Tuesday 1 January 2019

ರಾಯರು 08 ಮಹಿಮೆ ರಾಘವೇಂದ್ರ ಸ್ವಾಮಿ rayaru 08 mahime raghavendra swamy


ಹಲವು ದಶಕಗಳ ಹಿಂದೆ ನಡೆದ ಸತ್ಯಘಟನೆ :

ಮಂತ್ರಾಲಯ ರಾಯರ ಮಠದ ಆಡಳಿತ ಮಂಡಳಿ ಶ್ರೀ ಮಠದ ಹಳೆಯ ಎಲೆಕ್ಟ್ರಿಕ್ ವೈರಿಂಗ್ ಬದಲಿಸಿ .. ಹೊಸ ವೈರಿಂಗ್ ಜೋಡಣೆ ಮತ್ತು ಇತರೆ ಎಲೆಕ್ಟ್ರಿಕಲ್ ರಿಪೇರಿ ಕೆಲಸಕ್ಕೆ ..
ಚೆನ್ನೈ ಮೂಲದ ಒಂದು ಎಲೆಕ್ಟ್ರಿಕಲ್  ಸರ್ವಿಸ್ ಚಿಕ್ಕ ಕಂಪನಿಗೆ ವಹಿಸಿತ್ತು  

ಎಲೆಕ್ಟ್ರಿಕ್ ಸರ್ವಿಸ್ ಚಿಕ್ಕ ಕಂಪನಿಯಲ್ಲಿ ದಿನಗೂಲಿಗೆ ಕೆಲಸಮಾಡುತ್ತಿದ್ದ  ಒಬ್ಬ 45 ವರುಷದ ನಂಬಿಗಸ್ಥ ಕುಶಲ ಕಾರ್ಮಿಕನಾದ ಎಲೆಕ್ಟ್ರಿಷಿಯನ್ ಗೆ ಮಂತ್ರಾಲಯ ಗುತ್ತಿಗೆ ವಹಿಸಿಕೊಡಲಾಗಿತ್ತು.

ಈ ಎಲೆಕ್ಟ್ರಿಷಿಯನ್ ಗುರುರಾಯರ ಅಂತರಂಗ ಭಕ್ತ. ಮನೆಯಲ್ಲಿಯೇ ಗುರುಗಳ ಫೋಟೋ ಇಟ್ಟುಕೊಂಡು ದಿನಾಲು ಭಕ್ತಿಯಿಂದ ಪೂಜೆಮಾಡುತ್ತಿದ್ದ.. ಪುಟ್ಟ ಕುಟುಂಬ ಹೊಂದಿದ್ದ.
ಕಷ್ಟಪಟ್ಟು ದುಡಿದು ಸಂಸಾರದ ಭಾರ ಸರಿದೂಗಿಸುತ್ತಿದ..

ಶ್ರೀ ಮಠ ಮಂತ್ರಾಲಯದಲ್ಲಿ ಗುತ್ತಿಗೆ  ಕೆಲಸ ಕೇಳಿದೊಡನೆ ಎಲೆಕ್ಟ್ರಿಷಿಯನ್ ಆನಂದಕ್ಕೆ ಪಾರವೇ ಇರಲಿಲ್ಲ ..ತಾನು ದಿನನಿತ್ಯ ಫೋಟೋದಲ್ಲಿ ನೋಡುತ್ತಿದ್ದ ಗುರುಗಳ ಮೂಲಬೃಂದಾವನ ನೋಡುವ ಸೌಭಾಗ್ಯ!! ( ಪುಟ್ಟ ಸಂಸಾರ ಕಷ್ಟಪಟ್ಟು ನಿಭಾಯಿಸುತ್ತಿದ್ದರಿಂದ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ  ಹೋಗಿ ರಾಯರ ದರುಶನ ಪಡೆಯಲು - ವೆಚ್ಚ ಪೇರಿಸಲು ಪರದಾಡುತ್ತಿದ್ದ ..)

