Monday 1 July 2019

varadendra vittala dasaru lingasuguru 1960 shravana bahula ekadashi ವರದೆಂದ್ರ ತೀರ್ಥರು

Sri. Varadendra Vittala Dasaru

Original Name:  Venkatesha Hallerao
Period: 1886 - 1960
Ankita: Varadendra Vittala
Preceptor: Guru Jagannatha Vittala
Place: Lingasuguru

Aradhana:  Shravana Bahula Ekadashi

" ದಿನಾಂಕ : 16.08.2020 ಭಾನುವಾರ ಶ್ರೀ ರಾಯರ ಕಾರುಣ್ಯಪಾತ್ರರಾದ ಶ್ರೀ ವರದೇಂದ್ರವಿಠಲರ ಆರಾಧನಾ ಮಹೋತ್ಸವ., ಲಿಂಗಸೂಗೂರು "
ಹೆಸರು : ಶ್ರೀ ವೆಂಕಟೇಶ ಹಳ್ಳೇರಾವ್
ಜನ್ಮ ಸ್ಥಳ : ಲಿಂಗಸೂಗೂರು
ಕಾಲ : ಕ್ರಿ ಶ 1886 - 1960
ಶ್ರೀ ವೆಂಕಟೇಶ ಹಳ್ಳೇರಾಯರಿಗೆ ಮನೆತನದಿಂದಲೇ ಕುಲಕರ್ಣಿಕೆ ಬಂದಿದ್ದರೂ - ಆ ವೃತ್ತಿಯನ್ನು ಅವರು ಹೆಚ್ಚಾಗಿ ನಿರ್ವಹಿಸಲಿಲ್ಲ.. 
ಲಿಂಗಸೂಗೂರು ತಾಲೂಕಿನ " ಕುಪ್ಪಿಗುಡ್ಡ " ದ ಕುಲಕರ್ಣಿಕೆ ಇವರದಾಗಿತ್ತು. 
ಚಿತ್ತಾಪುರ ಗ್ರಾಮದಲ್ಲಿ ಉತ್ತರಾದಿ ಮಠದ ಶ್ರೀ ಸತ್ಯಪರಾಕ್ರಮ ತೀರ್ಥರ ಕಾಲದಲ್ಲಿ ಆ ಮಠದ ಆಸ್ತಿಯನ್ನು ನೋಡಿ ಕೊಳ್ಳುತ್ತಿದ್ದರು. 
ಅಂಕಿತ : ವರದೇಂದ್ರ ವಿಠಲ 
ಅಂಕಿತೋಪದೇಶ : ಶ್ರೀ ಆಹ್ಲಾದಾಂಶ ಗುರು ಜಗನ್ನಾಥದಾಸರು
" ಅಂಕಿತ ಪದ "
ಶ್ರೀ ವರದೇಶವಿಠಲರು, ಶ್ರೀ ಆನಂದವಿಠಲರು, ಶ್ರೀ ವರದೇಂದ್ರವಿಠಲರು ಮತ್ತು ಶ್ರೀ ಸುಂದರವಿಠಲರು ( ಶ್ರೀ ಗೋರೆಬಾಳು ಹನುಮಂತರಾಯರು ) ಎಂಬ ಅಂಕಿತವುಳ್ಳ ಲೀಗಸೂಗೂರಿನ ಈ ನಾಲ್ಕು ಜನ ಶಿಷ್ಯರೂ ಶ್ರೀ ವಾಯುದೇವರ ಪರವಾಗಿರುವ ಒಂದೇ ಕೀರ್ತನೆಯನ್ನು ರಚಿಸಿದ್ದಾರೆ.
ಈ ಕೀರ್ತನೆಯ ಕೊನೆಯ ಚರಣದಲ್ಲಿ ತಮ್ಮ ನಾಲ್ಕು ಜನ ಶಿಷ್ಯರ ಅಂಕಿತವನ್ನು ಹೆಸರಿಸಿ ತಮ್ಮ ಮುದ್ರಿಕೆಯೊಂದಿಗೆ ಶ್ರೀ ಆಹ್ಲಾದಾಂಶ ಗುರು ಜಗನ್ನಾಥದಾಸರು ಚಮತ್ಕಾರಿಕವಾಗಿ ಸಮನ್ವಯ ಮಾಡಿ ಸರಳ - ಸುಂದರವಾಗಿ ಅಂಕಿತ ಪದ ರಚಸಿ ಮಂತ್ರೋಪದೇಶ ಕೊಟ್ಟು ಹರಿದಾಸ ಸಾಹಿತ್ಯವನ್ನು ಮುಂದುವೆರೆಸಿಕೊಂಡು ಹೋಗಲು ಆಜ್ಞಾಪಿಸಿದ್ದಾರೆ.
ಭಾರತೀರಮಣ ನಾ 
ಸಾರುವೆ ಚರಣ ।
ತೋರೋ ಮನ್ಮನದಲಿ 
