Thursday 1 August 2019

trivikrama panditacharyaru bidi sanyasi kavumata near kasargod magha shukla ashtami ತ್ರಿವಿಕ್ರಮ ಪಂಡಿತಾಚಾರ್ಯರು



info from Prasadhacharya +91 9535837843-->

तमोनुदानन्दमवाप लोकः तत्वप्रदीपाकतिगोगणेन । 
यदास्यशीतांशुभुवा गुरूंस्तान त्रिविक्रमार्यान् प्रणमामि

ಶ್ರೀಮನ್ಮಧ್ವಾಚಾರ್ಯರ ಮೆಚ್ಚಿನ ಶಿಷ್ಯರಾದ ವಾಯುಸ್ತುತಿ, ತತ್ವಪ್ರದೀಪ ಮೊದಲಾದ ಅಮೋಘ ಕೃತಿಕಾರರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಸಂಸ್ಮರಣೆ, . . ಮಾಘ ಶುದ್ಧ ಅಷ್ಟಮಿ, . . ಕಾವು ಮಠ ಕಾಸರಗೋಡು ಕೇರಳ.
 . . Shri trivikrama panDithAchAryaru composed vAyu stuthi, after witnessing shrimadAchAryaru offering pUja in all 3 forms of hamuma, bhima, madhwa. . . Shri madwAchAryaru then blessed the stuthi by composing narasimha nakha stuthi which has to be recited along with vAyu stuthi making it "shri hari vAyu stuthi." . . brindAvana: kAvu maTa, near Kasargod . . 

shri gurubyO namaha...hari Om

mAgha shuddha pUrNima is the ArAdhane of shri trivikrama panDithAchAryaru, the great who gave us shri vAyu stuthi.

shri trivikrama panDithAchAryaru:

ArAdhane: mAgha shuddha pourNami
brindAvana: kAvu maTa, near Kasargod

shri trivikrama panDithAchAryaru composed vAyu stuthi, after witnessing shrimadAchAryaru offering pUja in all 3 forms of hamuma, bhima, madhwa. Shri madwAchAryaru then blessed the stuthi by composing narasimha nakha stuthi which has to be recited along with vAyu stuthi making it "shri hari vAyu stuthi." 

shri trivikrama panDithAchArya guruvantargata, bhAratIramaNa mukhyaprAnantargata, lakshmi nArasimha dEvara pAdAravindakke gOvindA gOvindA... 

shri krishNArpaNamastu...

Aradhana of shri trivikrama panDithAchAryaru at Kavumutta on 19th Feb 2019- sumadhwavijaya parayana and homa.
***



****

ಸದ್ವಿಚಾರ🌷

   ನೋಡಿ ತ್ರಿವಿಕ್ರಮಪಂಡಿತರು  ಶ್ರೇಷ್ಠವಾದ ಒಬ್ಬ ಶ್ರೇಷ್ಠ, ಅದ್ವಿತಿಯ ಪಂಡಿತರಾಗಿದ್ದು ನಮ್ಮ ಮಹಾಗುರುಗಳಾದ ಶ್ರೀಮದಾಚಾರ್ಯ ರೊಂದಿಗೇನೇ ವಾದಕ್ಕಿಳಿದು ಬಲವಾದ ಯುಕ್ತಿಗಳಿಂದ ತಮ್ಮ ವಾದವನ್ನು ಮಂಡಿಸತೊಡಗಿದರು. ಆಗ ನಮ್ಮ ಆಚಾರ್ಯ ರೂ ಕೂಡಾ ಅದಕ್ಕಿಂತಲೂ ಹೆಚ್ಚು ಬಲವಾದ ಯುಕ್ತಿಗಳಿಂದ ಅವುಗಳನ್ನು ಖಂಡಿಸಿ ಭಗವಂತನೇ ಪ್ರೀತಿಪಡುವ ಮತ್ತು ಅವನ ವಿಶೇಷ ಸನ್ನಿಧಾನವಿರುವ ವಿಶಿಷ್ಟವಾದ ತತ್ವವಾದ ವನ್ನು ಎತ್ತಿಹಿಡಿದರು.ಹೀಗೆ ಸತತ15 ದಿನಗಳ ಕಾಲ ನಡೆದ ಇದು ಕೇವಲ ವಾದ-ವಿವಾದವಷ್ಟೇ ಆಗಲಿಲ್ಲ ಬದಲಾಗಿ  ಅದೊಂದು ವಸ್ತು-ವಿಷಯದ ಕುರಿತಾದ ಚಿಂತನ-ಮಂಥನ ವಾಗಿತ್ತು.ಕಾರಣ ಇಲ್ಲಿ  ಸಾತ್ವಿಕ ಚೇತನರಾದ ಶ್ರೀತ್ರಿವಿಕ್ರಮಪಂಡಿತ ರು ತಮ್ಮ ಪಕ್ಷವನ್ನು ಮಂಡಿಸಲೂ ಆಗದೇ ಆಚಾರ್ಯರ ವಾದವನ್ನು ಖಂಡಿಸಲೂ ಆಗದೇ  ಸೋತು ಶರಣಾಗಿ ಇಷ್ಟು ದಿನ ನಾ ಮಾಡಿದ ವಾದಕ್ಕೆ ಕ್ಷಮೆಕೋರುತ್ತಾ ನನ್ನನ್ನು ತಮ್ಮ ಸೇವಕನಾಗಿ ಮಾಡಿಕೊಳ್ಳಿರೆಂದು ಪ್ರಾರ್ಥಿಸಿಕೊಂಡಿದ್ದು ಒಂದು ಇತಿಹಾಸ. ಇದರ ಪರಿಣಾಮವಾಗಿ ಇವರು ಸಕಲ ಸಜ್ಜನ ಬಂಧುಗಳಿಗುಪಕಾರವಾಗಲೆಂದು ಅಮೂಲ್ಯವಾದ  ಶ್ರೀಹರಿವಾಯುಸ್ತುತಿ  ರಚನೆ ಮಾಡುವ ಮೂಲಕ ಸೋಲಲ್ಲೂ ಗೆಲವು ಕಂಡರೆಂಬುದು ಇಂದಿನ ಸದ್ವಿಚಾರದ ಸಂದೇಶವಾಗಿದೆ.
   "ಹರಿಃ ಓ೦

