೂ ಆಗಮಿಸಿದ್ದರು.  ಶ್ರೀಮಾಧವತೀರ್ಥಸಂಸ್ಥಾನದ ಹಿರಿಯ ಶ್ರೀಪಾದರಾದ ಪೂಜ್ಯ ಶ್ರೀವಿದ್ಯಾಸಾಗರಮಾಧವತೀರ್ಥರು ಮತ್ತು ಕಿರಿಯಶ್ರೀಪಾದರಾದ ಪೂಜ್ಯ ಶ್ರೀವಿದ್ಯಾಸಿಂಧುಮಾಧವತೀರ್ಥರು, ಆಗಮಿಸಿದ್ದರು. ಅದರಂತೆ ಶ್ರೀಮನೋಹರತೀರ್ಥರು, ಶ್ರೀವಿಜಯತೀರ್ಥರೂ ಸಹ ಆಗಮಿಸಿದ್ದರು. ಈ ಎಲ್ಲರನ್ನೂ ಕೂಡ ನಾವು ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಸ್ಮರಿಸುತ್ತೇವೆ. 



ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಎಲ್ಲ ಮಠದ ಪೀಠಾಧಿಪತಿಗಳು ಹಾಗು ವಿದ್ವಾಂಸರು ಈ ಸಂದರ್ಭದಲ್ಲಿ ಅವಿಚ್ಛಿನ್ನವಾದ ಪಾರಾಯಣ ಹಾಗು ಸೇವೆಯನ್ನು ನೆರವೇರಿಸಿದುದು ನಾವು ಎಂದೂ ಮರೆಯಲಾಗದ ವಿಷಯ. 



ಪೂಜ್ಯ ಶ್ರೀವಿದ್ಯಾಶ್ರೀಶಶ್ರೀಪಾದಂಗಳವರು ಶನಿವಾರ 20/07/2019 ರಂದು ನವಬೃಂದಾವನಗಡ್ಡೆಯಲ್ಲಿ ಸಂಸ್ಥಾನಪೂಜೆಯನ್ನು  ನೆರವೇರಿಸಿ ಸಂಜೆ  ಆನೆಗುಂದಿಯ ರಾಯರಮಠಕ್ಕೆ ಶ್ರೀಸುಬುಧೇಂದ್ರ ಶ್ರೀಪಾದರನ್ನು ಭೇಟಿಮಾಡುವುದಕ್ಕೋಸ್ಕರ ಅವರ ಶ್ರೀಮಠಕ್ಕೆ ತೆರಳಿದರು. ಆದರೆ ಶ್ರೀಸುಬುಧೇಂದ್ರಶ್ರೀಪಾದಂಗಳವರು ಆಗಲೇ ಅಲ್ಲಿಂದ ಪ್ರಯಾಣ ಮಾಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಭೇಟಿ ಸಾಧ್ಯವಾಗಲಿಲ್ಲ. 

      
ಶ್ರೀಉತ್ತರಾದಿಮಠಾಧೀಶರಿಗೆ ಈ ಘಟನೆಯ ಸಹಕಾರಕ್ಕಾಗಿ ಪ್ರತ್ಯೇಕವಾಗಿ ಗೌರವ ಕೊಡಲಾಗಿದೆ ಎಂಬುದು ಒಂದು ಸಣ್ಣಮನಸ್ಸಿನ ಪರಿಕಲ್ಪನೆ. ಪೂಜ್ಯ ಶ್ರೀಉತ್ತರಾದಿಮಠಾಧೀಶರು  ಶ್ರೀವ್ಯಾಸರಾಜರ ಆರಾಧನಾ ಸಂದರ್ಭದಲ್ಲಿ  ಶ್ರೀವ್ಯಾಸರಾಜರಿಗೆ ಅರ್ಪಿಸಲು ವಿಶಿಷ್ಟವಾದ ರೇಶ್ಮೆವಸ್ತ್ರವನ್ನು, ಫಲಕಾಣಿಕೆಗಳನ್ನೂ  ಸಮರ್ಪಿಸಿದ್ದರು. ಆ ಪ್ರಸಾದವನ್ನು ಅವರಿಗೆ ನೀಡುವ ಕಾರ್ಯ ಬಹಳ ದಿನಗಳಿಂದ ಬಾಕಿ ಉಳಿದಿತ್ತು. ಅದನ್ನು ಸ್ಮರಿಸಿಕೊಂಡು ಶ್ರೀವಿದ್ಯಾಶ್ರೀಶತೀರ್ಥಶ್ರೀಪಾದರು ಅದನ್ನು ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆಯೇ ಹೊರತು ಈ ಕಾರ್ಯಕ್ರಮದ ಅಂಗವಾಗಿ ಶ್ರೀನಿವಾಸನ ವಸ್ತ್ರವನ್ನು ಸಮರ್ಪಿಸಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಬಯಸುತ್ತೇವೆ. ಸಂಪ್ರೋಕ್ಷಣೆಯ ಕಾರ್ಯ ಮುಗಿದ ಕೂಡಲೇ ಶ್ರೀವ್ಯಾಸರಾಜರ ಸನ್ನಿಧಾನದಲ್ಲಿಯೇ ಶ್ರೀರಾಯರಮಠ, ಶ್ರೀಉತ್ತರಾದಿಮಠ, ಶ್ರೀಪೇಜಾವರಮಠ, ಶ್ರೀಶ್ರೀಪಾದರಾಜಮಠ  ಮತ್ತು ಶ್ರೀಮಾಧವತೀರ್ಥಮಠದ ಶ್ರೀಪಾದಂಗಳವರಿಗೆ ಶ್ರೀವ್ಯಾಸರಾಜಮಠದ ವತಿಯಿಂದ  ಏಕಕಾಲದಲ್ಲಿಯೇ ಫಲ-ಕಾಣಿಕೆಗಳನ್ನು ಸಮರ್ಪಿಸಿ ಸತ್ಕರಿಸಲಾಯಿತು.