ಭೂರಿಸುಕರುಣ ।। ಪಲ್ಲವಿ ।।
ನಾರಾಯಣಾ೦ಕದಿ 
ಕುಳಿತಿಹ ಶೂರ ।
ಸೂರಿ ಸ್ತೋಮ ತೇಜ-
ರಂಜಿಪುದುದಾರ ।
ಮಾರಮಣನಾಜ್ಞದಿಂ 
ಬ್ರಹ್ಮಾಂಡಾಧಾರ ।
ಧಾರಕಾನಂದ 
ವಿಠಲನ್ನ ಚಾರ ।। ಚರಣ ।।
ಮರುಳ ರಕ್ಕಸತತಿ
ದ್ವಾರದ ವಿದಾರ ।
ಹರಿ ರಘುವರನ ಪಾದ 
ಶರಧಿಜ ಚಕೋರ ।
ಹರ ಮುಖ್ಯ ಸುರ 
ಸರಸೀರುಹಕೆ ದಿನಕರ ।
ವರದೇಶವಿಠಲನ್ನ 
ಸ್ಮರಿಪ ಸಮೀರ ।। ಚರಣ ।।
ಕುರು ಕುಲ ಸಂಜಾತ 
ದ್ರುಪದಜಾ ನಾಥ ।
ದುರ್ಯೋಧನನ ಊರು 
ಕಡಿದ ನಿರ್ಭೀತ ।
ಪರಮ ಭಗವದ್ಭಕ್ತ 
ವೃಂದ ಸುಪ್ರೀತ ।
ವರದೇಂದ್ರವಿಠಲನ್ನ 
ಪ್ರಿಯ ಸುತರಾತ ।। ಚರಣ ।।
ಅದ್ವೈತ ಮತ ತಿಮಿರ
ಧ್ವಂಸನ ಧೀರ ।
ಶುದ್ಧ ವೈಷ್ಣವ ಮತ 
ಸ್ಥಾಪನಾಚಾರ್ಯ ।
ಸದ್ವಾಕ್ಯದಿಂದಲಿ 
ಹರಿಪಾರಾದಾರ ।
ಮಧ್ವ ಸುಂದರವಿಠಲನ್ನ 
ಸುಕುಮಾರ ।। ಚರಣ ।।
ವರದೇಶ ವರದೇಂದ್ರ-
ವಿಠಲ । ಸುಂ ।
ದರ ಆನಂದವಿಠಲನ್ನ ।
ಪರಿ ಪರಿ ವಿಧದಲಿ 
ಕರುಣವ ಪಡೆದಿಹ ।
ಗುರು ಜಗನ್ನಾಥವಿಠಲನ 
ನಿಜ ದೂತ ।। ಚರಣ ।।
ಶ್ರೀ ಗುರು ಜಗನ್ನಾಥದಾಸರಿಂದ ಅಂಕಿತ ಪಡೆದು, ಶ್ರೀ ದಾಸಾರ್ಯರ ಜೊತೆಯಲ್ಲಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು - ತುಂಗಭದ್ರೆಯಲ್ಲಿ ಮಿಂದು ಕಲಿಯುಗದ ಕಲ್ಪವೃಕ್ಷ - ಕಾಮಧೇನೂ - ಹರಿದಾಸರ ಆರಾಧ್ಯ ಗುರುಗಳಾದ ಶ್ರೀ ರಾಯರ ಮೂಲ ಬೃಂದಾವನದ ಮುಂದೆ ನಿಂತಿದ್ದಾರೆ.
ಹೃದಯ ತುಂಬಿದೆ. ಆನಂದಾಶ್ರು ಧಾರಾಕಾರವಾಗಿ ಸುರಿಯುತ್ತಿದೆ. 
ಶ್ರೀ ದಾಸರ ವದನಾರವಿಂದದಲ್ಲಿ....
ರಾಗ : ಶ್ರೀ ತಾಳ : ತ್ರಿವಿಡಿ
ರಾಘವೇಂದ್ರರೇ ನಿಮ್ಮ ಪಾದವ ।
ಬಾಗಿ ಭಜಿಸುವೆ ತೋರುವದೈ ।
ನಾಗಶಯನ ತುತಿಸಿ ಸುಖಿಪ ।
ಭಾಗವತರೊಳಾಡಿಸೈ ।। ಪಲ್ಲವಿ ।।
ಶ್ರೀ ಸುಧೀಂದ್ರಕರಜರೆನಿಪ ।
ಶ್ರೀ ಸಮೀರಮತ ಚಂದ್ರಮಾ ।
ಶೇಷಶಯನನ ಪೂಜಿಸುವ । ನಿ ।
ರ್ದೋಷ ಗುರು ಕುಲ 
ಸುರದ್ರುಮಾ ।। ಚರಣ ।।
ಮಂಗಳಾಂಗರೇ ನಿಮ್ಮ ದರ್ಶನ ।
ಕಂಗಳಿಗೆ ಇತ್ತು ಬೇಗನೆ ।
ಹಿಂಗಿಸೈ ಭವ ತಾಪ ಗುರುವರ ।
ತುಂಗಾ ತೀರ ನಿವಾಸನೆ ।। ಚರಣ ।।
ಪರಮತೋಕ್ತಿಯ ಖಂಡಿಸುತ ।
ಪರಿಮಳಾಖ್ಯ ಗ್ರಂಥವಾ ।
ವಿರಚಿಸಿ ಧರಾ ಸುರರಿಗೆಲ್ಲ ।
ಹರುಷ ನೀಡಿದಿ ಮುನಿವರ ।। ಚರಣ ।।