 ಪಾಂತ್ವಸ್ಮಾನ್ ಪುರುಹೂತವೈರಿಬಲವನ್  ಮಾತಂಗಮಾದ್ಯದ್ಘಟಾ
***********


by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
" ಶ್ರೀ ತ್ರಿವಿಕ್ರಮ - 1 "
" ದ್ವೈತ ಸಿಂಹಗೆ { ಶ್ರೀಮನ್ಮಧ್ವಾಚಾರ್ಯರು } ಶರಣಾದ ಶ್ರೀ ತ್ರಿವಿಕ್ರಮ  ಪಂಡಿತಾಚಾರ್ಯರು " 
" ವಾದದಲ್ಲಿ ವಿಕ್ರಮ ಸಾಧಿಸಿದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು "
" ದಿನಾಂಕ : 27.02.2021 - ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಶುದ್ಧ ಪೌರ್ಣಿಮಾ ಶನಿವಾರ - ಶ್ರೀಮದಾಚಾರ್ಯರ ಪ್ರೀತಿಯ ಶಿಷ್ಯರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಆರಾಧನಾ ಮಹೋತ್ಸವ., ಕಾವು ಮಠ., ".
" ಪ್ರಸಾವನೆ "
ಪ್ರತಿಯೊಬ್ಬ ಮಾಧ್ವರಿಗೂ -  ಶ್ರೀಮದಾಚಾರ್ಯರ ಅಂತರಂಗ ಭಕ್ತರೂ - ಶಿಷ್ಯರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರನ್ನೂ - ಅವರ ಪಂಡಿತ ಪುತ್ರರಾದ ಶ್ರೀ ನಾರಾಯಣ ಪಂಡಿತಾಚಾರ್ಯರ ಸ್ಮರಣೆ ನಿತ್ಯ ನಿರಂತರದಲ್ಲಿಯೂ ಮಾಡುವದು ಆದ್ಯ ಕರ್ತವ್ಯವಾಗಿದೆ. 
ಕಾರಣ.... 
ತಂದೆಯವರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು - ಸಕಲಸಿದ್ಧಿ ಪ್ರದವಾದ ಶ್ರೀ ವಾಯುದೇವರ ಅವತಾರತ್ರಯ ಸ್ತುತಿ ರೂಪವಾದ " ಶ್ರೀ ವಾಯುಸ್ತುತಿ " ಯನ್ನು ರಚಿಸಿದರೆ......  
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರರಾದ ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀ ಮಧ್ವಾಚಾರ್ಯರ ಇತಿಹಾಸವನ್ನು ತಿಳಿಸುವ " ಶ್ರೀ ಮಧ್ವ ವಿಜಯ " ಮಹಾ ಕಾವ್ಯವನ್ನು ರಚಿಸಿ ಕೊಟ್ಟು - ಸಾಧಕರಿಗೆ ಸಾಧನ ಮಾರ್ಗವನ್ನು ತೋರಿದ ಮಹಾನುಭಾವರು. 
ಈ ಎರಡೂ ಕೃತಿಗಳನ್ನೂ ಮುಮುಕ್ಷು ಜೀವಿಗಳಾದ ಸಾಧಕರೂ - ಯೋಗಿಗಳೂ - ಸಕಲ ಮಾಧ್ವ ಯತಿಗಳೂ ನಿತ್ಯ ಪಾರಾಯಣ ಮಾಡುತ್ತಿರುವುದು ಪರಮಾದ್ಭುತ ವಿಷಯ !
ಶ್ರೀಮದಾಚಾರ್ಯರಿಗೆ ಅತ್ಯಂತ ಆಪ್ತರಾದ ಪಂಡಿತದ್ವಯರ ಕುರಿತು -  ಅವರ ಆರಾಧನಾ  ಸಂದರ್ಭದಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ..... 
" ವಿಷ್ಣು ಮಂಗಲ " ವು ದಕ್ಷಿಣ ದೇಶದ ಒಂದು ದಿವ್ಯ ಕ್ಷೇತ್ರ. 
ಅಲ್ಲಿಯ ಶ್ರೀ ವಿಷ್ಣು ದೇವಾಲಯವು ನಾಡಿನಲ್ಲೆಲ್ಲ ಪ್ರಸಿದ್ಧವಾದ ದೇವಾಲಯವೆನಿಸಿದೆ. 
800 ವರ್ಷಗಳ ಹಿಂದೆ ಆ ದೇಶದಲ್ಲಿ " ಜಯಸಿಂಹ " ಎಂಬ ದೊರೆಯು ರಾಜ್ಯವಾಳುತ್ತಿದ್ದನು. 
" ಶ್ರೀಮನ್ಮಧ್ವಾಚಾರ್ಯರು ಉಡುಪಿಯಲ್ಲಿ ಅವತಾರವೆತ್ತಿ - ಲೋಕ ಜೀವನವನೆಲ್ಲ ಪಾವನಗೈಯುತ್ತಿದ್ದ ಕಾಲವದು ". 
" ಶ್ರೀ ಸರ್ವಜ್ಞಾಚಾರ್ಯ " ರ ಕೀರ್ತಿಯನ್ನು ಕೇಳಿದ ಜಯಸಿಂಹ ನೃಪನಿಗೆ ಆ ಪುಣ್ಯ ಪುರುಷರ ಅಡಿದಾವರೆಯ ಹುಡಿಯು ತನ್ನ ನಾಡಿನಲ್ಲಿ ಬೀಳುವಂತೆ ಮಾಡಬೇಕೆಂದು ಬಲವತ್ತರವಾದ ಬಯಕೆಯಾಯಿತು. 
ಆ ಜಯಸಿಂಹ ನೃಪನ ಭಕ್ತಿಯುಕ್ತವಾದ ಬೇಡಿಕೆಗಳನ್ನು ಮನ್ನಿಸಿ ಶ್ರೀ ಆನಂದತೀರ್ಥರು ವಿಷ್ಣುಮಂಗಲಕ್ಕೆ ದಯ ಮಾಡಿಸಿದರು. 
ವಿಷ್ಣು ಮಂಗಲ ದೇವಾಲಯದಲ್ಲಿ ಶ್ರೀ ಸರ್ವಜ್ಞಾಚಾರ್ಯರ ಸ್ವಾಗತಕ್ಕಾಗಿ ನೆರೆದ ಸಭೆಯಲ್ಲಿ ಕೂಡಿದ ಪಂಡಿತರಿಗೆ ಲೆಕ್ಕವಿಲ್ಲ. 
ಸೇರಿದ ನರ - ನಾರಿಯರಿಗೆ ಮಿತಿಯಿಲ್ಲ. ಜನಸ್ತೋಮದಿಂದ ಕಿಕ್ಕಿರಿದ ಆ ಪ್ರಚಂದ್ರ ಸಭೆಯಲ್ಲಿ " ಋಜು ಪುಂಗವರಾದ ಶ್ರೀ ಸರ್ವಜ್ಞಾಚಾರ್ಯರು - ಮೇಘ ಗಂಭೀರವಾದ ಧ್ವನಿಯಿಂದ ಶ್ರೀಮದ್ಭಾಗವತ ಪ್ರವಚನ "  ವನ್ನು ಮಾಡಿದರು. 
ಶ್ರೀಮದಾಚಾರ್ಯರ ಮಾತಿನ ಮಾದರಿ - ಭಾಷೆಯ ಮಾದರಿ - ವಿದ್ವತ್ತೆಯ ಚಾತುರಿ ಮತ್ತು ಅಸ್ಖಲಿತವಾದ ವೈಗ್ವೈಖರಿ ಇವುಗಳನ್ನೆಲ್ಲ ಕಂಡು - ಕೇಳಿ ಸಭಿಕರೆಲ್ಲರೂ ಹಿಗ್ಗಿ ಸಂತಸದಿಂದ ಪುಳಕಗೊಂಡರು. 
ಮಹಾರಾಜನಂತೂ ಇಂಥಾ ಸದ್ಗುರುಗಳು ದೊರಕಿದ್ದು ತನ್ನ ಅಹೋಭಾಗ್ಯ ಎಂದುಕೊಂಡ. 
ಕಳೆದು ಹೋದ ಶ್ರೀಮದಾಚಾರ್ಯರ ಗ್ರಂಥ ಭಾಂಡಾರವನ್ನು ಪತ್ತೆ ಮಾಡ್ಸಿ -  ತರಿಸಿ ತಂದು ಒಪ್ಪಿಸಿ ದಯಮಾಡಿ ಸ್ವೀಕರಿಸಬೇಕೆಂದು ಬಿನ್ನವಿಸಿದ. 
ಶ್ರೀ ಸರ್ವಜ್ಞಾಚಾರ್ಯರು ತಮ್ಮ ಅಪೂರ್ವವಾದ ಗ್ರಂಥ ಭಾಂಡಾರವನ್ನು ಸ್ವೀಕರಿಸಿ ರಾಜನನ್ನೂ, ಜನರನ್ನೂ ಆಶೀರ್ವಾದಗಳಿಂದ ಅನುಗ್ರಹಿಸಿದರು. 
ಆ ಮಹಾರಾಜನ ಭಾಗ್ಯಕ್ಕೆ ಎಣೆ ಇಲ್ಲ ಎಂದಿತು ನೆರೆದ ಜನ. 
" ಬಾಲ ಪ್ರತಿಭೆಯಿಂದ ಶ್ರೀಮದಾಚಾರ್ಯರ ಸ್ತುತಿ "
ಅಷ್ಟರಲ್ಲಿ ಆ ಸಭೆಯಲ್ಲಿ ತೇಜ:ಪುಂಜವಾದ ಒಂದು ವ್ಯಕ್ತಿಯು ಪ್ರವೇಶಿಸಿತು. 
ಅವರು ನೇರವಾಗಿ ಬಂದು ಶ್ರೀಮದಾಚಾರ್ಯರಿಗೆ ನಮಸ್ಕಾರ ಮಾಡಿದರು. 
ಅವರ ಪಾದದಡಿಯಲ್ಲಿ ಬಾಗಿ ವಿನಯದಿಂದ ನಮ್ರನಾಗಿ ಕುಳಿತ ಜಯಸಿಂಹ ದೊರೆಯನ್ನು ನೋಡಿದರು ಮತ್ತು ಗಂಭೀರ ಧ್ವನಿಯಿಂದ ಪದ್ಯಯೊಂದನ್ನು ಹಾಡಿದರು. 
ಸ್ವ: ಸುಂದರೀ ಭುಜಲತಾ ಪರಿರಂಭಣೀ ಧೂ: ।
ಪೌರಂದರೀ ಭವತಿ ಯಂ ಭಜತಾಂ ಭುಜಿಷ್ಯಾ ।
ಆನಂದತೀರ್ಥ ಭಗವತ್ಪದ ಪದ್ಮರೇಣು: ।
ಸ್ವಾನಂದದೋ ಭವತು ತೇ ಜಯಸಿಂಹ ಭೂಪ: ।।
" ಶ್ರೀಮದಾನಂದತೀರ್ಥರ ಭಗವತ್ಪಾದರ ಅಡಿದಾವರೆಯ ಹುಡಿಯನ್ನು ಮುಡಿಯಲ್ಲಿ ಧರಿಸಿದವರನ್ನು ಸ್ವರ್ಗ ಸಿರಿಯು ದಾಸಿಯಾಗಿ ಸೇವಿಸುತ್ತದೆ. 
ಇಂಥಾ ಶ್ರೀಮದಾಚಾರ್ಯರ ಚರಣ ಧೂಳಿಯ ಕಣವು ನಿನಗೆ ಆನಂದವನ್ನು ನೀಡಲಿ. "
ಆಗಂತುಕರ [ a guest or a visitor arrived without being expected. ] ಈ ಪದ್ಯದಲ್ಲಿಯ ಸಂಸ್ಕೃತದ ಸೊಗಸು - ಸೌಂದರ್ಯವನ್ನೂ - ನಾದ ಮಾಧುರ್ಯವನ್ನೂ ಕೇಳಿದ ಸಭಿಕರೆಲ್ಲರೂ ಸ್ತಬ್ಧರಾದರು - ವಿಸ್ಮಯ ಮುಗ್ಧರೂ ಆದರು. 
ಪಂಡಿತ ಪಾಮರರೆಲ್ಲರೂ ಆ ಪಂಡಿತ ಪ್ರಕಾಂಡರನ್ನು ಕೌತುಕದಿಂದ ನೋಡ ತೊಡಗಿದರು. 
ಅವರು ಬೇರಾರೂ ಆಗದೆ ತುಳು ದೇಶದ ಸುಪ್ರಸಿದ್ಧ ಅದ್ವೈತ ವಿದ್ವಾಂಸರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರೇ ಆಗಿದ್ದರು.
********
" ಶ್ರೀ ತ್ರಿವಿಕ್ರಮ - 2 "
" ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಸಂಕ್ಷಿಪ್ತ ಮಾಹಿತಿ "
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಮನೆತನವು ದಕ್ಷಿಣ ದೇಶದಲ್ಲೆಲ್ಲ ವಿದ್ವಾಂಸರ ಮನೆತನವೆಂದು ಪ್ರಸಿದ್ಧವಾಗಿತ್ತು. 
ಆಂಗೀರಸ ಗೋತ್ರದ ಈ ಕುಟುಂಬದಲ್ಲಿ ಶ್ರೀ ಸುಬ್ರಹ್ಮಣ್ಯ ಪಂಡಿತರು ಮಹಾ ವಿದ್ವದ್ವರೇಣ್ಯರಾಗಿದ್ದರು. 
