Monday 1 July 2019

tande venkatesha vittala dasaru chitradurga 1982 ashada bahula ashtami ತಂದೆ ವೆಂಕಟೇಶ ವಿಠ್ಠಲ ದಾಸರು



shri gurubyO namaha...hari Om... 

AshADa bahuLa ashTami is the ArAdhane of shri tande venkatesha viTTala dAsaru.

shri jagannAtha dAsarAya pAdhAbhja madhupayinam
thande shri vEnkaTEshasakhyam noumi 
shripathi priyathe

shri tande venkatesha viTTala dAsa varada gOvindA gOvindA... 

shri krishNArpaNamastu...

****
.

      ಆಷಾಢ ಕೃಷ್ಣ ಅಷ್ಟಮಿ

ಶ್ರೀ ಪೂರ್ಣಬೋಧಮುನಿ ಹೃದ್ಗತ ಭಾವ ಯಜ್ಞಂ
ಗುಪ್ತಾತಿಗುಪ್ತವರ‌ ಸಾಧನ ಕರ್ಮ ನಿಷ್ಠಂ//
ಶ್ರೀ ತಂದೆ ವೆಂಕಟೇಶ ವಿಟ್ಠಲ ಪಾದಾಸಕ್ತಂ
ಶ್ರೀ ರಾಮಚಂದ್ರ ಗುರುವರ್ಯಮಹಂ ನಮಾಮಿ//...

19ನೆಯ ಶತಮಾನದ ದಾಸ ಶ್ರೇಷ್ಠರು, ಶ್ರೀ ಉರಗಾದ್ರಿವಾಸ ವಿಠಲರ ಶಿಷ್ಯರು, ಹರಿದಾಸಕವಿಕುಲತಿಲಕರಾದ ಶ್ರೀ ಗುರುಗೋವಿಂದವಿಠಲರಿಗೆ ಪರಮಾಪ್ತರೂ, ಅತ್ಯದ್ಭುತ ರೀತಿಯಲ್ಲಿ ಪದರಚನೆ ಮಾಡಿದವರೂ, ಪರಮ ಪರಮ ಗುಪ್ತಸಾಧಕರೂ ,  ಪರಮಾತ್ಮನ ಕುರಿತಾದ ತತ್ವಗಳನ್ನು ತಮ್ಮ ಕೃತಿಗಳಲ್ಲಿ  ಅಡಗಿಸಿ ನೀಡಿದ ಮಹಾನ್ ಚೇತನರೂ, ಪರಮ ಶ್ರೇಷ್ಠ ದಾಸಾರ್ಯರೂ, 300 ರಕ್ಕೂ ಹೆಚ್ಚಿನ ಕೃತಿಗಳನ್ನು ರಚನೆ ಮಾಡಿದವರು,  ಆದ ಶ್ರೀ ಆರ್. ರಾಮಚಂದ್ರರಾಯರ ಅರ್ಥಾತ್ ಶ್ರೀ  ತಂದೆವೆಂಕಟೇಶವಿಠಲರ ಆರಾಧನಾ ಮಹೋತ್ಸವದ ಶುಭದಿನವಿಂದು.... 
ಪ್ರಾತಃಸ್ಮರಣೀಯರಾದ ದಾಸಾರ್ಯರ ಹೆಸರು  ಹೇಳುವುದೇ ಸ್ಮರಣೆ ಅಂದಮೇಲೆ ಅವರ ಕೃತಿಗಳು ಹಾಡುವುದು ಅದರ ಚಿಂತನೆ ಮಾಡುವುದು ಅದೆಷ್ಟು ಪುಣ್ಯಕಾರ್ಯವಲ್ಲವೇ... ಅವರ ಕೃತಿಗಳಲ್ಲಿ  ಅತ್ಯಂತ ಗಾಂಭೀರ್ಯ ತುಂಬಿದ ಸಾಹಿತ್ಯವನ್ನು ನಾವು ನೋಡಬಹುದು... ಶ್ರೀ ತಂದೆವೆಂಕಟೇಶವಿಠಲ ದಾಸಾರ್ಯರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲೆಂದು ಅವರಲ್ಲಿ ಅವರ ಅಂತರ್ಗತಭಾರತೀರಮಣಮುಖ್ಯಪ್ರಾಣಾಂತರ್ಗತಲಕ್ಷ್ಮೀನಾರಸಿಂಹಾಭಿನ್ನ ಶ್ರೀ ಕೃಷ್ಣಪರಮಾತ್ಮನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..