ತಾನು ಕೆಲಸಮಾಡುತ್ತಿದ್ದ ಚಿಕ್ಕ ಕಂಪನಿ ಇವನಿಗೆ ಬಸ್ಸಿನ ಖರ್ಚಿಗಾಗುವಷ್ಟು ಹಣಕೊಟ್ಟು - ಊಟಕ್ಕೆ ಮಠದಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿ..ಕಾರ್ಯ ನಿಮಿತ್ತ ಮಂತ್ರಾಲಯದತ್ತ ಹೊರಡಲು ತಿಳಿಸಿದರು..

ಸಂತೋಷದಿಂದ ಮನೆಗೆಬಂದು ಪುಟ್ಟ ಮಗ ಮತ್ತು ಹೆಂಡತಿಗೆ ವಿಷಯ ತಿಳಿಸಿ..
ಫೋಟೋದಲ್ಲಿರುವ ಗುರು ರಾಯರ ಸಾನಿಧ್ಯದಲ್ಲಿ ಒಂದು ದಿನದ  ಕೆಲಸವೆಂದು ಹೆಮ್ಮೆಯಿಂದಿ ಹೇಳಿ!!.. ತನ್ನ ಎರಡು  ಜೊತೆ ಬಟ್ಟೆ ಬ್ಯಾಗಿನಲ್ಲಿರಿಸಿ 3 ದಿನದಿಂದ 4 ದಿನದ ಪ್ರಯಾಣವೆಂದು ತಿಳಿಸಿ  ಮಂತ್ರಾಲಯಕ್ಕೆ ಹೊರಟು ನಿಂತ ..

ಹೆಚ್ಚಿನ ಗಂಟೆಗಳ ಪ್ರಾಯಾಣವಾದ್ದರಿಂದ (ರಾತ್ರಿ ಪ್ರಯಾಣ ಸಹಿತ ) ಬೆಳಗಿನ ಜಾವ ಮಂತ್ರಾಲಯ ತಲುಪುವಂತೆ ವ್ಯವಸ್ಥಿತವಾಗಿ  ಮುಂಜಾಗುರೂಕತೆ ವಹಿಸಿದ್ದ ( ತನ್ನ ದಿನದ ಭಾಗದ ಕೆಲಸವಾದ್ದರಿಂದ - ರಾತ್ರಿ ವಾಸ್ತವ್ಯ ಮಾಡದೆ ಚೆನ್ನೈ ನತ್ತ ಪ್ರಯಾಣ ಮಾಡುವುದಕ್ಕೆ)  ..ಬಸ್ಸು ಸಮಯಕ್ಕೆ ಸರಿಯಾಗಿ ಬೆಳಗಿನ ಜಾವ  ಮಂತ್ರಾಲಯ ತಲುಪಿತು..

ಎಲೆಕ್ಟ್ರಿಷಿಯನ್ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ..ತನ್ನ ಮನತೃಪ್ತಿಯಾಗುವತನಕ  ಗುರುರಾಯರ ಬೃಂದಾವನದ ಮುಂದೆ ನಿಂತು ದರುಶನಮಾಡಿ - ಭಕ್ತಿಯಿಂದ ಶಿರಸಾಸ್ಟಾಂಗ ನಮಸ್ಕಾರ ಹಾಕಿ ...ಇನ್ನು ಈ ಜೀವ ಧನ್ಯವೆಂದು ತನ್ನನು ತಾನೇ ಮನದಲ್ಲಿ ಭಕ್ತಿಯಿಂದ ಹೇಳಿಕೊಳ್ಳುತ್ತಾ (ಗೊಣಗುತ್ತ )..