ಅವರ ಮಕ್ಕಳಾದ ಶ್ರೀ ತ್ರಿವಿಕ್ರಮ ಪಂಡಿತರೂ ಕೂಡ ಸರ್ವ ವಿದ್ಯೆಗಳ ತವರು ಮನೆಯಂತಿದ್ದರು. 
ಅವರ ತಾಯಿ - ತಂದೆಗಳು ಹರಿ - ಹರೇಶ್ವರನ ಸೇವೆ ಮಾಡಿ, ಅವನ ಕೃಪಾ ಪ್ರಸಾದದಿಂದ ಇಂಥಾ ವಿದ್ವತ್ ಪುತ್ರನನ್ನು ಹೆತ್ತಿದ್ದರು. 
ಶ್ರೀ ಸುಬ್ರಹ್ಮಣ್ಯ ದಂಪತಿಗಳ ಈ ಮೊದಲಿನ ಅನೇಕ ಮಕ್ಕಳು ಉತ್ಪನ್ನ ವಿನಷ್ಟ ಘಟದಂತೆ ಹುಟ್ಟಿದ ಕೂಡಲೇ ಪಟ - ಪಟನೆ ಬಿದ್ದು  ಸತ್ತು ಹೋಗಿದ್ದವು. 
ಆದುದರಿಂದ ಅವರು ಹರಿ - ಹರೇಶ್ವರನನ್ನು ಸೇವಿಸಿ ಇಂಥ ವಿದ್ವದ್ವರೇಣ್ಯನಾದ ಮಗನನ್ನು ಪಡೆದು ಕೃತಾರ್ಥರಾದರು. 
" ಬಾಲ ಪ್ರತಿಭೆ "
ಮೇಧಾವಿಯಾದ ಈ ಶ್ರೀ ತ್ರಿವಿಕ್ರಮನು ಕಾವ್ಯ ಪ್ರಯೋಗ ಪರಿಣತರಾಗಿದ್ದರು. 
ಚಿಕ್ಕ ಬಾಲಕನಿದ್ದಾಗಲೇ ಅವರು " ಉಷಾಹರಣ " ಎಂಬ ಭಾವ ಬಂಧುರವೂ, ಅರ್ಥ ಸುಂದವೂ ಆದ ದಿವ್ಯ ಕಾವ್ಯವನ್ನು ರಚಿಸಿದ್ದರು. 
ಕಾವ್ಯ ಮಾತ್ರವಲ್ಲದೆ ಶ್ರೀ ತ್ರಿವಿಕ್ರಮರಿಗೆ ಎಲ್ಲ ಶಾಸ್ತ್ರಗಳಲ್ಲಿಯೂ ಅಸಾಧಾರಣ ಪರಾಕ್ರಮವಿದ್ದಿತು. 
ವೇದ - ವೇದಾಂತಗಳನ್ನೆಲ್ಲ ಅಂಗೈಯ ನೆಲ್ಲಿಕಾಯಿಯಂತೆ ಅವರು ಚೆನ್ನಾಗಿ ಬಲ್ಲವರಾಗಿದ್ದರು. 
" ಅದ್ವೈತ ವೇದಾಂತದ ಒಂದೂಕಾಲು ಲಕ್ಷ ಗ್ರಂಥ " ಗಳನ್ನು ಅವರು ಆಲೋಡನ ಮಾಡಿ ಅದರಲ್ಲಿ ಪ್ರಚಂಡ ಪಾಂಡಿತ್ಯವನ್ನು ಸಂಪಾದಿಸಿದರು. 
ನ್ಯಾಯ - ವೈಶೇಷಿಕ - ಭಾಟ್ಟ - ಭಾಸ್ಕರ ಮುಂತಾದ ಶಾಸ್ತ್ರಗಳಲ್ಲೆಲ್ಲ ಶ್ರೀ ತ್ರಿವಿಕ್ರಮರಿಗೆ ತಲಸ್ಪರ್ಶಿ ಪಾಂಡಿತ್ಯವಿತ್ತು. 
ಭಾಸ್ಕರ ಮತದ ಭಾನು ಪಂಡಿತನು ಈ ಶ್ರೀ ತ್ರಿವಿಕ್ರಮರ ಜೊತೆಗೆ ವಾದಕ್ಕಿಳಿದು ಅತ್ಯಲ್ಪ ಸಮಯದಲ್ಲೇ ಸೋತನು. 
ಅಂದಿನಿಂದ ಶ್ರೀ ತ್ರಿವಿಕ್ರಮರು " ಪ್ರತಿವಾದಿ ಭಯಂಕರ ತ್ರಿವಿಕ್ರಮ ಪಂಡಿತ " ರೆಂದು ಹೆಸರಾದರು.
******
" ಶ್ರೀ ತ್ರಿವಿಕ್ರಮ - 3 "
ಅದ್ವೈತ ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರಾಗಿ ಭೂಮಂಡಲದೊಳಗೆ ಎಲ್ಲ ಕಡೆಗೂ ಜಯಭೇರಿಯನ್ನು ಹೊಡೆದು ಮನ್ನಣೆಯನ್ನು ಪಡೆದು ಬಂದ ಶ್ರೀ ತ್ರಿವಿಕ್ರಮ ಪಂಡಿತರನ್ನು ಅವರ ತಂದೆ ಶ್ರೀ ಸುಬ್ರಹ್ಮಣ್ಯ ಸೂರಿಗಳು ಒಂದು ದಿನ ಏಕಾಂತದಲ್ಲಿ ಕರೆದು ರಹಸ್ಯವಾಗಿ ಹೇಳಿದರು. 
" ತಂದೆಯಿಂದ ಮಗನಿಗೆ - ನಿರ್ಗುಣೋಪಾಸನೆಯಿಂದ ಮುಕ್ತಿಯು ಆಗುವದಿಲ್ಲವೆಂದು -ಉಪದೇಶ "
ಮಗು ತ್ರಿವಿಕ್ರಮ ನಾವೇನೋ ಅದ್ವೈತ ವಿದ್ವಾಂಸರ ವಂಶದಲ್ಲಿ ಜನಿಸಿದ್ದೇನೆ. 
ನಿರ್ಗುಣ ಉಪಾಸನೆಯೇ ನಮ್ಮ ಮತ ಪರಂಪರೆಯಲ್ಲಿ ಸದಾಚಾರವಾಗಿ ನಡೆದು ಬಂದಿದೆ. 
ಆದರೆ ಶಾಸ್ತ್ರೀಯ ಗ್ರಂಥಗಳನ್ನು ಪರಿಶೀಲಿಸಿದರೆ " ನಿರ್ಗುಣೋಪಾಸನೆಯಿಂದ ಮುಕ್ತಿಯು ಆಗುವದಿಲ್ಲ " ವೆಂದು ಖಚಿತವಾಗಿ ತಿಳಿದು ಬರುತ್ತದೆ. 
ಜ್ಞಾನಾನಂದಾದಿ ಗುಣಗಳಿಂದ ಸ್ಪೃಹಣೀಯವಾದ ನಿಜವಾದ ಮೋಕ್ಷ ದೊರೆಯಬೇಕಾದರೆ ನಿತ್ಯ ನಿರ್ದೋಷನೂ - ವಸುದೇವ ಪುತ್ರನೂ - ಜ್ಞಾನಾನಂದಾದಿ ಗುಣ ಪರಿಪೂರ್ಣನಾದ ಶ್ರೀ ಕೃಷ್ಣ ಪರಮಾತ್ಮನನ್ನೇ ನಿತ್ಯ ನಿರಂತರ ಧ್ಯಾನ ಮಾಡು !
ತಂದೆಯ ಈ ಮಾತನ್ನು ಕೇಳಿ ಆ ತ್ರಿವಿಕ್ರಮರ ಮನಸ್ಸಿನಲ್ಲಿ ಹೊಯ್ದಾಟವೂ ಪ್ರಾರಂಭವಾಯಿತು. 
ಅವರು ನಿರ್ಗುಣ ಉಪಾಸನೆಯ ಬಗ್ಗೆ ಅನೇಕ ಮಾಯಾವಾದ ಪಂಡಿತರ ಜೊತೆಗೆ ಚರ್ಚೆ ಮಾಡಿದರು. 
ಅಸಂಖ್ಯ ಶಾಸ್ತ್ರೀಯ ಉದ್ಗ್ರಂಥಗಳನ್ನು ಸಮಾಲೋಚನೆಗೈದರು. 
ಬ್ರಹ್ಮ ಸೂತ್ರಗಳ ಮೇಲಿನ 21 ಭಾಷ್ಯಗಳನ್ನೂ ಪರಿಶೀಲಿಸಿದರು. 
ಎಲ್ಲ ಭಾಷ್ಯಗಳ ಚಿಂತನ - ಮಂಥನಗಳ ಅನಂತರ ಅವರಿಗೆ ಅತ್ಯಂತ ಕೌತುಕವೆನಿಸಿತು. 
ಆ ಭಾಷ್ಯಗಳಿಗೂ, ಮೂಲ ಸೂತ್ರಗಳಿಗೂ ಸಂಗತಿಯೇ ಇರಲಿಲ್ಲ ಮತ್ತು ಈ ಭಾಷ್ಯಗಳೆಲ್ಲವೂ ಪರಸ್ಪರ ವಿಸಂಗತವಾಗಿದ್ದವು. 
ಈ ಎಲ್ಲ ಸೂತ್ರ ಭಾಷ್ಯಗಳ ವಿಸಂಗತಿಯನ್ನು ಕಂಡು ಅವರ ಮನಸ್ಸು ವ್ಯಾಕುಲವಾಯಿತು. 
ಇಂಥ ಉತ್ಸೂತ್ರವಾದ ಭಾಷ್ಯ ಗ್ರಂಥಗಳನ್ನೆಲ್ಲ ಬಿಟ್ಟು ಬಿಡಬೇಕೆಂದರೆ ಆ ಕಾಲದಲ್ಲಿ ಶ್ರೀ ಬಾದರಾಯಣರ ಅಭಿಪ್ರಾಯಕ್ಕೆ ಅನುಗುಣವಾದ ಬೇರಾವ ಭಾಷ್ಯವೂ ಇರಲಿಲ್ಲ. 
ಆದ್ದರಿಂದ  ಏನು ಮಾಡುವದು??
ಸೂತ್ರ ವಿರುದ್ಧವೆಂದು ಗೊತ್ತಿದ್ದರೂ ಶ್ರೀ ತ್ರಿವಿಕ್ರಮರು ಪರಂಪರಾ ಪ್ರಾಪ್ತವೆಂದು ಮಾಯಾಮತದ ಭಾಷ್ಯವನ್ನೇ ಪಾರಾಯಣ -  ಪ್ರವಚನ ಮಾಡುತ್ತಿದ್ದರು. 
ಆದರೆ  - ಅವರು ಆ ಭಾಷ್ಯವನ್ನು ಓದಿ - ಓದಿದಂತೆ ಅದರಲ್ಲಿಯ ಮಾತುಗಳೆಲ್ಲ ವೇದಶಾಸ್ತ್ರ - ಪುರಾಣ - ಇತಿಹಾಸ ವಚನಗಳಿಗೆ ವಿರುದ್ಧವಾಗಿವೆ ಎಂದು ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರಿಗೆ ಕಂಡು ಬಂದಿತು.
ಆದುದರಿಂದ ಸರ್ವಂಕಷಾಶೇಮುಷೀಕರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಸರ್ವ - ಮೂಲವಾದ ನಿಗಮಾಗಮಗಳನ್ನೆಲ್ಲ ಸ್ವಯಂ ಸಂಮರ್ಶನಗೈದು - ನಿರ್ಗುಣ ಉಪಾಸನೆಯನ್ನು ಬಿಟ್ಟು - ಅನಂತ ಕಲ್ಯಾಣ ಗುಣಪೂರ್ಣನಾದ ಶ್ರೀ ಮುಕುಂದನ ಉಪಾಸನೆಯನ್ನೇ ವೇದ ಶಾಸ್ತ್ರೋಕ್ತ ಮಾರ್ಗದಿಂದ ಮಾಡಬೇಕೆಂದು ನಿರ್ಧರಿಸಿದರು.
******
" ಶ್ರೀ ತ್ರಿವಿಕ್ರಮ - 4 "
" ಸಿಂಹದ [ ಶ್ರೀಮದಾನಂದತೀರ್ಥರು ] ಜೊತೆ ಸೆಣಸಾಟ "
ವಿಚಾರ ಜನ್ಯವಾದ ವಿವೇಕದಿಂದ ಶ್ರೀ ಪಂಡಿತಾಚಾರ್ಯರು ಗುಣಪೂರ್ಣನಾದ ಶ್ರೀ ಕೃಷ್ಣ ಪರಮಾತ್ಮನ ಉಪಾಸನೆಯನ್ನು ಮಾಡಲು ಉಪಕ್ರಮಿಸಿದಾದ ಜಗತ್ ಪೂರ್ಣವಾದ ಶ್ರೀ ಪೂರ್ಣಬೋಧರ ಕೀರ್ತಿಯು ಅವರ ಕಿವಿಗೆ ತಲುಪಿತು. 
ಶ್ರೀಮದಾನಂದತೀರ್ಥ ವಿಷ್ಣುಮಂಗಲಕ್ಕೆ ದಯ ಮಾಡಿಸಿರುವರು ಎಂಬ ಸಮಾಚಾರವು ಅವರಿಗೆ ತಿಳಿದು ಬಂದಿತು ಮತ್ತು ವೇದ ಮಠದ ಉದ್ಧಾರಕರೆಂಬ ಸುಪ್ರಸಿದ್ಧರಾದ ಶ್ರೀ ಮಧ್ವ ಮುನಿಗಳ ದರ್ಶನವನ್ನು ತೆಗೆದುಕೊಳ್ಳಬೇಕು ಎಂಬ ಸುಪ್ತಾಕಾಂಕ್ಷೆಯು ಅವರಲ್ಲಿ ಹೆಡೆ ಎತ್ತಿತು. 
ಶ್ರೀಮನ್ಮಧ್ವಾಚಾರ್ಯರು ಹೋದ ಹೋದಲ್ಲೆಲ್ಲ ಮಾಯಾವಾದ ಮತವನ್ನು ಖಂಡಿಸುವುದನ್ನು ಕಂಡು ಆ ಮತಾನುಯಾಯಿಗಳಿಗೆಲ್ಲ ಕಡುಕೋಪ - ಆದರೆ ಮಾಡುವುದೇನು?
ಹೊಟ್ಟೆಯಲ್ಲಿ ಯಷ್ಟೇ ಸಿಟ್ಟು ಅವರಲ್ಲಿ ತುಂಬಿದ್ದರೂ ಶ್ರೀ ಸರ್ವಜ್ಞಾಚಾರ್ಯರ ಜೊತೆಗೆ ವಾದ ವೇದಿಕೆಯಲ್ಲಿ ಕುಳಿತಾಗ ಎಂಥ ದಿಗ್ಗಜ ಪಂಡಿತರೂ ಧೂಳೀ ಪಟವಾಗಿ ಹೋಗುತ್ತಿದ್ದರು. 
ಪ್ರಮಾಣ ಬದ್ಧವೂ, ಶಾಸ್ತ್ರ ಬದ್ಧವೂ ಆದ ಶ್ರೀ ಗುರು ಮಧ್ವಾಚಾರ್ಯರ ವೈಗ್ವೈಖರಿಗೆ ಮಾಯಾವಾದ ಪಂಡಿತರ ಎಲ್ಲ ವಾದಾಟೋಪವು ಕುಸಿದು ಅವರೆಲ್ಲರೂ ಮೂಕರಾಗುತ್ತಿದ್ದರು. 