 ‌(received in WhatsApp)

***

Year 2021
" ಶ್ರೀ ತಂದೆ ವೆಂಕಟೇಶ ವಿಠ್ಠಲ ದಾಸರ ಸ್ಮರಣೆ "
" ಈದಿನ - ದಿನಾಂಕ : 01.08.2021 ಭಾನುವಾರ - ಶ್ರೀ ಪ್ಲವ ನಾಮ ಸಂವತ್ಸರ ದಕ್ಷಿಣಾಯನ ಆಷಾಢ ಬಹುಳ ಅಷ್ಟಮೀ - ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ತಂದೆ ವೇಂಕಟೇಶ ವಿಠ್ಠಲರ ಆರಾಧನಾ ಮಹೋತ್ಸವ - ಚಿತ್ರದುರ್ಗ "
" ಪ್ರಸ್ತಾವನೆ "
ಶ್ರೀ ತಂದೆ ವೆಂಕಟೇಶ ವಿಠ್ಠಲರು.....
ಶ್ರೀ ನಾರಸಿಂಹಾ ಜಯ । ದಾ ।
ನಾರಸಿಂಹ ಭಯ ।
ಹಾ ನಾರಸಿಂಹ ದಯಿತಾ ।
ದೀನಾರ್ತ ದಿವಿಜತರು ।
ವಾನಾರವಾಹ । ವೈ ।
ಶ್ವಾನಾರ ಲೋಚನಮಿತಾ ।
ಭೂ ನಾಕ ಸರ್ಪ । ಲೋ ।
ಕಾನಾಮಯ ಕೃತ । ವಿ ।
ಧಾನಾದ್ಭುತಾತ್ಮ ಚರಿತಾ ।
ಶ್ರೀ ನಾರಿ ಭೂಮಿ । ದು ।
ರ್ಗಾನಾಮ್ಯ ಚರಣ । ಮ ।
ಧ್ವನಾಥ ಮೋದ ಭರಿತ ।।
ಸಂಸ್ಕೃತದ ಕಬ್ಬಿಣದ ಕಡಲೆಯ ರೂಪವಾದ ಪ್ರಮೇಯಗಳನ್ನು ವ್ಯಾಸ ಕೂಟ ಭಕ್ತಿಯ ಸೂತ್ರಗಳನ್ನು ಮಾರ್ಗದರ್ಶನ ಮಾಡಿಸಿತು. ದಾಸ ಕೂಟ ಅದೇ ಭಕ್ತಿ ರಸವನ್ನು ಸರಳ ಕನ್ನಡವಾದ ಜಾನಪದದ ಆಡು ಭಾಷೆಯಲ್ಲಿ ಪ್ರಮೇಯಭರಿತ ಪದಗಳನ್ನು ರಚಿಸಿ ಜನ ಸಾಮಾನ್ಯರಿಗೂ ತಲುಪುವಂತೆ ಮಾಡಿತು. ಇದುವೇ ಹರಿದಾಸ ಸಾಹಿತ್ಯದ ಹಿರಿಮೆ. 
ದಾಸ ಕೂಟದ ಪ್ರವರ್ತಕರು ಸಾಕ್ಷಾತ್ ಶ್ರೀ ಹನುಮಂತದೆವರು. ( ಶ್ರೀ ಹನುಮ ಭೀಮ ಮಧ್ವರು )
ಶ್ರೀ ಮಧ್ವಾಚಾರ್ಯರಿಂದ ಪ್ರಾರಂಭವಾದ ಈ ಭಕ್ತಿ ಸಾಹಿತ್ಯವು ಶ್ರೀ ನರಹರಿತೀರ್ಥರಿಂದ ಹರಿದಾಸ ಪಂಥ ಪ್ರಾರಂಭವಾಯಿತು - ಇದರಿಂದ ಸರಳ ಕನ್ನಡ ಭಾಷೆಯ ಸಾಹಿತ್ಯ ಗಂಗೆಯ ಪ್ರವಾಹ ಪ್ರಾರಂಭವಾಯಿತು. 
ಮುಂದೆ ಈ ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀ ಜಯತೀರ್ಥರು - ಶ್ರೀ ವಿಬುಧೇಂದ್ರತೀರ್ಥರು - ದಾಸ ಸಾಹಿತ್ಯದ ಆದ್ಯರು, 