ಶ್ರೀ ಮಠದ ಆಡಳಿತವರ್ಗ ಆಫಿಸಿನಲ್ಲಿ ಬಂದ ವಿಷಯ ತಿಳಿಸಿ ಕಾರ್ಯ ಸೂಚಿ ಪಡೆದು ..ಎಲೆಕ್ಟ್ರಿಕ್ ಕೆಲಸಕ್ಕೆ ..ನುರಿತ ಕುಶಲ ಕಾರ್ಮಿಕನಾದ್ದರಿಂದ ..ಮೇಲಾಗಿ ಗುರು ಸಾನಿಧ್ಯದ ಕಾರ್ಯವೆಂದರಿತು ಭಕ್ತಿಯಿಂದ ನಿತ್ಯದಲ್ಲಿ ಪಟದಲ್ಲಿದ್ದ ರಾಯರ ಸ್ಮರಿಸಿ ಕೆಲಸ ಪ್ರಾರಂಭಿಸುವಂತೆ ...ವೈರಿಂಗ್ ರಿಪ್ಲೇಸ್ಮೆಂಟ್ ಕೆಲಸ ಪ್ರಾರಂಭಿಸಿದ...

ಎಲೆಕ್ಟ್ರಿಷಿಯನ್ ತನ್ನ ಕಾರ್ಯದಲ್ಲಿ ಎಷ್ಟೊಂದು ತಲ್ಲೀನನಾಗಿದ್ದನೆಂದರೆ ..ಊಟ -ತಿಂಡಿಗಳ ಪರಿವೆಯೇ ಇರಲಿಲ್ಲ ..

ಮಧ್ಯಾಹ್ನವಾದ್ದರಿಂದ ಶ್ರೀ ರಾಮದೇವರ ಪೂಜೆ ನೈವೇದ್ಯ - ರಾಯರ ಹಸ್ತೋದಕ ಭಕ್ತರು ಪ್ರಸಾದಪಡೆಯಲು ಪಂಕ್ತಿಗಳಲ್ಲಿ ತೆರಳುತ್ತಿದ್ದರು ..

ಇವನ ಕಾರ್ಯ ತತ್ಪರತೆ ನೋಡುತ್ತಿದ್ದ ಅರ್ಚಕರು ..ಎಲೆಕ್ಟ್ರಿಷಿಯನ್ ಗೆ ಸಂಜೆ ಹೊತ್ತಾಗುತ್ತಿದ್ದರಿಂದ ..ಕಡೆಯ ಪಂಕ್ತಿಯ ಪ್ರಸಾದದ ಸಮಯ - ಹೋಗಿ ಪ್ರಸಾದ ಸ್ವೀಕರಿಸಿ - ಕೆಲಸ ಪುನಃ ಪ್ರಾರಂಭಿಸಲು ಹೇಳಿದರು...

ಎಲೆಕ್ಟ್ರಿಷಿಯನ್ ತನ್ನ ಕಾರ್ಯ ತತ್ಪರತೆಯಲ್ಲಿ ಎಷ್ಟು ಮುಳುಗಿದ್ದನೆಂದರೆ ..ಗುರು ಸಾನಿಧ್ಯ ಕಾರ್ಯ ಅರ್ಧ ಬಿಟ್ಟು ಊಟಮಾಡುವದಕ್ಕೆ ಮನಸ್ಸಿಲ್ಲ - ಹಸಿದ ಹೊಟ್ಟೆ - ಪುನಃ ರಾತ್ರಿ ಪ್ರಯಾಣ - ತೆಗೆದುಕೊಂಡ ಕಾರ್ಯ ತಡವಾದರೆ - ಹೆಚ್ಚಿನ ದಿನದ ವಾಸ್ತವ್ಯಕ್ಕೆ - ಊಟಕ್ಕೆ ಹಣವಿಲ್ಲ ..