ಹೀಗೆ ಶ್ರೀಮದಾಚಾರ್ಯರ ಜೊತೆಗೆ ವಾದ ಮಾಡು ಧೈರ್ಯವಾಗಲಿ - ಚಾತುರ್ಯವಾಗಲಿ ಇಲ್ಲದ ಪಂಡಿತರೆಲ್ಲರೂ ಶ್ರೀ ತ್ರಿವಿಕ್ರಮ ಪಂಡಿತರಿಗೆ ದುಂಬಾಲು ಬಿದ್ದರು. 
ಶ್ರೀ ತ್ರಿವಿಕ್ರಮರ ಅದ್ಭುತವಾದ ಶಾಸ್ತ್ರ ಪಾಂಡಿತ್ಯ ಮತ್ತು ವಾದ ವೈದುಷ್ಯ - ಗ್ರಂಥ ಸ್ಫೂರ್ತಿ ಹಾಗೂ ತರ್ಕ ಕರ್ಕಶವಾದ ತೈಲ ಬುದ್ಧಿಯ ಚಾಕಚಕ್ಯತೆ ಮುಂತಾದ ಗುಣಗಳನ್ನೂ ಅವರ ಪ್ರತಿಭಾ ಪ್ರಭಾವನನ್ನೂ ತಿಳಿದ ಅವರಿಗೆ ಈ ಶ್ರೀ ಪಂಡಿತಾಚಾರ್ಯರೊಬ್ಬರೇ ಶ್ರೀ ಸರ್ವಜ್ಞಾಚಾರ್ಯರ ಜೊತೆಗೆ ವಾದ ಮಾಡಿ ತಮ್ಮ ಮಾಯಾವಾದ ಮತದ ಮಾನವನ್ನು ಉಳಿಸಬಲ್ಲವರೆಂದು ಎನಿಸಿತು. 
ಆದುದರಿಂದ ಅವರೆಲ್ಲರೂ ಶ್ರೀ ತ್ರಿವಿಕ್ರಮರ ಬಳಿಗೆ ಬಂದು ಅವರನ್ನು ವಾದಕ್ಕೆ ಹುರಿದುಂಬಿಸಿದರು. 
ಆಚಾರ್ಯರೇ - ಪರಂಪರಾ ಪ್ರಾಪ್ತವಾದ ನಮ್ಮ ಸನಾತನ ಮಾಯಾವಾದ  ಮತವನ್ನು ಶ್ರೀ ಮಧ್ವಾಚಾರ್ಯರು ಅವರ ಶಿಷ್ಯರೂ ಖಂಡಿಸುತ್ತಿದ್ದಾರೆ. 
ನಿಮ್ಮಂಥ ಮಹಾ ಪಂಡಿತರು ನಮ್ಮ ಮಾಯಾವಾದ ವಾದವನ್ನು ಯುಕ್ತಿಯುಕ್ತವಾಗಿ ಖಂಡಿಸ ತೊಡಗಿದರೆ - ದ್ವೈತ ವಾದಿಗಳ ಸಡ್ಡು ಅಡಗಿ ಹೋಗುವುದು. 
ವೇದದ ನದಿಗಳಲ್ಲಿ ಅವಗಾಹನ ಮಾಡಿ ಶಾಸ್ತ್ರ ಸಾಗರದಲ್ಲಿ ಈಸಾಡುವ ಕಾವ್ಯ ಕಲಾ ಕುಶಲರಾದ ನಿಮ್ಮನ್ನು ವಾದ ವೇದಿಕೆಯಲ್ಲಿ ಎದುರಿಸಿ ಗೆಲವನ್ನು ಗಳಿಸಿದ ಗಜೇಂದ್ರನು ಇನ್ನೂ ಹುಟ್ಟಿಲ್ಲ. 
ಆದರೆ ಈಗ ಮಾತ್ರ ದೈವವು ಅಂತ ಓರ್ವ ಪ್ರಚಂಡ ಪ್ರತಿವಾದಿ ಗಜವನ್ನು ಇಂದು ನಿಮ್ಮೆದುರು ತಂದು ನಿಲ್ಲಿಸಿದೆ. 
ನೀವು ಆ ಮಧ ಗಜೇಂದ್ರನ ಜೊತೆಗೆ ವಾದ ಹೂಡಿರಿ. 
ಅವರನ್ನು ನಿರುತ್ತಾರರನ್ನು ಮಾಡಿರಿ. 
ನಿಮ್ಮ ಸ್ವಮತೀಯ ಪಂಡಿತರಿಗೆ ಒದಗಿ ಬಂದ ಭಯಾಪಾಯವನ್ನು ದೂರ ಮಾಡಿರಿ.  
ನಮ್ಮ ಮಾಯಾಮತದ ಗೌರವವನ್ನು ಉಳಿಸಿದ ಗುರುತರವಾದ ಹೊಣೆಯು ನಿಮ್ಮ ಮೇಲೆಯೇ ಇರುತ್ತದೆ. 
ಎಲ್ಲಾ ಶಾಸ್ತ್ರಗಳನ್ನೂ ತಳದಿಂದ ತುದಿಯ ವರೆಗೂ ತಲಕಾಡಿ ವಿಮರ್ಶಿಸಿ ಅವುಗಳಲ್ಲೆಲ್ಲ ಪೂರ್ಣ ಪ್ರಭುತವವ್ವು ಸಂಪಾದಿಸಿದ ಶ್ರೀ ತ್ರಿವಿಕ್ರಮರಿಗೆ ವಾದ ಮಾಡುವುದೂ - ಎದುರಾಳಿಗಳನ್ನು ಸುಲಭವಾಗಿ ಸೋಲಿಸುವುದೂ ಸ್ವಲ್ಪ ಸಮಯದಲ್ಲಿಯೇ ಎಂಥ ದಿಗ್ಗಜ ಪಂಡಿತರನ್ನೂ ಮಾತಿನ ಮಲಕಿನಲ್ಲಿ ಹಿಡಿದು ಮೂಕನನ್ನಾಗಿಸುವದೂ ಕರಗತವಾದ ಕೌಶಲ್ಯವಾಗಿತ್ತು. 
ಆದುದರಿಂದ ಅವರು ತಮ್ಮ ಅನುಯಾಯಿಗಳಾದ  ಮಾಯಿ ಜನರಿಗೆ..... 
" ನಾನು ಮಧ್ವ ಮತವನ್ನು ನಿರಾಕರಣೆ ಮಾಡಲು ಬರುತ್ತೇನೆ " 
ಎಂದು ಧೈರ್ಯ ಹೇಳಿದರೂ ಮತ್ತುಅನೇಕ ಮಧ್ವ ಮತಾನುಯಾಯಿ ಪಂಡಿತರನ್ನು ತಮ್ಮ ವಾದ ಪಾಂಡಿತ್ಯದಿಂದ ಪಾಂಡಿತ್ಯದಿಂದ ಖಂಡಿಸಿ ಉತ್ತರ ರೂಪವಾಗಿ ಅನೇಕ ಬಗೆಯ ಜಾಣ್ಮೆಯ ನುಡಿಯ ಪುಡಿ ಕಿಡಿಗಳನ್ನು ತೋರಿ ಅವರೆಲ್ಲರನ್ನೂ ಕಂಗೆಡಿಸಿದ್ದರು. 
ಆದರೆ ಶ್ರೀ ತ್ರಿವಿಕ್ರಮ ಪಂಡಿತರಿಗೆ ಮನಸ್ಸಿನಲ್ಲಿ ಆತ್ಮ ವಿಶ್ವಾಸ ಬರಲಿಲ್ಲ : ಶ್ರೀ ಸರ್ವಜ್ಞರನ್ನು ಜಯಿಸಬಲ್ಲೆನೆಂದು ".
******
" ಶ್ರೀ ತ್ರಿವಿಕ್ರಮ - 5 "
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ - ತಮ್ಮನಾದ ಶ್ರೀ ಪೆಜ್ಜತ್ತಾಯ ಶಂಕರಾಚಾರ್ಯರು ಈ ಮೊದಲೇ ಶ್ರೀ ಸರ್ವಜ್ಞಾಚಾರ್ಯರ ಶಿಷ್ಯರಾಗಿ -  ಅವರ ಗ್ರಂಥಾಗಾರದ ಪಾಲಕರಾಗಿದ್ದರು. 
ಶ್ರೀ ಪೆಜ್ಜತ್ತಾಯ ಶಂಕರಾಚಾರ್ಯರು  - ಶ್ರೀ ಪೂರ್ಣಪ್ರಜ್ಞರು ಬರೆದ ಅಗಮ್ಯವಾದ ದಿವ್ಯ ಗ್ರಂಥಗಳನ್ನು ತಂದು ತಮ್ಮ ಮನೆಯಲ್ಲಿ ಇಟ್ಟಿರುತ್ತಿದ್ದರು. 
ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಶ್ರೀ ತ್ರಿವಿಕ್ರಮರು ಎದ್ದು  ಆ  ಶ್ರೀ ಸರ್ವಜ್ಞರ ಗ್ರಂಥಗಳ ಕಟ್ಟನ್ನು ಬಿಚ್ಚಿ ಒಲೆಗಳನ್ನು ಬಿಡಿಸಿ ಮೆಲ್ಲನೆ ಓದ ತೊಡಗಿದರು. 
ಶ್ರೀ ಸರ್ವಜ್ಞಾಚಾರ್ಯರ ಆ ದಿವ್ಯ ಭವ್ಯ ಗ್ರಂಥಗಳನ್ನು ಓದಿದಾಗ ವಿದ್ವದ್ವರೇಣ್ಯರಿಗೆ ಜ್ಞಾನದ ತವನಿಧಿಯೇ ದೊರಕಿದಂತಾಯಿತು. 
ಅನೇಕ ವರ್ಷಗಳಿಂದ ಅವರ ಮನಸ್ಸನ್ನು ಕಾಡಿಸಿದ ಪ್ರಶ್ನೆಗಳಿಗೆಲ್ಲಾ ಆ ಶ್ರೀ ಸರ್ವಜ್ಞರ ಗ್ರಂಥಗಳಲ್ಲಿ ಸಮಾಧಾನಕಾರಕವಾದ ಉತ್ತರಗಳು ಕಂಡು ಬಂದವು. 
ಜ್ಞಾನ ಪ್ರಪಂಚದಲ್ಲಿ ಶತಕಾನುಶತಕಗಳಿಂದ ಬಿಡಿಸಲು ಬಾರದ ಒಗಟುಗಳಾಗಿ ನಿಂತುಕೊಂಡ ಸಮಸ್ಯೆಗಳಿಗೆಲ್ಲ ಈ ಶ್ರೀ ಮಧ್ವ ಗ್ರಂಥಗಳಲ್ಲಿ ಸಮಂಜಸವಾದ ಪರಿಹಾರವಿದ್ದಿತು. 
ಅದನ್ನು ಕಂಡು ಸ್ವಯಂ ಶ್ರೇಷ್ಠ ಪಂಡಿತರಾದ ಶ್ರೀ ಪಂಡಿತಾಚಾರ್ಯರಿಗೆ ಶಾಂತಿಯೂ ಸಿಕ್ಕಿತು - ಸಮಾಧಾನವೂ ಆಯಿತು. 
ಅವರು ಆನಂದದಿಂದ ನೇರವಾಗಿ ಎದ್ದು ವಿಷ್ಣುಮಂಗಲಕ್ಕೆ ಬಂದು -  ಅಲ್ಲಿ ವೇದಾಂತ ಪ್ರವಚನವನ್ನು ಗೈಯುತ್ತಿದ್ದ ಶ್ರೀ ಆನಂದತೀರ್ಥರ ಪಾದಾರವಿಂದಗಳಿಗೆ ಸಾಷ್ಟಾಂಗ ವಂದಿಸಿದರು. 
ಅವರ ಪ್ರತಿಯೊಂದು ಭಾವಭಾವದಲ್ಲಿಯೂ ತತ್ತ್ವ ಜಿಜ್ಞಾಸೆಯ ಹಂಬಲವು ಹೊಮ್ಮುತ್ತಿತ್ತು. 
ಶ್ರೀ ತ್ರಿವಿಕ್ರಮರು -  ಶ್ರೀ ಪೂರ್ಣಬೋಧರ ಜೊತೆಗೆ ಅನೇಕ ಪ್ರಮೇಯಗಳ ವಿಷಯದಲ್ಲಿ ಚರ್ಚೆ ನಡೆಸಿದರು. 
ವೇದಾಂತ ವಿಷಯಗಳಲ್ಲಿ ವಾಕ್ಯಾರ್ಥವನ್ನು ಮಾಡಿದರು. 
" ಶ್ರೀ ಮಧ್ವಾಚಾರ್ಯರ ಮತವೇ ನಿರ್ದುಷ್ಟವಾದ ಮತ " 
ಎಂದು ಶ್ರೀ ತ್ರಿವಿಕ್ರಮರಿಗೆ ಖಚಿತವಾಯಿತು. 
ಇಷ್ಟಾದರೂ ಅವರಿಗೆ ತಮ್ಮ ಮಾಯಾವಾದ ಮತವನ್ನು ಬಿಟ್ಟು ಬಿಡಲಿಕ್ಕೆ ಆಗಲಿಲ್ಲ. 
ಮಧ್ವ ಮತವನ್ನು ಅವರು ಅಂಗೀಕರಿಸಲಿಲ್ಲ. 
ಸಾರಾಸಾರ ವಿಚಾರ ಮಾಡಿ ನಿರ್ಣಯ ಕೈಕೊಳ್ಳುವುದೇ ಪಂಡಿತರ ಲಕ್ಷಣವಲ್ಲವೇ??
******
" ಶ್ರೀ ತ್ರಿವಿಕ್ರಮ - 6 "
" ಶ್ರೀಮದಾನಂದತೀರ್ಥ ಭಗವತ್ಪಾದರ ವಿದ್ಯಾ ವೈಭವ "
ಒಂದುದಿನ ಶ್ರೀ ಮಧ್ವಾಚಾರ್ಯರು " ತಾಡಿಕೂಡೆಲ್ " ಎಂಬ ಊರಿನಲ್ಲಿ " ಕೂಡೆಲ್ " ಎಂಬ ದೇವಸ್ಥಾನದಲ್ಲಿ ಕೂಡಿದ ಪ್ರಚಂದ್ರ ಜನಸ್ತೋಮದೆದುರು ತಮ್ಮ " ದ್ವೈತ ಭಾಷ್ಯ " ವನ್ನು ಪ್ರವಚನ ಮಾಡುತ್ತಿದ್ದರು.   
ಸಭೆಯಲ್ಲಿ ದಿಗ್ ದೇಶಗಳ ದಿಗ್ದಂತಿ ಪಂಡಿತರೆಲ್ಲರೂ ನೆರೆದಿದ್ದರು. 
ಅವರ ಎದುರು ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಪ್ರತಿವಾದಿ ಪಂಡಿತರಾಗಿ ಶ್ರೀಮದಾಚಾರ್ಯರನ್ನು ಎದುರಿಸುವ ಸನ್ನಾಹದಲ್ಲಿ ನಿಂತು ಕೊಂಡಿದ್ದರು. 
ಮಾಯಾವಾದದ ಮಹಾ ರಥವನ್ನು ಏರಿ - ತರ್ಕಾಯುಧವನ್ನು ಹಿಡಿದು ತಮ್ಮ ಮೇಲೆ ಎರಗುವ ಸಿದ್ಧತೆಯಲ್ಲಿದ್ದ ತ್ರಿವಿಕ್ರಮ ಪರಾಕ್ರಮಿಗಳನ್ನು ಕಂಡು ಶಾಸ್ತ್ರದ ಸಾಣೆ ಹಿಡಿದು ಹದನವಾದ ಶ್ರೀಮದಾಚಾರ್ಯರ ವಾಣಿಯು ಬಾಣದಂತೆ ಹೊರಬಿದ್ದಿತು. 