ನಿನ್ನ ಪಾದೋದಕವ ಕೊಳ್ಳಲು ।
ಬನ್ನ ಬಡಿಪವೇ ದುರಿತವು ।
ಜನ್ಮ ಜನ್ಮಾಂತರದ ಪಾತಕ ।
ಮುನ್ನ ಪೋಗ್ವದು ಸತ್ಯವು ।। ಚರಣ ।।
ಅಂಧ ಕುಷ್ಠ ವ್ಯಾಧಿಗ್ರಸ್ತರು ।
ಚಂದದಿಂದಲಿ ಪ್ರತಿ ದಿನಾ ।
ವೃಂದಾವನವ ನಂಬಿ ಯಜಿಸಿ ।
ಬಂದ ಬಂಧ ವಿನಾಶನಾ ।। ಚರಣ ।।
ಮಾಸ ಶ್ರಾವಣ 
ವದ್ಯ ದ್ವಿತೀಯದಿ ।
ಸಾಸಿರಾರು ಭೂ ದಿವಿಜರು ।
ಸೋಸಿನಿಂದಲಿ ಪಾಡಿ ಪೀಡಿಪ ।
ಕ್ಲೇಶ ಪಾಶ ಕೀಳ್ವರೋ ।। ಚರಣ ।।
ಗುರುವೇ ನಿಮ್ಮಯ 
ಸ್ತೋತ್ರ ರತ್ನವ ।
ಸರುವ ಕಾಲದಿ 
ಪಠಿಸಲು ।
ಕರುಣದಿಂದಲಿ 
ಪೊರೆವನವರ ।
ಸಿರಿ ವರದೇಂದ್ರ 
ವಿಠಲನು ।। ಚರಣ ।।
ಎಂದು ಸ್ತುತಿಸಲು ಶ್ರೀ ರಾಯರು ಮುದ್ದು ಬೃಂದಾವನ ಮಧ್ಯದೊಳಗೆ ಮಂದಹಾಸ ಬೀರುತ್ತಾ ಶ್ರೀ ದಾಸರಿಗೆ ದರ್ಶನ ಕೊಟ್ಟು ಪರಮಾನುಗ್ರಹ ಮಾಡಿದರು!!
ಶ್ರೀ ವರದೇಂದ್ರವಿಠಲರು ಶ್ರೀ ವರದೇಂದ್ರತೀರ್ಥರ ಮೇಲೆ 4 ಪದಗಳನ್ನು ರಚಿಸಿದ್ದಾರೆ. 
ಹಾಗೆಯೇ ಶ್ರೀ ಹರಿವಾಯುಗಳ ಕುರಿತು ಪದ ಪದ್ಯಗಳನ್ನು ರಚಿಸಿ ಶ್ರೀ ಹರಿ ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ಹೀಗೆ ಶ್ರೀ ವರದೇಂದ್ರವಿಠಲರು ಶ್ರವಣ ರಮಣೀಯವಾದ ತಮ್ಮ ಪದ ಪದ್ಯಗಳ ಪ್ರಖರತೆ ಹಾಗೂ ನಾದ ಮುಖರತೆಗಳಿಂದ ಸಹೃದಯರ ಮನಃ ಪ್ರೀಣನವನ್ನು ಮಾಡುತ್ತಾರೆ.
ಆದಿಪ್ರಾಸ - ಸಂಸ್ಕೃತ, ಕನ್ನಡ ಪದಗಳ ಮಿಶ್ರರೂಪ, ಪ್ರಚಲಿತ ರಾಗಗಳ ಬಳಕೆಯಿಂದಾಗಿ ಶ್ರೀ ವರದೇಂದ್ರ ವಿಠಲರ ಕೃತಿಗಳೆಲ್ಲವೂ ಜನರ ಬಾಯಲ್ಲಿ ಹರಿದಾಡುತ್ತಿವೆ. 
" ಸಮಕಾಲೀನ ಹರಿದಾಸರು "
ಶ್ರೀ ವರದವಿಠಲರು - ಶ್ರೀ ಜಗದೀಶವಿಠಲರು - ಶ್ರೀ ಶ್ರೀನಿವಾಸವಿಠಲರು - ಶ್ರೀ ಮುದ್ದು ಗುರು ಜಗನ್ನಾಥದಾಸರು
ಆರಾಧನೆ : ಶ್ರಾವಣ ಬಹುಳ ಏಕಾದಶೀ
ಶ್ರೀ ವರದೇಂದ್ರ ವಿಠಲರು ಶ್ರಾವಣ ಬಹುಳ ಏಕಾದಶೀ ವೈಕುಂಠ ಯಾತ್ರೆ ಮಾಡಿದ್ದು - ಅವರ ಆರಾಧನೆ ಶ್ರಾವಣ ಬಹುಳ ದ್ವಾದಶೀಯಂದು ನಡೆಯುತ್ತದೆ. 
ಆಚಾರ್ಯ ನಾಗರಾಜು ಹಾವೇರಿ....
ಗುರುರಾಜ ಪದಾಸಕ್ತ೦ 
ವರದೇಂದ್ರ ಸುಸೇವಕಂ  ।
ಕೊಸಗೀ ದಾಸಾರ್ಯ ಸುತಂ 
ವರದೇಂದ್ರ ಮಹಂ ಭಜೇ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****