ಶ್ರೀ ಶ್ರೀಪಾದರಾಜರು ಮತ್ತು ಶ್ರೀ ವ್ಯಾಸರಾಜರು ಮುಂದುವರೆಸಿದರು. 
ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರೆಂಬ ಅನರ್ಘ್ಯ ರತ್ನಗಳನ್ನು ಕೊಟ್ಟು ಹರಿದಾಸ ಸಾಹಿತ್ಯ ಉಗಮಕ್ಕೆ ಕಾರಣರಾದರು. 
ಕನ್ನಡದಲ್ಲಿ ಭಕ್ತಿ ಸಾಹಿತ್ಯಕ್ಕೆ ಸೂಕ್ತ ಸ್ಥಾನವನ್ನು ಕಲ್ಪಿಸಿ ಕೊಟ್ಟವರು ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರು.
ಜಾನಪದ ಶೈಲಿಯಲ್ಲಿ ಪದ - ಪದ್ಯ - ಸುಳಾದಿ - ಉಗಾಭೋಗಗಳನ್ನು ರಚಿಸಿ ರಾಗಬದ್ಧವಾಗಿ ಹಾಡಿ ಸಂಗೀತವನ್ನೂ ಪ್ರಸಿದ್ಧಿಗೆ ತಂದರು. 
ಇನ್ನು ಶ್ರೀ ವಿಜಯರಾಯರು ಮತ್ತು ಶಿಷ್ಯ ಪ್ರಶಿಷ್ಯರು ಹರಿದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅದ್ಭುತ. ಆ ಸತ್ಪರಂಪರೆಯಲ್ಲಿ... 
ಶ್ರೀ ಉರಗಾದ್ರಿವಾಸ ವಿಠ್ಠಲರ ಶಿಷ್ಯಾಗ್ರಗಣ್ಯರಾದ ಶ್ರೀ ತಂದೆ ವೇಂಕಟೇಶ ವಿಠ್ಠಲರ ತತ್ತ್ವ ಪ್ರಮೇಯ ಭರಿತವಾದ ರಚನೆಯನ್ನು ಪರಿಶುದ್ಧವಾದ ಮನಸ್ಸಿನಿಂದ ಅವಲೋಕಿಸಿ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡೋಣ. 
" ಸಂಕ್ಷಿಪ್ತ ಮಾಹಿತಿ "
ಹೆಸರು : ಪರಮಪೂಜ್ಯ ಶ್ರೀ ಆರ್ ರಾಮಚಂದ್ರರಾಯರು
ಕಾಲ : ಕ್ರಿ ಶ 1907 - 1982
ಅಂಕೀತೋಪದೇಶ : ಶ್ರೀ ಉರಗಾದ್ರಿವಾಸವಿಠ್ಠಲರು
ಅಂಕಿತ :  ಶ್ರೀ ತಂದೆ ವೇಂಕಟೇಶ ವಿಠ್ಠಲ
" ಅಂಕಿತ ಪದ "
ರಾಗ : ಬಿಲಹರಿ  ತಾಳ : ಆದಿ
ವೆಂಕಟೇಶನೆಯೆನ್ನ ಪಾಲೀಪುದೂ ।
ಕಿಂಕರಾರ್ತಿಹರಣ ।। ಪಲ್ಲವಿ ।।
ಪಂಕಜೋದ್ಭವ ಹರ ವಂದ್ಯ ಪರಾತ್ಪರ ।
ನಿಖಿಳಾಗಮ ವಿಜ್ಞೇಯ ಲೋಕೊದ್ಧಾರ ।। ಅ ಪ ।।
ಇಂದು ಮಂದವಾರ ಚೈತ್ರ ವತ್ಸರ ಬಹುಧಾನ್ಯ ।
ಸಂದ ಶುಕ್ಲ ದ್ವಿತೀಯಾ ಸಂಧ್ಯಾಸವನ ।
ಬಂದು ಕೀರ್ತನ ಸೇವಾ ನಂತರದಿ ಯೆನ್ನ ।।