ಈ ದ್ವಂದದಲಿ ಎಲೆಕ್ಟ್ರಿಷಿಯನ್ ಊಟದ ಕಡೆ ಗಮನ ಕೊಡದೆ - ಗುರು ಸಾನಿಧ್ಯದ ಕಾರ್ಯದಲ್ಲಿ  ಸೇವಾ ನಿಷ್ಠೆಯಿಂದ ತತ್ಪರನಾಗಿ
ವಹಿಸಿದ ಕೆಲಸ ಅಚ್ಚುಕಟ್ಟಾಗಿ ಮುಗಿಸಲು ರಾತ್ರಿ ಸಮಯವಾದ್ದರಿಂದ - ಪಾಕಶಾಲೆಯಲ್ಲಿ ದಿನದ ಹಲವು ಸುತ್ತಿನ ಪಂಕ್ತಿ ಪ್ರಸಾದ ವಿತರಿಸಿ  - ಪರಿಕರಗಳನ್ನು  ಶುಚಿಗೊಳಿಸುತ್ತಿದ್ದರು.

ಹಸಿದ ಹೊಟ್ಟೆಯಿಂದಲೇ..ರಾಯರಿಗೆ ನಮಸ್ಕರಿಸಿ ಶ್ರೀ ಮಠದ ಆಫಿಸಿನಲ್ಲಿ ದಿನದ ಕೆಲಸದ ಮಾಹಿತಿ ಒಪ್ಪಿಸಿ ...
ಬಸ್ ಸ್ಟ್ಯಾಂಡಿನತ್ತ ಭಾರವಾದ ಹೆಜ್ಜೆಗಳನ್ನು ಹಾಕುತ್ತ ನಡೆದ..

ರಾತ್ರಿ ಎಂಟುವರೆ ಆದ್ದರಿಂದ ಚೆನ್ನೈ ಲಾಸ್ಟ್ ಬಸ್ ಹತ್ತಲು ಕಾಯುತ್ತಲಿದ್ದ ..

ವಿಚಾರಿಸಲು ಕಡೆಯ ಬಸ್ ವಿಳಂಬವಾಗಿ ಬಿಟ್ಟಿದ್ದರಿಂದ  ತಡರಾತ್ರಿಗೆ ಬಂದರೆ ಬಂದು ಸೇರಬಹುದು ಎಂಬುದಾಗಿ ಕಂಟ್ರೋಲ್ ರೂಮ್ನಲ್ಲಿದ್ದ ವ್ಯಕ್ತಿ ಹೇಳಿದ..

ಎಲೆಕ್ಟ್ರಿಷಿಯನ್ ಹಸಿದ ಹೊಟ್ಟೆಯಲ್ಲಿಯೇ ರಾಯರ ಸ್ಮರಣೆ ಮಾಡುತ್ತಾ ..ಅಲ್ಲಿಯೇ ಇದ್ದ 

ಸಿಮೆಂಟ್ ಬೆಂಚೊoದರ  ಮೇಲೆ ಮಲಗಿದ..ಹಸಿದ ಹೊಟ್ಟೆ ದೇಹಕ್ಕೆ ದಣಿವರಿಯದ ದಿನದ ಕಷ್ಟ ಕಾರ್ಯವಾದ್ದರಿಂದ ಮಂಪರು ಹತ್ತಿ ಕಣ್ಣು ಮುಚ್ಚಿತ್ತಲಿದ್ದವು ..