ಅನಿರೀಕ್ಷಿತವಾಗಿ ಸಂಭವಿಸಿದ ಈ ದುರ್ಘಟನೆಯ ಸಂದರ್ಭದಲ್ಲಿ ನವಬೃಂದಾವನಗಡ್ಡೆಯಲ್ಲಿ ಯಾವುದೇ ಪೂರ್ವಸಿದ್ಧತೆಯೂ ಇಲ್ಲದೆ ಐದು ಪೀಠಾಧಿಪತಿಗಳಿಗೆ ಪೂಜೆ ಮತ್ತು ಭಿಕ್ಷೆಗೆ ಸಮರ್ಪಕವಾದ ವ್ಯವಸ್ಥೆ ಮಾಡುವುದು ಅಸಾಧ್ಯವಾಗಿತ್ತೆಂಬುದನ್ನು ಸಜ್ಜನರು ಅರ್ಥಮಾಡಿಕೊಳ್ಳಬಲ್ಲರು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ವೃಂದಾವನ ಸಿದ್ಧವಾಗುವುದೇ ದೊಡ್ಡ ಪವಾಡಸದೃಶ ಸಂದರ್ಭವಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಪೀಠಾಧಿಪತಿಗಳಿಗೂ ಅಲ್ಲಿಯೇ ಭಿಕ್ಷೆಗೆ ಏರ್ಪಾಡುಮಾಡುವಂಥ ಅನುಕೂಲತೆಗಳು ಇರಲಿಲ್ಲ. ಇನ್ನು  ಬಂದಿರತಕ್ಕಂತಹ ಎಲ್ಲ ಮಠಗಳ ಪಂಡಿತರಿಗೆ ಶ್ರೀಮಠದ ದಿವಾನರಾದ ನಾನು  ಹಾಗು ಶ್ರಿಪಾದಪುತ್ರರಾದ ಡಿ.ಪಿ ಅನಂತಾಚಾರ್ಯರು ಸಾಯಂಕಾಲ ಭೋಜನವನ್ನು ಇಲ್ಲಿಯೇ ಸ್ವೀಕರಿಸಿ ಹೋಗಬೇಕೆಂದು ವಿನಮ್ರತೆಯಿಂದ ವಿನಂತಿಯನ್ನು ಸಲ್ಲಿಸಿದ್ದೇವೆ. ಅನೇಕ ವಿದ್ವಾಂಸರು, ಹಾಗು ಗಣ್ಯರು ಸೇರಿದಂತೆ  ಸುಮಾರು 1500 ಭಕ್ತರು ಅಲ್ಲಿಯೇ ಪ್ರಸಾದವನ್ನು  ಸ್ವೀಕರಿಸಿದರು. ಇದು ವಾಸ್ತವ ಸಂಗತಿ. 