ಮಂದಿರದೊಳು ಸುಪ್ತಾವಸ್ಥೆಯೊಳಿರಲಾಗ ।
ಅಂದು ಕಡೆಯ ಯಾಮದಿ ತೈಜಸನೆ ನೀ । ಹಂಸ ।
ರಿಂದೆನ್ನ ಮನ ಸಂಶಯ ಹರಿಸಿದೆ ।। ಚರಣ ।।
ಅರುಣಾ ಉದಯದೊಳೆದ್ದೂ ಮುದದೀ ।
ಕರುಣಾ ಶುದ್ಧನಾಗೀ ।
ತ್ವರಿತದಿ ಸ್ವಪ್ನವಿವರಕಾಗಿ ಹರುಷದೀ ।
ಹರಿ ಪೂಜಾ ಕಾಲದಿ ಅರುಹಿದಾ ।
ಮರುತ ಮೂರುತಿಯಾ ।।
ಉರುತರ ಚರಿತೆಯ ।
ನಿರುತ ಪಾಡಿ ಪೊಗಳಲಾಣತಿಯಿತ್ತ ।
ತಿರುಪತಿ ಶೈಲಾಧಿಪ ಮಮ ಕುಲ ಸ್ವಾಮೀ ।। ಚರಣ ।।
ಸಾರಸದ್ಭಕುತಿಯನೂ ಕರುಣಿಸು ।    
ಹರಿ ಗುರು ಸೇವೆಯನೂ ।
ಸಾರ್ವಸದ್ಯೋಗ್ಯ ಸಾಧನವನ್ನೂ ।
ಪರಮಹಂಸರು ಇತ್ತ ।।
ಶ್ರೀ ವೆಂಕಟೇಶಾಂಕಿತ ಮೂರುತಿಯನೆ ನುತಿಪ ।
ನಿಜ ಹರಿ ಭಕುತರ ಚರಣ ಕಮಲ -
ಬಂಡುಣಿಯೆಂದೆನಿಸಿ ಇವನ ।
ನಿರುತ ರಕ್ಷಿಸೋ ಉರಗಾದ್ರಿವಾಸವಿಠ್ಠಲ ।। ಚರಣ ।।
ಇನ್ನೊಂದು ಅಂಕಿತ ಪದದಲ್ಲಿ....
ತಂದೆ ವೆಂಕಟೇಶನೆಂದೆ । ಪು ।
ರಂದರ ದಾಸರ ಪ್ರಿಯನಿವನೆಂದೆ ।। ಪಲ್ಲವಿ ।।
ತಂದೆ ಜನ್ಮ ಜನ್ಮಂಗಳಲಿ । ಎಂ ।
ದೆಂದು ಭವ ಮೋಚನದೊಳು ತಂದೆ ।
ಇಂದು ವಿಷಯದಿ ತಂದೆದಂದುಗೆ ಬಿಡಿಸೆಂದೆ ।
ನಿಂದು ಹೃನ್ಮಂದಿರಾರವಿಂದದೊಳು ನಿಂದೆ ।। ಚರಣ ।।
ಕಾಲ ಕಾಲಡಿ ತಂದೆ ವಾಕು ಮನಕೆ ।
ನಿಲುಕಾದಲಿಹೆ ತಂದೆ ।
ಬಾಲ್ಯ ಯೌವನ ಜರಾ ।।
ಲಯಾದ್ಯವಸ್ಥೆಯ ತಂದೆ ।
ಕಾಲ ಕರ್ಮಗಳಲ್ಲಿ ಕಾರ್ಯ ಪ್ರೇರಣೆಗೆಲ್ಲ ।। ಚರಣ ।।
ಚತುರ ರೂಪದಿ ನಿಂದೆ ತಂದೇ ।
ಚತುರ ರೂಪದಿ ತಂದೆ ।
ನುತಿಪೆನೊ ಉರಗಾದ್ರಿ ವಾಸ ವಿಠ್ಠಲ । ಅ ।
ಪ್ರತಿ ಮಹಿಮ ಸೃಷ್ಟಿ ಸ್ಥಿತಿ ಲಯಕೆಲ್ಲ ।। ಚರಣ ।।
ಮತ್ತೊಂದು ಅಂಕಿತ ಪದದಲ್ಲಿ ....
ದಾರಿ ತೋರೋ ಶ್ರೀ ಮನೋಹರಾ ।
ಶ್ರೀ ಮನೋಹರಾ ಶ್ರೀ ಮನೋಹರಾ ।। ಪಲ್ಲವಿ ।।
ಚರಣ ಸೇವಕರ ಸೇವಕನೆಂದು ಸಾಧನಕೀಗ ।। ಅ ಪ ।।
ಜ್ಞಾನಗಮ್ಯ ನೀನೆಂದೂ । ಬಹು ।