ಸರಿಯಾಗಿ 9:45 ರಾತ್ರಿಸಮಯದಲ್ಲಿ ಕಟ್ಟಿಗೆ ಪಾದುಕೆ ಧರಿಸಿದ - ಕೊರಳಲ್ಲಿ ತುಳಸೀಮಾಲೆ ಧರಿಸಿದ ದಿವ್ಯಮಯವಾದ ದೇಹ - ಮಹಾ ತೇಜಸ್ಸುಳ್ಳ ಮುಖಕಾಂತಿ ಹೊಂದಿದ ಯತಿಗಳೊಬ್ಬರು ತನ್ನ ಕಡೆಗೆ ಬರುತ್ತಿರುವ - ಕಟ್ಟಿಗೆ ಪಾದುಕೆಗಳ ಸ್ಪಷ್ಟವಾದ ಧ್ವನಿ ಎಲೆಕ್ಟ್ರಿಷಿಯನ್ ಕಿವಿಗಳಿಗೆ ಕೇಳಿಸುತ್ತಿತ್ತು ..ಅರೆನಿದ್ರಾವಸ್ಥೆಯಲ್ಲಿದ್ದ ಎಲೆಕ್ಟ್ರಿಷಿಯನ್ ಗೆ 
ಯಾರೋ ಪ್ರೀತಿಯಿಂದ ಮೈ ದಡವಿ - ಎಬ್ಬಿಸಿದಂತಾಗಿ - ನೋಡಲು ಅರೆ ನಿದ್ರಾವಸ್ಥೆಯಲ್ಲಿ ಕಂಡ ಸನ್ಯಾಸಿಗಳು..

ಬಂದ ಯತಿಗಳು ನಿನಗೆ ಹಸಿವೆಯಾಗಿದೆಯಲ್ಲವೇ ?
ಶ್ರೀ ಕ್ಷೇತ್ರಕ್ಕೆ ಬಂದ ಭಕ್ತರಾರೂ ಹಸಿವೆಯಿಂದ ಇರಬಾರದು ..ಅದಕ್ಕೆ ನಾವು ಬಂದದ್ದು ಎಂದು ..ತಮ್ಮ ಅಂಗೈಯಲ್ಲಿ ಶುದ್ಧ ತುಪ್ಪ ಮಿಶ್ರಿತ ಘಮ ಘಮ ಅನ್ನ - ಹುಳಿ ( ಸಾಂಬಾರ್ ) ತುತ್ತನ್ನು ಎಲೆಕ್ಟ್ರಿಷಿಯನ್ ಗೆ ಕೊಟ್ಟರು ..

ಎರಡು ತುತ್ತಿಗೆ ಎಲೆಕ್ಟ್ರಿಷಿಯನ್ ಹೊಟ್ಟೆತುಂಬ ಮೃಷ್ಟಾನ್ನ ಭೋಜನ ಉಂಡ ಅನುಭವವಾಗಿ ಸಂತೃಪ್ತಿಪಡಲು ...ಕುಡಿಯಲು ಕಮಂಡಲುವಿನಿಂದ ಶುದ್ಧವಾದ ನೀರು ಕೊಟ್ಟು ತೃಷೆ ತಣಿಸಿ ..ಇನ್ನೇನು ಅರ್ಧ ಗಂಟೆಯಲ್ಲಿ ನಿನ್ನ ಊರಿನಬಸ್ಸು ಬರುವುದಾಗಿ ತಿಳಿಸಿ ಅಸದೃಶ್ಯರಾದರು..

ಎಲೆಕ್ಟ್ರಿಷಿಯನ್ ಗೆ ಮೈ ರೋಮಾಂಚನವಾಗಿ ..ಅಲ್ಲಿದ್ದ ಪ್ರಯಾಣಿಕರಿಗೆ ಆ ಸಂತರು ಎಲ್ಲಿ ಹೋದರು ..ಎಂದು ಕೇಳಲು ಕೆಲವರು ಇವನು ನಿದ್ರೆಯಲ್ಲಿ ಕನಸುಕಂಡಿರಬಹುದು / ಅಥವಾ ಹುಚ್ಚನಿರಬಹದು ಎಂದರು ..ಅಲ್ಲಿದ್ದವರಾರಿಗೂ ಎಲೆಕ್ಟ್ರಿಷಿಯನ್  ಹೇಳಿದಂತ ಸಂತರು ಕಾಣಲಿಲ್ಲ.