ಬ್ರಹ್ಮಸೂತ್ರಗಳೆಂಬ ರಥ -ವೇದ - ಮಂತ್ರಗಳೆಂಬ ಗಜ - ಸ್ಮೃತಿ ವಚನಗಳೆಂಬ ಕುದುರೆ - ನಿರ್ದುಷ್ಟ - ತರ್ಕಗಳೆಂಬ ಸೈನಿಕರು -
ಹೀಗೆ ಚತುರಂಗ ಬಲ ಸಹಿತವಾಗಿ ಶ್ರೀಮದಾಚಾರ್ಯರ ತತ್ತ್ವ ನಿರ್ಣಾಯಕವಾದ ಸಮರವು ಆರಂಭವಾಯಿತು. 
ಗಂಗಾ ಪ್ರವಾಹದಂತೆ ನಿರರ್ಗಳವಾಗಿ ಹರಿಯಿತು 
ಶ್ರೀಮದಾಚಾರ್ಯರ ಅಂದಿಂದ ಉಪನ್ಯಾಸ ಭಾರತಿ. 
ಮಾತು ಮಾತಿಗೆ ವೇದ - ಮಂತ್ರಗಳ ಸಮಾಖ್ಯೆಯನ್ನೂ - ವೇದೋಪನಿಷತ್ತುಗಳ ಸಂವಾದವನ್ನೂ - ಯುಕ್ತಿಯ ಬೆಂಬಲವನ್ನೂ ಉದಾಹರಿಸುತ್ತಾ... 
ವೇದ ಗಂಭೀರವಾದ ಧ್ವನಿಯಿಂದ ಸುಸ್ಪಷ್ಟವಾದ ಶೈಲಿಯಲ್ಲಿ ವೇದ - ವೇದಾಂತಗಳ ರಹಸ್ಯವನ್ನೆಲ್ಲ ತಿಳಿಸುತ್ತಾ.....
" ಬ್ರಹ್ಮ ಮೀಮಾಂಸಾ ಶಾಸ್ತ್ರ " 
ದ ಮೇಲೆ ನಡೆಸಿದ ಶ್ರೀಮದಾಚಾರ್ಯರ ಅಮೋಘ ಪ್ರವಚನವನ್ನು ಕೇಳಿ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ತಬ್ಬಿಬ್ಬಾಗಿ ಸುಸ್ತೋ ಸುಸ್ತಾಗಿ ಹೋದರು. 
ಹೆದ್ದೆರೆಗಳಿಂದ  ಘೂರ್ಮಿಸುವ ಸಮುಂದ್ರಕ್ಕೆ ತೆಕ್ಕೆಮೂಕ್ಕೆ ಬಿದ್ದಂತೆ ಎನಿಸಿತು ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರಿಗೆ.. 
ಶ್ರೀ ಸರ್ವಜ್ಞಾಚಾರ್ಯರು.... 
ನಾರಾಯಣನು ಗುಣಪರಿಪೂರ್ಣನು. 
ವೇದ ಪ್ರತಿಪಾದ್ಯನಾದ " ಪರಬ್ರಹ್ಮ " ನೆಂದರೆ ಅವನೇ. 
ಈ ಪ್ರಪಂಚಕ್ಕೆ ಸೃಷ್ಟ್ಯಾದ್ಯಷ್ಟ ಕರ್ತನು ಅವನ ಹೊರತು ಬೇರೆ ಯಾರೂ ಇಲ್ಲ. 
ಈ ಜಗತ್ತಿನ ನಿರ್ದೋಷ ವಸ್ತುವೆಂದರೆ ನಾರಾಯಣನೊಬ್ಬನೇ. 
ಅವನೇ " ಸರ್ವಜ್ಞ " ಯೆಂದು ಯುಕ್ತಿಯಿಂದ ಸಾಧಿಸಿದರು. 
ಅದಕ್ಕೆ ಬೆಂಬಲವಾಗಿ ಅನೇಕ ವೇದಾದಿ ಉಕ್ತಿಗಳನ್ನು ಉದಾಹರಿಸಿದರು. 
ಇದಕ್ಕೆ ವಿರುದ್ಧವಾದ... 
ಸಾಂಖ್ಯ, ವೈಶೇಷಿಕ, ನೈಯಾಯಿಕ, ಭಾಸ್ಕರ, ಬೌದ್ಧ, ಮಾಯಾಮತಾದಿ ವಾದಗಳನ್ನೆಲ್ಲಾ ಮೊದಲು ತಾವು ಅನುವಾದ ಮಾಡಿ ಅನಂತರ ಅವುಗಳನ್ನು ಒಂದೊಂದಾಗಿ ಅಕ್ಷರಸಃ ಖಂಡಿಸಿದರು. 
ಶ್ರುತಿ - ಸ್ಮೃತಿ ಸಿದ್ಧವಾದ ವೇದ ಮತವನ್ನು ಸೋಪತ್ತಿಕವಾಗಿ ಮಂಡಿಸಿದರು. 
ಸದ್ಗತಿಯನ್ನೂ - ಮೋಕ್ಷವನ್ನೂ ಬಯಸುವವರೆಲ್ಲ ವೇದೈಕ್ಯ ವೇದ್ಯನಾದ ಶ್ರೀ ವಿಷ್ಣುವನ್ನು ಉಪಾಸನೆ ಮಾಡಿ ಒಲಿಸಿ ಕೊಳ್ಳಬೇಕು. 
ಶ್ರೀ ಹರಿಯ ಪ್ರಸಾದದಿಂದಲೇ ಜೀವರಿಗೆ ಮೋಕ್ಷ. 
ಶ್ರೀ ಹರಿ ಅಪರೋಕ್ಷ ಜ್ಞಾನದಿಂದ  ನಿತ್ಯ ಸುಖ ರೂಪವಾದ ಮೋಕ್ಷವು ದೊರೆಯುತ್ತದೆ. 
ಅದಕ್ಕಾಗಿ ಶ್ರೀ ಹರಿಯನ್ನು ನಿತ್ಯ ನಿರಂತರವೂ ಭಕ್ತಿಯಿಂದ ಧ್ಯಾನ ಮಾಡಬೇಕು.   
ಶ್ರೀ ಮಧ್ವ ಮುನಿಗಳ ಪಾಂಡಿತ್ಯಪೂರ್ಣವೂ - ಯುಕ್ತಿಜಾಲಬದ್ಧವೂ -  ಪ್ರಮಾಣ ಪರಿಭ್ರ೦ಹಿತವೂ ಆದ ಈ ಉಪನ್ಯಾಸವನ್ನು ಕೇಳಿ - ಸಭಿಕೆಲ್ಲರೂ ಆನಂದ ಪರವಶರಾದರು. 
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರಿಗೂ ಶ್ರೀ ಸರ್ವಜ್ಞಾಚಾರ್ಯರ ಜ್ಞಾನದ ಉಚ್ಚ ಮಟ್ಟವನ್ನೂ -  ಅದರ ಆಳ ಅಗಲಗಳನ್ನೂ ಅಂಶತಃ ನೋಡಿ ಅತ್ಯಂತ ಆಶ್ಚರ್ಯವೆನಿಸಿತು. 
ಆದರೂ ಶ್ರೀ ಪಂಡಿತಾಚಾರ್ಯರು ಮಾಯಾವಾದ ಸಂಸ್ಕಾರಾನುಗುಣವಾಗಿ ಮಾಯಾವಾದವನ್ನು ಮಂಡಿಸಿದರು. 
ಶ್ರೀಮದಾಚಾರ್ಯರ ಮೇಲೆ ತಮ್ಮ ಬುದ್ಧಿಯ ಬಿಲ್ಲಿಗೆ ಯುಕ್ತಿ ಬಾಣಗಳನ್ನು ಹೂಡಿ ಬಿಟ್ಟರು. 
ಅದನ್ನು ಕೇಳಿ ಶ್ರೀಮದಾಚಾರ್ಯರು ಸುಂದರವಾಗಿ ಮಂದಹಾಸ ಬೀರುತ್ತಾ - ತ್ರಿವಿಕ್ರಮರ ಎಲ್ಲ ತರ್ಕಗಳಿಗೂ ಪ್ರತಿ ತರ್ಕಗಳನ್ನು ಹೇಳಿ ಕೊಚ್ಚಿ ಹಾಕಿದರು. 
ಶ್ರೀ ಅನುಮಾನತೀರ್ಥರ ತರ್ಕ ಕೌಶಲ್ಯದಿಂದ ಸೋತು ಮಾತು ನಿಂತು ಹೋದ ಶ್ರೀ ಪಂಡಿತಾಚಾರ್ಯರು ಯುಕ್ತಿಗಳ ಕೈ ಬಿಟ್ಟು ತಮ್ಮ ಮಾಯಾವಾದಕ್ಕೆ ಉಪಷ್ಟಂಭಕವಾಗಿ ಅನೇಕ ವೇದ - ಮಂತ್ರಗಳನ್ನೂ - ಪಾಶುಪತ್ಯಾದ್ಯಾಗಮಗಳನ್ನೂ ಉದಾಹರಿಸ ತೊಡಗಿದರು. 
ಕೂಡಲೇ ಶ್ರೀಮದಾಚಾರ್ಯರು ಪಂಡಿತಾಚಾರ್ಯರ ಪ್ರವಚನಗಳಿಗೆಲ್ಲ ಅರ್ಥಾ೦ತರವನ್ನು ಅರ್ಥಾತ ನಿಜಾರ್ಥವನ್ನು ಹೇಳಿ ಅವೆಲ್ಲವೂ ಸಾವಕಾಶ ಪ್ರಾಮಾಣವೆಂದು ಪ್ರಕಾಶ ಪಡಿಸಿದರು. 
ಮಾಯಾವಾದದ ಪ್ರತಿಯೊಂದು ತತ್ತ್ವ - ವೇದ ವಿರುದ್ಧ ಯನ್ನುವುದಕ್ಕೆ ಅನೇಕಾನೇಕ ನಿರವಕಾಶವಾದ ಪ್ರಜ್ವಲ ಪ್ರಮಾಣವೆನಿಸಿದ ವೇದ ವಚನಗಳನ್ನೂ ಉದಾಹರಿಸಿ ಮಾಯಾವಾದವನ್ನು ಖಂಡಿಸಿದರು. 
ಉಪಕ್ರಮಾದಿ ತಾತ್ಪರ್ಯಗಳಿಂದ " ವಿಷ್ಣು ಸರ್ವೋತ್ತಮತ್ವ - ಪಂಚ ಭೇದ ತಾರತಮ್ಯಾದಿ ದ್ವೈತ ಸಿದ್ಧಾಂತವೇ ವೇದ ಸಿದ್ಧಾಂತ " ವೆಂದು ಸಯುಕ್ತಕವಾಗಿಯೂ -  ಸಪ್ರಮಾವಾಗಿಯೂ ಸಿದ್ಧ ಮಾಡಿ ತೋರಿಸಿದರು. 
ಹೀಗೆ ಶ್ರೀ ಸರ್ವಜ್ಞರ - ಶ್ರೀ ತ್ರಿವಿಕ್ರಮರ ವಾದ 15  ದಿನಗಳ ವರೆಗೆ ಸಾಗಿತು. 
ಕೊನೆಗೆ ಪ್ರಾಮಾಣಿಕರಾದ ಶ್ರೀ ಪಂಡಿತಾಚಾರ್ಯರು ನಿರುತ್ತರರಾಗಿ ಆ ಜ್ಞಾನ ಮೇರುವಿನ ಎದುರು ತಮ್ಮ ಸೋಲನ್ನು ಪ್ರಾಂಜಲವಾಗಿ ಒಪ್ಪಿಕೊಂಡರು. 
ಸೋಲಿನಲ್ಲಿ ಸುಖವನ್ನು ಕಂಡ ಸಚ್ಚೇತನರಲ್ಲಿ ಶ್ರೀ ತ್ರಿವಿಕ್ರಮ ಪಂಡಿತಾಚಾರೊಬ್ಬರು. 
ಶ್ರೀ ತ್ರಿವಿಕ್ರಮರ ಕಣ್ಣುಗಳಿಂದ ಆನಂದ ಬಾಷ್ಪಗಳು ಉದಾರಿ ಬಂದವು. 
ಕೊರಳು ಬಿಗಿದು ಬಂದಿತು. 
ಎಂದಿನಿಂದಲೂ ಮಿದುಳಿನಲ್ಲಿ ಕೂಡಿ ಬಿದ್ದ ಸಂದೇಹಗಳ ಕಗ್ಗಂಟುಗಳು ತಾವಾಗಿ ಬಿಚ್ಚಿಕೊಂಡವು. 
ಆಗ ಅವರು ಶ್ರೀಮದಾಚಾರ್ಯರ ಪಾದಗಳಿಗೆ ಸಾಷ್ಟಾಂಗ ವಂದನೆ ಗೈದು... 
ಪರಮಪೂಜ್ಯರೆ !
ಈ ನನ್ನ ವಾದ ಚಾಪಲ್ಯವನ್ನು ಕ್ಷಮಿಸಬೇಕು. 
ತಮ್ಮ ಪಾದಪದ್ಮಗಳ ಧೂಳಿ ದಾಸ್ಯವನ್ನು ಕೊಟ್ಟು ನನ್ನನ್ನು ಅನುಗ್ರಹಿಸಬೇಕು  - ಎಂದು ಪ್ರಾರ್ಥಿಸಿಕೊಂಡರು. 
ಆಗ ನೆರೆದ ಸಭಿಕರೆಲ್ಲರೂ ಆನಂದ ಉದ್ರೇಕದಿಂದ " ಶ್ರೀಮದಾನಂದತೀರ್ಥ ಗುರುಭ್ಯೋ ನಮಃ " ಎಂದು ಜಯ ಘೋಷ ಮಾಡಿದರು.
*****
" ಶ್ರೀ ತ್ರಿವಿಕ್ರಮ - 7 "
" ವೈಷ್ಣವ ದೀಕ್ಷೆ ಮತ್ತು ತಪ್ತ ಮುದ್ರಾಧಾರಣೆ ಸ್ವೀಕರಿಸಿದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು "
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು -  ಶ್ರೀ ಶ್ರೀಮದಾಚಾರ್ಯರ ಶಿಷ್ಯರಾಗಿ ಅವರಲ್ಲಿ ವೈಷ್ಣವ ದೀಕ್ಷೆಯನ್ನು ಪಡೆದುಕೊಂಡು ತಪ್ತ ಮುದ್ರಾಧಾರಣೆಯಿಂದ ಧನ್ಯರಾದರು ಮತ್ತು ಆಚಾರ್ಯರಲ್ಲಿ ಅತ್ಯಂತ ಭಕ್ತಿಯಿಂದ " ಶಿಷ್ಯಸ್ತೇಹಂ " ಎಂದು ಶಾಂತಿ ಹಾಕಿ ಅವರ ಬಾಯಿಂದ ಬ್ರಹ್ಮಸೂತ್ರ ಭಾಷ್ಯವನ್ನು ಸಂಪೂರ್ಣವಾಗಿ ಶ್ರವಣ ಮಾಡಿದರು. 
ಶ್ರೀಮದಾಚಾರ್ಯರ ಗ್ರಂಥಗಳನ್ನು ಓದಿದಂತೆಲ್ಲ ಹೊಸದಾದ ಒಂದು ಬೆಳಕಿನ ಭಾಂಡಾರವೇ ತಮ್ಮ ಕೈವಶವಾದಂತಾಯಿತು ಶ್ರೀ ತ್ರಿವಿಕ್ರಮರಿಗೆ.