ಧಾನ್ಯ ವತ್ಸರದೊಳೂ ।
ಗುಣ ರೂಪ ನಾಮ ಕೀರ್ತನ ।
ಸೇವೆ ಮಾಡುತಿಪ್ಪ ಭೃತ್ಯನಾ -
ನಿನ್ನವಗೆ ಅನುದಿನದಿ ।। ಚರಣ ।।
ಭಕ್ತಿ ಮುಕ್ತಿ ಪ್ರದಾಯಕಾ ।
ವಾಖ್ಯಾ ಶಕ್ತಿದಾಯಕಾ ।
ಯುಕ್ತ ಧರ್ಮ ಮಾರ್ಗದರ್ಶಕಾ । ತ್ವ ।
ದ್ಭಕ್ತ ಜನ ರಕ್ಷಕಾ ಕರಾವಲಂಬನವಿತ್ತು ।। ಚರಣ ।।
ಲೌಕಿಕ ಸಂಸಾರದ ಲಂಪಟದಲ್ಲಿರೆ ।
ಲೋಕೈಕನಾಥನೇ ಸರ್ವ ।
ವ್ಯಾಪ್ತ ಅಂತರ್ಯಾಮಿ ಎನ್ನುವಾ ।
ಸ್ಮೃತಿ ನಿರುತದಿ ಇತ್ತು ।। ಚರಣ ।।
ವಿದ್ಯಾ ಸದ್ಬುದ್ಧೀ ಶಕ್ತಿ ।
ಶ್ರದ್ಧಾ ಆಯು: ಕೀರುತೀ ।
ಮಧ್ವ ಮತ ತತ್ತ್ವ ಕೀರುತೀ । ಪ್ರ ।
ಸಿದ್ಧಿ ಪಡಿಸಿ ಮೋದದೀ ।
ಶುದ್ಧಾ ಪದ್ಧತಿ ಮೀರದ ।। ಚರಣ ।।
ಉರಗಾದ್ರಿ ವಾಸ ವಿಠ್ಠಲಾ ಹೃತ್ಯಾಶಾ ।
ತಂದೆ ವೆಂಕಟೇಶ ವಿಠ್ಠಲಾ ।
ನೀನೆಂದೂ ಏಕಾಂತದಲ್ಲಿ ।
ಮುಂದಿನ ಸಾಧನಗಳಲಿ ।। ಚರಣ ।।
ಶ್ರೀ ತಂದೆ ವೇಂಕಟೇಶ ವಿಠ್ಠಲರು- ಶ್ರೀ ಉರಗಾದ್ರಿವಾಸ ವಿಠ್ಠಲರಿಂದ ಅಂಕಿತ ಸ್ವೀಕಾರ ಮಾಡಿ - ಕಲಿಯುಗ ಕಲ್ಪವೃಕ್ಷ - ಕಾಮಧೇನುವೆಂದು ಜಗತ್ಪ್ರಸಿದ್ಧವಾದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ದರ್ಶನಾಕಾಂಕ್ಷಿಗಳಾಗಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು - ತುಂಗಭದ್ರೆಯಲ್ಲಿ ಮಿಂದು ಆಹ್ನೀಕಾದಿಗಳನ್ನು ಮುಗಿಸಿಕೊಂಡು - ಜಗನ್ಮಾತೆಯಾದ ಶ್ರೀ ದುರ್ಗಾ ರೂಪಿ ಮಂಚಾಲಮ್ಮನನ್ನು ದರ್ಶನ ಮಾಡಿ ...
ನಮೋಸ್ತುತೇ ನಮೋಸ್ತುತೇ ।
ರಮಾ ಮಾತೆ ಸಮಾನರಹಿತೇ ।। ಪಲ್ಲವಿ ।।
ರಮಾದೇವಿ ಸಮಾಸಮೇ ।
ಭ್ರಮಾ ರಹಿತ ಸದಾಗಮೇ ।
ಕ್ಷಮಾ ವರದ ಸುಪ್ರತಿಮೇ ।
ಸಮಾಹಿತಾಪ್ರತಿ ಮಹಿಮೇ ।। ಅ ಪ ।।
ಕ್ಷೀರವಾರಿಧಿ ಜಾತೇ ಚೇತೋಗತೇ ।
ಚಾರುದೇಷ್ಣ ಮಾತೇ ।
ಸಾರಸಸನಾದ್ಯಮರ ।
ವರ ವಿನುತೇ ಅಕ್ಷರೇ ಚಿತ್ಪ್ರಕೃತೇ ।।