ಎಲೆಕ್ಟೀಷಿಯನ್ ಮಾತ್ರ ನಡೆದ ವೃತ್ತಾಂತವನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಹೇಳಿ ..ಆ ಸಂತರು ಎಲ್ಲಿಹೋದರು ಎಂದು ಹಲಬುತ್ತಿರಲು ..ಎಲ್ಲವನ್ನು ಸಮಾಧಾನ ಚಿತ್ತದಿಂದ ಕೇಳುತ್ತಿದ್ದ ವಯೋವೃದ್ಧರೊಬ್ಬರು (ಪಂಡಿತರು ) 
ಎಲೆಕ್ಟ್ರಿಷಿಯನ್ ಬಲಗೈ ಅಂಗೈ (ಸಂತರು ತುತ್ತು ಇರಿಸಿದ ಅಂಗೈ ) ನೋಡಿ ಪರೀಕ್ಷಿಸಲು - ಅಂಗೈ ಶುದ್ಧ ತುಪ್ಪ ಮಿಶ್ರಿತ ಅನ್ನ - ಹುಳಿ ( ಸಾಂಬಾರ್) ಘಮ ಘಮ ಪರಿಮಳ ಸುವಾಸನೆ ಇನ್ನೂ ಹಾಗೆ ಇತ್ತು ..

ಪಂಡಿತರು ಹೇಳಿದರು ..ನೀನು ಪುಣ್ಯವಂತನಪ್ಪ!!
ಬಂದವರು ಮಾತೃ ಹೃದಯೀ - ಭಕ್ತ ವತ್ಸಲ ಗುರುರಾಯರು ..ಪರಿಮಳಾದಿ ಸದ್ಗ್ರಂಥ ರಚಿಸಿದ ಕೈಯಿಂದಲೇ  ನಿನಗೆ ತುತ್ತು ಕೊಟ್ಟವರು ಮಂತ್ರಾಲಯ ಬೃಂದಾವನದಲ್ಲಿರುವ ಗುರು ಸಾರ್ವಭೌಮರು ..ಎಂದು ಎಲೆಕ್ಟ್ರಿಷಿಯನ್ ಕೈಗಳನ್ನು - ಪಂಡಿತ ವಯೋವೃದ್ಧರು ತಮ್ಮ ಕಣ್ಣುಗಳಿಗೆ ಒತ್ತಿಕೊಂಡರು - ನೆರೆದ ಪ್ರಯಾಣಿಕರೆಲ್ಲರೂ ರಾಯರ ಪಾವಡವೆಂದರಿತು 
ಗದ್ಗತಿತರಾಗಿ - ಭಕ್ತಿಯಿಂದ ರಾಯರಿಗೆ ಮನದಲ್ಲಿಯೇ ನಮಸ್ಕಾರಗಳನ್ನು ಮಾಡಿದರು ..

ಚೆನ್ನೈ ಬಸ್ಸು ಬಂದು ಎಲೆಕ್ಟ್ರಿಷಿಯನ್ ಬಸ್ಸು  ಹತ್ತಿಕುಳಿತು - ರಾಯರ ಕಾರುಣ್ಯ ನೆನೆಯುತ್ತ ಊರು ಸೇರಲು - ಶ್ರೀ ಮಠ ಆಡಳಿತ ವರ್ಗ ಅಚ್ಚು ಕಟ್ಟಾಗಿ ನಿರ್ವಹಿಸಿದ ಎಲೆಕ್ಟ್ರಿಕ್ ಕೆಲಸಕ್ಕೆ ಗುತ್ತಿಗೆ ನೀಡಿದ -  ಹಣ ಅತಿಶೀಘ್ರದಲ್ಲಿ  ಪಾವತಿಸಿತ್ತು - ಕಂಪನಿಯು ನಿಷ್ಠಾವಂತನಾದ - ಕುಶಲ ಕಾರ್ಮಿಕನಾದ ಎಲೆಕ್ಟ್ರಿಷಿಯನ್ ಕೆಲಸಕ್ಕೆ ಮೆಚ್ಚಿ ವೇತನ ವೃದ್ಧಿಮಾಡಿ - ಕಾಯಂ ಕೆಲಸಗಾರನಾಗಿ ನೇಮಕ ಮಾಡಿಕೊಂಡರು..