ಶ್ರೀ ಮಧ್ವ ಮುನಿಗಳ ಆ ಭಾಷ್ಯವನ್ನು ಕೇಳಿದ ಬಳಿಕ ಅವರ ತಲೆಯಲ್ಲಿ ದಿವ್ಯ ಜ್ಞಾನದ ತುಂಬು ತಡಸಲವೇ ತುಳಿಕಿದಂತಾಯಿತು. 
" ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ವದನಾರವಿಂದದಲ್ಲಿ ಹೊರಹೊಮ್ಮಿದ  - ಸರ್ವಮೂಲ ಗ್ರಂಥಗ ಮಹಿಮೆ "
ಶ್ರೀ ಸರ್ವಜ್ಞಾಚಾರ್ಯರ ಅಪ್ಪಣೆಯಂತೆ ಶ್ರೀ ತ್ರಿವಿಕ್ರಮ ಪಂಡಿತರು ಶ್ರೀ ಮಧ್ವ ಭಾಷ್ಯದಲ್ಲಿ ತಾವು ಕಂಡ ಸೊಬಗನ್ನೂ - ಉಂಡ ಸವಿಯನ್ನೂ ಜನ ಸಾಮಾನ್ಯರಿಗೆಲ್ಲ ತಿಳಿಸುವುದಕ್ಕಾಗಿ " ತತ್ತ್ವಪ್ರದೀಪ " ಎಂಬ ಶ್ರೀ ಮಧ್ವ ಭಾಷ್ಯದ ಟೀಕೆಯನ್ನು ಬರೆದರು. 
ಶ್ರೀ ತ್ರಿವಿಕ್ರ ಪಂಡಿತಾಚಾರ್ಯರ ಈ ಭಾಷ್ಯ ಟೀಕೆಯು ವೇದಾಂತ ಪ್ರಪಂಚದಲ್ಲಿ ಸರ್ವ ಮಾನ್ಯವಾದ ಉತ್ಕೃಷ್ಟ ಗ್ರಂಥವಾಗಿದೆ. 
ಶ್ರೀ ಜಯತೀರ್ಥರ ಮಧ್ವ ಭಾಷ್ಯಕ್ಕೆ ವಿರಚಿಸಿದ " ತತ್ತ್ವಪ್ರಕಾಶಿಕಾ " ಅದಕ್ಕೆ " ಚಂದ್ರಿಕಾ " ಅವುಗಳಿಗೆ " ಪ್ರಕಾಶ " " ಭಾವದೀಪ " ಭಾಷ್ಯದೀಪಿಕಾ " " ತಂತ್ರದೀಪಿಕಾ " ಮುಂತಾದ ಸೂತ್ರ ಪ್ರಸ್ಥಾನವು ಸಾಕಷ್ಟು ಬೆಳೆದಿದ್ದರೂ - ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ " ತತ್ತ್ವಪ್ರದೀಪ " ಗ್ರಂಥವು ಗತಾರ್ಥವಾಗಲಿ - ವ್ಯರ್ಥವಾಗಲಿ ಎನಿಸುವುದಿಲ್ಲ. 
ಸಾಕ್ಷಾತ್ ಶ್ರೀಮದಾಚಾರ್ಯರ ಮುಖದಿಂದಲೇ ಭಾಷ್ಯ ಶ್ರವಣವನ್ನು ಮಾಡಿ ಅವರ ಭಾವಾಭಿವ್ಯಂಜನವನ್ನು ಚನ್ನಾಗಿ ಮಾಡಿದ " ತತ್ತ್ವಪ್ರದೀಪ " ವು ಇಂದಿಗೂ ಅನನ್ಯ ಸಾಮಾನ್ಯವಾದ ತನ್ನ ವೈಶಿಷ್ಟ್ಯವನ್ನು ಕಾಯ್ದುಕೊಂಡಿದೆ. 
ಪಾವನ ಗುರುಗಳ ಶಿಷ್ಯತ್ವವನ್ನು ಅಂಗೀಕರಿಸಿದ ಬಳಿಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಶ್ರೀಮನ್ಮಧ್ವಾಚಾರ್ಯ ಎಲ್ಲ ಗ್ರಂಥಗಳನ್ನೂ ಅಧ್ಯಯನ ಮಾಡಿದರು. 
ಒಂದೊಂದು ಅನರ್ಘ್ಯ ರತ್ನವಾಗಿ ತೋರಿದವು ಆ ವಿದ್ವದ್ಬುದ್ಧಿಗೆ. 
ಹೋದ ಹೋದಲ್ಲೆಲ್ಲ ಮಧ್ವ ಗ್ರಂಥಗಳ ಹಿರಿಮೆಯನ್ನು ಮುಕ್ತಕಂಠದಿಂದ ಹೋಗಲಿ ಹೇಳುತ್ತಿದ್ದರು.
*****
" ಶ್ರೀ ತ್ರಿವಿಕ್ರಮ - 8 "
" ಶ್ರೀ ಸರ್ವಜ್ಞಾಚಾರ್ಯರ ಗ್ರಂಥ ವೈಭವ "
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ವದನಾರವಿಂದದಲ್ಲಿ ಹೊರಹೊಮ್ಮಿದ..... 
ಶ್ರೀಮದಾಚಾರ್ಯರ ಗ್ರಂಥಗಳ ವೈಷ್ಟ್ಯ ಹಾಗೂ ಮಹತ್ವಗಳ ಬಗೆಗೆ ಅವರು ಒಂದು ಸಭೆಯಲ್ಲಿ ಇತ್ತ ಉಪನ್ಯಾಸದ ಸೊಬಗನ್ನು ನೋಡಿರಿ....... 
ಶ್ರೀಮದಾನಂದತೀರ್ಥರು ಬರೆದ ಬ್ರಹ್ಮಸೂತ್ರ ಭಾಷ್ಯವೆಂದರೆ ಅದೊಂದು " ರಸ ರತ್ನಾಕರ ". 
ಆ ಸಾಗರದ ಆಳದಲ್ಲಿ ಇಳಿದು ಎಷ್ಟು ಮಣಿಗಳನ್ನು ಹೊರಗೆ ತೆಗೆದರೂ ಅವು ಮುಗುಯುವುದಿಲ್ಲ. 
ಅಸಂಖ್ಯ ಯುಕ್ತಿ ರತ್ನಗಳ ಆಗರ ಅದು. 
ಶ್ರೀ ಸರ್ವಜ್ಞಾಚಾರ್ಯರು ರಚಿಸಿದ ದಶೋಪನಿಷತ್ತು [ ಹತ್ತು ಉಪನಿಷತ್ತುಗಳಿಗೆ ಶ್ರೀಮದಾಚಾರ್ಯರು ಪರಮಾದ್ಭುತವಾದ  ಭಾಷ್ಯ ಬರೆದಿದ್ದಾರೆ ] ಭಾಷ್ಯಗಳ ಅರ್ಥ ಪ್ರತಿಪಾದನೆಯ ಸೊಗಸೇ ಬೇರೆ. 
ಶ್ರೀ ಗುರು ಮಧ್ವರು ರಚಿಸಿದ " ಗೀತಾಭಾಷ್ಯ - ಗೀತಾ ತಾತ್ಪರ್ಯ "  ಎಂಬ ಎರಡು ಗ್ರಂಥಗಳು ವೇದಾಂತ ವಿಶ್ವದಲ್ಲಿ ಚಂದ್ರ ಸೂರ್ಯರಂತೆ ತಮ್ಮ ಕಾಂತಿಯಿಂದ ಬೆಳಗುತ್ತಿದೆ. 
ಇತಿಹಾಸ  - ಪುರಾಣಗಳ ಸಾಗರವನ್ನು ಶ್ರೀ ಮಧ್ವರು ತಮ್ಮ ಮನೋಮಂದಿರವನ್ನಿಟ್ಟು ಮಂಥನ ಮಾಡಿ ಕಡೆದು ತೆಗೆದ ಅಮೃತವೇ - " ಮಹಾಭಾರತ ತಾತ್ಪರ್ಯ " ನಿರ್ಣಯವು. 
ಅದನ್ನು ಯಾವ ಪುಣ್ಯಾತ್ಮನು ಸೇವಿಸಲಿಕ್ಕಿಲ್ಲ !
ಗುಹ್ಯಭಾಷೆ - ದೇವಭಾಷೆ - ಸಮಾಧಿ ಭಾಷೆ ಎಂದು ಮೂರು ವಿಧವಾದ ಭಾಷಾ ಪ್ರಭೇದವನ್ನು ತಿಳಿಯದೆ ಪೌರಾಣಿಕ ಪಥದಲ್ಲಿ ತಡವರಿಸುವವರಿಗೆ ಶ್ರೀಮದಾಚಾರ್ಯರು ರಚಿಸಿದ " ಭಾಗವತ ತಾತ್ಪರ್ಯ ನಿರ್ಣಯ " ಗ್ರಂಥವು ಮಿತ್ರನಂತೆ ಮಾರ್ಗದರ್ಶನ ಮಾಡಿಸುವದು. 
ಶ್ರೀ ಆನಂದತೀರ್ಥ ಭಗವತ್ಪಾದರ ತಂತ್ರಸಾರ ಗ್ರಂಥವಂತೂ ಬಯಸಿದ್ದನ್ನು ಕೊಡುವ ಕಲ್ಪವೃಕ್ಷದಂತಿದೆ.  
ಅದರಲ್ಲಿ ಹೇಳಿದಂತೆ ನಡೆದರೆ ಇಷ್ಟಾರ್ಥ ಸಿದ್ಧಿ ಪಡೆಯದವನಾರು !
ಪ್ರತ್ಯಕ್ಷವೇ ಮೊದಲಾದ ಮೂರು ಪ್ರಮಾಣಗಳ ಉದ್ಧೇಶ ವಿಭಾಗ - ಲಕ್ಷಣಗಳನ್ನು ತಿಳಿದುಕೊಳ್ಳಲಿಕ್ಕೆ ಅನುಕೂಲವಾದ " ಪ್ರಮಾಣ ಲಕ್ಷಣ ಮತ್ತು ಕಥಾ ಲಕ್ಷಣ " ಎಂಬ ಎರಡು ಗ್ರಂಥಗಳು ದಿವ್ಯ ಕಣ್ಣುಗಳಂತೆ ಇವೆ. 
ಶ್ರೀ ಆನಂದತೀರ್ಥರ " ತತ್ತ್ವ ನಿರ್ಣಯ " ಗ್ರಂಥವಂತೂ ಪ್ರತಿ ಪಕ್ಷಿಗಳ ತಲೆಯ ಮೇಲ ಕಾಲಿರಿಸಿ ಎಲ್ಲರನ್ನೂ ಗೆದ್ದ ಅರ್ಜುನನಂತೆ ವೇದಾಂತ ಪ್ರಪಂಚದಲ್ಲಿಯ ಪ್ರತಿವಾದಿಗಳ ವಿಧಾನಗಳನ್ನೆಲ್ಲ ಖಂಡತುಂಡವಾಗಿ ನಿರಾಕರಣ ಮಾಡುತ್ತದೆ. 
ಇಂಥಾ ಶ್ರೀ ಗುರು ಮಧ್ವರಾಯರ " ಶ್ರೀ ವಿಷ್ಣು ತತ್ತ್ವ ನಿರ್ಣಯ " ಕೃತಿಯನ್ನು ಪೂಜಿಸದವರಾರು? [ ಪ್ರತಿಯೊಬ್ಬ ಮುಮುಕ್ಷು ಜೀವರಾದ ಸಜ್ಜನರು ಭಕ್ತಿ - ಶ್ರದ್ಧೆಗಳಿಂದ ಪೂಜಿಸುತ್ತಾರೆ ಎಂದು ತಾತ್ಪರ್ಯ ]
ಇದರಂತೆ " ಮಾಯಾವಾದಖಂಡನ - ತತ್ತ್ವೋದ್ಯೋತ " ಮುಂತಾದ ಶ್ರೀಮದಾಚಾರ್ಯರ ಪ್ರಕರಣ ಗ್ರಂಥಗಳು ಬೆಂಕಿಯ ಕಿಡಿಗಳಂತೆ ಕಾಣಲು ಚಿಕ್ಕದಾದರೂ ಮಧ್ವ ಮಾರುತಿಯಿಂದ ಪ್ರೇರಿತವಾಗಿ - ವಾದಿವಾದ ಪ್ರಸ್ಥಾನಗಳನ್ನೆಲ್ಲ ಖಂಡಿಸಿ ಹಾಕಲು ಸಮರ್ಥವಾಗಿರುತ್ತವೆ. 
ಶ್ರೀ ಪೂರ್ಣಪ್ರಜ್ಞರು ರಚಿಸಿದ " ಅಣುಭಾಷ್ಯದಲ್ಲಿ ಅನಂತ ಅರ್ಥವೂ " ಅಡಗಿದೆ. 
ಶ್ರೀ ಕೃಷ್ಣನು ತನ್ನ ಪುಟ್ಟ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಲಿಲ್ಲವೇ !
ಚಿತ್ರ ಕಾವ್ಯದ ಶೈಲಿಯಲ್ಲಿ ಬರೆದ ಶ್ರೀಮದಾಚಾರ್ಯರ " ಯಮಕಾಭಾರತ " ಎಂಬ ಗ್ರಂಥದಲ್ಲಿ ಮಹಾಭಾರದ ಸಾರವನ್ನೆಲ್ಲ ಸಂಕ್ಷೇಪವಾಗಿ ನಿರೂಪಿಸಿದ್ದು ಶ್ರೀ ಸರ್ವಜ್ಞರ ಕಾವ್ಯ ಕಲಾ ಕೌಶಲ್ಯಕ್ಕೂ - ಕಿರಿದರಲ್ಲಿ ಪಿರಿದರ್ಥ ಹೇಳುವ ಅವರ ಜಾಣ್ಮೆಗೂ ನಿದರ್ಶನವಾಗಿದೆ. 
ಇವಲ್ಲದೆ ಬಗೆ ಬಗೆಯ ಸುಭಾಷಿತಗಳೂ - ಸೂತ್ರಗಳೂ - ಗೀತೆಗಳೂ - ಗಾಥೆಗಳೂ ಇವೆ ಮೊದಲಾದ ರಸಭರಿತ ಅನೇಕ ಕೃತಿಗಳನ್ನು ಶ್ರೀ ಸರ್ವಜ್ಞತೀರ್ಥರು ರಚಿಸಿದ್ದು ಅವುಗಳನ್ನು ಗಣಿಸಬಲ್ಲವರಾರು !
ಸಮುದ್ರದಲ್ಲಿರುವ ರತ್ನಗಳನ್ನು ಎಣಿಸಬಲ್ಲವರಾರು !
ಶ್ರೀ ಪೂರ್ಣಪ್ರಜ್ಞರು ರಚಿಸಿದ ಗ್ರಂಥಗಳು ಅನಂತಾರ್ಥಗಳನ್ನು ಬೋಧಿಸುತ್ತವೆ. 
ಚಿಂತಾಮಣಿಗಳಂತೆ ಸರ್ವಾಭೀಷ್ಟಗಳನ್ನೂ ಪ್ರದಾನ ಮಾಡಲು ಸಮರ್ಥವಾಗಿರುತ್ತವೆ. 
ಶ್ರೀಮದಾಚಾರ್ಯರ ಶೈಲಿಯಲ್ಲಿ.... 
ಮಾತು - ಮಿತ.    