ವಾರಿದ ಪತ್ರಾಭ್ರೂಪಸ್ಫುರಿತೇ ।
ಸಾರಸತ್ವಾದಿ ಪ್ರಥಿತ ಸುಚರಿತೇ ।
ಘೋರಭವಾಸುರ ಸಂಘ ವಿದಾರಿತೇ ।
ಶೌರಿ ವಕ್ಷಸ್ಥಲ ವಿಹರಣನಿರತೇ ।। ಚರಣ ।।
ಉಭಯ ಕೋಟಿಗತೇ ಶುಭ ಲಕ್ಷಣಯುತೇ ।
ಅಭಯ ವರದ ನೀರಜ ಹಸ್ತೇ ।
ವಿಭು ಸಹ ವ್ಯಾಪ್ತೆ । ಹೃ ।
ದಭ್ರವಸಿತೇ ಗುಣಲಬ್ಧ ಸೃಷ್ಟಿಕರ್ತೇ ।।
ಆಬ್ದಾಯನಾದಿ ಕಾಲಾಂತರಿತೇ ।
ಶಬ್ದ ಸ್ವರಾಂತರಾರ್ಥ ಪ್ರಗತೇ ।
ನಿರ್ಭರಿತಾನಂದಾತ್ಮಾ ವಿಕೃತೇ ।
ಗರ್ಭೀಕೃತ ಬ್ರಹ್ಮಾಂಡಾದ್ಯಮಿತೇ ।। ಚರಣ ।।           
ಇಂದೀವರ ವರ ಮಂದಿರ ದಯಿತೇ ।
ಚಂದ್ರಮ ಸಹ ಜಾತೇ ।
ವಂದಿತಾಖಿಳಾಮ್ನಾಯ ನಿಗದಿತೇ ।
ಬಂಧುರ ಗುಣ ಮಹಿತೇ ।।
ನಂದ ನಂದನಾನಂದಿತ ಯದುಪತೇ ।
ಬಂಧ ಮೋಕ್ಷದಾನಂದತೀರ್ಥ ಹಿತೇ ।
ವಂದಿತಾಖಿಳಸುರೇಹಿತ ಹಸಿತೇ ।
ತಂದೆ ವೇಂಕಟೇಶವಿಠ್ಠಲಾಹ್ಲಾದಿತೇ ।। ಚರಣ ।।      
ಜಗನ್ಮಾತೆಯನ್ನು ಸ್ತುತಿಸಿ - ಶ್ರೀ ಯೋಗೀ೦ದ್ರತೀರ್ಥರ ಅಮೃತ ಹಸ್ತಗಳಿಂದ ಪ್ರತಿಷ್ಠಾಪನೆಗೊಂಡ ಶ್ರೀ ಮುಖ್ಯಪ್ರಾಣದೇವರ ಸನ್ನಿಧಾನಕ್ಕೆ ಬಂದು ಮನಸಾರೆ ಶ್ರೀ ವಾಯುದೇವರ ಸ್ತೋತ್ರ ಮಾಡುತ್ತಾ...
ಜೈ ಹನುಮಂತ ಜೈ ಹನುಮಂತ ।
ಜೈ ಹನುಮಂತ ಜೈ ಹನುಮಂತ ।। ಪಲ್ಲವಿ ।।
ದೈತ್ಯ ಕೃತಾಂತ - ಭಾರತೀ ಕಾಂತ । ಕೃತ ಸಿದ್ಧಾಂತ - ಭೋ ಯಶವಂತ  - ರಾಮ ಕಥಾಂಬುಧಿ । ಮಂಥನ ಮಾನಸ - ಸಂತ ಜನಾವಳಿ ಚಿಂತಾಮಣಿ । ಗುರು ಯಂತ್ರೋದ್ಧಾರ - ಪರಂತಪ - ಧೀಮಹೀ ।।
ಸ್ವಾಂತದಲಿ ನಿಂತು ಜೀವಾಂತರ್ಯಾಮಿ । ನಿ । ರಂತರದಲಿ ಜಪ ಚಿಂತಿಸಿ ಜೀವರ । ಕಂತು ಪಿತನ ಸೇರ್ವಂತೆ  ಮಾಡಿಸುವಾ । ನಂತನಂತರಿಸಿದಾಚಿಂತ್ಯಾ - ಸತ್ಪಂಥಾ ।। ಅ ಪ ।।
ಯೆಂದು ಶ್ರೀ ವಾಯುದೇವರ ವ್ಯಾಪಾರವನ್ನೂ - ಅವರ ಅವತಾರತ್ರಯ ವೈಭವವನ್ನೂ ಕೊಂಡಾಡಿ....      
" ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮ ಸ್ತುತಿ "
ಸಜ್ಜನ ಜ್ಞಾನಿಗಳ ಹೃದಯ ಮಂದಿರ ವಿರಾಜಿತ - ಮಂದಸ್ಮಿತ ವದನಾರವಿಂದರಾದ - ಭಕ್ತರ ಮಂದಾರವೆನಿಪ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ದಿವ್ಯ ಭವ್ಯ ಮೂಲ ವೃಂದಾವನದ ಮುಂದೆ ಬಂದು ನಿಂತಿದ್ದಾರೆ.
ಹೃದಯ ತುಂಬಿದೆ - ಕಂಠ ಗದ್ಗದಿತವಾಗಿದೆ - ಶ್ರೀ ರಾಯರ ವೃಂದಾವನವನ್ನು ತದೇಕ ಚಿತ್ತದಿಂದ ನೋಡುತ್ತಿದ್ದಾರೆ - ವೃಂದಾವನ ಮಧ್ಯ ಭಾಗದಲ್ಲಿ ಶ್ರೀ ರಾಯರು ಅನುಗ್ರಹಿಸುತ್ತುರುವದನ್ನು ಕಂಡು -
ರಾಗ : ಹಿಂದೂಸ್ತಾನಿ ತೋಡಿ      ತಾಳ : ಆದಿ
ರಾಘವೇಂದ್ರ ಯತಿ ಮಾನತೋಸ್ಮಿ -
ಸತತಂ ಮಧ್ವಾಗಮ ನಿಪುಣಂ ।। ಪಲ್ಲವಿ ।।
ವಿದ್ವದಾರ್ಯ ಪರಮಾದ್ಭುತಚರ್ಯ೦ ।
ಅದ್ವೈತಾಂಕುರಧ್ವಂಸನ ಧುರ್ಯ೦ ।
ಸದ್ವೈಷ್ಣವ ಪಾದ್ಮೋದಯ ಸೂರ್ಯ೦ ।
ಪ್ರದ್ವೇಷೀ ಹೃದ್ಭೇಧನ ತೂರ್ಯ೦ ।। ಚರಣ ।।
ನಿಖಿಳ ಸುಗುಣಗಣ ವಿಕಸಿತವಪುಷ೦ ।
ಪ್ರಕಟಾಪ್ರಕಟ ಸುಮಹಿಮ ವಿಲಾಸಂ ।
ಸಕಲಾಭೀಷ್ಟದ ಪ್ರಸರಿತ ತೋಷ೦ ।
ನಕುಲಾಗ್ರಜ ಪದಧೃತ ಶುಭಶೀರ್ಷ೦ ।। ಚರಣ ।।
ತಂದೆ ವೇಂಕಟೇಶ ವಿಠ್ಠಲ ಭಕ್ತ೦ ।
ದ್ವಂದ್ವ ಸಮರ್ಪಣ ಕಾರ್ಯಾಸಕ್ತ೦ ।
ವಂದಿತ ಜನ ಸುರಭೂರುಹ ವ್ಯಕ್ತ೦ ।
ಮಂದಮತಿಂ ಮಾಂ ಪಾಲಯನಿರುತಂ ।। ಚರಣ ।।
ಎಂದು ಸ್ತುತಿಸಿ - ಶ್ರೀ ಮಂತ್ರಾಲಯ ಪ್ರಭುಗಳ ಮೇಲೆ 24 ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.
ವೇದೋಪನಿಷತ್ - ಪುರಾಣ - ಇತಿಹಾಸಾದಿ ಗ್ರಂಥಗಳಲ್ಲಿ ಅಡಕವಾದ ಬಹಳ ನಿಗೂಢವಾದ ತತ್ತ್ವ ಪ್ರಮೇಯಗಳನ್ನು ತಮ್ಮ ಕೃತಿಗಳಲ್ಲಿ ಅಳವಡಿಸಿರುವ ಶ್ರೀ ತಂದೆ ವೇಂಕಟೇಶ ವಿಠ್ಠಲರ ಕವಿತಾ ಕೌಶಲ ಅವರ ಸಾಹಿತ್ಯದ ಹಿರಿಮೆ ಮತ್ತು ಸಂಸ್ಕೃತ - ಕನ್ನಡ ಭಾಷಾ ಕೋವಿದರು.