ರಾಯರು ನಂಬಿ ಬಂದ ಭಕ್ತರ ಕೈ ಎಂದಿಗೂ ಬಿಡುವುದಿಲ್ಲ!!

*******

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ।।

ಆಗಮ್ಯ ಮಹಿಮಾ ಲೋಕೆ ರಾಘವೇಂದ್ರೋ ಮಹಾಯಶಾಃ

ಶ್ರೀ ಮಧ್ವಮತ ದುಗ್ದಾಬ್ದಿ ಚಂದ್ರೋವತು ಸದಾನಘಃ।।

ಆಗಮ್ಯ ಮಹಿಮರಾದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಪರಮ

ಭಕ್ತರು ಇಂದಿಗೂ ಶ್ರೀ ಗುರುಗಳ ಸೇವೆಯನ್ನು ಮಾಡಿ ತಮ್ಮ ಮನದ ಅಭೀಷ್ಟಗಳನ್ನು ಅನುಗ್ರಹದಿಂದ ನೇರವೇರಿಸಿಕೊಳ್ಳುತ್ತಿರುವರು.

ತುಂಗಾತೀರದ ಮಂತ್ರಾಲಯಕ್ಕೆ ಹೋಗಿ ಅತ್ಯಂತ್ಯ ಭಕ್ತಿಯಿಂದ 

ಶ್ರೀ ರಾಯರನ್ನು ಸೇವಿಸಿ ಧನ್ಯರಾಗುತ್ತಿದ್ದಾರೆ

ಸತತ ಪಾಲಿಸು ಎನ್ನ ಯತಿ ರಾಘವೇಂದ್ರ

ಪತಿತಪಾವನ ಪವನ ಸುತ ಮತಾಂಬುಧಿ ಚಂದ್ರ।।

ನಂಬಿದೆನೋ ನಿನ್ನ ಚರಣಾಂಬುಜವ ಮನ್ಮನದ

ಹಂಬಲವ ಪೂರೈಸೊ ಬೆಂಬಿಡದಲೇ 

ಕುಂಭೀಣಿಸುರನಿಕುರುಂಬವಂದಿತ ಜಿತ

ಶಂಬರಾಂತಕ ಶಾತಕುಂಭ ಕಶಿಪು ತನಯ//1//

ಕ್ಷೋಣಿಯೊಳು ನೀ ಕುಂಭಕೋಣಕ್ಷೇತ್ರದಿ ಜನಿಸಿ

ವೀಣಾವೆಂಕಟ ಅಭಿದಾನದಿಂದ

ಸಾನುರಾಗದಿ ದ್ವಿಜನ ಪ್ರಾಣವುಳುಹಿದ ಮಹಿಮ

ಏನೆಂದು ಬಣ್ಣಿಸಲಿ ಜ್ಞಾನಿ ಕುಲ ತಿಲಕ //2//

ಮಂದಮತಿಗಳ ಸಂಗದಿಂದ ನಿನ್ನಯ ಚರಣ

ಇಂದಿನ ತನಕ ನಾ ಪೊಂದಲಿಲ್ಲಾ

ಕುಂದು ಎಣಿಸದೆ ಕಾಯೊ ಕಂದರ್ಪಪಿತ ಶ್ಯಾಮ

ಸುಂದರನ ದಾಸ ಕರ್ಮಂದಿಕುಲವರ್ಯ।।3//

ಒಮ್ಮೆ ಶ್ರೀ ರಾಘವೇಂದ್ರತೀರ್ಥಸ್ವಾಮಿಗಳು ಪ್ರತಿದಿನದಂತೆ 

ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾಹ್ನಿಕಗಳನ್ನು ಮುಗಿಸಿಕೊಂಡು ಶಿಷ್ಯರಿಗೆ ವೇದಾಂತ ಪ್ರವಚನ ಮಾಡಿಸುತಿದ್ದರು.