ಅರ್ಥ - ಅಮಿತ. 
ಅವುಗಳ ಭಾವ  - ಗಂಭೀರ. 
ಫಲ - ಪುರುಷಾರ್ಥ 
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಶ್ರೀಮದಾಚಾರ್ಯರ ಎದುರು ಹಾಗೂ ಎಲ್ಲ ಜನರೆದುರು ಅವರ ಸರ್ವಮೂಲ ಗ್ರಂಥಗಳ ಮಹಿಮೆಯನ್ನು  ಬಣ್ಣಿಸಿ ಮತ್ತೆ ಶ್ರೀ ಸರ್ವಜ್ಞರಲ್ಲಿ ಬಿನ್ನವಿಸಿಕೊಂಡರು.... 
ಗುರುವರ್ಯರೇ !
ತಾವು ಬರೆದ ಗ್ರಂಥಗಳೆಲ್ಲವೂ ಅತ್ಯಪೂರ್ವವಾಗಿದೆ.  
ಆದರೂ ನನಗಾಗಿ ತಾವು ಇನ್ನೊಂದು ಗ್ರಂಥವನ್ನು ಬರೆದು ಕರುಣಿಸಬೇಕು. 
ತಾವು ಈ ವರೆಗೂ ಬರೆದ ಗ್ರಂಥಗಳೆಲ್ಲವೂ ಯುಕ್ತಿಜಾಲ ಜಟಿಲವಾಗಿ - ಪ್ರಮಾಣ ಪ್ರಮೇಯಗಳಿಂದ ಖಚಿತ ನಿಚಿತವಾಗಿದ್ದರೂ ಮಂದಮತಿಗಳಿಗೆ ಅದರಲ್ಲಿಯ ಯುಕ್ತಿಗಳನ್ನು ಗ್ರಹಿಸಲಿಕ್ಕಾಗುವುದುದಿಲ್ಲ. 
ಅದಕ್ಕಾಗಿ ಸುಸ್ಪಷ್ಟವಾಗಿ - ಯುಕ್ತಿ - ಉಪನ್ಯಾಸವನ್ನು ಸುಲಲಿತ ಶೈಲಿಯಲ್ಲಿ ಸರಳವಾಗಿ ತಿಳಿಯುವಂತೆ ಒಂದು ಗ್ರಂಥವನ್ನು ಬರೆಯಬೇಕು. 
ಶಿಷ್ಯೋತ್ತಮರ ಈ ಬಿನ್ನಹವನ್ನು ಮನ್ನಿಸಿ ಶ್ರೀ ಸರ್ವಜ್ಞಾಚಾರ್ಯರು " ಅನುವ್ಯಾಖ್ಯಾನ " ಎಂಬ ಮಹಾ ಗ್ರಂಥವನ್ನು ರಚಿಸಿದರು. 
" ಅನುವ್ಯಾಖ್ಯಾನ " ವು.... 
ವಾದಿಗಳಿಗೆ ವಜ್ರ ಮಾಯಾವಾದದ ಕತ್ತಲೆಗೆ ಚಂಡಕಿರಣ 
ಶ್ರೀಮದಾಚಾರ್ಯರು ಈ ಗ್ರಂಥವನ್ನು ಬರೆಯಿಸಿದ ರೀತಿಯನ್ನು ಕೇಳಿದರೆ ನೇರಾಗೀ ಬೆಪ್ಪಾಗುವಂತಿದೆ. 
ನಾಲ್ಕು ಅಧ್ಯಾಯದ ಆ ಗ್ರಂಥವನ್ನು ಶ್ರೀ ಸರ್ವಜ್ಞರು ನಾಲ್ಕು ಜನ ಶಿಷ್ಯರನ್ನು ಕರೆದು ಏಕಕಾಲಕ್ಕೆ ಒಬ್ಬೊಬ್ಬರಿಗೆ ಒಂದೊಂದು ಅಧ್ಯಾಯವನ್ನು ಹೇಳುತ್ತಾ ಬರೆದು ಮುಗಿಸಿಬಿಟ್ಟರು. 
ಶ್ರೀಮದಾಚಾರ್ಯರ ಸರ್ವಜ್ಞತ್ವಕ್ಕೆ ಇನ್ನು ಬೇರೆ ಸಾಕ್ಷಿ ಏನು ಬೇಕು !
****
" ಶ್ರೀ ತ್ರಿವಿಕ್ರಮ - 9 "
" ಶ್ರೀ ವಾಯುಸ್ತುತಿ ರಚನೆಯ ಹಿನ್ನೆಲೆ "
ಒಂದುದಿನ ಶ್ರೀಮದಾಚಾರ್ಯರು....
ಶ್ರೀ ಮೂಲರಾಮನನು -  ಶ್ರೀ ಕೃಷ್ಣ -  ವೇದವ್ಯಾಸ ದೇವರನ್ನು ಪೂಜೆ ಮಾಡುತ್ತಲಿದ್ದರು. 
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಅಲ್ಲಿಯೇ ಕುಳಿತು ಈ ಪೂಜಾ ಪ್ರಕಾರವನ್ನು ನಿರೀಕ್ಷಿಸುತ್ತಿದ್ದರು. 
ನೈವೇದ್ಯ ಸಮರ್ಪಣಾ ಕಾಲದದಲ್ಲಿ ಎಲ್ಲ ಶಿಷ್ಯರೂ ಗರ್ಭ ಗುಡಿಯಿಂದ ಹೊರಗಡೆ ಬಂದು ದ್ವಾದಶ ಸ್ತೋತ್ರವನ್ನು ಪಾರಾಯಣ ಮಾಡುತ್ತಾ ನಿಂತುಕೊಂಡರು. 
ಶ್ರೀ ಆನಂದತೀರ್ಥರು ಮಾತ್ರ ಬಾಗಿಲು ಹಾಕಿಕೊಂಡು ದೇವ ಪೂಜೆಯನ್ನು ನಡೆಸಿದ್ದರು. 
ಹನ್ನೆರಡು ಅಧ್ಯಾಯ ದ್ವಾದಶ ಸ್ತೋತ್ರ ಪಾರಾಯಣ ಮುಗಿದರೂ ಗರ್ಭ ಗುಡಿಯ ಮುಚ್ಚಿದ ಕದ ತೆಗೆಯಲೇ ಇಲ್ಲ. 
ಆಗ ಶ್ರೀ ಪಂಡಿತಾಚಾರ್ಯರು " ಏಕೆ ಇಷ್ಟು ವಿಲಂಬವಾಗುತ್ತದೆ " ಎಂದು ಕುತೂಹಲಭರಿತರಾಗಿ ಬಾಗಿಲು ಸಂದಿಯಲ್ಲಿ ಇಣಿಕಿ ನೋಡಿದರು. 
ಅಲ್ಲಿ ಅವರು ಕಂಡ ದೃಶ್ಯ ಆಶ್ಚರ್ಯಕಾರಕವಾಗಿದ್ದಿತು. 
ಕಡಗೋಲು ಕೃಷ್ಣ - ಕೋದಂಡರಾಮ - ವೇದವ್ಯಾಸ ಮೂರು ಭಗವನ್ ಮೂರ್ತಿಗಳು ಪೀಠದಲ್ಲಿ ವಿರಾಜಿಸುತ್ತಲಿವೆ. 
ಅವರೆದುರು ಶ್ರೀ ಮಧ್ವಾಚಾರ್ಯರು ಹನುಮ - ಭೀಮ - ಮಧ್ವ ಈ ಮೂರು ರೂಪಗಳನ್ನು ತೆಗೆದುಕೊಂಡು ಈ ಮೂರು ಭಗವದ್ರೂಪಗಳನ್ನು ಭಕ್ತಿಯಿಂದ ಪೂಜಿಸುತ್ತಿದ್ದಾರೆ. 
ಈ ದೃಶ್ಯವನ್ನು ಕಂಡು ಶ್ರೀ ಪಂಡಿತಾಚಾರ್ಯರಿಗೆ ಒಮ್ಮೆಲೇ ಆಶ್ಚರ್ಯ - ಆನಂದ - ಉದ್ವೇಗ - ಅಂಜಿಕೆ - ಉಲ್ಹಾಸ -ಭಕ್ತಿಭರ ಮುಂತಾದ ಬಗೆಬಗೆಯ ಭಾವೋದ್ರೇಕಗಳು ಉಕ್ಕಿ ಮಿಕ್ಕಿ ಅವರ ದೇಹವೆಲ್ಲವೂ ಪುಲಕಗೊಂಡಿತು. 
ಶ್ರದ್ಧಾಭಾರದಿಂದ ಶರೀರವು ಆಕಂಪಿಸಿತು. 
ಆನಂದ ಬಾಷ್ಪಗಳು ಕಣ್ಣುಗಳಿಂದ ಕೋಡಿಯೊಡಿದು  ಹರಿಯ ತೊಡಗಿದವು. 
ಅವರ ಕಂಠವು ಗದ್ಗದವಾಯಿತು. 
ಅವರ ಹದಗೊಂಡ ಹೃದಯದಲ್ಲಿ ಮೂಡಿ ಮಿಕ್ಕಿದ ಭಕ್ತಿ ಆನಂದಾದಿ ಭಾವನೆಗಳ ಆವೇಶವು ಸದ್ಯಃ ಸ್ಫೂರ್ತಿಯಿಂದ ಕಾವ್ಯವಾಗಿ ಹರಿಯಿತು.  
ಭಾವ ಗೀತೆಯಾಗಿ ಮೆರೆಯಿತು. 
ಅಂದಿನ ಆ ಪರವಶತೆಯಲ್ಲಿ ಗುರು ಮಹಿಮೆಯನ್ನು ಕಂಡು ಸಂತಸಗೊಂಡ ಶ್ರೀ ಪಂಡಿತಾಚಾರ್ಯರ ಹೃದಯದಿಂದ ಹೊರಹೊಮ್ಮಿದ ಆ ಹಿಗ್ಗಿನ ಹಾಡೇ ಇಂದು " ವಾಯುಸ್ತುತಿ " ಎಂದು ಸುಪ್ರಸಿದ್ಧವಾಗಿದೆ. 
ಅದರಲ್ಲಿ ರಾಮ ಕೃಷ್ಣ ವೇದವ್ಯಾಸರ ಸೇವಾ - ಶುಶ್ರೂಷೆಗಳಿಗಾಗಿ ಹನುಮ ಭೀಮ ಮಧ್ವರಾಗಿ ಅವರಾತ ಮಾಡಿದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ದಿವ್ಯ ಮಹಿಮೆಯ ವಸ್ತುವಾಗಿ ಮೆರೆದಿದೆ. 
" ಶ್ರೀ ನರಸಿಂಹ ನಖ ಸ್ತುತಿ "
ಈ ವಾಯುಸ್ತುತಿಯನ್ನು ಶ್ರ ಸರ್ವಜ್ಞರಿಗೆ ತಂದು ಸಮರ್ಪಿಸಿದಾಗ ಅದನ್ನು ನೋಡಿ ಶ್ರೀ ಆನಂದತೀರ್ಥರು ಆನಂದ ಪಟ್ಟರು. 
ಆದರೆ ತಮ್ಮ ಸ್ತುತಿಯಿಂದಲೇ ಪ್ರಾರಂಭವಾಗುವ ಆ ಖಂಡ ಕಾವ್ಯವನ್ನು ಕಂಡು ಶ್ರೀಮದಾಚಾರ್ಯರ ಭಗವದ್ಭಕ್ತಿಗೆ ಇಂದು ಒಂದು ಕುಂದು ಎಂದು ತೋರಿತು. 
ತಮ್ಮ ಸ್ತೋತ್ರಕ್ಕಿಂತ ಮೊದಲು ತಮ್ಮ ಗುರುವಾದ ಶ್ರೀ ಹರಿಯ ಪ್ರಾರ್ಥನಾ ರೂಪವಾದ ಮಂಗಳಾಚರಣವು ಇರುವುದು ಅತ್ಯಂತ ಅವಶ್ಯಕ ಎನಿಸಿತು ಅವರ ಆ ಭಗವನ್ನಿಷ್ಠವಾದ ಬುದ್ಧಿಗೆ.
ಆದುದರಿಂದ ಅವರು ಕೂಡಲೇ ಶ್ರೀ ನರಸಿಂಹದೇವರ ಉಗುರಿನ ಬಣ್ಣನೆ ಮಾಡಿ ಎರಡು ಪದ್ಯಗಳನ್ನು ಬರೆದು ಆ ಖಂಡ ಕಾವ್ಯಕ್ಕೆ ಕಿರೀಟವನ್ನಾಗಿ ವಾಯುಸ್ತುತಿಯ ಪ್ರಾರಂಭದಲ್ಲಿ ಜೋಡಿಸಿದರು. 
ಶ್ರೀಮದಾಚಾರ್ಯ ಕೃತ ಶ್ರೀ ನೃಸಿಂಹದೇವರ ಸ್ತೋತ್ರದೊಂದಿಗೆ ಪ್ರಾರಂಭವಾದ ಶ್ರೀ ಮುಖ್ಯಪ್ರಾಣದೇವರ ಮಹಾ ಮಹಿಮಾ ಪ್ರತಿಪಾದಕವಾದ ಈ ವಾಯುಸ್ತುತಿಯು ಇಂದಿಗೂ ವೈಷ್ಣವರಿಗೆಲ್ಲ ಒಂದು ತಾರಕ ಮಂತ್ರವಾಗಿದೆ. 
ಭಕ್ತಿಯಿಂದ ಪಾರಾಯಣ ಮಾಡುವವರಿಗೆ ಬೇಕಾದ ಪುರುಷಾರ್ಥ ಕೊಡಬಲ್ಲ ದಿವ್ಯ ಮಂತ್ರವಾಗಿದೆ. 
ಶ್ರೀ ಭಾವಿಸಮೀರ ವಾದಿರಾಜರಂಥ ವಾಗ್ವಿಭೂತಿಗಳು ದಿವ್ಯ ಜ್ಞಾನೋದಯದ ಪರಮ ಸಿದ್ಧಿಯನ್ನು ಪಡೆದದ್ದು ಈ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯ ಕೃತ ವಾಯುಸ್ತುತಿಯ ಪಾರಾಯಣ - ಪುನಶ್ಚರಣೆ  ಪ್ರಭಾವದಿಂದಲೇ. 
ಈ ಮಾತನ್ನು ಅವರೇ ತಮ್ಮ ಗ್ರಂಥಗಳಲ್ಲಿ ಅನೇಕ ಬಾರಿ ಒಪ್ಪಿಕೊಂಡಿದ್ದಾರೆ. 
ಶ್ರೀ ತ್ರಿವಿಕ್ರಮರ ವಾಗ್ವೈಭವಕ್ಕೆ ಇನ್ನೇನು ಸಾಕ್ಷಿ ಬೆಳು !!
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಚರಮ ಶ್ಲೋಕ.... 
ತಮೋನುದಾSನಂದಮವಾಪ ಲೋಕ: 
ತತ್ತ್ವಪ್ರದೀಪಾಕೃತಿ ಗೋಗಣೇನ ।
ಯದಾಸ್ಯಶೀತಾಂಶುಭುವಾ ಗುರೂ೦ಸ್ತಾನ್ 
ತ್ರಿವಿಕ್ರಮಾರ್ಯಾನ್ ಪ್ರಣಮಾಮಿವರ್ಯಾನ್ ।।
*******