           
      18ರ ಸಂಜೆ ಮತ್ತು 19 ರಂದು
ಶ್ರೀರಾಯರ ಮಠದ ವತಿಯಿಂದ ಆನೆಗುಂದಿಯಲ್ಲಿ ನೂರಾರು ಭಕ್ತರಿಗೆ  ಊಟೋಪಚಾರದ ವ್ಯವಸ್ಥೆಯಾಗಿತ್ತು. ಅದರಂತೆ ಶ್ರೀಉತ್ತರಾದಿಮಠದ ವತಿಯಿಂದಲೂ ಹೊಸಪೇಟೆಯಲ್ಲಿ ನೂರಾರು ಭಕ್ತರಿಗೆ ಊಟೋಪಚಾರದ ವ್ಯವಸ್ಥೆಯಾಗಿತ್ತು. ಈ ಎರಡೂ ಮಠಗಳ ಸೇವೆಯನ್ನು ಶ್ರೀವ್ಯಾಸರಾಜಮಠವು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತದೆ.           ನಡುಗಡ್ಡೆಯಲ್ಲಿ ಪೆಂಡಾಲಿನ ಮತ್ತು ವಿದ್ಯುದ್ದೀಪಗಳ ವ್ಯವಸ್ಥೆಗಳನ್ನು ಹೊಸಪೇಟೆಯ ಶ್ರೀವ್ಯಾಸರಾಜಮಠದ ಪ್ರತಿನಿಧಿಗಳಾದ ಶ್ರೀಯುತ ಗುರುರಾಜ ದೇಶಪಾಂಡೆಯವರು  ಶ್ರೀವ್ಯಾಸರಾಜಮಠಾಧೀಶರ ಆದೇಶದಂತೆ ಮಾಡಿದ್ದರು. ಅದರ ಹಣಕಾಸಿನ ಸಂಪೂರ್ಣವ್ಯವಸ್ಥೆ ಶ್ರೀವ್ಯಾಸರಾಜಮಠದ್ದೇ ಆಗಿತ್ತು.
 19 ನೆಯ ತಾರೀಖಿನ ಅನ್ನದಾನದ ಸಂಪೂರ್ಣ ಸೇವೆಯನ್ನು ವ್ಯಾಸರಾಯರ ಅಂತರಂಗ ಭಕ್ತರಾದ ಹೊಸಪೇಟೆಯ ಶೇಷಗಿರಿರಾಯರು ವಹಿಸಿದ್ದರೆಂಬುದು ಇಲ್ಲಿ ಸ್ಮರಣೀಯವಾಗುತ್ತದೆ. ಈ ಸಂತರ್ಪಣೆಯ ಕಾರ್ಯಕ್ಕಾಗಿ ಶ್ರೀರಾಯರಮಠ ಮತ್ತು ಶ್ರೀಉತ್ತರಾದಿಮಠಗಳ ಕಡೆಯಿಂದ ಅನೇಕವಿಧದ ಸಹಾಯವಿತ್ತೆಂಬುದು ಸ್ಮರಣಾರ್ಹವಾಗಿದೆ.  


ಅತ್ಯಂತ  ಮಾನಸಿಕದುಃಖದಲ್ಲಿರುವ, ಈ ಸಂದರ್ಭದಲ್ಲಿ ಹರಿವಾಯುಗಳನ್ನು ನಂಬಿದ, ಶ್ರೀವ್ಯಾಸರಾಜಮಠಾಧೀಶರು  ಯಾರನ್ನೂ ಓಲೈಸುವ ಅಗತ್ಯ ಇರುವುದಿಲ್ಲ. ಎಲ್ಲರೊಂದಿಗೆ ಎಂದಿನಿಂದಲೂ ಸಮರಸವಾದ ಸಂಬಂಧವನ್ನು ಕಾಪಾಡಿಕೊಂಡು ಬಂದವರು ಪೂಜ್ಯ ಶ್ರೀಪಾದಂಗಳವರು. ಯಾರು  ಶ್ರೀಗೋಪಾಲಕೃಷ್ಣ ದೇವರ ಹಾಗು ಶ್ರೀ ಪಟ್ಟಾಭಿರಾಮದೇವರ ಅನುಗ್ರಹದಿಂದ ಪೀಠಕ್ಕೆ ಬಂದ ಶ್ರೀಗಳು ಇತರರನ್ನು ಓಲೈಸುವ  ಅಗತ್ಯವಿರುವುದಿಲ್ಲ. 



ಅಂತರ್ಜಾಲಗಳಲ್ಲಿ ಇಂತಹ ಲೇಖನಗಳನ್ನು ಬರೆದು ಸಜ್ಜನರನ್ನು ಕ್ಷೋಭೆಗೊಳಿಸುವ ಇಂತಹ ಪ್ರಯತ್ನವನ್ನು ವಿವೇಕಿಗಳು ತೊರೆಯುವುದು ಉಚಿತ. ಕಾಮಾಲೆಯ ರೋಗಗ್ರಸ್ತಕಣ್ಣಿನವನಿಗೆ ಬಿಳಿಯಾದ ಶಂಖವೂ ಹಳದಿಯಾಗಿಯೇ ಕಾಣುತ್ತದೆ. ಹಾಗಾಗಿ  ಕುಹಕಿಗಳು ಮಾಡುವ ಇಂತಹ ಅರ್ಥಹೀನ, ದುರುದ್ದೇಶಪೂರಿತ ಆರೋಪಗಳಿಂದ ಸಜ್ಜನರ ಮನಸ್ಸು ಕಲುಷಿತವಾಗಬಾರದೆಂಬುದೇ ಈ ಸ್ಪಷ್ಟನೆಯ ಉದ್ದೇಶ. 

      
ಎಲ್. ಎಸ್.ಬ್ರಹ್ಮಣ್ಯತೀರ್ಥ                                       
ದಿವಾನರು ಶ್ರೀಸೋಸಲೇ ವ್ಯಾಸರಾಜಮಠ.
*********

No comments:

Post a Comment