year 2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ ಶ್ರಾವಣ ಕೃಷ್ಣ ಏಕಾದಶಿ
ಸದಾ ಭಾಗವತಾಸ್ವಾದೇ - ನಿರತಂ ಸಂಶ್ರಯೇ ಸದಾ//
ವರದೇಂದ್ರಾಖ್ಯ ದಾಸಾರ್ಯಂ ಸ್ವಾಮಿರಾಯಾರ್ಯ ಸೇವಕಮ್/

ಶ್ರೀ ಗುರುಜಗನ್ನಾಥದಾಸರ ಶಿಷ್ಯರೂ, 19ನೇ ಶತಮಾನದ ಮಹಾನ್ ಸಾಧಕರೂ, ರಾಯಚೂರಿನ ಲಿಂಗಸೂಗೂರಿನ ದಾಸರೂ ಆದ ಶ್ರೀ ವರದೇಂದ್ರವಿಠಲರ (ವೆಂಕಟೇಶ ಹಳ್ಳೇರಾವ್)  ಆರಾಧನಾ ಮಹೋತ್ಸವದ ಪರ್ವಕಾಲವಿದು... ಸಂಸ್ಕೃತ ಕನ್ನಡ ಪದಗಳ ಮಿಶ್ರರೂಪ ಕೃತಿಗಳ ರಚನೆ ಮಾಡಿದರೆಂದು ಪ್ರಸಿದ್ಧಿ.  ರಾಯರ ಕುರಿತಾದ ಹೆಚ್ಚು ಕೃತಿಗಳನ್ನು ರಚನೆ ಇವರೇ ಮಾಡಿದರೆಂದು ಸಹ ಹೇಳ್ತಾರೆ... ಅಂತಹ ಮಹಾನ್ ಶ್ರೀ ದಾಸರ ಪರಮಾನುಗ್ರಹ ನಮ್ಮೆಲ್ಲರ ಮೇಲಿರಲೆಂದು ಪ್ರಾರ್ಥನೆ ಮಾಡುತ್ತಾ.

ಶ್ರೀ ದಾಸಾರ್ಯರ ಅಂತರ್ಗತ ಶ್ರೀ ಲಕ್ಷ್ಮೀವೆಂಕಟೇಶನ ಅನುಗ್ರಹ ಸದಾ ನಮಗಾಗಲೆಂದು ಪ್ರಾರ್ಥನೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ
***




Sri Varadendra Vittala Dasa1886-1960Venkatesha HalleraoVaradendra VittalaSri Guru Jagannatha VittalaLingasuguruShravana Bahula Ekadashi
.

No comments:

Post a Comment