ಶ್ರೀ ತಂದೆ ವೇಂಕಟೇಶ ವಿಠ್ಠಲರ ಕೃತಿಗಳಲ್ಲಿ ಸಮಯೋಚಿತ ಶಬ್ದ ಪ್ರಯೋಗಗಳೂ - ಶಬ್ದ ಸಂಪತ್ತೂ, ಸಾಹಿತ್ಯದ ಗಾಂಭೀರ್ಯ ಅತ್ಯಂತ ಪ್ರೌಢ ಮತ್ತು ವಿದ್ವಾಂಸರಿಗೆ ಸರಳ ಸುಂದರವಾಗಿಯೂ - ಲಾಲಿತ್ಯಪೂರ್ಣವಾಗಿಯೂ - ಮಾಧುರ್ಯದಿಂದ ಕೂಡಿವೆ!
ಶ್ರೀ ತಂದೆ ವೇಂಕಟೇಶ ವಿಠ್ಠಲರ ಕೃತಿಗಳಲ್ಲಿ ಪ್ರಯೋಗವಾದ ಶಬ್ದಗಳ ಅರ್ಥಗಳನ್ನು ಶಬ್ದಕೋಶವನ್ನು ತಿರುಚಿ ಹಾಕಿದರೂ ಅಲಭ್ಯವಾಗಿದೆ.
ಶ್ರೀ ತಂದೆ ವೇಂಕಟೇಶ ವಿಠ್ಠಲರ ಕೃತಿಗಳ ಅರ್ಥವನ್ನು ತಿಳಿಯಬೇಕಾದರೆ ಶಾಸ್ತ್ರಾಧ್ಯಯನ ಅತ್ಯವಶ್ಯವಾಗಿದೆ. 
ಅದಕ್ಕಾಗಿಯೇ.....
" ಸುಧಾ ಓದು ಪದ ಮಾಡು " 
ಎಂಬ ಜ್ಞಾನಿಗಳ ವಚನ ಇವರಿಗೆ ಸಲ್ಲುತ್ತದೆ. ಉದಾಹರಣೆಗೆ.....
ಶ್ರೀ ದಾಸರಲ್ಲಿ ನಾದಿಷ್ಠತೆ - ಛಾ೦ದಿಷ್ಟತೆ - ರಾಗಿಷ್ಠತೆಗಳು ಭಗವನ್ನಿಷ್ಟೆಯೊಡನೆ ಬೆರೆತು ಮಿಶ್ರ ಮಾಧುರಿಯ ಅಪೂರ್ವ ಮಾದರಿಯನ್ನು ಒದಗಿಸಿದೆ.
ಸುಮಾರು 350 ಕ್ಕೂ ಅಧಿಕ ಪದ - ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
" ನಿರ್ಯಾಣ "
ಶ್ರೀ ತಂದೆ ವೇಂಕಟೇಶ ವಿಠ್ಠಲರು - ಶ್ರೀ ದುಂದುಭಿ ನಾಮ ಸಂವತ್ಸರ ಆಷಾಢ ಬಹುಳ ಅಷ್ಟಮೀ ದಿನದಂದು - ಅಂದರೆ - 14.07.1982 ರಂದು ಶ್ರೀ ಹರಿಯ ಪಾದಾರವಿಂದವನ್ನು ಸೇರಿದರು.
BY ಆಚಾರ್ಯ ನಾಗರಾಜು ಹಾವೇರಿ
      ಗುರು ವಿಜಯ ಪ್ರತಿಷ್ಠಾನ
****


Sri Tande Venkatesha Vittala Dasaru1907-1982Ramachandra RaoTande Venkatesha VittalaUragadrivasa VittalaChitradurgaAshada Bahula Astami


********

1 comment:

  1. ಶ್ರೀ ತಂದೆ ವೆಂಕಟೇಶ ವಿಠಲರು ರಚಿಸಿರುವ ಕೃತಿಗಳು ಎಷ್ಟು? ಅವುಗಳಲ್ಲಿ ದೊರಕಿರುವುದೆಷ್ಟು?

    ReplyDelete