ಶ್ರೀ ನಾರಾಯಣ ಪಂಡಿತಾಚಾರ್ಯರು Magha shukla Pournima
ಈ ಕಾವು ಮಠದಲ್ಲಿಯೇ ಯತ್ಯಾಶ್ರಮವನ್ನು ಸ್ವೀಕರಿಸಿ ಸ್ವಾಮಿಗಳಾದ ಈ ತಂದೆ [ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ] - ಮಕ್ಕಳ [ ಶ್ರೀ ನಾರಾಯಣ ಪಂಡಿತಾಚಾರ್ಯರು ] ಇಬ್ಬರ ವೃಂದಾವನಗಳು ಇವೆ.
***

ಮಾಧ್ವ ಪ್ರಪಂಚಕ್ಕೆ ತಮ್ಮ ಅಪ್ರತಿಮ ಅಮೋಘ ಕೃತಿ: ವಾಯುಸ್ತುತಿಯನ್ನು ಸಮರ್ಪಿಸಿ.. ಆಚಾರ್ಯ ಮಧ್ವರಿಂದ ನಖಸ್ತುತಿಯಿಂದ ಅಂಕಿತ ಮುದ್ರೆಗೊಂಡು ಇಂದಿಗೂ ಜ್ಞಾನ ಭಕ್ತಿ ವೈರಾಗ್ಯ ಫಲದಾಯಕ ಎಂಬುದು ಸರ್ವವಿದಿತ.. ಇಂಥ ಪೂಜ್ಯ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಲಿಕುಚ ವಂಶ ಇನ್ನೂ ಮುಂದುವರೆದಿದ್ದು ಅವರು ವಾಸವಾಗಿದ್ದ ಅಂದಿನ ಮನೆ ಸುಮಾರು 800 ವರ್ಷಗಳಷ್ಟು ಹಳೆಯದ್ದು ಈಗಲೂ ನೋಡಲು ಸಿಗುತ್ತಿದೆ.. ಜೊತೆಗೆ ಅವರ ಸುಪುತ್ರ : ಸುಮಧ್ವವಿಜಯ ಕೃತಿ ರಚಿಸಿದ ಶ್ರೀ ನಾರಾಯಣ ಪಂಡಿತಾಚಾರ್ಯರ ವೃಂದಾವನ, ಅಲ್ಲದೇ ಆಚಾರ್ಯ ಮಧ್ವರೇ ತಮ್ಮ ಕೈಯಿಂದ ಈ ಪಂಡಿತೋತ್ತಮರಿಗೆ ನೀಡಿದ ಪೂಜಾ ವಿಗ್ರಹ/ಮುದ್ರೆಗಳು. ಈ ವಿಡಿಯೋದಲ್ಲಿವೆ.. (ಉತ್ಸುಕರು ಈ ವಿಡಿಯೋ ವೀಕ್ಷಿಸಿ ಪಾವನರಾಗೋಣ..)


**

No comments:

Post a Comment