ಮಧ್ಯಾಹ್ನ ಸ್ನಾನ ಜಪಗಳಾದ ಮೇಲೆ ಬ್ರಹ್ಮ ಕರಾರ್ಚಿತ ಶ್ರೀ ಮೂಲರಾಮದೇವರು ಗಳೊಂದಿಗೆ ಇತರ ಮೂರ್ತಿಗಳನ್ನು 

ಪೂಜಿಸುತಿದ್ದರು.,ಆರಾಧಿಸುತಿದ್ದರು.

ಒಂದೊಂದು ರೂಪವನ್ನು ಚಿಂತಿಸುತ್ತಾ ಮೂರ್ತಿಗಳಿಗೆ ತುಳಸೀದಳವನ್ನು ಅರ್ಪಿಸುತಿದ್ದರು।


ಯಾವ ಮೂರ್ತಿಯನ್ನು ಪೂಜಿಸಿದರೂ ,ವೇಣುಗೋಪಾಲ ರೂಪವನ್ನು ಚಿಂತಿಸುತಿದ್ದರು.


ಸ್ವಾಮಿಗಳು ಸುವರ್ಣ ಮಯವಾದ ವೇಣುಗೋಪಾಲನ ಮೂರ್ತಿಯನ್ನು ಆರಾಧಿಸುತ್ತಾ ಭಕ್ತಿಯಿಂದ ಪರವಶರಾಗಿ ವೀಣೆಯನ್ನು ತರಿಸಿ ಬಾರಿಸುತ್ತಾ ಹಾಡಿದರು.


ಇಂದು ಎನಗೆ ಗೋವಿಂದ ನಿನ್ನ ಪಾದಾರವಿಂದವ

ತೋರೋ ಮುಕುಂದನೆ।।

ಮಂದರೋದ್ಧಾರನೆ ನಂದಗೋಪನ ಕಂದ

ಇಂದಿರಾರಮಣ ಗೋವಿಂದ ಗೋಕುಲಾನಂದ।।

ಎಂದು ವೀಣೆಯನ್ನು ನುಡಿಸುತ್ತಾ ಹಾಡಿದಾಗ ಗೋಪಾಲನು

ವೇಣುಗಾನ ಮಾಡುತ್ತಾ ನರ್ತಿಸಿದನು.

ಇಂತಹ ಭಕ್ತಿ,ಭಗವಂತನಲ್ಲಿ ಪ್ರೇಮ ಇರುವಾಗ ಸಂಭ್ರಮದಿಂದ

ಗೋಪಾಲನು ನರ್ತಿಸುವುದರಲ್ಲಿ ಏನು ಆಶ್ಚರ್ಯವಿಲ್ಲ.

ಭಕ್ತಿಪರವಶತೆಗೆ ಶ್ರೀ ರಾಘವೇಂದ್ರ ಸ್ವಾಮಿಗಳು ಸರಿ ಸಾಟಿಯಿಲ್ಲ.

ಗೋಪಾಲನೇ ಅವರ ಭಕ್ತಿ ಭಾವಕ್ಕೆ ಮೆಚ್ಚಿ ನರ್ತನ ಮಾಡಿದ್ದು 
ಅವರ ಪೂಜಾ,ಆರಾಧನೆಗೆ ಮಹತ್ವದ್ದಾಗಿದೆ.

।।ಶ್ರೀ ಕೃಷ್ಣಾರ್ಪಣ ಮಸ್ತು।।



ಶ್ರೀ ರಾಘವೇಂದ್ರಾಯ ನಮಃ।।
******

No comments:

Post a Comment